Advertisement

ಪ್ರಚಾರದ ಗೀಳಿಲ್ಲ, ಕಾಯಕವೇ ಕೈಲಾಸ: ಸಮಾಜಕ್ಕೆ “ಬೆಳಕಾದ’ನಾಡಿನ ಮಹಿಳಾಮಣಿಗಳು

01:43 PM Mar 08, 2021 | Team Udayavani |

ಇಂದಿಗೂ ಎಲೆ ಮರೆಯ ಕಾಯಿಯಂತೆ ಹಲವು ಮಹಿಳೆಯರು ಸಮಾಜಕ್ಕೆ ಬೆಳಕಾಗಿ ದುಡಿಯುತ್ತಿದ್ದಾರೆ. ಯಾವುದೇ ಪ್ರಚಾರವಿಲ್ಲದೇ ಸಮಾಜಕ್ಕೆ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ. ಕುಟುಂಬ ನಿರ್ವಹಣೆ ಜತೆಗೆ ಸಮಾಜದ ಉನ್ನತಿಗೂ ಶ್ರಮಿಸುತ್ತಿದ್ದಾರೆ. ನಿಟ್ಟಿನಲ್ಲಿ ಮಹಿಳೆಯರ ಸೇವೆಯನ್ನು ಸ್ಮರಿಸಲು ವಿಶ್ವದಾದ್ಯಂತ ಮಾ.8ಕ್ಕೆ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಕುರಿತು “ಉದಯವಾಣಿ’ಯಲ್ಲಿ ಮಹಿಳೆಯ ಸಾಧನೆ ಕುರಿತಾಗಿ ಬೆಳಕು ಚೆಲ್ಲುವ ಪ್ರಯತ್ನ.

Advertisement

ರಾಮನಗರ: ಮಾ.8 ವಿಶ್ವ ಮಹಿಳಾ ದಿನ. ವಿಶ್ವದೆಲ್ಲಡೆ ಆಚರಿಸಲಾಗುವ ಈ ದಿನದಂದು ಮಹಿಳೆಯರ ಸಾಧನೆ ನೆನೆಯುವ, ತಾಯಿಯಾಗಿ, ಸಹೋದರಿಯಾಗಿ, ಶಿಕ್ಷಕಿಯಾಗಿ, ಸ್ನೇಹಿತೆಯಾಗಿ ಬದುಕು ಕಟ್ಟಿಕೊಳ್ಳಲು ಸಹಕಾರ, ಸಹಾಯ ಮಾಡಿದ ಮಹಿಳೆಯರಿಗೆ ಧನ್ಯವಾದ ಅರ್ಪಿಸುವ ದಿನ. ರಾಮನಗರದಲ್ಲಿ ಹೆಚ್ಚು ಪ್ರಚಾರವನ್ನು ಬಯಸದೆ ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿಕೊಂಡು ಹೋಗುತ್ತಿರುವ ಕೆಲವು ಮಹಿಳೆಯರನ್ನು ಮತ್ತು ಜನಸಮುದಾಯದಲ್ಲಿ ಗುರುತಿಸಿಕೊಂಡು ಇಂದು ನೇಪಥ್ಯಕ್ಕೆ ಸರಿದಿರುವ ಮಹಿಳೆಯರನ್ನು ಇಲ್ಲಿ ಪರಿಚಯಿಸಲಾಗಿದೆ.

ಕುಂಬಾರಿಕೆ ಕಲೆಯಲ್ಲಿ ಪರಿಣಿತೆ ಅನಸೂಯ ಬಾಯಿ :

ಪ್ಲಾಸ್ಟಿಕ್‌ ಆವಿಷ್ಕಾರದ ನಂತರ ಕುಂಬಾರಿಕೆ ಕಲೆ ಬಹುತೇಕ ನಶಸಿದೆ. ಆದರೆ, ರಾಮನಗರದ ಅನಸೂಯಬಾಯಿ ಕುಂಬಾರಿಕೆ ಕಲೆಯನ್ನು ಜೀವಂತವಾಗಿರಿಸಿದ್ದಾರೆ. ಇಲ್ಲಿನ ಜಾನಪದ ಲೋಕದಲ್ಲಿ ಈಕೆಯ ಕಲೆದಿನನಿತ್ಯ ಅನಾವರಣವಾಗುತ್ತಲೇ ಇದೆ. ಈಕೆ ತಯಾರಿಸಿದತೂಗುದೀಪ, ನವಿಲುದೀಪ, ಸರ್ಪದ ದೀಪ, ನೀರಿನ ಹೂಜಿ, ಮನೆ ಅಲಂಕಾರಿಕ ವಸ್ತುಗಳು ಹೀಗೆ ನೂರಾರು ವಸ್ತುಗಳು ಜೇಡಿ ಮಣ್ಣಿನಿಂದ ಅನಸೂಯ ಬಾಯಿ ಕೈಗಳಿಂದ ಅರಳುತ್ತಿವೆ. 30 ವರ್ಷಕ್ಕಿಂತಹೆಚ್ಚು ಕಾಲದಿಂದ ಈಕೆ ಕುಂಬಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಾನಪದ ಲೋಕದಲ್ಲಿರುವ ಕುಂಬಾರಿಕೆ ವಿಭಾಗದಲ್ಲಿ ಪ್ರವಾಸಿಗರು ಇಚ್ಛಿಸಿದರೆ ಅವರೆದುರಿಗೆ ವಸ್ತುಗಳನ್ನು ತಯಾರಿಸುತ್ತಾರೆ. ಆಸಕ್ತಿ ಇದ್ದವರಿಗೆ ಕಲಿಸುತ್ತಿದ್ದಾರೆ. ಜಾನಪದ ಲೋಕಕ್ಕೆ ಭೇಟಿ ಕೊಡುವ ಪ್ರವಾಸಿಗರು ಈಕೆಯ ಕುಂಬಾರಿಕೆ ವಸ್ತುಗಳನ್ನು ಕಂಡು ಆಕರ್ಷಿತರಾಗಿ ಖರೀದಿಸುವುದು ಉಂಟು. ಇಳಿ ವಯಸ್ಸಿನಲ್ಲೂ ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸುವ ಆಸಕ್ತಿ ಮಾತ್ರ ಕುಂದಿಲ್ಲ.

ಅನಾಥ ಶವಗಳ ವಾರಸುದಾರಳೀಕೆ ಆಶಾ :

Advertisement

ಅನಾಥ ಶವಗಳಿಗೆ ವಿ.ಆಶಾ ಬಂಧು. ನೊಂದವರ ನೆರವಿಗೆ ಧಾವಿಸುವ ಸಹೃದಯಿ. ಸ್ವತಃ ಬಡತನದಲ್ಲಿದ್ದ ಈಕೆಗೆ ಅನಾಥ ಶವಗಳ ಸಂಸ್ಕಾರ ನೆರೆವೇರಿಸುವ ವನಿತೆ. ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ವಿಶೇಷವಾಗಿ ಕ್ರೈಂ ಪ್ರಕರಣಗಳಲ್ಲಿ ಪರಿಚಯಸಿಗದ ಅನಾಥ ಶವಗಳ ಸಂಸ್ಕಾರ ನಡೆಸುತ್ತಿದ್ದಾರೆ. ರೈಲಿಗೆ ಸಿಲುಕಿ ಛಿದ್ರವಾದ ದೇಹಗಳಿರಲಿ, ನೀರಲ್ಲಿ ಮುಳುಗಿ ಕೊಳೆತು ನಾರುತ್ತಿರುವ ಶವವಾಗಲಿ, ಅಂಜಿಕೆ, ಹೇಸಿಗೆ ಪಡದೆ ಆಶಾ ಇಂತಹ ಶವಗಳನ್ನು ಸಂಸ್ಕಾರ ನೆರವೇರಿಸುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಈಕೆಯ ಬಗ್ಗೆ ಮೆಚ್ಚುಗೆಯ ನುಡಿ ಕೇಳಿ ಬರುತ್ತಿದೆ. ಆದರೆ, ಪ್ರಚಾರದ ಗೀಳು ಈಕೆಗೆ ಇಲ್ಲ. ಇಬ್ಬರು ಮಕ್ಕಳ ತಾಯಿ ಆಶಾ ಯಾವುದೇ ಸಮಯದಲ್ಲಿ ಕರೆದರು ಸೇವೆಗೆ ಹಾಜರ್‌. ಇತ್ತೀಚಿನ ದಿನಗಳಲ್ಲಿ ಮದುವೆ ಇತ್ಯಾದಿ ಶುಭ ಸಮಾರಂಭಗಳಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ, ಒಪ್ಪತ್ತಿನ ಊಟಕ್ಕೆ ಪರದಾಡುವ ಮಂದಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಜೀವರಕ್ಷ ಚಾರಿಟಬಲ್‌ ಟ್ರಸ್ಟ್‌ ರಚಿಸಿಕೊಂಡು ಅನಾಥ ಶವಗಳ ಸಂಸ್ಕಾರ ಸೇವೆಯಲ್ಲಿ ಮತ್ತು ಅನಾಥರ ಸೇವೆಗಾಗಿ ಪ್ರಕೃತಿ ಮಡಿಲು ಸೇವಾ ಆಶ್ರಮ ಸ್ಥಾಪಿಸಿದ್ದಾರೆ. ಸಮಾನ ಮನಸ್ಕರೊಡನೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರೇಷ್ಮೆ ಕೃಷಿ ಸಾಧಕಿ ಮಂಗಳಗೌರಮ್ಮ :

ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದ ಕೆ.ವಿ.ಮಂಗಳಗೌರಮ್ಮ. ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಂಎಸ್‌ಸಿ, ಬಿಇಡ್‌ ಪದವೀಧರೆ. ಮೂಲತಃ ರಾಮನಗರ ತಾಲೂಕು ಕಾಕರಾಮನಹಳ್ಳಿಯವರು. ರಾಮಕೃಷ್ಣಎಂಬುವರನ್ನು ಮದುವೆಯಾಗಿ ಚನ್ನಪಟ್ಟಣದ ಬೇವೂರು ಗ್ರಾಮದಲ್ಲಿದ್ದಾರೆ. ಮದುವೆಯಾಗುವ ಮುನ್ನ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪತಿ ನಡೆಸುತ್ತಿದ್ದ ಚಾಕಿ ಉತ್ಪಾದನಾ ಕೇಂದ್ರವನ್ನು ಈಗ ಇವರೇ ನಡೆಸುತ್ತಿದ್ದಾರೆ. ಕನಕಪುರದ ಕೀರಣಗೆರೆಯ ಚಾಕಿ ಕೇಂದ್ರ ಉತ್ತಮ ಗುಣಮಟ್ಟದ ರೇಷ್ಮೆ ಹುಳು ಮತ್ತು ಮೊಟ್ಟೆಗೆ ಹೆಸರು ಮಾಡಿದೆ. ಕೀರಣಗೆರೆ ಚಾಕಿ ಕೇಂದ್ರವನ್ನು ಬೇವೂರು ಗ್ರಾಮದಲ್ಲಿ ಆರಂಭಿಸಿ ನಿರ್ವಹಿಸುತ್ತಿದ್ದಾರೆ. ಗುಣಮಟ್ಟದ ಚಾಕಿ(ರೇಷ್ಮೆ ಮೊಟ್ಟೆ) ನೀಡಿ ಪ್ರಶಂಸೆ ಪಡೆಯುತ್ತಿದ್ದಾರೆ. ಇವರ ನಡೆಸುವ ಕೇಂದ್ರದಲ್ಲಿ 60ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದಾರೆ. ರೇಷ್ಮೆ ಬೇಳೆಗಾರರಿಗೆ ಮಾರ್ಗದರ್ಶಕರೂ ಹೌದು. ಸದ್ಯ ಬೇವೂರು ಗ್ರಾಪಂ ಸದಸ್ಯರಾಗಿದ್ದು, ಜನ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ತೊಗಲು ಬೊಂಬೆ ಕಲಾವಿದೆ ಗೌರಮ್ಮ  ಗೆ ಕೋವಿಡ್  ಕಂಟಕ :

ಕೋವಿಡ್ ಸಂಕಷ್ಟದಿಂದ ನಲುಗಿ ಹೋದವರ ಪೈಕಿ ತೊಗಲು ಬೊಂಬೆ ಕಲಾವಿದೆ ಗೌರಮ್ಮ ಒಬ್ಬರು. ಊರಿಂದೂರಿಗೆ ಸಂಚರಿಸಿ ತೊಗಲು ಬೊಂಬೆ ಪ್ರದರ್ಶಿಸಿ ಕಥೆ ಹೇಳುತ್ತ ಒಂದಿಷ್ಟು ಕಾಸು ನೋಡುತ್ತಿದ್ದರು. ಕೋವಿಡ್ ದಿಂದ ಇಡೀ ಜೀವನ ಅಸ್ತ್ಯವ್ಯಸ್ತ. 66 ವರ್ಷದ ಈ ಕಲಾವಿದೆ ಮಾಶಾಸನ ಕೊಡುವಂತೆ ಅರ್ಜಿ ಹಾಕಿದರು ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಇಂದು ಬಡತನವೇ ಬದುಕು. ತೊಗಲು ಬೊಂಬೆ ಕಲೆ ಕಲಿಯುವವರಿದ್ದರೆ ಕಲಿಸಲು ರೆಡಿ. ಆದರೆ,ಕಲಿಯುವವರೇ ಇಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ಮನರಂಜೆನಗೂ ಯಾರು ಕರೆಯುವುದಿಲ್ಲ ಎಂಬ ನೋವು ತೋಡಿಕೊಂಡಿದ್ದಾರೆ.

ಗುಬ್ಬಿ ನಾಟಕ ಕಂಪನಿಯ ಕಲಾವಿದೆ ಎನ್‌.ಶಾಂತಮ್ಮ :

ಗುಬ್ಬೀ ವೀರಣ್ಣ ನಾಟಕ ಕಂಪನಿ. ಬಹುಶಃ ಈ ಹೆಸರು ಕೇಳದ ಕನ್ನಡಿಗನೇ ಇಲ್ಲ. ರಂಗಭೂಮಿ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದ ನಾಟಕ ಕಂಪನಿ. ಡಾ.ರಾಜ್‌ ಕುಮಾರ್‌ ಸೇರಿದಂತೆ ಹಲವಾರು ಕಲಾವಿದರು ತಮ್ಮ ಭವಿಷ್ಯ ಕಂಡುಕೊಂಡ ಸಂಸ್ಥೆ. 42 ವರ್ಷಗಳ ಕಾಲ ಗುಬ್ಬಿ ವೀರಣ್ಣ ಕಂಪನಿಯಲ್ಲಿ ನಟನಾ ಜೀವನ ನಡೆಸಿದ್ದಾರೆ ಎನ್‌.ಶಾಂತಮ್ಮ. 13ನೇ ವಯಸ್ಸಿಗೆ ಬಾಲ ಕಲಾವಿದೆ. ಸಧ್ಯ ಈಕೆಗೆ 68 ವರ್ಷ ವಯಸ್ಸು. ತಾಲೂಕಿನ ದೊಡ್ಡಗಂಗವಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ. ಈಕೆ ಜನಿಸಿದ್ದು ನಗರದ ಅರ್ಚಕರಹಳ್ಳಿಯಲ್ಲಿ. ಅಪ್ರತಿಮಕಲಾವಿದರಾಗಿ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದಾರೆ. ಆದರೆ, ಇಂದು ಸರ್ಕಾರ ನೀಡುವ 1500 ರೂ. ಮಾಶಾಸನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಚಿತ್ರಗಳಲ್ಲಿ ನಟಿಸಲು ಕರೆ ಬಂದರೆ ನಟಿಸಲು ಸಿದ್ಧ, ಆದರೆ, ಆಲಿಸುವ ಕಿವಿಗಳಿಲ್ಲ. ಗುಬ್ಬಿ ವೀರಣ್ಣನವರ ಪುತ್ರನ ಮಡದಿ ಈಕೆ. ನಟನೆಯ ಬಗ್ಗೆ ತರಬೇತಿ ನೀಡಲು ಸಿದ್ಧ, ಆದರೆ, ಕಲಿಯುವವರ ಕೊರತೆ.

 

ಬಿ.ವಿ.ಸೂರ್ಯಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next