Advertisement

ಹಿಂದುಳಿದವರ ಬೇರ್ಪಡಿಸುವ ಕೆಲಸ: ಲಿಂಗಪ್ಪ

04:44 PM Oct 16, 2022 | Team Udayavani |

ಹುಬ್ಬಳ್ಳಿ: 2ಎ ವರ್ಗದಲ್ಲಿ ಅಷ್ಟೇ ಅಲ್ಲ, ಪ್ರವರ್ಗ 1ರಲ್ಲೂ ಕಾಯಕ ಸಮಾಜಗಳಿವೆ. ರಾಜ್ಯದಲ್ಲಿ ಎರಡೂವರೆ ಕೋಟಿ ಹಿಂದುಳಿದ ವರ್ಗದ ಜನರಿದ್ದಾರೆ. ಹಿಂದುಳಿದವರನ್ನು ವ್ಯವಸ್ಥಿತವಾಗಿ ಬೇರ್ಪಡಿಸುವ ಕೆಲಸ ಆಗುತ್ತಿದೆ. ಈ ಕುರಿತು ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಹಾಗೂ ನಿವೃತ್ತ ಕೆಎಎಸ್‌ ಅಧಿಕಾರಿ ಕೆ.ಎನ್‌. ಲಿಂಗಪ್ಪ ಹೇಳಿದರು.

Advertisement

ನಗರದಲ್ಲಿ ಶನಿವಾರ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಆಯೋಜಿಸಿದ್ದ ಉತ್ತರ ಕರ್ನಾಟಕ ವಿಭಾಗೀಯ ಮಟ್ಟದ ಕಾಯಕ ಸಮಾಜಗಳ ಮೀಸಲಾತಿ, ಚಿಂತನ-ಮಂಥನ, ಹಿಂದುಳಿದ 102 ಪಂಗಡಗಳ ಮೀಸಲಾತಿ ಉಳಿವು ಹಾಗೂ ಪ್ರಬಲ ಸಮಾಜಗಳ ಕಾನೂನುಬಾಹಿರ ನುಸುಳುವಿಕೆ ತಡೆಯಲು ರಾಜ್ಯಾದ್ಯಂತ ಹೋರಾಟ, ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಡೆಸಿದ್ದ ಶೈಕ್ಷಣಿಕ- ಸಾಮಾಜಿಕ ಸಮೀಕ್ಷೆಯ ವರದಿಗೆ ಕೆಲ ಸ್ಥಾಪಿತ ಹಿತಾಸಕ್ತಿಗಳು ತಡೆಯೊಡ್ಡುತ್ತಿವೆ. ಇದರಿಂದ ಕೆಲ ಹಿಂದುಳಿದ ವರ್ಗಗಳಿಗೆ ದೊಡ್ಡ ಅನ್ಯಾಯವಾಗುತ್ತಿದೆ. ಸುಮಾರು 1.35 ಕೋಟಿ ಕುಟುಂಬಗಳ ಸಮೀಕ್ಷೆ ಮಾಡಲಾಗಿತ್ತು. ಈ ವರದಿ ಅನುಷ್ಠಾನಗೊಂಡರೆ ಅತ್ಯಂತ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಾಕಷ್ಟು ನೆರವಾಗಲಿದೆ. ಇದರ ದತ್ತಾಂಶಗಳ ಮೂಲಕವೇ ಅವರ ಶ್ರೇಯೋಭಿವೃದ್ಧಿಗೆ ಸರಕಾರ ಯೋಜನೆಗಳನ್ನು ರೂಪಿಸಬಹುದಾಗಿದೆ ಎಂದು ಹೇಳಿದರು.

ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಲ್‌.ಜಿ.ಹಾವನೂರು ವರದಿ ಹಿಂದುಳಿದ ವರ್ಗಗಳಿಗೆ ದೊಡ್ಡ ಶಕ್ತಿ ನೀಡಿತು. ತಮ್ಮ ಅವಧಿಯಲ್ಲಿ ತೀರಾ ಸಣ್ಣ ಸಮಾಜದ ಮುಖಂಡರನ್ನೂ ಗುರುತಿಸಿ ಅವರನ್ನು ಗೆಲ್ಲಿಸಿ ಸಕಲ ಸಮಾಜದ ಬಗ್ಗೆ ಕಾಳಜಿ ಹೊಂದಿದ್ದರು. ಇದಾದ ನಂತರ ಚಿನ್ನಪ್ಪರಡ್ಡಿ ವರದಿ ಜಾರಿ ಮಾಡಲಾಯಿತು. ಇದರಿಂದ ಅರ್ಹ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಯಿತು. ಅಂದಿನ ಅನ್ಯಾಯ ಇಂದಿಗೂ ಸರಿಪಡಿಸಲು ಸಾಧ್ಯವಾಗಿಲ್ಲ. ಅದೆಷ್ಟೋ ಸಮಾಜಗಳಿಗೆ ಇದುವರೆಗೂ ರಾಜಕೀಯ, ಉದ್ಯೋಗದಲ್ಲಿ ಪ್ರಾತಿನಿಧ್ಯ ದೊರೆತಿಲ್ಲ. ಅಲೆಮಾರಿಗಳ ಜೀವನ ನೋಡಿದರೆ ಇಂದಿಗೂ ಶೋಚನೀಯ. ಅವರಿಗೆ ಮಾತನಾಡಲು ಧ್ವನಿಯಿಲ್ಲ. ಅವರ ಪರವಾಗಿ ಯಾವ ರಾಜಕಾರಣಿಯೂ ನಿಲ್ಲುತ್ತಿಲ್ಲ ಎಂದರು.

ಸ್ವಾತಂತ್ರ್ಯ ನಂತರದ ರಾಜಕಾರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಣವಂತರು ಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದರು. ಆದರೆ ಇಂದು ಜಾತಿ, ತೋಳ್ಬಲ, ಹಣದ ಶಕ್ತಿ ಹೊಂದಿರುವವರು ಪ್ರತಿನಿಧಿಗಳಾಗುತ್ತಿದ್ದಾರೆ. ಇಂದಿನ ವಿಧಾನ ಪರಿಷತ್ತಿನ ಆಯ್ಕೆ ಇದನ್ನು ಸಾರುತ್ತಿದ್ದು, ಕಾಲ ಕ್ರಮೇಣ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ. ಇತ್ತೀಚೆಗೆ ಜಿಪಂ-ತಾಪಂ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಗೊಂದಲ ಸೃಷ್ಟಿಸುವ ಕೆಲಸ ಆಗಿದೆ ಎಂದರು.

Advertisement

ಶ್ಯಾಡಲಗಿಯ ವಿಶ್ವಕರ್ಮ ಸಮಾಜದ ಏಕದಂಡಗಿಮಠದ ಶ್ರೀ ಸೂರ್ಯನಾರಾಯಣ ಸ್ವಾಮೀಜಿ ಮಾತನಾಡಿ, ಈ ಸಭೆ, ಜಾಗೃತ ಸಮಾವೇಶಗಳು ಯಾರ ವಿರುದ್ಧವಲ್ಲ. ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀಗಳ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಸಣ್ಣ ಸಮುದಾಯಗಳು ಯಾರ ವಿರುದ್ಧವೂ ನಡೆದುಕೊಳ್ಳುವುದಿಲ್ಲ. ತಮ್ಮ ಸಮಾಜದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ಒಳ್ಳೆಯ ಉದ್ಯೋಗ ಮಾಡಬೇಕೆನ್ನುವ ಕನಸು ಕಾಣುತ್ತಿದ್ದೇವೆ. ಯಾವುದೇ ಪ್ರಾತಿನಿಧ್ಯ ಪಡೆಯದ ಸಮುದಾಯಕ್ಕೂ ಶಕ್ತಿ ಬೇಕಲ್ಲವೇ. ಮೀಸಲಾತಿ, ಹಕ್ಕಿಗಾಗಿ ಅಂಗಲಾಚುತ್ತಿದ್ದೇವೆ ವಿನಃ ಯಾರ ವಿರುದ್ಧವಲ್ಲ. ಪ್ರತಿಯೊಂದು ಕಾಯಕ ಸಮಾಜವೂ ಎಲ್ಲ ಸಮಾಜಗಳಿಗೆ ಬೇಕು ಎಂದರು.

ಒಕ್ಕೂಟದ ಕಾರ್ಯಾಧ್ಯಕ್ಷ ಶಿವಪುತ್ರಪ್ಪ ಇಟಗಿ, ಭೀಮಸಿ ಅಡಿವೆಣ್ಣವರ, ನಾರಾಯಣ ಚಿಕ್ಕೋಡಿ, ಬಸವರಾಜ ಹಡಪದ, ಮನೋಹರ ಲಕ್ಕುಂಡಿ, ಮಹದೇವಪ್ಪ ಕರ್ಜಗಿ, ಸೋಮಣ್ಣ ಹುಲಿಮನಿ, ರಾಘವೇಂದ್ರ ಮುರುಗೋಡ, ಹನುಮಂತಸಾ ನಿರಂಜನ, ಮಲ್ಲಪ್ಪ ಲಕ್ಕನಗೌಡರ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next