Advertisement

ಮಾತೃ ಭಾಷೆಯ ಉಳಿವಿಗೆ ಪ್ರತೀ ಕುಟುಂಬವೂ ಶ್ರಮಿಸಬೇಕಿದೆ

03:24 AM Feb 21, 2021 | Team Udayavani |

ಭಾಷೆ ಎಂದರೆ ಸಂಸ್ಕೃತಿಯ ಪ್ರತೀಕ. ಹಾಗೆಯೇ ಭಾಷೆಯು ಭಾವುಕತೆಗೆ ಸಂಬಂಧಿಸಿದ ವಿಷಯವಾಗಿದೆ. ಭಾಷೆ ಎಂದಾಗ ಮಾತೃಭಾಷೆ ಯ ನೆನಪಾಗುತ್ತದೆ. ಬಾಲ್ಯದಲ್ಲಿ ಮಾತೃಭಾಷೆಯ ಒಡನಾಟ ಹೆಚ್ಚು ಇದ್ದ ಕಾರಣ ಮಾತೃಭಾಷೆಗೆ ನಮ್ಮ ಮೊದಲ ಆದ್ಯತೆ ಯಾವತ್ತೂ ನೀಡಲಾಗುತ್ತದೆ. ಅದಕ್ಕೇ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಪ್ರಯತ್ನಗಳು ಆದಾಗ ಕನ್ನಡ ನೆಲೆ ಸಹಿತ ಬಹುತೇಕ ರಾಜ್ಯಗಳು ಅವುಗಳನ್ನು ಖಂಡಿಸುತ್ತವೆ. ಕಾರಣ ಮಾತೃಭಾಷೆಗೆ ಹಿನ್ನಡೆಯಾದರೆ ಸಂಸ್ಕೃತಿಗೆ ಹಿನ್ನಡೆ ಯಾದಂತೆ. ಭಾರತ ಸಾಂಸ್ಕೃತಿಕ ವೈವಿಧ್ಯ ದಲ್ಲಿ ಶ್ರೀಮಂತ ರಾಷ್ಟ್ರ. ಹಲವಾರು ಭಾಷೆಗಳು ಇಲ್ಲಿನ ಸಂಪತ್ತಾಗಿ ಬದಲಾವಣೆಗೊಂಡಿವೆ. ಅದರಲ್ಲೂ ಮಾತೃಭಾಷೆಗೆ ಅತೀ ಹೆಚ್ಚು ಮಹತ್ವ ಇಲ್ಲಿ ನೀಡಲಾಗಿದೆ. ಭಾಷೆಗಳು ನಮ್ಮ ಅಮೂರ್ತ ಪರಂಪರೆಯನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿ ಪಡಿಸುವ ಅತ್ಯಂತ ಶಕ್ತಿಶಾಲಿ ಸಾಧನಗಳಾಗಿವೆ.

Advertisement

ಜಾಗತೀಕರಣದ ಪರಿಣಾಮದಿಂದಾಗಿ ಎಷ್ಟೋ ಮಾತೃಭಾಷೆಗಳು ಕಣ್ಮರೆಯಾಗುತ್ತಿವೆ. ಜಗತ್ತಿನಲ್ಲಿ ಮಾತನಾಡುವ ಅಂದಾಜು 7,000 ಭಾಷೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಭಾಷೆಗಳು ಅಳಿವಿನಂಚಿನಲ್ಲಿವೆ ಎನ್ನುತ್ತವೆ ವರದಿಗಳು. ಹೆಚ್ಚಿನ ಭಾಷೆಗಳು ಇನ್ನು ಕೆಲವು ಪೀಳಿಗೆಗಳ ಬಳಿಕ ನಶಿಸಿ ಹೋಗುವ ಸಂಭ ವವಿದೆ. ಹಾಗಾಗಿ ಭಾಷೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುಭಾಷಾವಾದವನ್ನು ಪ್ರೋತ್ಸಾಹಿಸಿ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಭಾಷೆಯನ್ನು ಉಳಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತೀ ವರ್ಷ ಫೆಬ್ರವರಿ 21ರಂದು ಜಗತ್ತಿನಾ ದ್ಯಂತ ವಿಶ್ವ ಮಾತೃಭಾಷೆ ದಿನ ಆಚರಿಸಲಾಗುತ್ತಿದೆ. 1999ರಲ್ಲಿ ಮೊದಲ ಬಾರಿಗೆ ಯುನೆಸ್ಕೋ ಈ ದಿನ ವನ್ನು ಘೋಷಿಸಿತು. 2000ರಿಂದ ಪ್ರತೀ ವರ್ಷವೂ ಈ ದಿನವನ್ನು ಆಚರಿಸಲಾಗುತ್ತದೆ.
ಆಧುನೀಕರಣ ಮತ್ತು ಜಾಗತೀಕರಣದ ಉತ್ತುಂಗದ ಸಮಯದಲ್ಲಿ ಇಂಗ್ಲಿಷ್‌ ಎಂಬ ವ್ಯಾವ ಹಾರಿಕ ಭಾಷೆಯಲ್ಲಿ ಪರಿಣತರಾಗುವ ತವಕದಲ್ಲಿ ಹಾಗೂ ಅನಿವಾರ್ಯತೆಯಲ್ಲಿ ಮಾತೃಭಾಷೆಯನ್ನು ಅರಿವಿಧ್ದೋ, ಇಲ್ಲದೆಯೋ ಅವಗಣಿಸಲಾಗುತ್ತದೆ. ಮಾತೃಭಾಷೆ ಎಂಬುದು ನಮ್ಮ ಅಸ್ಮಿತೆಯ ಸಂಕೇತ ವೆನಿಸಿದ್ದರೂ ಆ ಭಾಷೆಯಲ್ಲಿ ಹತ್ತು ಜನರ ಮುಂದೆ ತಲೆಯೆತ್ತಿ ಮಾತನಾಡಲೂ ಕೀಳರಿಮೆ ಅನುಭವಿ ಸುತ್ತೇವೆ ಎಂಬುದು ಖೇದಕರ. ಇದನ್ನು ತಪ್ಪಿಸಲು ಅವರ ಭಾಷೆಯಲ್ಲೇ ವ್ಯವಹರಿಸುತ್ತೇವೆ.

ಮಾತು ಮತ್ತು ಕ್ರಿಯೆ
ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗ ಬೇಕು ಎಂಬ ಒತ್ತಾಸೆಯೂ ನಮ್ಮಲ್ಲಿದೆ. ಬಾಲ್ಯದಲ್ಲಿ ಭಾಷೆಯು ಮಗುವಿನ ವ್ಯಕ್ತಿತ್ವ- ಸಾಮರ್ಥ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ಪೋಷಕರು ಗಮನಿಸಬೇಕು. ನಾವು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳನ್ನು ಒಂದು “ವಿಷಯ’ವಾಗಿಯಷ್ಟೇ ನೋಡುತ್ತೇವೆ. ಆದರೆ ಬಾಲ್ಯದಲ್ಲಿ ಮಾತು ಮತ್ತು ಕ್ರಿಯೆ ಅನ್ಯೋನ್ಯವಾಗಿರುತ್ತದೆ ಎಂಬುದನ್ನು ಸೂಚ್ಯವಾಗಿ ಗಮನಿಸ ಬೇಕು. ಉದಾಹರಣೆಗೆ ನಾಯಿ ಅಥವಾ ಬೆಕ್ಕು ಇವನ್ನು ಮಕ್ಕಳು ಬಾಲ್ಯದಲ್ಲಿ ಬಹಳ ಸುಲಭವಾಗಿ ಗುರುತಿಸುತ್ತಾರೆ. ಇಲ್ಲಿ “ನಾಯಿ’ ಅಥವಾ “ಬೆಕ್ಕು’ ಎಂದಾಕ್ಷಣ ತಲೆಯಲ್ಲಿ ಮೂಡುವ ನಾಲ್ಕು ಕಾಲಿನ ಪ್ರಾಣಿಯ ಚಿತ್ರ “ಡಾಗ್‌ ಅಥವಾ ಕ್ಯಾಟ್‌’ ಎಂದಾಗ ಹೊಳೆಯುವುದಿಲ್ಲ. ಬದಲಾಗಿ “ಡಾಗ್‌ ಅಥವಾ ಕ್ಯಾಟ್‌’ ಎಂದಾಕ್ಷಣ ನಾಯಿ ಮತ್ತು ಬೆಕ್ಕು ಎಂಬ ಭಾಷಾಂತರ ತಲೆಯಲ್ಲಿ ಮೂಡಿ, ಅನಂತರ ಅದು ಪ್ರಾಣಿಯ ಚಿತ್ರಕ್ಕೆ ವರ್ಗಾವಣೆಯಾಗುತ್ತದೆ ಎಂಬು ದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಮಾತೃ ಭಾಷೆಗಳು ಅರ್ಥಪೂರ್ಣ ಸನ್ನೆ- ಚಿಹ್ನೆಗಳನ್ನು ನಮ್ಮ ಮೆದುಳು- ಮನಸ್ಸುಗಳಲ್ಲಿ ಮೂಡಿಸುತ್ತವೆ.

ಮಾತೃಭಾಷೆಯೇ ಚಂದ
ಸಾಮಾಜಿಕ ಮತ್ತು ಜೈವಿಕ ಸಂಶೋಧನೆಗಳು ಮಾತೃಭಾಷಾ ಶಿಕ್ಷಣದ ಉಪಯುಕ್ತತೆಯನ್ನು ಬಲ ವಾಗಿಯೇ ಸಾಬೀತುಪಡಿಸಿವೆ. ಮಕ್ಕಳು ಮಾತೃ ಭಾಷೆಯಲ್ಲಿ ಕಲಿತಾಗ ಆತ್ಮವಿಶ್ವಾಸದಿಂದ ಕಲಿಯುತ್ತಾರೆ. ಬೇರೆಲ್ಲ ವಿಷಯಗಳು ಮತ್ತು ಇನ್ನೊಂದು ಭಾಷೆಯನ್ನು ಕೂಡ ಸುಲಭವಾಗಿ ಕಲಿಯಬಹುದು. ಮಕ್ಕಳು ತಾವು ಶಾಲೆಯಲ್ಲಿ ಕಲಿತ ದ್ದನ್ನು ಸುಲಭವಾಗಿ ಕುಟುಂಬದಲ್ಲಿ ಚರ್ಚೆ ಮಾಡ ಬಲ್ಲವರಾಗುತ್ತಾರೆ. ಕಲಿತದ್ದರಿಂದ ಕಲಿಯದೇ ಇದ್ದದ್ದನ್ನು ಅರ್ಥೈಸಿಕೊಳ್ಳಲು ಸರಳವಾಗುತ್ತದೆ. ಸಾಮಾಜಿಕವಾಗಿ ನೋಡಿದಾಗ ಸಾರ್ವತ್ರಿಕ ಮಾತೃಭಾಷಾ ಮಾಧ್ಯಮದಲ್ಲಿ ನೀಡುವ ಶಿಕ್ಷಣವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುತ್ತದೆ. ಹೆಚ್ಚಿನ ಜನರಿಗೆ ಶಿಕ್ಷಣಾವಕಾಶವನ್ನು ಒದಗಿಸುತ್ತದೆ. ಮಾಹಿತಿಯ ವಿಕೇಂದ್ರೀಕರಣ ಮತ್ತು ರಾಜಕೀಯ ಅವಕಾಶಗಳನ್ನು ಸಾಧ್ಯವಾಗಿಸುತ್ತದೆ. ಒಂದು ಭಾಷೆಯನ್ನು ಕಲಿಸುವುದಕ್ಕೂ, ಆ ಭಾಷೆಯನ್ನೇ ಎಲ್ಲದರ “ಮಾಧ್ಯಮ’ವಾಗಿ ಉಪಯೋಗಿಸುವುದಕ್ಕೂ ಗಣನೀಯ ಅಂತರವಿದೆ.

ಅಪಾಯದಲ್ಲಿವೆ ಭಾಷೆಗಳು
ಭಾರತದಲ್ಲಿ 19,500ಕ್ಕೂ ಹೆಚ್ಚು ಆಡುಭಾಷೆಗಳಿವೆ ಇವೆಲ್ಲವನ್ನು ತಾಯ್ನುಡಿ ಎಂದು ಪರಿಗಣಿಸಬಹುದಾಗಿದೆ ಎಂದು ಇತ್ತೀಚಿನ ಜನಗಣತಿ ಆಧರಿಸಿ ರೂಪಿಸಲಾದ ವರದಿ ತಿಳಿಸಿದೆ. 2011ರ ಜನಗಣತಿ ವರದಿ ಪ್ರಕಾರ, 19,569ಕ್ಕೂ ಅಧಿಕ ಮಾತೃಭಾಷೆಗಳಿವೆ. ಆದರೆ ಶೇ. 96.71ರಷ್ಟು ಜನಸಂಖ್ಯೆ 22 ಅಧಿಸೂಚಿತ ಭಾಷೆಗಳನ್ನೇ ತಮ್ಮ ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಒಟ್ಟಾರೆ 270ಕ್ಕೂ ಅಧಿಕ ಗುರುತು ಸಿಗದ ತಾಯ್ನುಡಿಗಳಿದ್ದು, 10 ಸಾವಿರಕ್ಕೂ ಅಧಿಕ ಮಂದಿ ಮಾತನಾಡುತ್ತಿ¨ªಾರೆ. ಅಸ್ಸಾಮಿ, ಬಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳ, ಮಣಿಪುರಿ, ಮರಾಠಿ, ನೇಪಾಲಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೋಡೋ, ಸಂಥಲಿ, ಮೈಥಿಲಿ ಹಾಗೂ ಡೊಗ್ರಿ ಭಾಷೆಗಳು ಮಾತ್ರ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನ ಪಡೆದ 22 ಭಾಷೆಗಳಾಗಿವೆ.

Advertisement

ಮಾತೃಭಾಷಾ ದಿನದ ಹಿನ್ನೆಲೆ
ದೇಶ ವಿಭಜನೆಯಾದಾಗ ಈಗಿನ ಬಾಂಗ್ಲಾ ದೇಶವೂ ಪಾಕಿಸ್ಥಾನಕ್ಕೆ ಸೇರಿತ್ತು. ಅದನ್ನು ಪೂರ್ವ ಪಾಕಿಸ್ಥಾನ ಎಂದು ಕರೆಯಲಾಗುತ್ತಿತ್ತು. ಎಲ್ಲ ರಾಜಕೀಯ ಮತ್ತು ವ್ಯಾವಹಾರಿಕ ಕೇಂದ್ರಗಳೂ ಪಶ್ಚಿಮ ಪಾಕಿಸ್ಥಾನ(ಇಂದಿನ ಪಾಕಿಸ್ಥಾನ)ದಲ್ಲೇ ಇದ್ದಿದ್ದರಿಂದ ಪೂರ್ವ ಪಾಕಿಸ್ಥಾನದ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿತ್ತು. 1952ರಲ್ಲಿ ಉರ್ದು ಭಾಷೆಯನ್ನೇ ಪ್ರತಿಯೊಬ್ಬರೂ ಮಾತ ನಾಡಬೇಕು, ಬೇರೆ ಭಾಷೆಯನ್ನು ಮಾತನಾಡು ವಂತಿಲ್ಲ ಎಂದು ಕಡ್ಡಾಯ ನಿಯಮವನ್ನು ಸರಕಾರ ಹೊರಡಿಸಿತ್ತು. ಆದರೆ ಪೂರ್ವ ಪಾಕಿಸ್ಥಾ ನದಲ್ಲಿದ್ದವರಲ್ಲಿ ಉರ್ದು ಭಾಷಿಗರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದರು. ಹೆಚ್ಚಿನವರು ಬಂಗಾಲಿ ಮಾತನಾಡುವವರೇ ಇದ್ದರು. ಅವರಿಗೆ ಬಂಗಾಲಿಯನ್ನು ಬಿಟ್ಟು ಬೇರೆ ಭಾಷೆ ಮಾತನಾಡುವುದಕ್ಕೆ ಇಷ್ಟವಿರಲಿಲ್ಲ. ಆದ್ದರಿಂದ ಉರ್ದುವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಬಾಂಗ್ಲಾ ದೇಶೀಯರ ಮೇಲೆ ಆಕ್ರಮಣ ನಡೆದು ಹಲವರು ಸಾವಿಗೀಡಾದರು. ಅವರ ತ್ಯಾಗದ ಪ್ರತೀಕವಾಗಿ ಈ ದಿನವನ್ನು ಮಾತೃ ಭಾಷಾ ದಿನವಾಗಿ ವಿಶ್ವಸಂಸ್ಥೆ ಆಚರಿಸುತ್ತದೆ.

– ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next