Advertisement

ಸುಶಿಕ್ಷಿತ ಸಮಾಜಕ್ಕೆ ರಂಗಭೂಮಿಯೇ ಜೀವಾಳ

11:07 PM Mar 26, 2021 | Team Udayavani |

ರಂಗಭೂಮಿಯ ಕಲಾವಿದರು ಸೇರಿ 1948ರಲ್ಲಿ ಯುನೆಸ್ಕೋ ಪ್ರಾಯೋಜಕತ್ವದಲ್ಲಿ ಇಂಟರ್‌ನ್ಯಾಶನಲ್‌ ಥಿಯೇಟರ್‌ ಆಫ್ ಇನ್‌ಸ್ಟಿಟ್ಯೂಟ್‌ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಈ ಸಂಘಟನೆಯೂ ರಂಗಭೂಮಿ ಕ್ಷೇತ್ರದ ಸಾಧಕರನ್ನು ಹಾಗೂ ಕಲಾವಿದರನ್ನು ಗುರುತಿಸಿ, ಅವರನ್ನು ಮುಖ್ಯಭೂಮಿಕೆಗೆ ತರಲು ವೇದಿಕೆಯಾಯಿತು. ಸಂಘಟನೆಯ ಸಹಯೋಗದಲ್ಲಿ 1961ರಲ್ಲಿ ಜರಗಿದ 9ನೇ ವಿಶ್ವ ಕಾಂಗ್ರೆಸ್‌ ಅಧಿವೇಶನದಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದ ಆರವಿ ಕಿವಿಯಾ ಅವರು ವಿಶ್ವ ರಂಗಭೂಮಿ ದಿನಾಚರಣೆಯ ಬಗ್ಗೆ ಪ್ರಸ್ತಾವಿಸಿದರು. ಅನಂತರ 1962 ಮಾರ್ಚ್‌ 27ರಂದು ಪ್ಯಾರಿಸ್‌ನಲ್ಲಿ ಥಿಯೇಟರ್‌ ಅಫ್ ನೇಶನ್ಸ್‌ ಅಸ್ತಿತ್ವಕ್ಕೆ ಬಂದ ಸವಿನೆನಪಿಗಾಗಿ ವಿಶ್ವ ರಂಗಭೂಮಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.

Advertisement

ಶತಮಾನಗಳ ಹಿಂದೆ ಜನರು ತಮ್ಮ ಮನೋ ರಂಜನೆಗಾಗಿ ವಿವಿಧ ಜಾನಪದ, ಸಾಂಸ್ಕೃತಿಕ ಮತ್ತು ಶಾಸ್ತ್ರೀಯ ಕಲೆಗಳನ್ನು ಅವಲಂಬಿಸಿದ್ದರು. ಇದು ತಲೆತಲಾಂತರದಿಂದ ನಡೆದು ಬಂದ ಪರಂಪರೆ. ವರ್ಷಗಳುರುಳಿದಂತೆ ಜನರ ಮನೋರಂಜನ ಕ್ಷೇತ್ರದ ವ್ಯಾಪ್ತಿ ವಿಸ್ತಾರವಾಗತೊಡಗಿತು. ಇತ್ತೀಚಿನ ದಶಕಗಳಲ್ಲಿ ಸಿನೆಮಾ ರಂಗ ಆಗಾಧವಾಗಿ ಮತ್ತು ಅತ್ಯಂತ ಪರಿಣಾಮಕಾರಿ ಮನೋರಂಜನ ಮಾಧ್ಯಮವಾಗಿ ರೂಪುಗೊಂಡಿದೆ. ಎಲ್ಲ ಕ್ಷೇತ್ರಗಳಂತೆ ಇಲ್ಲೂ ಆಧುನಿಕ ತಂತ್ರಜ್ಞಾನದ ನವನವೀನ ಆವಿಷ್ಕಾರಗಳು ಮನೋರಂಜನೆಯನ್ನು ನಮ್ಮ ಅಂಗೈಯಲ್ಲಿರಿಸಿವೆ.

ಇಂದು ನಮ್ಮ ಮನೆಗಳಲ್ಲಿ ಟಿ.ವಿ.ಇದೆ; ಕೈಗಳಲ್ಲಿ ಸ್ಮಾರ್ಟ್‌ಫೋನ್‌ಗಳಿವೆ. ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌ನಂಥ ಮನೋರಂಜನೆಯ ಒಟಿಟಿ ಆ್ಯಪ್‌ಗ್ಳು ಬೆರಳತುದಿಯಲ್ಲಿವೆ. ಹೀಗಾಗಿ ಇಂದಿನ ಪೀಳಿಗೆಯ ಮಕ್ಕಳು ಮತ್ತು ಯುವಜನಾಂಗಕ್ಕೆ ಮನೋರಂಜನೆ ಎಂದರೆ ಬಹಳ ದೊಡ್ಡ ಸಂಗತಿಯೇನಲ್ಲ. ಮನೋರಂಜನೆ ಎಂದರೇನು? ಎಂದು ಕೇಳಿದರೆ ನಾಲ್ಕು ಒಟಿಟಿ ಆ್ಯಪ್‌ಗ್ಳ ಹೆಸರು, ಅವುಗಳಲ್ಲಿನ ಒಂದಷ್ಟು ಸೀರಿಸ್‌ಗಳ ಹೆಸರನ್ನು ಹೇಳುತ್ತಾರೆ. ಆದರೆ ಇದೇ ಪ್ರಶ್ನೆಯನ್ನು ನಮ್ಮ ಅಜ್ಜ- ಅಜ್ಜಿಯಂದಿರಲ್ಲಿ ಕೇಳಿದರೆ ಅವರು ರಂಗಭೂಮಿ, ನಾಟಕ, ಮೂಡಲಪಾಯ, ಯಕ್ಷಗಾನ ಮೊದಲಾದವುಗಳ ಬಗೆಗೆ ವಿವರಿಸಲಾರಂಭಿಸುತ್ತಾರೆ. ಇಂದು ನಾವು ಮನೋರಂಜನೆಯ ಮಾಧ್ಯಮ, ಪ್ರಕಾರಗಳಿಗೆ ಏನೆಲ್ಲವನ್ನು ಹೆಸರಿಸುತ್ತೇವೆಯೋ ಅವೆಲ್ಲದರ ಭದ್ರ ಬುನಾದಿ ರಂಗಭೂಮಿ ಎಂಬುದು ಇಂದಿನ ಪೀಳಿಗೆಯವರಿಗೆ ತಿಳಿದಿರಲಾರದು.

ಮಾನವ ವಿಕಾಸ ಹೊಂದಿದಂತೆ, ತನ್ನನ್ನು ತಾನು ಬೌದ್ಧಿಕವಾಗಿ ಗುರುತಿಸಿಕೊಳ್ಳಲು ಪ್ರಾರಂಭಿಸಿದನು. ಹೀಗಾಗಿ ಕಲೆ, ಸಾಹಿತ್ಯ, ಸಂಗೀತ ಹಾಗೂ ಇನ್ನಿ ತರ ವಿಚಾರಗಳಲ್ಲಿ ಏಳಿಗೆಗೆ ಕಾರಣವಾಗಿದ್ದನ್ನು ಮಾನವನ ನೈಜ ವಿಕಾಸದ ಪ್ರಮುಖ ಘಟ್ಟ ಎಂದು ಕರೆಯಲಾಯಿತು. ತನ್ನಲ್ಲಿ ಆಗುತ್ತಿದ್ದ ಬದಲಾವಣೆ ಹಾಗೂ ಭಾವನೆಗಳಿಗೆ ಸಾಹಿತ್ಯ, ಚಿತ್ರಕಲೆ ಹಾಗೂ ನಾಟಕದ ರೂಪುಕೊಟ್ಟ ಪರಿಣಾಮ ಹೊಸದೊಂದು ಸಾಂಸ್ಕೃತಿಕ ಜಗತ್ತು ಏಳಿಗೆ ಕಂಡು ರಂಗಭೂಮಿಯ ಉದಯಕ್ಕೆ ಕಾರಣವಾಯಿತು.

ರಂಗಭೂಮಿ ಕಟ್ಟಿಕೊಟ್ಟ ಆ ದಿನಗಳನ್ನು ಮಾತ್ರ ಮರೆಯಲು ಸಾಧ್ಯವೇ ಇಲ್ಲ. ರಂಗಭೂಮಿ ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಿರದೆ ಜನರನ್ನು ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಜಾಗೃತಗೊಳಿಸುವ ಒಂದು ಮಾಧ್ಯಮ. ನಾಟಕವು ವೀಕ್ಷಕರ ಮನಸ್ಸಿನಲ್ಲಿ ವಿಭಿನ್ನ ಗುರುತುಗಳನ್ನು ಮೂಡಿಸುತ್ತದೆ. ಲಕ್ಷಾಂತರ ಮಂದಿಗೆ ಬದುಕು ಕಟ್ಟಿಕೊಟ್ಟ ರಂಗಭೂಮಿ ಇಂದು ನೇಪಥ್ಯಕ್ಕೆ ಸರಿಯುತ್ತಿದ್ದರೂ ತನ್ನ ಜೀವಂತಿಕೆ ಉಳಿಸಲು ಮತ್ತು ಶ್ರೀಮಂತಿಕೆಯನ್ನು ಕಾಪಾಡಿಕೊಳ್ಳಲು ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಲೇ ಬಂದಿದೆ. ಹೀಗಾಗಿ ನಾಟಕದ ಈ ಪ್ರಕಾರವನ್ನು ಜೀವಂತವಾಗಿಡಲು ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ.

Advertisement

ರಂಗಭೂಮಿ ಸಾಂಸ್ಕೃತಿಕವಾದ ಜನಪರ ವೇದಿಕೆ ಯಾಗಿದೆ. ಇದು ಹಳೆಯ ಕಲಾ ಪ್ರಕಾರವಾಗಿದ್ದರೂ ಈಗಿನ ಆಧುನಿಕ ಪ್ರಪಂಚದಲ್ಲೂ ಒಂದು ಸಮರ್ಥವಾದ ಕಲಾ ಮಾಧ್ಯಮವಾಗಿ ಬೆಳೆದಿದೆ. ಹಲವಾರು ಕಲಾ ಪ್ರಕಾರಗಳ ಮೂಲಕ ಇಂದು ಜಗತ್ತಿನೆದುರು ರಂಗಭೂಮಿ ಗುರುತಿಸಿಕೊಂಡಿದೆ. ಇವುಗಳಲ್ಲಿ ನಾಟಕ, ಬೀದಿ ನಾಟಕ, ದೊಡ್ಡಾಟ, ಯಕ್ಷಗಾನ ಹಾಗೂ ಬೊಂಬೆಯಾಟ ಆದಿಯಾಗಿ ಇನ್ನೂ ಹಲವಾರು ಪ್ರಕಾರಗಳಿವೆ. ಇವು ಕೇವಲ ಮನೋರಂಜನೆಗಾಗಿ ಮಾತ್ರ ಉದಯಿಸಿದ್ದಲ್ಲ, ಬದಲಾಗಿ ಮನೋವಿಕಾಸಕ್ಕಾಗಿ ಎಂಬುದಿಲ್ಲಿ ಉಲ್ಲೇಖನೀಯ. ರಂಗಭೂಮಿಯ ಎಲ್ಲ ಕಲಾ ಪ್ರಕಾರಗಳೂ ಸಮಾಜದಲ್ಲಿನ ತುಡಿತಗಳಿಗೆ, ಮಾನವನ ಸಂಕಷ್ಟಗಳಿಗೆ ಧ್ವನಿಯಾದವು.

ಮನೋರಂಜನೆಗಾಗಿ ನಮ್ಮಲ್ಲಿ ಹಲವಾರು ಕಲಾ ಪ್ರಕಾರಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ವಿಶೇಷ. ಇವು ಜನರಿಗೆ ಮನೋರಂಜನೆ ನೀಡುವ ಜತೆ ಜತೆಗೆ ಅವರಲ್ಲಿರುವ ಸೃಜನಶೀಲತೆಯನ್ನು ಅರಳಿಸುವಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತವೆ(ಇಂದಿನ ಕೆಲವು ವೆಬ್‌ಸಿರೀಸ್‌ಗಳು, ಕೆಲವು ಚಲನಚಿತ್ರಗಳು ಜನರ ಮನಸ್ಸನ್ನು ಕೆರಳಿಸುತ್ತವೆ ಎಂಬ ಮಾತುಗಳಿಗೆ ನಾವು ಕಿವಿಯಾಗಿದ್ದೇವೆ). ಹೀಗಾಗಿ ಜನರ ಮನಸ್ಸನ್ನು ಅರಳಿಸುವಂಥ ಕಲೆಗಳಲ್ಲಿ ನಾಟಕ ಅಥವಾ ರಂಗಭೂಮಿಯೂ ಒಂದು. ಇವು ಪ್ರೇಕ್ಷಕರನ್ನು ಒಂದು ಅದೃಶ್ಯವಾದ ಲೋಕಕ್ಕೆ ಕರೆದೊಯ್ಯುತ್ತದೆ. ಇದರಲ್ಲಿನ ಪ್ರತಿಯೊಂದು ಪಾತ್ರಗಳನ್ನು ಜನರು ತಮ್ಮ ಬದುಕಿಗೆ ಹೋಲಿಸಿ ನೋಡುತ್ತಾರೆ. ಅವುಗಳಲ್ಲಿ ಬರುವ ಕೆಲವು ಪಾತ್ರಗಳನ್ನು, ಕೆಲವು ಸನ್ನಿವೇಶಗಳನ್ನು ತಮ್ಮ ಬದುಕಿಗೆ ಅನ್ವಯಿಸಿಕೊಂಡು ಬಿಡುತ್ತಾರೆ. ಜನರ ಯೋಚನಾ ಶಕ್ತಿಯನ್ನು ಬದಲಿಸುವ ಸಾಮರ್ಥ್ಯ ನಾಟಕಗಳಿಗಿವೆ. ಆದ್ದರಿಂದ ಇದು ಕಲೆಯ ಒಂದು ಸಮರ್ಥ ಮಾಧ್ಯಮವಾಗಿದೆ. ನಾಟಕ ಮತ್ತು ಆಧುನಿಕ ಮನೋರಂಜನೆಗಿರುವ ವ್ಯತ್ಯಾಸ ಇದೇ ಆಗಿದೆ.
ಈಗ ರಂಗಭೂಮಿ ಮೊದಲಿನಂತಿಲ್ಲ. ಆಧುನಿಕತೆ ಎಂಬ ಬಿರುಗಾಳಿಗೆ ಸಿಲುಕಿ, ರೆಕ್ಕೆ-ಪುಕ್ಕಗಳಿಲ್ಲದ ಹಕ್ಕಿಯಂತಾಗಿದೆ.

ಹಕ್ಕಿಗೇನೋ ಹಾರುವ ತವಕ, ಕುಣಿದಾಡುವ ಉತ್ಸಾಹ ಇದ್ದರೂ ಕೂಡ ಪ್ರೇಕ್ಷಕ- ಪ್ರೋತ್ಸಾಹ ಇಲ್ಲದಂತಾಗಿದೆ. ಈ ಮಧ್ಯೆಯೂ ಇಂದು ರಂಗಭೂಮಿ ವಿವಿಧ ಕಲಾ ಪ್ರಕಾರಗಳ ಮೂಲಕ ಸಾಮಾಜಿಕ ಕಳಕಳಿಯೊಂದಿಗೆ ಜೀವಂತವಾಗಿದ್ದು, ಇದನ್ನು ಪೋಷಿಸಿ, ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ. ಸ್ವಾತಂತ್ರ್ಯ ಪೂರ್ವ ದಲ್ಲಿ ರಂಗಭೂಮಿ ನಿರ್ವಹಿಸಿದ ಸಾಮಾಜಿಕ ಜವಾಬ್ದಾರಿಯನ್ನು ಭವಿಷ್ಯದಲ್ಲಿಯೂ ಒಂದು ಚಟುವಟಿಕೆಯಾಗಿ, ಚಳವಳಿ ರೂಪದಲ್ಲಿ ಮುಂದು ವರಿಸಬೇಕಿದೆ. ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯದೇ ಸಮಾಜದ ಶುದ್ಧತೆ ಮತ್ತು ಹಿತಕ್ಕಾಗಿ ಈ ವರೆಗೆ ಪಾಲಿಸಿಕೊಂಡು ಬಂದ ಅಲಿಖೀತ ನಿಯಮವನ್ನು ರಂಗಭೂಮಿ ಮುಂದುವರಿಸಬೇಕಾಗಿದೆ.

– ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next