Advertisement

ಯಕ್ಷಗಾನ ಶೈಲಿಯಲ್ಲಿ ಸುಬ್ರಹ್ಮಣ್ಯನ ಗಣಗಳು

11:10 AM Apr 07, 2018 | |

ಮಹಾನಗರ: ದೇವಸ್ಥಾನಗಳಲ್ಲಿರುವ ರಥಗಳಲ್ಲಿ ದೇವರ ಚಿತ್ರಗಳಿರುವುದು ಸಾಮಾನ್ಯ. ಆದರೆ ಅವನ್ನೇ ಯಕ್ಷಗಾನ ಶೈಲಿಯಲ್ಲಿ ತೋರಿಸಿದರೆ? ಇಲ್ಲೊಂದು ದೇವಸ್ಥಾನದಲ್ಲಿ ಸುಬ್ರಹ್ಮಣ್ಯನ ಗಣಗಳನ್ನು ಯಕ್ಷಗಾನ ಶೈಲಿಯಲ್ಲಿ ತೋರಿಸಲಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.

Advertisement

ವಿಶೇಷವೆಂದರೆ ಹಳೆಯಂಗಡಿಯ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಈ ರಥದಲ್ಲಿ ಯಕ್ಷಗಾನ ಶೈಲಿಯನ್ನು ಅಳವಡಿಸಿರುವುದು ಕಳೆದ ವರ್ಷ ಎಪ್ರಿಲ್‌ ತಿಂಗಳಲ್ಲಿ. ಆದರೆ ಇದೀಗ ದೇವಸ್ಥಾನದ ಮಹಾ ರಥೋತ್ಸವ ಸನಿಹದಲ್ಲಿದ್ದು, ಈ ರಥದ ಚಿತ್ರವು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಈ ಮಹಾರಥವನ್ನು ಕಳೆದ ವರ್ಷ ಪುನರ್‌ ನವೀಕರಣ ಮಾಡಲಾಗಿತ್ತು. ಈ ವೇಳೆ ಯಕ್ಷಗಾನದ ಕಲಾ ಕೆಲಸಗಳನ್ನೇ
ನಿರ್ವಹಿಸುವ ಯಕ್ಷ ಕಲಾ ವರ್ಣ ತಂಡದ ಒಟ್ಟು 18 ಮಂದಿ ನಿರಂತರ ಒಂದು ತಿಂಗಳ ಕಾಲ ಕೆಲಸ ಮಾಡಿ ಸುಬ್ರಹ್ಮಣ್ಯನ ಗಣಗಳನ್ನು ರಥದಲ್ಲಿ ಯಕ್ಷಗಾನ ಶೈಲಿಯಲ್ಲಿ ರಚಿಸಿದ್ದಾರೆ.

ಸಾಂಪ್ರದಾಯಿಕ ಶೈಲಿ
ಸುಬ್ರಹ್ಮಣ್ಯ ದೇವರ ಎಂಟು ಗಣಗಳಾದನಾಗ, ಗರುಡ, ಮಣಿಗ್ರೀವ, ಇಂದ್ರ ಜಿಮ್ನ, ನರ, ಕಿನ್ನರ, ಕಿಂಪುರುಷ, ಮಹಾಪ್ರಭುವಿನ ಗೊಂಬೆಗಳಿಗೆ ಯಕ್ಷಗಾನದ ರೂಪ ನೀಡಲಾಗಿದೆ. ಎಲ್ಲ ಕಲಾಕೃತಿಗಳನ್ನು ಸಾಂಪ್ರದಾಯಿಕ ಶೈಲಿಯಲ್ಲೇ ರಚಿಸಲಾಗಿದೆ. ಗೆಜ್ಜೆಯ ಮೇಲೆ ಕಾಲ್ದಿಂಬು, ಕಾಲ್ಕಡಗ, ಮತ್ತೆ ಕಾಲ್ದಿಂಬು, ಕಾಲು ಮುಳ್ಳು…ಇವೆಲ್ಲ ಯಕ್ಷಗಾನದ ಪ್ರದರ್ಶನ ಸಂದರ್ಭದಲ್ಲಿ ಬಳಸುವಂತೆಯೇ ಇಲ್ಲೂ ಅಳವಡಿಸಲಾಗಿದೆ. ಎಲ್ಲ ಗೊಂಬೆಗಳು ಸುಮಾರು 5ರಿಂದ 5.5 ಅಡಿ ಎತ್ತರವನ್ನು ಹೊಂದಿದ್ದು, ಫೈಬರ್‌ನಿಂದಲೇ ತಯಾರಿಸಿದ್ದು, ಅಲಂಕಾರಕ್ಕೆ ತಕ್ಕಂತೆ ಮಣಿ, ಬಟ್ಟೆ, ಉಲ್ಲನ್‌ಗಳನ್ನು ಬಳಸಲಾಗಿದೆ.

ರಥದಲ್ಲೇ ರಂಗಸ್ಥಳ!
ಅಂದಾಜು 30-35 ಅಡಿ ಎತ್ತರ ಹಾಗೂ 15 ಅಡಿ ಅಗಲವನ್ನು ಹೊಂದಿರುವ ರಥ. ಇದರ ಮೇಲ್ಭಾಗದ ಸುಪ್ತದಲ್ಲಿ ಯಕ್ಷಗಾನದ ಪರಂಪರೆಯ 20 ಉಬ್ಬುಶಿಲ್ಪ ವೇಷಗಳನ್ನು ಕುಳ್ಳಿರಿಸಲಾಗಿದೆ. ಅದರ ಕೆಳಭಾಗದಲ್ಲಿ ಈ ಗಣಗಳಿವೆ. ವಿಶೇಷವೆಂದರೆ ರಥದಲ್ಲೇ ನಾಲ್ಕು ಬಾಗಿಲುಗಳನ್ನು ರಚಿಸಿ ರಂಗಸ್ಥಳಾಕೃತಿಯನ್ನೂ ತೋರಿಸಲಾಗಿದೆ. ರಥವನ್ನು ನೋಡುವಾಗ ಯಕ್ಷಗಾನದ ಸಂಪೂರ್ಣ ಚಿತ್ರಣ ಕಣ್ಣಮುಂದೆ ಬರುವಂತಿದೆ. 

Advertisement

ಎ. 18ರಂದು ರಥೋತ್ಸವ
ಕಳೆದ ವರ್ಷದ ಜಾತ್ರೆಯ ಸಂದರ್ಭದಲ್ಲಿ ಮಹಾ ರಥೋತ್ಸವಕ್ಕೆ ಇದೇ ರಥವನ್ನು ಬಳಸಲಾಗಿತ್ತು. ಈ ಬಾರಿ ದೇವಸ್ಥಾನದ ವಾರ್ಷಿಕ ಉತ್ಸವವು ಎ. 13ರಿಂದ 19ರ ವರೆಗೆ ನಡೆಯಲಿದ್ದು, 18ರಂದು ಮಹಾ ರಥೋತ್ಸವ ಜರಗಲಿದೆ. ಈ ವೇಳೆ ಯಕ್ಷಗಾನ ಗೊಂಬೆಗಳಿರುವ ರಥವನ್ನೇ ಮಹಾರಥೋತ್ಸವದಲ್ಲಿ ಬಳಸಲಾಗುತ್ತಿದ್ದು, ಭಕ್ತರಿಗೆ ದೇವರ ಆರಾಧನೆಯೊಂದಿಗೆ ತುಳುನಾಡಿನ ಆರಾಧನ ಕಲೆ ಯಕ್ಷಗಾನವನ್ನು ರಥದಲ್ಲಿ ನೋಡಿ ಕಣ್ತುಂಬಿಕೊಳ್ಳುವ
ಭಾಗ್ಯವೂ ಲಭ್ಯವಾಗಲಿದೆ.

ವಿಶ್ವದಲ್ಲೇ ಪ್ರಥಮ ಪ್ರಯತ್ನ
ಯಾವುದೇ ಯಕ್ಷಗಾನ ಮೇಳ ಅಥವಾ ತಂಡಗಳು ದೈವಸ್ಥಾನ, ದೇವಸ್ಥಾನದ ಹೆಸರಿನಲ್ಲಿಯೇ ಇರುತ್ತವೆ. ಹಾಗಾಗಿ ದೇವಸ್ಥಾನದ ರಥದಲ್ಲಿ ಇದೊಂದು ಪ್ರಥಮ ಪ್ರಯತ್ನವಾದರೂ ಎಲ್ಲರೂ ಇದನ್ನು ಸ್ವೀಕರಿಸಿದ್ದಾರೆ. ಇಂತಹ ಪ್ರಯತ್ನ ಈವರೆಗೆ ಎಲ್ಲೂ ನಡೆದಿಲ್ಲ. ದೇಶದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಇದೊಂದು ಪ್ರಥಮ ಪ್ರಯತ್ನ. ಇಡೀ ರಥವನ್ನು ನೋಡುವಾಗ ಸಂಪೂರ್ಣ ಯಕ್ಷಗಾನದ ಚಿತ್ರಣವನ್ನು ಕಟ್ಟಿಕೊಡುವಂತೆ ಕಲಾಕೃತಿಗಳನ್ನು ಚಿತ್ರಿಸಲಾಗಿದೆ. ದೇವಸ್ಥಾನ ಮತ್ತು ಊರವರ ಸಂಪೂರ್ಣ ಸಹಕಾರದಿಂದ ಇದು ಸಾಧ್ಯವಾಗಿದೆ.
– ರವಿರಾಜ್‌ ಹಳೆಯಂಗಡಿ, ಕಲಾ ವರ್ಣ ತಂಡ 

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next