Advertisement

ಕಾರ್ಪೋರೇಟ್‌ ವಲಯದಂತೆ ಕೆಲಸ ಮಾಡಿ

06:15 AM Jun 15, 2018 | Team Udayavani |

ಬೆಂಗಳೂರು: ಜನಸ್ನೇಹಿ ಆಡಳಿತ ನೀಡುವುದು ನಮ್ಮ ಗುರಿಯಾಗಿದ್ದು,ಕಾರ್ಪೋ ರೇಟ್‌ ವಲಯದ ರೀತಿ
ಚುರುಕಾಗಿ ನಮ್ಮ ಅಧಿಕಾರಿಗಳು ಕೆಲಸಮಾಡಬೇಕೆಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಇಲಾಖಾ ಮುಖ್ಯಸ್ಥರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆ, ಶುದ್ಧ ಕುಡಿಯುವ ನೀರು ಪೂರೈಕೆ, ಉದ್ಯೋಗ ಸೃಷ್ಟಿ, ಸೂರಿಲ್ಲದ ಕುಟುಂಬಕ್ಕೆ ವಸತಿ ಕಲ್ಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಅಧಿಕಾರಿ ವರ್ಗ ಈ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಹೇಳಿದರು.

“ನಾನು ನಿಮ್ಮ ಮೇಲೆ ಸವಾರಿ ಮಾಡಲ್ಲ, ನಾನು ಹೇಳಿದ್ದೇ ಮಾಡಬೇಕು ಅಂತ ಹೇಳಲ್ಲ. ಆದರೆ, ಟೇಕನ್‌ ಫಾರ್‌ ಗ್ರಾಂಟೆಡ್‌ ವರ್ತನೆಯನ್ನು ನಾನು ಸಹಿಸುವುದಿಲ್ಲ. ಯಾವ ಅಧಿಕಾರಿಯೂ ಭಯ ಪಡಬೇಕಿಲ್ಲ.ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳನ್ನು ಯಾವುದೇ ಒತ್ತಡ ಬಂದರೂ ಬದಲಾಯಿಸುವುದಿಲ್ಲ. ಆದರೆ, ನಮ್ಮ ವಿಶ್ವಾಸ 
ದುರುಪಯೋಗಪಡಿಸಿಕೊಳ್ಳಬೇಡಿ’ ಎಂದು ಧೈರ್ಯ ನೀಡಿದರು.

ಜನತಾದರ್ಶನವನ್ನು ನಾನು ಅಧಿಕೃತವಾಗಿ ಪ್ರಾರಂಭಿಸಿಲ್ಲ. ಆದರೂ, ದಿನಕ್ಕೆ ಕನಿಷ್ಠ 1 ಸಾವಿರ ಜನ ಮನೆ, ಗೃಹ ಕಚೇರಿ ಬಳಿ ಬರುತ್ತಿದ್ದಾರೆ. ಬಂದವರಲ್ಲಿ ಹೆಚ್ಚಿನವರ ಮನವಿ ಶಿಕ್ಷಣ, ಆರೋಗ್ಯ ಸೇವೆ, ಅಂಗವಿಕಲರಿಗೆ ಸೌಲಭ್ಯ, ಉದ್ಯೋಗದ್ದಾಗಿದೆ. ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದರೆ ಜನತೆ ಇಲ್ಲಿವರೆಗೆ ಬರುತ್ತಿರಲಿಲ್ಲ. ಜಿಲ್ಲಾಧಿಕಾರಿಗಳು ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿ ಪಡಿಸಬೇಕಿದೆ. ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ,ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಈ ಬಗ್ಗೆ ಕೆಳಹಂತದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ನಿಗಾ ವಹಿಸಬೇಕು ಎಂದರು.

ಜಮೀನು ಹುಡುಕಿ: ರಾಜ್ಯದಲ್ಲಿ ವಸತಿ ಸಮಸ್ಯೆ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ 2 ಲಕ್ಷ ಹಾಗೂ ರಾಜ್ಯದ ಇತರೆಡೆ 3 ಲಕ್ಷ ಮನೆ ನಿರ್ಮಿಸಬೇಕಾಗಿದೆ. ಇದಕ್ಕಾಗಿ ಜಮೀನು ಅಗತ್ಯ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸರ್ಕಾರಿ ಜಮೀನು ಎಲ್ಲೆಲ್ಲಿದೆ ಎಂಬುದರ ಬಗ್ಗೆ ತಕ್ಷಣ ಜಿಲ್ಲಾಧಿ ಕಾರಿಗಳು ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸೂಚನೆ ನೀಡಿ ಎಂದು ತಿಳಿಸಿದರು.

Advertisement

ನಿರುದ್ಯೋಗ ನಿವಾರಣೆ ವಿಚಾರದಲ್ಲಿ ಜಿಲ್ಲಾಮಟ್ಟದಲ್ಲಿ ಉದ್ಯೋಗ ಸಮಿತಿ ರಚಿಸಿ.ಕೈಗಾರಿಕೆ, ಕಾರ್ಖಾನೆ ಮಾಲೀಕರ ಜತೆ ಮಾತನಾಡಿ. ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಉದ್ಯೋಗ ಮತ್ತು ತರ ಬೇತಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಆ ಸಮಿತಿಯಲ್ಲಿ ಇರಲಿ. ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಜಿಲ್ಲಾ,
ವಿಭಾಗವಾರು, ರಾಜ್ಯ ಮಟ್ಟದಲ್ಲಿ ಉದ್ಯೋಗ ಮೇಳ ಮಾಡಲಾಗಿದೆ. ಆದರೆ,ಎಷ್ಟು ಜನಕ್ಕೆ ಉದ್ಯೋಗ ಸಿಕ್ಕಿದೆ ಎಂಬುದರ ಮಾಹಿತಿ ಇಲ್ಲ ಎಂದರು.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿಯಿಂದಲೇ ಶಿಕ್ಷಣ 
ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿಯಿಂದಲೇ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರವೇ ಎಲ್‌ಕೆಜಿ ಶಿಕ್ಷಣ ನೀಡಿದರೆ ಬಡ, ಮಧ್ಯಮ ವರ್ಗದವರು ಸರ್ಕಾರಿ ಶಾಲೆಗಳತ್ತಲೇ ಬರುತ್ತಾರೆ. ಕನ್ನಡ ಉಳಿಸುವುದರ ಜತೆಗೆ ಮಕ್ಕಳಿಗೆ ಇಂಗ್ಲೀಷ್‌ನ್ನು ಕಲಿಸಲಾಗುವುದು ಎಂದು ಮುಖ್ಯಮಂತ್ರಿ ಸಭೆಯಲ್ಲಿ ತಿಳಿಸಿದರು.

ಆರ್‌ಟಿಇ ಕಾಯ್ದೆಯಡಿ ಬಡವರ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಸೀಟು ಲಭ್ಯವಾಗುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಐಗಳು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಜತೆ ಶಾಮೀಲಾಗಿದ್ದಾರೆ. ಬಡವರಿಂದ ಶಾಲೆಗಳು ಬೇರೆ ಬೇರೆ ಹೆಸರಿನಲ್ಲಿ ಹಣ ಪಡೆಯುತ್ತಿವೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. 

ಸಾರ್ವಜನಿಕರ ದೂರಿನ ಮೇರೆಗೆ ಬೆಂಗಳೂರು ಉತ್ತರ ವಿಭಾಗದ ಡಿಡಿಪಿಐಯನ್ನು ಅಮಾನತು ಮಾಡಿದ್ದೇನೆ. ಬಡ ಮಕ್ಕಳ ಶಿಕ್ಷಣಕ್ಕೆ ಸಂಚಕಾರ ತರುವವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ಖಾಸಗಿ ಶಾಲೆಗಳ ಕಡೆ ಶಾಮೀಲಾದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆಂದು ಎಚ್ಚರಿಕೆ ನೀಡಿದರು.

ಡಿಕೆಶಿ ಕರೆ ಮಾಡಿಲ್ಲ: ಎಂಜಿನಿಯರ್‌ಗಳ ವರ್ಗಾವಣೆ ವಿಚಾರದಲ್ಲಿ ಡಿ.ಕೆ.ಶಿವಕುಮಾರ್‌ ಅಸಮಾಧಾನ
ಗೊಂಡಿರುವುದು ನನಗೆ ಗೊತ್ತಿಲ್ಲ. ನನಗೆ ಅವರು ಕರೆ ಮಾಡಿಯೂ ಹೇಳಿಲ್ಲ. ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆಯಾಗಿತ್ತು. ಇದೀಗ ಮತ್ತೆ ಹಳೆಯ ಸ್ಥಾನಗಳಿಗೆ ನಿಯೋಜಿಸಲಾಗಿದೆ ಅಷ್ಟೆ. ಇನ್‌ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಅವರಿಗೆ ಸರ್ಕಾರದಿಂದ ಯಾವುದೇ ಹುದ್ದೆ ನೀಡುವ ಪ್ರಸ್ತಾವನೆಯಿಲ್ಲ. ಅವರ ಸಲಹೆ-ಸೂಚನೆ ಮಾರ್ಗದರ್ಶನ ಪಡೆಯಲಾಗುವುದು.ರಾಜ್ಯದ ಅಭಿವೃದ್ಧಿ ಕುರಿತು ಅವರ ಜತೆ ಸಮಾಲೋಚನೆ ನಡೆಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next