Advertisement

ಈಡನ್‌ಗೆ ಬೆಂಕಿ, ಕಣ್ಣೀರು ಸುರಿಸಿದ ಕಾಂಬ್ಳಿ!

08:59 AM May 23, 2019 | keerthan |

ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಿನ ಸೆಮಿಫೈನಲ್‌ ಪಂದ್ಯ ಕೂಟದ ಕಪ್ಪುಚುಕ್ಕಿಯಾಗಿ ದಾಖಲಾಯಿತು. ಭಾರತ ಸೋಲು ಖಾತ್ರಿಯಾಗುತ್ತಲೇ ರೊಚ್ಚಿಗೆದ್ದ ವೀಕ್ಷಕರು ದುಂಡಾವರ್ತಿ ನಡೆಸಿ ಈಡನ್‌ ಸ್ಟಾಂಡ್‌ ಒಂದಕ್ಕೆ ಬೆಂಕಿ ಹಚ್ಚಿದರು. ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಪ್ರತಿಷ್ಠೆಗೆ ಮಸಿ ಬಳಿದರು.

Advertisement

ಆಗ ಶ್ರೀಲಂಕಾ ಪ್ರಚಂಡ ಫಾರ್ಮ್ನಲ್ಲಿತ್ತು. ಮೊದಲು ಬ್ಯಾಟಿಂಗ್‌ ನಡೆಸಿ 8ಕ್ಕೆ 251 ರನ್‌ ಪೇರಿಸಿತ್ತು. ಭಾರತ ಕೂಡ ದಿಟ್ಟ ಜವಾಬು ನೀಡಿತು. 98ಕ್ಕೆ ಒಂದೇ ವಿಕೆಟ್‌ ಕಳೆದುಕೊಂಡು ಮುನ್ನುಗ್ಗುತ್ತಿತ್ತು. ಆಗ 65 ರನ್‌ ಮಾಡಿದ ತೆಂಡುಲ್ಕರ್‌ ಔಟಾದರು. ಪಂದ್ಯದ ಚಿತ್ರಣವೇ ಬದಲಾಯಿತು. ಸ್ಕೋರ್‌ 120ಕ್ಕೆ ಏರುವಷ್ಟರಲ್ಲಿ ಭಾರತದ 8 ವಿಕೆಟ್‌ ಉರುಳಿ ಹೋಗಿತ್ತು.

ಇನ್ನು ಸೋಲು ಖಚಿತ ಎಂದು ತೀರ್ಮಾನಿಸಿ ರೊಚ್ಚಿಗೆದ್ದ ವೀಕ್ಷಕರು ಸ್ಟಾಂಡ್‌ ಒಂದಕ್ಕೆ ಅಗ್ನಿಸ್ಪರ್ಶ ಮಾಡಿದರು. ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿ ಸಿದ ರೆಫ್ರಿ ಕ್ಲೈವ್‌ ಲಾಯ್ಡ ಪಂದ್ಯವನ್ನೇ ರದ್ದುಗೊಳಿಸಿ ಶ್ರೀಲಂಕಾದ ಗೆಲುವನ್ನು ಸಾರಿದರು. 1983ರ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಲಾಯ್ಡಗೆ ಈ ರೀತಿಯಾಗಿ ದಕ್ಕಿತ್ತು! ಆಗ 10 ರನ್‌ ಮಾಡಿ ಆಡುತ್ತಿದ್ದ ವಿನೋದ್‌ ಕಾಂಬ್ಳಿ ಈ ವಿದ್ಯಮಾನದಿಂದ ನೊಂದು ಕ್ರೀಸಿನಲ್ಲೇ ಕಣ್ಣೀರು ಸುರಿಸುತ್ತ ನಿಂತ ದೃಶ್ಯ ಭಾರತದ ಕ್ರಿಕೆಟ್‌ ಅಭಿಮಾನಿಗಳ ಸಂಕಟಕ್ಕೆ ಸಾಕ್ಷಿಯಾಗಿತ್ತು.

ಫೀಲ್ಡಿಂಗ್‌ ನಿರ್ಬಂಧದ ಲಾಭ; ಜಯಸೂರ್ಯ ಸ್ಫೋಟ
ಈವರೆಗಿನ ವಿಶ್ವಕಪ್‌ ಪಂದ್ಯಾವಳಿಗಳಿಗೆ ಹೋಲಿಸಿದರೆ ಇದು ಸ್ಫೋಟಕ ಬ್ಯಾಟಿಂಗಿನ ವಿಶ್ವರೂಪವಾಗಿತ್ತು. ಮೊದಲ 15 ಓವರ್‌ಗಳ ತನಕ ವಿಧಿಸಲಾದ ಫೀಲ್ಡಿಂಗ್‌ ನಿರ್ಬಂಧದ ಲಾಭವನ್ನು ಹೇಗೆ ಎತ್ತಬಹುದು ಎಂಬುದನ್ನು ಇಲ್ಲಿ ಲಂಕೆಯ ಆರಂಭಕಾರ ಸನತ್‌ ಜಯಸೂರ್ಯ ತೋರಿಸಿಕೊಟ್ಟರು. ಸ್ಟ್ರೈಕ್‌ ಬೌಲರ್‌ಗಳೆಲ್ಲ ಸಖತ್ತಾಗಿ ಹೊಡೆಸಿಕೊಂಡರು. ಮನೋಜ್‌ ಪ್ರಭಾಕರ್‌ ಅವರಂಥವರಿಗೆ ತಂಡದ ಬಾಗಿಲು ಶಾಶ್ವತವಾಗಿ ಮುಚ್ಚಿತು!


15 ಓವರ್‌ಗಳಲ್ಲೇ 100ರನ್‌!
ಸರ್ಕಲ್‌ನ ಹೊರಗೆ ಕೇವಲ ಇಬ್ಬರೇ ಫೀಲ್ಡರ್ ನಿಲ್ಲುವುದರಿಂದ ಚೆಂಡನ್ನು ಉಳಿದ ಕ್ಷೇತ್ರರಕ್ಷಕರ ತಲೆಯ ಮೇಲಿಂದ ಬಾರಿಸಲು ಜಯಸೂರ್ಯ ಮತ್ತು ಅವರ ಜತೆಗಾರ ರೊಮೇಶ್‌ ಕಲುವಿತರಣ ಮುಂದಾದರು. ಆಗ ಬೌಂಡರಿ, ಸಿಕ್ಸರ್‌ಗಳ ಪ್ರವಾ ಹವೇ ಹರಿದು ಬಂತು. ಮೊದಲ 15 ಓವರ್‌ಗಳಲ್ಲೇ ತಂಡದ ಮೊತ್ತ ನೂರರ ಗಡಿ ದಾಟತೊಡಗಿತು. ಲಂಕೆಯ ವಿಶ್ವ ವಿಕ್ರಮದಲ್ಲಿ ಈ ಬ್ಯಾಟಿಂಗ್‌ ತಂತ್ರಗಾರಿಕೆಯದೇ ಸಿಂಹಪಾಲಾಗಿತ್ತು! ಹಿಂದಿನ ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡಿನ ಮಾರ್ಕ್‌ ಗ್ರೇಟ್‌ಬ್ಯಾಚ್‌ ಮತ್ತು ಭಾರತದ ಕೆ. ಶ್ರೀಕಾಂತ್‌ ಇದೇ ಬ್ಯಾಟಿಂಗ್‌ ಟೆಕ್ನಿಕ್‌ ಪ್ರದರ್ಶಿಸಿದರೂ ಇದು ಇಷ್ಟು ಯಶಸ್ಸು ಕಂಡಿರಲಿಲ್ಲ.

ಭಾರತ ತಂಡ
ಮೊಹಮ್ಮದ್‌ ಅಜರುದ್ದೀನ್‌ (ನಾಯಕ), ಸಚಿನ್‌ ತೆಂಡುಲ್ಕರ್‌ (ಉಪನಾಯಕ), ನವಜೋತ್‌ ಸಿಂಗ್‌ ಸಿದ್ದು, ಸಂಜಯ್‌ ಮಾಂಜ್ರೆಕರ್‌, ವಿನೋದ್‌ ಕಾಂಬ್ಳಿ, ಅಜಯ್‌ ಜಡೇಜ, ನಯನ್‌ ಮೊಂಗಿಯ, ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌, ವೆಂಕಟೇಶ ಪ್ರಸಾದ್‌, ಮನೋಜ್‌ ಪ್ರಭಾಕರ್‌, ಸಲಿಲ್‌ ಅಂಕೋಲಾ, ಆಶಿಷ್‌ ಕಪೂರ್‌, ವೆಂಕಟಪತಿ ರಾಜು.

Advertisement
Advertisement

Udayavani is now on Telegram. Click here to join our channel and stay updated with the latest news.

Next