Advertisement

ಇಲಿ, ಹೆಗಣಗಳ ಪಾಲಾದ ಕಾರ್ಮಿಕರ ಆಹಾರ ಕಿಟ್‌

10:57 AM Jun 08, 2021 | Team Udayavani |

ಕನಕಪುರ: ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಕಟ್ಟಡ ಕೂಲಿ ಕಾರ್ಮಿಕರ ಹೊಟ್ಟೆ ತುಂಬಿಸಬೇಕಿದ್ದ ಕಾರ್ಮಿಕ ಇಲಾಖೆಯ ಆಹಾರ ಕಿಟ್‌ಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹಾಳಾಗಿದ್ದು, ಇಲಿ, ಹೆಗ್ಗಣಗಳ ಪಾಲಾಗಿವೆ.

Advertisement

ರಾಮನಗರ ವಿಧಾನಸಭಾ ಕ್ಷೇತ್ರದ ತಾಲೂಕಿನ ಹಾರೋಹಳ್ಳಿ ಹೋಬಳಿಯ ದ್ಯಾವಸಂದ್ರ ಗ್ರಾಪಂ ವ್ಯಾಪ್ತಿಯ ಕಟ್ಟಡ ಕೂಲಿ ಕಾರ್ಮಿಕರಿಗೆ ವಿತರಣೆ ಮಾಡಲು ಹಾಲಿನ ಡೇರಿಯಲ್ಲಿ ಕಳೆದ ಒಂದು ವರ್ಷದಿಂದ ಆಹಾರ ಕಿಟ್‌ ಶೇಖರಣೆ ಮಾಡಲಾಗಿತ್ತು. ಆದರೆ, ಕಾರ್ಮಿಕ ಇಲಾಖೆಯ ಆಹಾರ ಕಿಟ್‌ಗಳ ವಾಯಿದೆ ಮುಗಿದು ಅಕ್ಕಿ, ಬೇಳೆ, ರವೆ ಸೇರಿದಂತೆ ಆಹಾರ ಪದಾರ್ಥಗಳು ಹಾಳಾಗಿದ್ದು, ದಿನನಿತ್ಯ ಇಲಿ, ಹೆಗ್ಗಣಗಳಿಗೆ ಆಹಾರವಾಗುತ್ತಿದೆ.

ಕೆಲಸವಿಲ್ಲದೆ ಕಾರ್ಮಿಕರು ಅತಂತ್ರ: ಕಳೆದ ಒಂದುವರ್ಷದ ಹಿಂದೆ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ಕಟ್ಟಡ, ಇತರೆ ಕೂಲಿ ಕಾರ್ಮಿಕರಿಗೆ ಸರ್ಕಾರ ಕಾರ್ಮಿಕ ಇಲಾಖೆಯಡಿ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕ ಕಲ್ಯಾಣ ಮಂಡಳಿಗೆ ರಾಜ್ಯದ ಪ್ರತಿ ತಾಲೂಕಿನ ಕ್ಷೇತ್ರದ ಶಾಸಕರಿಗೆ 5000 ಆಹಾರ ಕಿಟ್‌ಗಳನ್ನು ವಿತರಣೆ ಮಾಡಿತ್ತು. ಕಾರ್ಮಿಕ ಇಲಾಖೆಯಿಂದ ಅರ್ಹರ ಪಟ್ಟಿ ನೀಡಿ, ವಿತರಣೆ ಜವಾಬ್ದಾರಿಯನ್ನು ಸ್ಥಳೀಯ ಶಾಸಕರಿಗೆ ನೀಡಲಾಗಿತ್ತು. ಆದರೆ, ಜನಪ್ರತಿನಿಧಿಗಳ ಬೇಜವಾಬ್ದಾರಿ, ಇಚ್ಛಾಶಕ್ತಿ ಕೊರತೆಯಿಂದ ಹಸಿದ ಹೊಟ್ಟೆ ತುಂಬಿಸಬೇಕಿದ್ದ ಆಹಾರ ಕಿಟ್‌ಗಳು ಹಾಲಿನ ಡೇರಿ ಕಟ್ಟಡದಲ್ಲಿ ಕೊಳೆಯುತ್ತ ಬಿದ್ದಿವೆ.

ಕ್ಷೇತ್ರದ ಶಾಸಕರಿಗೆ ನಂಬಿಕೆ ದ್ರೋಹ: ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿ, ಮರಳವಾಡಿ ಹೋಬಳಿಗಳಲ್ಲಿ ಕಳೆದ ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಬೇಕಾದ ಸ್ಥಳೀಯ ಶಾಸಕರು, ನಾಲ್ಕು ತಿಂಗಳು ಕ್ಷೇತ್ರದತ್ತ ತಲೆ ಹಾಕದೆ, ಆಹಾರ ಕಿಟ್‌ಗಳ ವಿತರಣೆ ಹೊಣೆಯನ್ನು ಸ್ಥಳೀಯ ಮುಖಂಡರಿಗೆ ವಹಿಸಿದ್ದರು. ಆದರೆ, ಸ್ಥಳೀಯ ಮುಖಂಡರು ಕಟ್ಟಡ, ಕೂಲಿ ಕಾರ್ಮಿಕರಿಗೆ ವಿತರಣೆ ಮಾಡಬೇಕಿದ್ದ ಕಿಟ್‌ಗಳನ್ನು ಕಾರ್ಮಿಕ ಇಲಾಖೆ ನೀಡಿದ್ದ ಪಟ್ಟಿ ಆಧಾರದ ಮೇಲೆ ವಿತರಣೆ ಮಾಡದೆ ದ್ಯಾವಸಂದ್ರ ಗ್ರಾಮದ ಹಾಲಿನ ಡೇರಿ ಕಟ್ಟಡದಲ್ಲಿ ಸುಮಾರು 200ಕ್ಕೂ ಹೆಚ್ಚು ಕಿಟ್‌ಗಳನ್ನು ಶೇಖರಣೆ ಮಾಡಿ, ಜನರಿಗೆ ನೀಡದೆ ವಾಯಿದೆ ಮುಗಿದು ಹುಳ ಬಿದ್ದು, ಮುಖಂಡರು ಸ್ಥಳೀಯ ಶಾಸಕರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ.

ಶಾಸಕರು ಗಮನ ಹರಿಸಿಲ್ಲ: ಸರ್ಕಾರದ ಉದ್ದೇಶವನ್ನು ಈಡೇರಿಸಬೇಕಾದ ಕ್ಷೇತ್ರದ ಶಾಸಕರು ಬಡವರಿಗೆ ಸರ್ಕಾರದಿಂದ ತಲುಪಬೇಕಾದ ಸೌಲಭ್ಯ ತಲುಪಿದಿಯೇ ಇಲ್ಲವೇ ಎಂದು ಮಾಹಿತಿ ಪಡೆದುಕೊಂಡು, ಲೋಪವಿದ್ದರೆ ಸರಿಪಡಿಸುವ ಕೆಲಸ ಮಾಡಬೇಕಿತ್ತು. ಆದರೆ, ಸ್ಥಳೀಯ ಶಾಸಕರು ಗಮನ ಹರಿಸಲಿಲ್ಲ. ಜೊತೆಗೆ ಅರ್ಹರಿಗೆ ಆಹಾರ ಕಿಟ್‌ ವಿತರಣೆ ವಿಚಾರದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ , ಜನಪ್ರತಿನಿಧಿಗಳ ಸಮ್ಮುಖದಲ್ಲಿ ಹಂಚಿಕೆ ಮಾಡಿಬೇಕಾಗಿತ್ತು. ಆದರೆ, ಜನಪ್ರತಿನಿಧಿಗಳು ಮತ್ತು ಕಾರ್ಮಿಕ ಇಲಾಖೆ ತಾಳಿದ ನಿಲುವಿನಿಂದ ಸರ್ಕಾರದ ಸೌಲಭ್ಯ ಇತ್ತ ಅರ್ಹರಿಗೂ ತಲುಪದೆ, ಅತ್ತ ಸರ್ಕಾರಕ್ಕೂ ನಷ್ಟವಾಗಿ ಮಧ್ಯ ಇಲಿ, ಹೆಗ್ಗಣಗಳಿಗೆ ನೈವೇದ್ಯ ಮಾಡಿದಂತಾಗಿದೆ.

Advertisement

ಗ್ರಾಮಸ್ಥರಿಂದ ಜನಪ್ರತಿನಿಧಿಗಳಿಗೆ ಶಾಪ: ದ್ಯಾವಸಂದ್ರ ಗ್ರಾಮದ ಹಾಲಿನ ಡೇರಿಯಲ್ಲಿ ಕಳೆದ ಒಂದು ವರ್ಷದಿಂದ ಶೇಖರಣೆ ಮಾಡಿರುವ ಆಹಾರ ಕಿಟ್‌ಗಳು ಹಾಳಾಗಿರುವುದನ್ನು ಕಂಡ ಸ್ಥಳೀಯರು, ಯಾರಾದರೂ ಬಡವರಿಗೆ ವಿತರಿಸಿ ಎಂದು ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವೊಬ್ಬ ಜನಪ್ರತಿನಿಧಿಯೂ, ಸ್ಥಳೀಯ ಮುಖಂಡರು ತಲೆಕೆಡಿಸಿಕೊಂಡಿಲ್ಲ ಎಂದು ದ್ಯಾವಸಂದ್ರ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸರ್ಕಾರದ ಉದ್ದೇಶ ಈಡೇರಿಸಲು ವಿಫ‌ಲ: ಕ್ಷೇತ್ರದ ಶಾಸಕರು ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಅದರಲ್ಲೂ ಕೊರೊನಾ ಸಂಕಷ್ಟದಲ್ಲಿದ್ದ ಕಟ್ಟಡ, ಕೂಲಿ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಿ ನೆರವಾಗಬೇಕಿತ್ತು. ಆದರೆ, ಸರ್ಕಾರದ ಉದ್ದೇಶ ಈಡೇರಿಸುವಲ್ಲಿ ವಿಫ‌ಲರಾಗಿದ್ದಾರೆ. ಸ್ಥಳಿಯ ಮುಖಂಡರು ಕಿಟ್‌ಗಳನ್ನು ತಮ್ಮ ಮನೆಯಲ್ಲಿ ಶೇಖರಣೆ ಮಾಡಿಕೊಂಡು ತಮಗೆ ಬೇಕಾದವರಿಗೆ ಹಂಚಿಕೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೆ, ಈ ವಿಚಾರ ಮಾಧ್ಯಮದವರಿಗೆ ತಿಳಿಯುತ್ತಿದ್ದಂತೆ ಸ್ಥಳೀಯ ಮುಖಂಡರು ಡೇರಿ ಕಟ್ಟಡದಲ್ಲಿ ಸಂಗ್ರಹವಾಗಿದ್ದ ಆಹಾರ ಕಿಟ್‌ಗಳನ್ನು ಖಾಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಏನೇ ಆದರೂ ಕೊರೊನಾ ಸಂಕಷ್ಟದಲ್ಲಿ ಕಾರ್ಮಿಕರ ಹಿತ ಕಾಯಬೇಕಿದ್ದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಆಹಾರ ಪದಾರ್ಥಗಳು ಮಣ್ಣು ಪಾಲಾಗಿರುವುದು ವಿಪರ್ಯಾಸ.

ವಾಯಿದೆ ಮುಗಿದು ಆಹಾರ ಪದಾರ್ಥಗಳು ಹಾಳು :

ಕೋವಿಡ್ ಸಂಕಷ್ಟದಲ್ಲಿ ಬಡ ಕೂಲಿ ಕಾರ್ಮಿಕರಿಗೆ ನೆರವಾಗಲು ಸರ್ಕಾರ ಆಹಾರ ಕಿಟ್‌ ನೀಡಿತ್ತು. ಆದರೆ, ಅರ್ಹರಿಗೆ ತಲುಪಿಸಬೇಕಾದ ಜನಪ್ರತಿನಿಧಿಗಳು ಕಳೆದ 10 ತಿಂಗಳಿಂದ ಯಾರಿಗೂ ನೀಡದೆ ಹಾಲಿನ ಡೇರಿಯಲ್ಲಿ ಶೇಖರಣೆ ಮಾಡಿದ್ದಾರೆ. ಎಲ್ಲಾ ಪದಾರ್ಥಗಳ ವಾಯಿದೆ ಮುಗಿದು ಹಾಳಾಗಿದೆ. ಯಾರಾದರೂ ಬಡ ಕೂಲಿ ಕಾರ್ಮಿಕರಿಗೆ ವಿತರಣೆ ಮಾಡಿ ಎಂದು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಿಲ್ಲ. ಇಂತಹ ಜನಪ್ರತಿನಿಧಿಗಳಿಂದ ಬಡವರ ಕಲ್ಯಾಣ ಎಂದೂ ಸಾಧ್ಯವಿಲ್ಲ ಎಂದು ಗ್ರಾಮಸ್ಥ ವಿನಯ್‌ ಕುಮಾರ್‌ ಆರೋಪ ಮಾಡಿದ್ದಾರೆ.

ಕಳೆದ ಕೋವಿಡ್ ಲಾಕ್‌ಡೌನ್‌ನಲ್ಲಿ ಕಾರ್ಮಿಕ ಇಲಾಖೆಯಡಿ ಕಟ್ಟಡ, ಇತರೆ ನಿರ್ಮಾಣ ಕಲ್ಯಾಣ ಮಂಡಳಿಗೆ ಪ್ರತಿ ತಾಲೂಕಿನ ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ತಲಾ 5 ಸಾವಿರ ಕಿಟ್‌ ನೀಡಲಾಗಿತ್ತು. ಅರ್ಹರಿಗೆ ತಲುಪಿಸುವ ಹೋಣೆ ಅವರದ್ದೆ ಆಗಿತ್ತು. ಇಲಾಖೆಯಿಂದ ಅರ್ಹರ ಪಟ್ಟಿ ನೀಡಿದ್ದೇವೆ. ನಮಗೂ ಅದಕ್ಕೂ ಸಂಬಂಧವಿಲ್ಲ. – ಶೇಖರ್‌ ಎಸ್‌.ಗಡದ್‌, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ, ರಾಮನಗರ

 

-ಉಮೇಶ್‌.ಬಿ.ಟಿ

Advertisement

Udayavani is now on Telegram. Click here to join our channel and stay updated with the latest news.

Next