Advertisement

ಕೌತುಕ ತಣಿಸಿದ ಮುಕ್ತ ಅವಕಾಶ

10:42 AM Mar 11, 2018 | Team Udayavani |

ಬೆಂಗಳೂರು: ವಿಜ್ಞಾನಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಮೂಡುವ ಹಲವು ಕೌತುಕಗಳಿಗೆ ಕೆಲವೊಮ್ಮೆ ಉತ್ತರ ಸಿಗುವುದಿಲ್ಲ. ಗಣಿತದ ಅನೇಕ ಸೂತ್ರಗಳು ಕಬ್ಬಿಣದ ಕಡಲೆಯಂತೆ ಭಾಸವಾಗುತ್ತವೆ. ಹೀಗಾಗಿ ಗಣಿತ, ವಿಜ್ಞಾನದೊಳಗಿನ ಸುಜ್ಞಾನದ ಸಾರವನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಾಮಾನ್ಯ ಜನರಿಗೆ ಉಣಬಡಿಸಿದೆ. ಮಲ್ಲೇಶ್ವರದ ಐಐಎಸ್‌ಸಿ ಕ್ಯಾಂಪಸ್‌ ಶನಿವಾರ ಇಡೀ ದಿನ ಸುಜ್ಞಾನದ ಸಂತೆಯಾಗಿತ್ತು. ಕಣ್ಣು ಹಾಯಿಸಿದಲ್ಲೆಲ್ಲ ವಿಜ್ಞಾನದ ಪ್ರಯೋಗಗಳು, ಗಣಿತದ ಸವಾಲುಗಳನ್ನು ಸುಲಭವಾಗಿ ಬಿಡಿಸುವ ವಿಧಾನಗಳೇ
ಕಾಣಿಸುತ್ತಿದ್ದವು. ಜತೆಗೆ ಇವನ್ನೆಲ್ಲ ಕಣ್ತುಂಬಿಕೊಳ್ಳಲು ಯುವ ಜನಸಾಗರವೇ ಅಲ್ಲಿ ನೆರೆದಿತ್ತು.

Advertisement

ರಾಕೆಟ್‌ ಉಡಾವಣೆ, ಅದರ ವೇಗ, ಸಿದ್ಧಪಡಿಸುವ ವಿಧಾನ, ಉಡಾವಣೆ ಸಂದರ್ಭ ಹೀಗೆ ಎಂಬೆಲ್ಲ ಅಂಶಗಳನ್ನು ಒಳಗೊಂಡ ಸೂಪರ್‌ ಸೋನಿಕ್‌ ಜೆಟ್‌ ಪ್ರಾತ್ಯಕ್ಷಿಕೆ, ಒಣ ಕಸದಿಂದ ವಿದ್ಯುತ್‌ ತಯಾರಿಸಿ, ಅದನ್ನು ಜನರೇಟರ್‌
ಮೂಲಕ ಉಪಯೋಗಿಸುವ ವಿಧಾನ ಸೇರಿ ಹಲವು ಪ್ರಯೋಗಗಳು ಗಮನಸೆಳೆದವು.

ನ್ಯಾನೋ ಸೈನ್ಸ್‌ ಮತ್ತು ಎಂಜಿನಿಯರಿಂಗ್‌, ಅಟೊಸ್ಪೇರ್‌ ಮತ್ತು ಓಷನ್‌ ಸೈನ್ಸ್‌, ಬಯೊ ಸಿಸ್ಟಮ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌, ಕ್ರಯೊಜಿನ್‌ ಟೆಕ್ನಾಲಜಿ, ಬಯೊ ಕೆಮೆಸ್ಟ್ರಿ, ಹೈ ಎನರ್ಜಿಫಿಸಿಕ್ಸ್‌, ಮೂಲ ಸೌಕರ್ಯ, ಸುಸ್ಥಿತ ಸಾರಿಗೆ ಮತ್ತು ನಗರ ಯೋಜನೆ ವಿಭಾಗ, ನ್ಯೂರೋಸೈನ್ಸ್‌ ವಿಭಾಗ, ಸುಸ್ಥಿರ ತಾಂತ್ರಿಕತೆ, ಕೆಮಿಕಲ್‌ ಎಂಜಿನಿಯರಿಂಗ್‌, ಸಿವಿಲ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌ ಸೇರಿ ಐಐಎಸ್‌ಸಿಯ ಸ್ನಾತಕ, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದಿಂದ ಆಯಾ ಕ್ಷೇತ್ರದ ಪ್ರಾತ್ಯಕ್ಷಿಕೆ ಮತ್ತು ಪೋಸ್ಟರ್‌ ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲಿದ್ದ ತಜ್ಞರು, ಬಂದ ಎಲ್ಲರಿಗೂ ತಾಳ್ಮೆಯಿಂದ ವಿವರಿಸಿದರು.

ಕನ್ನಡ ಪುಸ್ತಕಗಳೂ ಇವೆ 
ಐಐಎಸ್‌ಸಿ ಗ್ರಂಥಾಲಯದಲ್ಲಿ ಉನ್ನತ ಸಂಶೋಧನೆಯ ಪುಸ್ತಕಗಳು, ವೆಬ್‌ಜರ್ನಲ್‌ಗ‌ಳು, ಆನ್‌ಲೈನ್‌ ಪತ್ರಿಕೆಗಳು ಸೇರಿ ವಿಜ್ಞಾನಕ್ಕೆ ಸಂಬಂಧಿಸಿದ ಬಹುತೇಕ ಎಲ್ಲಾ ಪುಸ್ತಕಗಳು ಲಭ್ಯವಿದೆ. ಇದರ ಜತೆಗೆ ಕನ್ನಡದ ಹಲವು ಪುಸ್ತಕಗಳು, ಅದರಲ್ಲೂ ಆಧ್ಯಾತ್ಮ ಸಂಬಂಧಿ ಕನ್ನಡ ಪುಸ್ತಕಗಳು ಹೆಚ್ಚಾಗಿವೆ. 

ಟ್ರಾಫಿಕ್‌ ಕಂಟ್ರೋಲ್‌ ಸಲಹೆ 
ಸಿಐಎಸ್‌ಟಿಯುಪಿ ವಿಭಾಗವು ನಗರದ ಹಲವು ಪ್ರದೇಶಗಳಲ್ಲಿ ಮಾಡಿದ್ದ ಟ್ರಾಫಿಕ್‌ ಅಧ್ಯಯನ ಹಾಗೂ ಶಿಫಾರಸುಗಳನ್ನು ಪ್ರದರ್ಶಿಸಿತು. ಕಲಾಸಿಪಾಳ್ಯದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಿಂದ ಕೆ.ಆರ್‌.ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗಿರುವುದನ್ನು ಉಲ್ಲೇಖೀಸುವ ಜತೆಗೆ, ರಸ್ತೆ, ಪಾದಚಾರಿ ಮಾರ್ಗದ ಅಭಿವೃದ್ಧಿ, ಸ್ವಂತ ವಾಹನಗಳ ನಿಯಂತ್ರಣ, ಬಿಎಂಟಿಸಿ ಬಸ್‌ಗಳನ್ನು ಸಿಎನ್‌ಜಿಗೆ ಪರಿವರ್ತಿಸುವುದು, ಸಿಎನ್‌ಜಿ ಬಂಕ್‌ ಸ್ಥಾಪನೆ, ಸೇರಿ ಹಲವು ಶಿಫಾರಸುಗಳನ್ನು ಮಾಡಲಾಯಿತು. ಹಾಗೇ ಸಿಐಎಸ್‌ಟಿಯುಪಿ ವಿಭಾಗದಲ್ಲಿ ಮಕ್ಕಳಿಗೆ ಟ್ರಾಫಿಕ್‌ ಗೇಮ್‌ ಏರ್ಪಡಿಸಲಾಗಿತ್ತು. ಕಂಪ್ಯೂಟರ್‌ ಪರದೆಯಲ್ಲಿ ಕಾಣಿಸುವ ರಸ್ತೆ ಜಂಕ್ಷನ್‌ನಲ್ಲಿ ವಾಹನಗಳು ಬಂದು ನಿಂತಾಗ ಯಾವ ಸಿಗ್ನಲ್‌ ಮೊದಲು ಮುಕ್ತಗೊಳಿಸಬೇಕು ಎಂಬುದ ತಿಳಿಸುವುದು ಆಟದ ಮೂಲ ಉದ್ದೇಶವಾಗಿತು

Advertisement

ಆಕರ್ಷಕ ಪ್ರಯೋಗಾಲಯ
ಐಐಎಸ್‌ಸಿ ಒಳಗಿರುವ ಹೈ ವೋಲ್ಟೇಜ್‌ ಪ್ರಯೋಗಾಲಯದ ಪ್ರಾತ್ಯಕ್ಷಿಕೆಗೆ ಜನರು ಬೆರಗಾಗಿದ್ದಾರೆ. ತಂತಿಯಲ್ಲಿ ಹೈ ವೋಲ್ಟೇಜ್‌ ವಿದ್ಯುತ್‌ ಹರಿಸಿದಾಗ ವಿದ್ಯುತ್‌ ಕಿಡಿ ಕಾಣಿಸಿಕೊಳ್ಳುತ್ತದೆ. ಈ ಪರಿಕಲ್ಪನೆಯನ್ನು ಬಳಸಿಕೊಂಡು ಕತ್ತಲ ಕೋಣೆಯಲ್ಲಿ ಪ್ರದರ್ಶನ ನೀಡಲಾಯಿತು. ಕಪ್ಪು ಪರದೆಯ ಮಧ್ಯಭಾಗದ ತಂತಿಯಲ್ಲಿ ವಿದ್ಯುತ್‌ ಹರಿಸಿದಾಗ ವೃತ್ತಾಕಾರದ ನೀಲಿ ಬಣ್ಣದ ಬೆಳಕು, ನಂತರದ ಶಬ್ಧ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದರು. ತಂತಿಯಲ್ಲಿ 1 ಲಕ್ಷ ವೋಲ್ಟ್ ವಿದ್ಯುತ್‌ ಹರಿಸಿದಾಗ ತಂತಿ ತುಂಡಾಗಿ ಸ್ಫೋಟದ ಸದ್ದು ಕೇಳಿತು.

ಮಳೆನೀರು ಕೊಯ್ಲು
ಮನೆಗಳಲ್ಲಿ ಮಳೆ ನೀರು ಕೊಯ್ಲು ಹೇಗೆ ಮಾಡಬೇಕು ಮತ್ತು ಅದರ ಉಪಯೋಗ, ಆ ನೀರಿನ ಸದ್ಬಳಕೆ, ಅಂತರ್ಜಲಕ್ಕೆ ಬಿಡುವ ವಿಧಾನ ಸೇರಿ ಎಲ್ಲ ಅಂಶಗಳನ್ನು ಒಳಗೊಂಡ ಪ್ರಾತ್ಯಕ್ಷಿಕೆಯನ್ನು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಪ್ರದರ್ಶಿಸಿತು. ಜತೆಗೆ ಅಲ್ಟ್ರಾ ಹೈಬ್ರೀಡ್‌ ಸಾಮರ್ಥ್ಯದ ಸೋಲಾರ್‌ ಪ್ಯಾನಲ್‌ ಹಾಗೂ ಬಲ್ಬ್ಗಳು ಪ್ರದರ್ಶನಕ್ಕಿದ್ದವು. ಇದರೊಂದಿಗೆ ಪರಿಸರ ಸಂರಕ್ಷಣೆ, ಭೂಮಿಯ ಉಳಿವಿಗೆ ಸಂಬಂಧಿಸಿ ಸಾರ್ವಜನಿಕರ ಸಲಹೆ ಪಡೆಯಲಾಯಿತು.

ಮ್ಯಾಜಿಕ್‌ ಸ್ಕ್ವೇರ್‌
ಗಣಿತದ ಅತ್ಯಂತ ಕಠಿಣ ಪ್ರಯೋಗಗಳನ್ನು ಮ್ಯಾಜಿಕ್‌ ಸ್ಕ್ವೇರ್‌ ಮೂಲಕ ಅತಿ ಸರಳ ಹಾಗೂ ವೇಗವಾಗಿ
ಬಿಡಿಸುವುದನ್ನು ಐಐಎಸ್‌ಸಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರದರ್ಶಿಸಿದರು. ಹವಾಮಾನ ವೈಪರಿತ್ಯ
ಮತ್ತು ಬದಲಾವಣೆ ಹೇಗಾಗುತ್ತದೆ ಎಂಬ ಮಾಹಿತಿ ನೀಡಿದರು.

ಸ್ವಚ್ಛತೆಗೆ ಆದ್ಯತೆ 
ಒಪನ್‌ ಡೇ ವೇಳೇ ಪರಿಸರ ಮತ್ತು ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಒಣಕಸ ಮತ್ತು ಹಸಿಕಸ ಹಾಕಲು ಪ್ರತ್ಯೇಕ ಬುಟ್ಟಿಗಳನ್ನು ಎಲ್ಲೆಡೆ ಇಡಲಾಗಿತ್ತು. ಕ್ಯಾಂಪಸ್‌ನಲ್ಲಿರುವ ಕ್ಯಾಂಟೀನ್‌ ಜತೆಗೆ ಐದಾರು ಕಡೆಗಳಲ್ಲಿ ಫ‌ುಡ್‌ ಕೋರ್ಟ್‌ ತೆಗೆಯಲಾಗಿತ್ತು. 

ಹರಿದು ಬಂದ ಜನ ಸಾಗರ
ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಶನಿವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವೆಗೆ ಎಲ್ಲರಿಗೂ ಮುಕ್ತ ಅವಕಾಶ ಇತ್ತು. ಮಕ್ಕಳು, ಮಹಿಳೆಯರು, ಪುರುಷರು, ವಯಸ್ಕರು ಹೀಗೆ ಎಲ್ಲ ವಯೋಮಾನದವರು ವಿಜ್ಞಾನದ ವಿಸ್ಮಯ ಕಂಡು ಬೆರಗಾದರು. ಹಿರಿಯ ವಿಜ್ಞಾನಿಗಳು, ವಿದ್ವಾಂಸರು, ಚಿಂತಕರು, ತಜ್ಞರು, ವಿದ್ಯಾರ್ಥಿಗಳು, ಸಾರ್ವಜನಿಕರು ಬೆಳಗ್ಗೆಯಿಂದ ಸಂಜೆಯ ತನಕ ಕ್ಯಾಂಪಸ್‌ನಲ್ಲಿ ಸುತ್ತಾಡಿ, ವಿಜ್ಞಾನದ ಲೈವ್‌ ಅನುಭವ ಪಡೆದರು.

ಡ್ರೋಣ್‌ ರೇಸಿಂಗ್‌
ಡ್ರೋಣ್‌ ರೇಸಿಂಗ್‌, ಹವಾಮಾನ ವೈಪರಿತ್ಯದ ಸಂದರ್ಭದಲ್ಲಿ ಡ್ರೋಣ್‌ ಮೂಲಕ ನಡೆಸ ಬಹುದಾದ ತಾಂತ್ರಿಕ ಪರಿಹಾರ ಕಾರ್ಯ, ಚಮಚದಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಡ್ರೋಣ್‌ ಮೂಲಕ ಕೊಂಡೊಯ್ಯುವುದು ಸೇರಿ ಡ್ರೋಣ್‌ ಮೂಲಕ ಮಾಡಬಹುದಾದ ಅನೇಕ ಕಾರ್ಯಗಳ ಬಗ್ಗೆ ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿಭಾಗದಿಂದ ನೇರ ಪ್ರದರ್ಶನ ನಡೆಯಿತು.

ಅಪ್ಲಿಕೇಷನ್‌ ರೂಪದ ವೈಜ್ಞಾನಿಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದ್ದೇವೆ. ರಾಜ್ಯದ ಹಲವು ಯೋಜನೆಗಳನ್ನು ಮೇಘಾಲಯ, ಉತ್ತರಪ್ರದೇಶ, ನಾಗಾಲ್ಯಾಂಡ್‌ನ‌ವರು ಅಳವಡಿಸಿಕೊಂಡಿದ್ದಾರೆ.
 ಡಾ.ಎಸ್‌.ಜಿ.ಶ್ರೀಕಂಠೇಶ್ವರ ಸ್ವಾಮಿ

ವಿಜ್ಞಾನದ ಅನೇಕ ಸತ್ಯಗಳು ಶಿಕ್ಷಿತರಿಗೂ ತಿಳಿದಿರುವುದಿಲ್ಲ. ವಿಜ್ಞಾನದ ಉಪಯೋಗ, ಮಹತ್ವವನ್ನು ಎಲ್ಲರಿಗೂ ತಿಳಿಸುವ ನಿಟ್ಟಿ ನಲ್ಲಿ ಐಐಎಸ್‌ಸಿ ಪರಿಚಯಿಸಿದ ಈ ಪರಿಕಲ್ಪನೆ ತುಂಬಾ ಚೆನ್ನಾಗಿದೆ.
 ಅಪರ್ಣ ಕಾರ್ತಿಕ್‌, ಸಂಶೋಧಕಿ

ವಿಜ್ಞಾನದ ಹತ್ತಾರು ಪ್ರಯೋಗ ನೋಡಿದ ಮೇಲೆ ನನಗೆ ಎಂಜಿನಿಯರ್‌ ಆಗಬೇಕು ಅನಿಸಿದೆ. ಐಐಎಸ್‌ಸಿ ಕ್ಯಾಂಪಸ್‌ ಒಳಗೆ ವಿಜ್ಞಾನದ ಅದ್ಭುತವೇ ಸೃಷ್ಟಿಯಾಗಿದೆ. ಸಾಕಷ್ಟು ಮಾಹಿತಿ ಪಡೆದಿದ್ದೇನೆ.
  ಶಾರದಾ, ವಿದ್ಯಾರ್ಥಿನಿ

ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ  ಅಗತ್ಯ. ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ವಾರ ಅಥವಾ ತಿಂಗಳಿಗೊಮ್ಮೆಯಾದರೂ ಇಲ್ಲಿಗೆ ಬರಲು ಅವಕಾಶ ಮಾಡಿಕೊಡಬೇಕು.
  ರಾಘವೇಂದ್ರ, ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next