Advertisement

ತ್ರಿವಿಧ ದಾಸೋಹಿಗೆ ಬರಹ, ಪ್ರವಚನಗಳಿಂದಲೇ ನಮನ

12:40 AM Oct 13, 2019 | Lakshmi GovindaRaju |

ಬೆಂಗಳೂರು: ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಕಾರ್ಯಗಳ ಕುರಿತು ಬರಹ ಮತ್ತು ಪ್ರವಚನಗಳಿಂದ ನಾಡಿನಾದ್ಯಂತ ಬೆಳಕು ಚೆಲ್ಲಿದವರಲ್ಲಿ ಪಂಡಿತ ಚನ್ನಪ್ಪ ಎರೇಸೀಮಿ ಇಂದಿಗೂ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದು ತುಮಕೂರು ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ಪಂಡಿತ ಚನ್ನಪ್ಪ ಎರೇಸೀಮೆ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.

Advertisement

ಶ್ರೀಗಳು ಮತ್ತು ಚನ್ನಪ್ಪ, ಮಠದ ಕಾರ್ಯ ಚಟುವಟಿಕೆ ಹಾಗೂ ಪ್ರವಚನ ಸೇರಿದಂತೆ ಎಲ್ಲ ಕಾರ್ಯಗಳಲ್ಲಿ ಜತೆಯಾಗಿರುತ್ತಿದ್ದರು. ಶ್ರೀಗಳ ಸುವರ್ಣಮಹೋತ್ಸವಕ್ಕಾಗಿ ಚನ್ನಪ್ಪ ಸಿದ್ಧಪಡಿಸಿದ್ದ “ಸಿದ್ಧಗಂಗಾ ಶ್ರೀ’ ಅಭಿನಂದನೆ ಗ್ರಂಥವೇ ಇಂದಿಗೂ ಶಿವಕುಮಾರ ಶ್ರೀಗಳ ಕುರಿತು ಬರೆಯುವವರು ಹಾಗೂ ಸಂಶೋಧನೆ ವಿದ್ಯಾರ್ಥಿಗಳಿಗೆ ಆಧಾರವಾಗಿದೆ ಎಂದು ಹೇಳಿದರು. ಮಠದ ಕುರಿತು ಬರಹಗಳಿಲ್ಲದ ಸಂದರ್ಭದಲ್ಲಿ ಮಠದ ಪರಂಪರೆ ಕುರಿತು ಬರೆಯುತ್ತಿದ್ದರು. ಕಿರಣ ಎಂಬ ನಿಯತಕಾಲಿಕೆ ಹಾಗೂ ಪ್ರವಚನಗಳ ಮೂಲಕ ಆರೇಳು ದಶಕಗಳ ಹಿಂದೆಯೇ ಮಠದ ಹಾಗೂ ಶಿವಕುಮಾರ ಶ್ರೀಗಳ ಕಾರ್ಯಚಟುವಟಿಕೆ, ದಾಸೋಹಗಳ ಕುರಿತ ಮಾಹಿತಿ ನಾಡಿನೆಲ್ಲೆಡೆ ಪಸರಿಸುವಂತೆ ಮಾಡಿದರು ಎಂದು ಹೇಳಿದರು.

ಕನ್ನಡ ಸಾಹಿತ್ಯ ಲೋಕಕ್ಕೂ ಚನ್ನಪ್ಪರ ಕೊಡುಗೆ ಅಪಾರ. ಉದ್ದಾನೇಶ ಚರಿತೆ, ಬಸವರಾಜ ವಿಜಯಂನಂತಹ ಮಹಾನ್‌ ಕೃತಿಗಳಿಗೆ ವ್ಯಾಖ್ಯಾನ ನೀಡಿದ್ದರು. ಹಳೆಗನ್ನಡದ ಕ್ಲಿಷ್ಟಕರ ಬರಹಗಳನ್ನು ಸಲೀಸು ಮಾಡಿ, ಲಕ್ಷಾಂತರ ಓದುಗರಿಗೆ ಬೆಳಕಾಗಿದ್ದರು. ಚನ್ನಪ್ಪ ಶಿಕ್ಷಕರು. ಅವರ ಶಿಷ್ಯರು ಇಂದಿಗೂ ನಾಡಿನ ವಿವಿಧೆಡೆ ಸಾಹಿತ್ಯ ಹಾಗೂ ಭಾಷೆಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. ಬೇಲಿಮಠ ಶಿವರುದ್ರ ಸ್ವಾಮೀಜಿ ಮಾತನಾಡಿ, ಉಪಾಧ್ಯಾಯ, ವೈದ್ಯ, ವಕೀಲರಿಗೆ ನಿವೃತ್ತಿ ಎಂಬುದೇ ಇಲ್ಲ. ಶ್ರೇಷ್ಠ ಉಪಾಧ್ಯಾಯರಾಗಿದ್ದ ಪಂಡಿತ ಚನ್ನಪ್ಪ ಎರೇಸೀಮೆ ಅವರು ಹಳೆಗನ್ನಡ ಅರಗಿಸಿಕೊಂಡು ಎಲ್ಲರಿಗೂ ಸರಳವಾಗಿ ಉಣಬಡಿಸುತ್ತಿದ್ದಾರೆ. ಷಡಕ್ಷರರ ಕುರಿತ ಸಾಕಷ್ಟು ಪಾಂಡಿತ್ಯ ಹೊಂದಿದ್ದ ಚನ್ನಪ್ಪ, ಕಸಾಪ ಜತೆಗೆ ಷಡಕ್ಷರರ ರಚನೆಗಳನ್ನು ಆಧುನಿಕ ಭಾಷೆಗೆ ಭಾಷಾಂತರಿಸಲು ಮುಂದಾಗಿದ್ದರು ಎಂದು ಹೇಳಿದರು.

ಸಂಶೋಧಕ ಎಂ.ಚಿದಾನಂದಮೂರ್ತಿ ಮಾತನಾಡಿ, ಚನ್ನಪ್ಪನವರು ಸಾಕಷ್ಟು ಜನರಿಗೆ ಮಾರ್ಗದರ್ಶಿ ಹಾಗೂ ನಂದಾ ದೀವಿಗೆಯಂತಿದ್ದರು. ಶಿವಕುಮಾರ ಸ್ವಾಮೀಜಿಯವರ ಆತ್ಮೀಯರಾಗಿ ಬದಕಿದ್ದ, ಅವರ ನೆನಪು ಸುಖದ ಸಮುದ್ರ. ಅವರಲ್ಲಿ ಸಂಶೋಧಕ, ಕವಿ ಸಂಗಮಿಸಿದ್ದು, ವಚನ ಸಾಹಿತ್ಯ ಹಾಗೂ ಹಳೆಗನ್ನಡ ಕುರಿತು ಶ್ರೇಷ್ಠ ಸಂಶೋಧನೆ ನಡೆಸಿ, ಸಾಕಷ್ಟು ಬೆಳಕು ಚೆಲ್ಲಿದ್ದರು. ಅವರ ಕಾಲದಲ್ಲಿ ಪಿಎಚ್‌ಡಿ ಹಾಗೂ ಡಿ.ಲಿಟ್‌ ಪದವಿಗಳು ಇರಲಿಲ್ಲ. ಇಂದು ಅವರು ಬದುಕಿದ್ದರೆ ಅವರಿಗೆ ಹೆಮ್ಮೆಯಿಂದ ನಾಲ್ಕೈದು ವಿಶ್ವವಿದ್ಯಾಲಯಗಳು ಡಿ.ಲಿಟ್‌ ಕೊಡುತ್ತಿದ್ದವು ಎಂದರು.

ಈ ವೇಳೆ “ಪಂಡಿತ ಚನ್ನಪ್ಪ ಎರೇಸೀಮೆ ಪ್ರಶಸ್ತಿ’ಯನ್ನು ಅವರ ಶಿಷ್ಯನಾದ ಕನ್ನಡ ನಿಘಂಟು ಸಂಪಾದಕ ಹೀ.ಚಿ.ಶಾಂತವೀರಯ್ಯ ಅವರಿಗೆ ನೀಡಲಾಯಿತು. ವಸತಿ ಸಚಿವ ವಿ.ಸೋಮಣ್ಣ “ಪಂಡಿತ ಚನ್ನಪ್ಪ ಎರೇಸೀಮೆ ಅವರ ಸಾಹಿತ್ಯ ಸಂಚಯ’ ಬಿಡುಗಡೆಗೊಳಿಸಿದರು. ಜತೆಗೆ ಚನ್ನಪ್ಪ ಎರೇಸೀಮೆ ಅವರ ಆತ್ಮಕಥೆ “ನನ್ನ ಕಥೆ’ ಪರಿಷ್ಕೃತ ಆವೃತ್ತಿ, ಅನುವಾದ “ಬಸವರಾಜ ವಿಜಯ’ ಮರುಮುದ್ರಣ ಹಾಗೂ ಉದ್ದಾನೇಶ ಚರಿತೆ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ವಸತಿ ಸಚಿವ ವಿ.ಸೋಮಣ್ಣ, ಸಾಹಿತಿ ಡಾ.ಗೊ.ರು.ಚನ್ನಬಸಪ್ಪ, ರಾಮನಗರ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯವಿಭವಸ್ವಾಮಿ ಉಪಸ್ಥಿತರಿದ್ದರು.

Advertisement

ಪಂಡಿತ ಚನ್ನಪ್ಪ ಎರೇಸೀಮೆ ಅವರು ನಡೆದು ಬಂದ ದಾರಿ, ಅವರ ಆದರ್ಶಗಳು ಇಂದಿಗೂ ನನಗೆ ಸ್ಫೂರ್ತಿಯಾಗಿವೆ. ಅವರ ಚಿಂತನೆಗಳು, ದೂರದೃಷ್ಟಿ, ಕರ್ನಾಟಕಕ್ಕೆ ಅವರು ನೀಡಿರುವ ಕೊಡುಗೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.
-ವಿ.ಸೋಮಣ್ಣ, ವಸತಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next