ಯಾದಗಿರಿ: ಗಡಿ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಸೋಂಕಿನ ಪತ್ತೆ ಪ್ರಕರಣಗಳು ಒಂದಂಕಿಗೆ ಇಳಿದಿದ್ದು, ಬರೋಬ್ಬರಿ 2 ತಿಂಗಳ ಬಳಿಕ ಇದೀಗ ಎಲ್ಲಾ ವ್ಯಾಪಾರ ವಹಿವಾಟಿಗೆ ಷರತ್ತುಬದ್ಧ ಅವಕಾಶ ದೊರೆತಿದೆ. ಜಿಲ್ಲೆಯಲ್ಲೀಗ ಕೇವಲ 165 ಸಕ್ರಿಯ ಪ್ರಕರಣಗಳಿದ್ದು, ರಾಜ್ಯ ಸರ್ಕಾರ ಸೋಂಕು ಇಳಿಕೆಯಾಗಿರುವ ಕಡೆ ಎಲ್ಲಾ ವ್ಯಾಪಾರಕ್ಕೆ ಅನುಮತಿ ನೀಡಿದೆ. ಜಿಲ್ಲೆಯಲ್ಲಿಯೂ ಜೂನ್ 21ರಿಂದ ಜುಲೈ 5ರ ರವೆಗೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 5ರ ವರೆಗೆ ಬಹುತೇಕ ಎಲ್ಲಾ ವ್ಯಾಪಾರಸ್ಥರು ಕೋವಿಡ್ ನಿಯಮ ಪಾಲಿಸಿ ವ್ಯಾಪಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ.
ಜಿಲ್ಲಾ ಮತ್ತು ಅಂತರ್ ಜಿಲ್ಲೆ ಸಾರಿಗೆ ಪ್ರಯಾಣವೂ ಶೇ.50 ಪ್ರಯಾಣಿಕರೊಂದಿಗೆ ಆರಂಭವಾಗಲಿದ್ದು, ಸಾರಿಗೆ ವ್ಯವಸ್ಥೆಯೂ ಲಭ್ಯವಾಗಲಿದೆ. ಸದ್ಯಕ್ಕೆ ಅಂತರ್ ರಾಜ್ಯ ಪ್ರಯಾಣ ಆರಂಭ ಮಾಡಲಾಗುತ್ತಿಲ್ಲ. ಸುಮಾರು ತಿಂಗಳಿನಿಂದ ಬೀಡು ಬಿದ್ದಿದ್ದ ಬಸ್ ನಿಲ್ದಾಣ, ಚಾಲನೆ ನಿಲ್ಲಿಸಿದ್ದ ಬಸ್ಗಳನ್ನು ಸ್ವತ್ಛಗೊಳಿಸಿ ಪ್ರಯಾಣಕ್ಕೆ ಅಣಿ ಮಾಡಲಾಯಿತು. ಯಾದಗಿರಿ ಘಟಕದಲ್ಲಿ ಸಿಬ್ಬಂದಿಗಳು ಬಸ್ಗಳನ್ನು ತೊಳೆದು ಒಂದು ಸೀಟಿಗೆ ಇಬ್ಬರು ಪ್ರಯಾಣಿಕರು ಕೂಡುವಂತೆ ಗುರುತು ಹಾಕಿದರು. ಇನ್ನು ಬಸ್ ನಿಲ್ದಾಣವನ್ನು ಸ್ಯಾನಿಟೈಸಿಂಗ್ ಮಾಡಿದರು. ಹಾಗೆಯೇ ಗುರುಮಠಕಲ್ ಬಸ್ ನಿಲ್ದಾಣವನ್ನು ಸಿಬ್ಬಂದಿಗಳು ತೊಳಿದು ಶುಚಿಗೊಳಿಸಿದರು.
ಜಿಲ್ಲೆಯಲ್ಲಿ ಎಲ್ಲಾ ಉತ್ಪಾದನಾ ಘಟಕಗಳು/ಕೈಗಾರಿಕೆಗಳು ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತುಗಳಿಗೆ ಒಳಪಟ್ಟು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಆದಾಗ್ಯೂ ಗಾಮೆಂìಟ್ ತಯಾರಿಕೆಯಲ್ಲಿ ತೊಡಗಿರುವ ಘಟಕಗಳು ಅಥವಾ ಸಂಸ್ಥೆ, ಕೈಗಾರಿಕೆಗಳು ಶೇ.30ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಅಗತ್ಯ ಮತ್ತು ಅನಿವಾರ್ಯವಲ್ಲದ ಯಾವುದೇ ವ್ಯತ್ಯಾಸವಿಲ್ಲದೆ, ಎಲ್ಲಾ ಅಂಗಡಿಗಳು, ಸರಕು, ಸೇವೆಗಳು ದೊರೆಯಲಿದೆ. ಎಲ್ಲಾ ಹವಾನಿಯಂತ್ರಿತ ಅಂಗಡಿಗಳು, ಹವಾನಿಯಂತ್ರಿತ ಶಾಪಿಂಗ್ ಸಂಕೀರ್ಣಗಳು, ಮಾಲ್ಗಳು ಕಾರ್ಯನಿರ್ವಹಿಸಲು ಅನುಮತಿ ಇಲ್ಲ.
ವ್ಯಕ್ತಿಗಳ ಚಲನೆಯನ್ನು ಕಡಿಮೆ ಮಾಡಲು ಎಲ್ಲಾ ವಸ್ತುಗಳನ್ನು ದಿನದ 24ಗಂಟೆ ಮನೆಗೆ ವಿತರಣೆಯನ್ನು (ಹೋಮ್ ಡೆಲಿವೆರಿ) ಪ್ರೋತ್ಸಾಹಿಸಲಾಗುತ್ತದೆ. ವಾಕಿಂಗ್ ಮತ್ತು ಜಾಗಿಂಗ್ ಉದ್ದೇಶಕ್ಕಾಗಿ ಬೆಳಿಗ್ಗೆ 5ರಿಂದ ಸಂಜೆ 6 ರವರೆಗೆ ಉದ್ಯಾನವನ ತೆರೆಯಲು ಅನುಮತಿಯಿದೆ. ಆದರೆ ಯಾವುದೇ ಗುಂಪು ಚಟುವಟಿಕೆಗೆ ಅನುಮತಿ ನೀಡಿಲ್ಲ.