Advertisement

ದೇಶದಲ್ಲಿ ಈಗ ವಂಚಕ ರಾಜಕಾರಣ ನಡೆಯುತ್ತಿದೆ : ಸಾಹಿತಿ ದೇವನೂರ ಮಹಾದೇವ ಕಿಡಿ

08:35 PM Feb 13, 2021 | Team Udayavani |

ಚಾಮರಾಜನಗರ: ಜನರಿಂದ ಆಯ್ಕೆಯಾಗಿರುವ  ಯಾವ ಲಕ್ಷಣವೂ ನರೇಂದ್ರ ಮೋದಿ, ಅಮಿತ್‌ಶಾ ಆಡಳಿತದಲ್ಲಿ ಕಾಣುತ್ತಿಲ್ಲ. ಇದು ಅಂಬಾನಿ, ಅದಾನಿಯಂಥ ಹತ್ತಾರು ಕಂಪೆನಿಗಳಿಂದ ಆಳಲ್ಪಡುತ್ತಿರುವ ಸರ್ಕಾರ ಎನಿಸುತ್ತಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಟೀಕಿಸಿದರು.

Advertisement

ನಗರದ ಡಾ. ಅಂಬೇಡ್ಕರ್ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಶನಿವಾರ, ವಿಶ್ವ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ 85ನೇ ಜನ್ಮ ದಿನಾಚರಣೆಯ ಅಂಗವಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಒಂದು ಕಂಪನಿಯ ಸರ್ಕಾರದ ಆಳ್ವಿಕೆ ಇತ್ತು. ಇಂದು ಅಂಬಾನಿ, ಅದಾನಿ ಮತ್ತಿತರ ಹತ್ತಾರು ಕಂಪನಿ ಸರ್ಕಾರಗಳ ಆಳ್ವಿಕೆಯಿದೆ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಲಕ್ಷಾಂತರ ಜನರು ಎರಡೂವರೆ ತಿಂಗಳುಗಳಿಂದ ದೆಹಲಿಯ ಗಡಿಯ ಸುತ್ತಲೂ ಜೀವ ಪಣಕ್ಕಿಟ್ಟು ಕುಳಿತಿದ್ದಾರೆ. ಧರಣಿ ಸ್ಥಳದಲ್ಲಿ ಹಲವು ರೈತರು ಮೃತಪಟ್ಟಿದ್ದಾರೆ. ಮೋದಿ-ಶಾ ಅವರು ಕಲ್ಲು ಹೃದಯದವರಾಗಿದ್ದಾರೆ ಎಂದರು.

ದೇಶದಲ್ಲಿ ಈಗ ವಂಚಕ ರಾಜಕಾರಣ ನಡೆಯುತ್ತಿದೆ. ರಾಜ್ಯ ಸಭೆಯಲ್ಲಿ ಮೋದಿ ಅವರು ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಮಾತನಾಡುತ್ತಾ, ಕನಿಷ್ಠ ಬೆಂಬಲ ಬೆಲೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ ಎಂದು ಪ್ರವಾದಿಯಂತೆ ಭೂತ, ವರ್ತಮಾನ ಮತ್ತು ಭವಿಷ್ಯದ ಕಾಲ ನುಡಿಯುತ್ತಿರುವ ರೀತಿಯಲ್ಲಿ ಹೇಳಿದ್ದಾರೆ. ಹಾಗಿದ್ದರೆ, ದೆಹಲಿಯಲ್ಲಿ ಲಕ್ಷಾಂತರ ಜನರು ರಸ್ತೆಗಿಳಿದು ಸರ್ಕಾರ, ಬಿಜೆಪಿಯವರು ಕೊಟ್ಟ ಕಷ್ಟಕೋಟಲೆಗಳನ್ನು ಸಹಿಸಿಕೊಂಡು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿರುವುದು ಏಕೆ? ದೇಶದ ಜನರು ಕೃಷಿ ಕಾಯ್ದೆಗಳ ವಿರುದ್ಧ ಮಾತನಾಡುತ್ತಿರುವುದು ಏಕೆ? ಅವರೇನು ಮೂಢಾತ್ಮರೇ ಎಂದು ಪ್ರಶ್ನಿಸಿದರು.

ಅವರು ಕೇಳುತ್ತಿರುವುದು ಇಷ್ಟೇ, ಕನಿಷ್ಠ ಬೆಂಬಲ ಬೆಲೆಗೆ ಶಾಸನ ಮಾಡಿ. ಇದನ್ನು ಮಾಡದಿದ್ದರೆ, ಕನಿಷ್ಠ ಬೆಂಬಲ ಬೆಲೆ ಇದ್ದರೂ ಇಲ್ಲದಂತೆ ಎಂದು ಹೇಳುತ್ತಿದ್ದಾರೆ. ರೈತರು, ಜನಸಾಮಾನ್ಯರು ಮೂಢಾತ್ಮರಲ್ಲ. ಸಮಸ್ಯೆ ಇರುವುದು ಮೋದಿ ಮತ್ತು ಶಾ ಅವರಲ್ಲಿ. ಅವರು ವಂಚಕಾತ್ಮರು. ಬೇಡಿಕೆಗಳನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದರು.

ಪ್ರಧಾನಿ ಮೋದಿ ಅವರಲ್ಲಿ ನನ್ನದೊಂದು ಪ್ರಾರ್ಥನೆ ಇದೆ. ನೀವು ಬೇರೆಯವರ ಮಾತನ್ನು ಕೇಳುವುದಿಲ್ಲ. ನಿಮ್ಮದೇ ಮಾತನ್ನಾದರೂ ಕೇಳಿಸಿಕೊಳ್ಳುತ್ತೀರಾ? ನೀವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2011ರಲ್ಲಿ ಯುಪಿಎ ಸರ್ಕಾರವು ಕೃಷಿ ಮಾರುಕಟ್ಟೆ ಸುಧಾರಣೆಗೆ ನಿಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡಿತ್ತು. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಬೇಕು ಎಂದು ವರದಿ ಕೊಟ್ಟಿದ್ದೀರಿ. ಈಗ ಎಲ್ಲರೂ ಇದನ್ನೇ ಕೇಳುತ್ತಿದ್ದಾರೆ. ಆದರೆ, ನೀವು ಕೇಳಿಸಿಕೊಳ್ಳುತ್ತಿಲ್ಲ ಎಂದು ಮಹಾದೇವ ಟೀಕೆ ಮಾಡಿದರು.

Advertisement

ಮಂಡಿಯೂ ಇರುತ್ತದೆ, ಖಾಸಗಿಯವರಿಗೂ ಅವಕಾಶ ಇರುತ್ತದೆ ಎಂದು ಹೇಳುತ್ತಿದ್ದಾರೆ. ಖಾಸಗಿ ಶಾಲೆಗಳ ಎದುರು ಸರ್ಕಾರಿ ಶಾಲೆಗಳ ಸ್ಥಿತಿ ಏನಾಗಿದೆ ಎಂಬುದು ನಮ್ಮ ಕಣ್ಣೆದುರೇ ಇದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆ, ಖಾಸಗಿ ಜಿಯೋ ಎದುರು ತೆವಳುತ್ತಿಲ್ಲವೇ? ಹಿಂದೆ ಕಾಫಿ ನಿಯಂತ್ರಿತ ಮಾರುಕಟ್ಟೆ ಇತ್ತು. ನಂತರ ಖಾಸಗಿ ಮಾರುಕಟ್ಟೆಗೆ ಅವಕಾಶ ಕೊಟ್ಟ ಕಾರಣಕ್ಕೆ ಈಗ ಕಾಫಿ ನಿಯಂತ್ರಿತ ಮಾರುಕಟ್ಟೆ ಹೆಸರಿಗಷ್ಟೇ ಇದೆ. ಖಾಸಗಿ, ದಲ್ಲಾಳಿಗಳು ಬಂಡವಾಳಶಾಹಿಗಳ ಹಿಡಿತಕ್ಕೆ ಕಾಫಿ ಬೆಳೆಗಾರ ಕಣ್ಣುಬಾಯಿ ಬಿಡುತ್ತಿದ್ದಾನೆ ಎಂದು ದೇವನೂರು ಮಹಾದೇವ ತಿಳಿಸಿದರು.

ಕೋವಿಡ್ ಹಾವಳಿಯಿಂದ ದೇಶವೇ ತತ್ತರಿಸಿರುವ ಕಾಲದಲ್ಲಿ ಕೇವಲ ನೂರು ಜನ ಶತಕೋಟ್ಯಧೀಶರು 12.5 ಲಕ್ಷ ಕೋಟಿ ಲಾಭ ಗಳಿಸಿದ್ದಾರೆ. ಬಂಡವಾಳಶಾಹಿಗಳು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಇದು ಹೇಗೆ ಸಾಧ್ಯ? ಈರುಳ್ಳಿ ಇನ್ನಿತರ ಪದಾರ್ಥಗಳನ್ನು ಸಂಗ್ರಹಿಸಿಟ್ಟು ಕೃತಕ ಅಭಾವ ಸೃಷ್ಟಿಸಿ ಬೆಲೆ ಗಗನಕ್ಕೆ ಏರಿಸುವಂತೆ ಎಲ್ಲ ದವಸ ಧಾನ್ಯಗಳ ಬೆಲೆಯೂ ಏರಿಕೆಯಾಗಲಿದೆ. ಮಧ್ಯಮ ವರ್ಗ ಬಡವರಾದರೆ, ಈಗಿನ ಬಡವರು ಹಸಿವಿನ ದವಡೆಗೆ ಸಿಲುಕಲಿದ್ದಾರೆ. ಈ ನೂತನ ಕಾಯ್ದೆಯಿಂದ ರೈತರಿಗೆ ಮಾತ್ರವಲ್ಲ ಬಡ ಹಾಗೂ ಮಧ್ಯಮ ವರ್ಗದ ಎಲ್ಲರಿಗೂ ತೊಂದರೆಯಾಗುತ್ತಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಮಹಾದೇವ ಹೇಳಿದರು.

ರೈತ ಮುಖಂಡ ಬಡಗಲಪುರ ನಾಗೇಂದ್ರ, ಚಿಂತಕ ಡಾ. ಮುಜಫರ್ ಅಸಾದಿ, ಡಾ. ಪ್ರಕಾಶ್ ಕಮ್ಮರಡಿ, ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಎ.ಎಂ. ಮಹೇಶಪ್ರಭು, ಎಚ್.ಸಿ. ಮಹೇಶ್‌ಕುಮಾರ್, ಹೆಬ್ಬಸೂರು ಬಸವಣ್ಣ, ಸಿದ್ಧರಾಜು ಮತ್ತಿತರರು ಉಪಸ್ಥಿತರಿದ್ದರು.

ಪ್ರೊ. ಎಂ.ಡಿ.ಎನ್. ಇದ್ದರೆ ಅವರೂ ದೇಶದ್ರೋಹಿಯಾಗುತ್ತಿದ್ದರು :

ಚಾಮರಾಜನಗರ: ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಬದುಕಿದ್ದರೆ ಅವರು ಸಹ ದೇಶದೊ್ರೀಹಿ ಎಂದು ಕರೆಸಿಕೊಳ್ಳುತ್ತಿದ್ದರು ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಬೇಸರ ವ್ಯಕ್ತಪಡಿಸಿದರು.

ಪ್ರೊ.ಎಂಡಿಎನ್ ಅವರ 85ನೇ ಜನ್ಮದಿನಾಚರಣೆ ಅಂಗವಾಗಿ ನಗರದಲ್ಲಿ ರೈತ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೊಫೆಸರ್ ಅವರು ಬದುಕಿದ್ದರೆ ಈಗ ಬಂಧನಲ್ಲಿರುತ್ತಿದ್ದರು. ಸರ್ಕಾರವನ್ನು ಪ್ರಶ್ನಿಸಿದವರನ್ನೆಲ್ಲಾ ಯುಎಪಿಎ ಕಾಯ್ದೆಯಡಿ ಜೈಲಿಗಟ್ಟಲಾಗುತ್ತಿದೆ. ಹಾಗೆಯೇ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರಿದ್ದರೆ, ದೇಶದೊ್ರೀಹಿ ಎಂದು ಕರೆದು, ಅವರನ್ನೂ ಯುಎಪಿಎ ಕಾಯ್ದೆಯಡಿ ವಿಚಾರಣೆಗೂ ಅವಕಾಶ ನೀಡದೇ ಬಂಧಿಸಿ ಜೈಲಿನಲ್ಲಿಡುತ್ತಿದ್ದರು ಎಂದು ಮಹಾದೇವ  ವಿಷಾದಿಸಿದರು.

ಚಾಮರಾಜನಗರದ ಡಾ. ಅಂಬೇಡ್ಕರ್ ಭವನದಲ್ಲಿ ಪ್ರೊ.ಎಂಡಿಎನ್ ಅವರ 85ನೇ ಜನ್ಮದಿನಾಚರಣೆ ಅಂಗವಾಗಿ  ರೈತ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next