Advertisement

World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….

03:54 PM May 11, 2024 | Team Udayavani |

ಹೆಣ್ಣನ್ನು ಶಕ್ತಿಸ್ವರೂಪಿಯಾಗಿ, ಜ್ಞಾನದೇವತೆಯಾಗಿ, ಸಮೃದ್ಧಿಯ ಸಂಕೇತವಾಗಿ ಪೂಜಿಸಲ್ಪಡುವುದನ್ನು ನಾವು ಕಾಣುತ್ತೇವೆ. ಅಲ್ಲದೇ ಹಲವಾರು ಕ್ಷೇತ್ರಗಳಲ್ಲಿ ಯಶಸ್ಸನ್ನು ಗಳಿಸಿ ಸಾಧಕಿ ಎನಿಸಿಕೊಂಡಿರುವುದನ್ನೂ ಕಾಣುತ್ತೇವೆ. ಯಾವುದೇ ಕ್ಷೇತ್ರದಲ್ಲಿ ಗಳಿಸಿದ ಯಶಸ್ಸಿನೊಂದಿಗೆ ಪ್ರಕೃತಿದತ್ತವಾಗಿ ಪಡೆದ ತಾಯ್ತನ, ವಾತ್ಸಲ್ಯ, ಮಮತೆ ಎಂದಿಗೂ ಹೆಣ್ಣಿಗೆ ವಿಶೇಷತೆಗಳಾಗಿವೆ. ಇದು ಆಕೆ ಜನ್ಮದಿಂದಲೇ ಪಡೆಯುವ ವೈಶಿಷ್ಟ್ಯ ವಾಗಿದೆ. ತಾಯೊಲವೆ ತಾಯೊಲವು ಈ ಲೋಕದೊಳಗೆ, ಕಡಲಿಂಗೆ ಕಡಲಲ್ಲದುಂಟೆ ಹೋಲಿಕೆಗೆ! ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರ ಕವನದ ಸಾಲುಗಳು ಹೇಳುವಂತೆ ತಾಯಿ ತೋರುವ ಒಲವಿಗೆ ಹೋಲಿಕೆಯುಂಟೆ?

Advertisement

ತಾಯಿ ಎಂದೊಡನೆ ಮನದಲ್ಲಿ ಮೂಡುವ ಭಾವನೆ ಮಕ್ಕಳಿಗೆ ಮಮತೆ ತೋರುವ, ಧೈರ್ಯ ತುಂಬುವ, ಸಹನೆ ತುಂಬಿರುವ ತ್ಯಾಗಮಯಿ ಜೀವ. ತಾಯಿಯ ಬಗ್ಗೆ ಬರೆಯಬೇಕೆಂದುಕೊಂಡಾಗ ಅಂತರ್ಜಾಲದಲ್ಲಿ ಸಿಕ್ಕಿತ್ತೂಂದು ಸುಂದರ ಸಂದೇಶ! ಜನ್ಮತಾಳಲಿರುವ ಮಗು ಮತ್ತು ಸೃಷ್ಟಿಕರ್ತನ ನಡುವಿನ ಸಂಭಾಷಣೆಯ ಕುರಿತಾದ ಸಂದೇಶದಲ್ಲಿ ಮಗು ಕೇಳುವ ಪ್ರಶ್ನೆಗಳು ಹಲವಾರು. ಆದರೆ ಎಲ್ಲ ಪ್ರಶ್ನೆಗಳಿಗೆ ಒಂದೇ ಉತ್ತರ! ನಾನೊಂದು ಪುಟ್ಟ ಜೀವ, ನನ್ನನ್ನು ನೋಡಿಕೊಳ್ಳುವವರಾರು? ಮಾತನಾಡಲೂ ಬಾರದ ನನ್ನನ್ನು ಅರ್ಥಮಾಡಿಕೊಂಡು ರಕ್ಷಿಸುವ, ಸಂತೋಷಪಡಿಸುವ ವ್ಯಕ್ತಿಯಾರು? ಎಂಬ ಮಗುವಿನ ಪ್ರಶ್ನೆಗಳಿಗೆ ಉತ್ತರವಾಗಿ ಇವೆಲ್ಲಕ್ಕೂ “ದೇವತೆ’ಯೊಬ್ಬಳಿ¨ªಾಳೆ ಎನ್ನುತ್ತಾನೆ ಆ ಸೃಷ್ಟಿಕರ್ತ. ಮಾತು ಮುಂದುವರೆಸಿದ ಮಗು ಆ ದೇವತೆ ಯಾರೆಂದು ಕೇಳಿದಾಗ, ಅವಳನ್ನು “ಅಮ್ಮ’ ಎಂದು ಕರೆಯುತ್ತಾರೆ ಎಂಬ ಉತ್ತರ ಸಿಗುತ್ತದೆ. ನಿಜ ಅಮ್ಮ ಎಂದರೆ “ಅಭಯ’, “ಆತ್ಮವಿಶ್ವಾಸ’, “ಮಮತೆ’!

ಅಮ್ಮನ ಅಕ್ಕರೆಯಲ್ಲಿ ಬೆಳೆಯುವ ಮಗು ತನ್ನ ಅಮ್ಮನನ್ನು ತಿಳಿಯುವ ಬಗೆ ಹೇಗೆ? ಆ ಮಮತೆಯ ಆಳವನ್ನು ಅರಿಯುವುದು ಯಾವಾಗ ಎಂದು ಮನದಲ್ಲಿ ಮೂಡುವ ಪ್ರಶ್ನೆಗೆ ಉತ್ತರವಾಗಿ ಸ್ವತಃ ಅಮ್ಮನಾದಾಗ ಎಂಬುವುದನ್ನು ಎಲ್ಲರೂ ಒಪ್ಪುತ್ತಾರೆ.

ತಾಯಿಯ ಮಮತೆ, ಮಾರ್ಗದರ್ಶನ, ಕಾಳಜಿಯಲ್ಲಿ ಬೆಳೆದ ಮಗಳು ಇದೆಲ್ಲವನ್ನು ಅರಿಯಲು ಸಾಧ್ಯವಾಗುವುದು ತಾನೂ ತಾಯಿಯಾಗಿ ಮಾತೃತ್ವದ ಪ್ರತೀ ಮಜಲುಗಳನ್ನು ಏರಿದಾಗ! ಕಂದನ ಆರೈಕೆಯಲ್ಲಿ ನಿ¨ªೆಗೆಟ್ಟಾಗ, ಹಠಹಿಡಿವ ಮಗುವನ್ನು ಸಂತೈಸುವಾಗ ತನ್ನಮ್ಮನ ತಾಳ್ಮೆಯ ಅರಿವು ಈ ಅಮ್ಮನಲ್ಲೂ ಮೂಡುತ್ತದಲ್ಲವೇ? ಕತ್ತಲಿಗೋ, ಎತ್ತರಕ್ಕೋ, ಆತ್ಮವಿಶ್ವಾಸದ ಕೊರತೆಯಿಂದಲೋ ಮನದಲ್ಲಿ ಭಯವನ್ನು ಬೆಳೆಸಿಕೊಂಡು, ತನ್ನ ತಾಯಿಯನ್ನು ಆಸರಿಸುತ್ತಿದ್ದ ಮಗಳು, ಅಮ್ಮನಾದ ಆ ಕ್ಷಣದಿಂದ, ತನ್ನ ಕಂದನನ್ನು ಕಾಪಾಡಿಕೊಳ್ಳಲು ಮುಂದಾಗುವ ಧೈರ್ಯವಂತೆ ಆಗುತ್ತಾಳೆ.

ತನ್ನಲ್ಲಿನ ಭಯಗಳನ್ನು ಮೆಟ್ಟಿ ನಿಲ್ಲುತ್ತಾಳೆ. ಆಗ ತನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿ, ಬೆಂಗಾವಲಾಗಿ ನಿಲ್ಲುತ್ತಿದ್ದ ಅಮ್ಮನನ್ನು ನೆನೆಯುತ್ತಾಳೆ. ಅಮ್ಮನ ಅತೀ ಕಾಳಜಿಗೆ ಕಿರಿಕಿರಿಗೊಳ್ಳುತ್ತಿದ್ದ ಮಗಳು, ತನ್ನ ಕಂದಮ್ಮಗಳಿಗೆ ತಾನೂ ಅದೇ ಕಾಳಜಿ ತೋರಿದಾಗ ಈ ನಿಟ್ಟಿನಲ್ಲಿ ತನ್ನಿಂದಾದ ತಪ್ಪನ್ನು ಅರಿಯುತ್ತಾಳೆ. ಮಕ್ಕಳ ಪಾಲನೆಗೆ ವೃತ್ತಿ ಜೀವನ ಬಿಟ್ಟುಕೊಟ್ಟ ಅಮ್ಮ, ತನ್ನ ಗೆಲುವಿನ ಸಾಮರ್ಥ್ಯವನ್ನು ಕಡೆಗಣಿಸಿ ಮಕ್ಕಳ ಗೆಲುವಿನಲ್ಲಿ ಸಂತೋಷವನ್ನು ಕಂಡಿದ್ದ ಅಮ್ಮನ ಬಗ್ಗೆ ಹೆಚ್ಚಿನ ತಿಳಿವು ಮೂಡುವುದು ಅಂತಹದೇ ಪರಿಸ್ಥಿತಿಗಳಲ್ಲಿ ತನ್ನನ್ನು ಕಂಡುಕೊಂಡಾಗ ಅಲ್ಲವೇ? ಕೆಲವೊಮ್ಮೆ ಹಲವಾರು ಕಾರಣಗಳಿಂದ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯಲಾಗದೆ, ಜೀವನಾನುಭವಗಳ ವಿಷಯಗಳಲ್ಲಿ ಯಾವುದಕ್ಕೂ ಕಡಿಮೆಯೆನಿಸದಿದ್ದರೂ ದುಡ್ಡಿನ ವಿಷಯವಾಗಿ ಸ್ವಾವಲಂಬಿ ಆಗಿರದ ಅಮ್ಮನ್ನನ್ನು, ಆಫೀಸಿಗೆ ಹೋಗಿ ದುಡಿಯುವ, ಹಣ ಗಳಿಸುವ ಅಪ್ಪನಿಗೆ ಹೋಲಿಸಿ ನೋಡಿ, ಅಮ್ಮನ ಸಾಮರ್ಥ್ಯವನ್ನು ಶಂಕಿಸಿದ ಪ್ರಸಂಗಗಳೆಲ್ಲ ತನ್ನ ಅನುಭವಕ್ಕೂ ಬಂದಾಗ, ತನ್ನಮ್ಮನ ಬಗ್ಗೆ ತನ್ನಲ್ಲಿ ಮೂಡಿದ್ದ ತಪ್ಪು ಗ್ರಹಿಕೆಗಳನ್ನು ಅರಿತು, ತನ್ನಿಂದಾಗಿ ಅಮ್ಮ ಅನುಭವಿಸಿದ ನೋವಿನ ಕ್ಷಣಗಳಿಗೆ ಸ್ಪಂದಿಸುವಂತಾಗುತ್ತಾಳೆ.

Advertisement

ಹೀಗೆ ಸಹನಾಮಯಿಯಾಗಿ, ತ್ಯಾಗಮಯಿಯಾಗಿ ತನ್ನ ಜೀವನದ ಸಾರ್ಥಕ್ಯವನ್ನು ಇನ್ನೊಂದು ಜೀವಕ್ಕೆ “ಜೀವನ’ ಕೊಡುವಲ್ಲಿ ಕಂಡುಕೊಳ್ಳುವಂತಾದಾಗ ತನ್ನ ಅಮ್ಮನ ಪ್ರತಿಬಿಂಬವಾಗುತ್ತಾಳಲ್ಲವೇ ಈ ಅಮ್ಮ? ಅಮ್ಮನಾಗಿ ಅಮ್ಮನನ್ನು ಅರಿತಾಗ, ಮಾತೃತ್ವದ ಆಳದ ಅರಿವು ಮೂಡಿದಾಗ, ಆಗೊಮ್ಮೆ- ಈಗೊಮ್ಮೆ ಕಂಡುಬರುವ ಅಭಿಪ್ರಾಯಭೇದ, ಮನಸ್ತಾಪ, ಬದಲಾದ ಕಾಲದಲ್ಲಿ ಬದುಕಿನ ಪರಿಸ್ಥಿತಿಗಳನ್ನು ನೋಡುವಲ್ಲಿನ ವ್ಯತ್ಯಾಸಗಳು ಮುಖ್ಯವೆನಿಸದೆ ಅಮ್ಮನ ಕುರಿತು ಗೌರವ, ಪ್ರೀತಿ, ಕಾಳಜಿ, ಅಭಿಮಾನ ಇನ್ನೂ ಹೆಚ್ಚುವವು. ಅಲ್ಲದೇ ಅಭಯ, ಆತ್ಮವಿಶ್ವಾಸ, ಮಮತೆಯ ಕಡಲು ಎನ್ನಿಸಿಕೊಳ್ಳುವ ಅಮ್ಮ ದುರ್ಬಲಳೂ ಅಲ್ಲ, ಅಸಹಾಯಕಳೂ ಅಲ್ಲ ಎನ್ನುವುದು ಮನವರಿಕೆಯಾಗುವುದು.

ಇಂದಿನ ಪೀಳಿಗೆಯ ಮಹಿಳೆ ಬಹಳಷ್ಟು ಕ್ಷೇತ್ರಗಳಲ್ಲಿ ಸಶಕ್ತಳಾಗಿದ್ದು, ತಾನೂ ಅಮ್ಮನಾಗಿ ತನ್ನ ಅಮ್ಮನನ್ನು ಅರಿತಾಗ, ಹಿಂದಿನ ಪೀಳಿಗೆಯ, ಹೆಚ್ಚಿನ ವಿದ್ಯೆ ಸಿಕ್ಕದಿದ್ದರೂ ಅನುಭವದ ಜ್ಞಾನ ಪಡೆದು ಜೀವನವನ್ನೆಲ್ಲ ಮಕ್ಕಳ ಹಿತಕ್ಕೋಸ್ಕರ ಮುಡಿಪಾಗಿಟ್ಟ ಇಳಿವಯಸ್ಸಿನ ಅಮ್ಮನ ಬಗ್ಗೆ ಜವಾಬ್ದಾರಿಗಳು ಹೆಚ್ಚುವುದಿಲ್ಲವೇ? ಮನೋಬಲದಲ್ಲಿ, ಮಾತೃತ್ವದಲ್ಲಿ ಕಡಿಮೆಯೆನಿಸದ ಅಮ್ಮ, ಪರಿಸ್ಥಿತಿಗಳ ಅಸಹಾಯಕತೆಯಿಂದ ಒಂಟಿಯಾಗಿ, ಮುಪ್ಪಿನಿಂದ ತನ್ನ ಬಗ್ಗೆ ತನಗೇ ಇದ್ದ ವಿಶ್ವಾಸವನ್ನು ಕಳೆದುಕೊಂಡು ನೋವಿನಲ್ಲಿ ಕೊರಗುವಂತಾಗಬೇಕೆ? ತನ್ನ ಮಕ್ಕಳ ಬಾಳಿನ ದೀಪ ಬೆಳಗಿಸುವ ಅಮ್ಮ, ವೃದ್ಧಾಶ್ರಮದ ಕೋಣೆಯ ಕತ್ತಲಿನಲ್ಲಿ ಬೆಳಕಿನ ಕಿರಣಗಳನ್ನು ಹುಡುಕುತ್ತ ತನ್ನ ಬದುಕಿನ ಅಂತ್ಯವನ್ನು ಎದುರು ನೋಡುವಂತಾಗಬೇಕೆ? ಅಮ್ಮನಾಗಿ ಅಮ್ಮನನ್ನು ಅರಿಯುವ ಮಹಿಳೆ ತನ್ನ ಬದುಕಿನಲ್ಲಿ ಎದುರಾಗುವ ಪರಿಸ್ಥಿತಿಗಳನ್ನು ಜಯಿಸುವಲ್ಲಿ ಯಶಸ್ವಿಯಾಗಬೇಕು.

ತನ್ನಲ್ಲಿರುವ ನ್ಯೂನತೆಗಳನ್ನು ಮೆಟ್ಟಿ ನಿಂತು, ತನ್ನ ಜವಾಬ್ದಾರಿಗಳನ್ನು ನಿಭಾಯಿಸುವ ಜಾಣ್ಮೆಯನ್ನು ರೂಢಿಸಿಕೊಳ್ಳಬೇಕು. ತನ್ನ ಕುಟುಂಬಕ್ಕೂ ಆದರ್ಶಪ್ರಾಯಳಾಗಿ ಶಕ್ತಿಗುಂದಿದ, ಆತ್ಮವಿಶ್ವಾಸವನ್ನು ಕಳೆದುಕೊಂಡ ಇಳಿವಯಸ್ಸಿನ ಅಮ್ಮನಿಗೆ ಅಮ್ಮನಾಗಬೇಕು. ಅಲ್ಲದೇ ತನ್ನ ಮಕ್ಕಳಿಗೆ ಮಾದರಿಯಾಗಬೇಕು. ಏಕೆಂದರೆ ಅಮ್ಮನೇ ಕಲಿಸಿಕೊಡುವ ಪಾಠ, ಇನ್ನೊಂದು ಜೀವಕ್ಕೆ “ಜೀವನ’ ಕೊಡುವುದೇ ಬದುಕಿನ ಸಾರ್ಥಕತೆ !

ಸರಿತಾ ನವಲಿ, ನ್ಯೂಜೆರ್ಸಿ

Advertisement

Udayavani is now on Telegram. Click here to join our channel and stay updated with the latest news.

Next