Advertisement

ಸಾಮೂಹಿಕ ಬಿಲ್ವಾರ್ಚನೆಯಿಂದ ಲೋಕ ಕಲ್ಯಾಣ

04:41 PM Aug 24, 2022 | Team Udayavani |

ಬೀದರ: ಸಾಮೂಹಿಕ ಬಿಲ್ವಾರ್ಚನೆಯಿಂದ ಲೋಕ ಕಲ್ಯಾಣ, ವಿಶ್ವ ಶಾಂತಿ ಸಾಧ್ಯವೆಂದು ಬೇಮಳಖೇಡ ಹಿರೇಮಠದ ಡಾ| ರಾಜಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

Advertisement

ನಗರದ ನೌಬಾದನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯುತ್ತಿರುವ ಸಿದ್ಧಾಂತ ಶಿಖಾಮಣಿ ಶಿವದರ್ಶನ ಪ್ರವಚನ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಅಧ್ಯಾತ್ಮದಲ್ಲಿ ಶಿವಾರ್ಚನೆಯಲ್ಲಿ ಬಿಲ್ವಾರ್ಚನೆಗೆ ಅತ್ಯಂತ ಮನ್ನಣೆ ನೀಡಲಾಗಿದೆ ಎಂದರು.

ಸೃಷ್ಟಿಕರ್ತನಾದ ಶಿವನ ತ್ರಿನೇತ್ರದ ಪ್ರತೀಕವಾಗಿ ಬಿಲ್ವ ಪತ್ರಿಯು ಪ್ರಸಿದ್ಧವಾಗಿದೆ. ಮೂರು ದಳಗಳುಳ್ಳ ಒಂದು ಬಿಲ್ವಪತ್ರಿಯು ತ್ರಿನೇತ್ರನಾದ ಶಿವನಿಗೆ ಅರ್ಪಿಸಿದರೆ ಮಾನವನು ಹಿಂದೆ ಮಾಡಿದ ಮೂರು ಜನ್ಮದ ಪಾಪವು ಸುಟ್ಟುಹೋಗುತ್ತದೆ ಎಂದು ಬಿಲ್ವೋಪನಿಷತ್‌ ಹೇಳುತ್ತದೆ. ಪರಮಾತ್ಮನಿಗೆ ಬಿಲ್ವವು ಅತ್ಯಂತ ಪ್ರಿಯವಾದದ್ದು. ಬಿಲ್ವದ ಮಹತ್ವವು ಶಿವನಷ್ಟೇ ಪ್ರಖ್ಯಾತಿ ಪಡೆದಿದೆ. ನಿತ್ಯ ಲಿಂಗಾರ್ಚನೆಯಲ್ಲಿ ಬಿಲ್ವಪತ್ರಿ ಅರ್ಪಿಸಬೇಕೆಂದು ಹೇಳಲಾಗುತ್ತಿದೆ ಎಂದರು.

ಬಿಲ್ವಪತ್ರಿಯು ಧಾರ್ಮಿಕದಲ್ಲಷ್ಟೇ ಅಲ್ಲ, ಆಯುರ್ವೇದದಲ್ಲಿಯೂ ಕೂಡ ಅಷ್ಟೇ ಮಹತ್ವ ಪಡೆದುಕೊಂಡಿದೆ. ವಾತ, ಪಿತ್ತ ಮತ್ತು ಕಫಯುಕ್ತ ಈ ಶರೀರದಲ್ಲಿ ಅನಾರೋಗ್ಯವು ಮನುಷ್ಯನನ್ನು ಸದಾಕಾಲ ಕಾಡುತ್ತಿರುತ್ತದೆ. ಈ ರೋಗಕ್ಕೆ ದಿವ್ಯ ಔಷಧವೆಂದರೆ ಬಿಲ್ವಪತ್ರಿಯಂದು ಹೇಳಲಾಗುತ್ತದೆ. ನಿತ್ಯ ಬಿಲ್ವಪತ್ರೆಯ ಮೂರು ದಳಗಳನ್ನು ಸೇವಿಸುತ್ತಿದ್ದರೆ ಸದೃಢ ಆರೋಗ್ಯ ಹೊಂದಬಹುದು. ದೇಹದ ಅನೇಕ ರೋಗಗಳಿಗೆ ಇದು ರಾಮಬಾಣವಾಗಿದೆ ಎಂದು ತಿಳಿಸಿದರು.

ವಿಷಯುಕ್ತವಾದ ಇಂಗಾಲ ಡೈ ಆಕ್ಸೈಡನ್ನು ಹೀರಿಕೊಂಡು ಶುದ್ಧವಾದ ಆಕ್ಸಿಜನ್‌ನನ್ನು ಬಿಡುಗಡೆ ಮಾಡುವ ಗಿಡಮರಗಳಲ್ಲಿ ಬಿಲ್ವಮರ ಮುಂಚೋಣಿಯಲ್ಲಿದೆ. ಜೀವನದಲ್ಲಿರುವ ಅನೇಕ ಸಮಸ್ಯೆಗಳಿಗೆ ಬಿಲ್ವಮರಕ್ಕೆ ಪೂಜೆ ಮಾಡುವುದರಿಂದ ತಾಪತ್ರಯಗಳು ದೂರವಾಗುವವು. ಆದ್ದರಿಂದ ಪ್ರತಿ ಮನೆಗಳ ಮುಂದೆ ಪವಿತ್ರವಾದ ಬಿಲ್ವ ಮರವನ್ನು ನೆಡಬೇಕು ಎಂದು ಕರೆ ನೀಡಿದರು.

Advertisement

ನೂರಕ್ಕೂ ಅಧಿಕ ದಂಪತಿಗಳು ಬಿಲ್ವಾರ್ಚನೆಯನ್ನು ನಡೆಸಿದರು. ಮಾದಪ್ಪ ಭಂಗೂರೆ ಸ್ವಾಗತಿಸಿದರು. ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದ, ದೇವಸ್ಥಾನ ಕಮಿಟಿ ಅಧ್ಯಕ್ಷ ಬಸವರಾಜ ಭಂಗೂರೆ, ವಿಶ್ವನಾಥಪ್ಪ ಹುಮನಾಬಾದೆ, ಕಂಟೆಪ್ಪ ಭಂಗೂರೆ, ಕಾಶಪ್ಪ ಭಂಗೂರೆ, ಬಸವರಾಜ ಭಂಗೂರೆ, ಕಂಟೆಪ್ಪ ಕರಂಜೆ, ರೇಖಾ ವೀರಶೆಟ್ಟಿ ಭಂಗೂರೆ, ಸಂಗಮೇಶ ಹುಮನಾಬಾದೆ, ಓಂಕಾರ ಸ್ವಾಮಿ, ಸರಸ್ವತಿ ಗೌಡಶೆಟ್ಟಿ, ಪ್ರಭಾವತಿ ಹುಮನಾಬಾದೆ, ಸುನಿತ ಕಂಟೆಪ್ಪ ಭಂಗೂರೆ, ಮಹಾಂತೇಶ ಡೊಂಗರಗಿ, ಚಂದ್ರಪ್ಪ ಭಂಗೂರೆ, ಬಸವರಾಜ ಹುಮನಾಬಾದೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next