Advertisement

ಕುಷ್ಟಗಿಯಿಂದ ಸ್ಪರ್ಧಿಸಲಾರೆ ; 1991ರಲ್ಲಿ ಸೋಲಿಗೆ ಕಾರಣ ನೀಡಿದ ಸಿದ್ದರಾಮಯ್ಯ

07:41 PM Dec 16, 2022 | Team Udayavani |

ಕುಷ್ಟಗಿ: ಕಾಂಗ್ರೆಸ್ ಪಕ್ಷದವರು ನುಡಿದಂತೆ ನಡೆದವರು, ಬಿಜೆಪಿಯವರು ನುಡಿಯಂತೆ ನಡೆಯದೇ ಜನರಿಗೆ ಟೋಪಿ ಹಾಕಿದವರು. ಜನರಿಗೆ ದ್ರೋಹ, ಮೋಸ ಮಾಡಿದವರು ಇಂತವರಿಗೆ ಮತ್ತೆ ಅಧಿಕಾರ ಬೇಕೇನ್ರೀ? ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಇಲ್ಲಿನ ಟಿಎಪಿಸಿಎಂಎಸ್ ಮೈದಾನದಲ್ಲಿ ಶುಕ್ರವಾರ ನಡೆದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ 69ನೇ ಜನ್ಮ ದಿನೋತ್ಸವ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿಜೆಪಿಯವರು 2018ರಲ್ಲಿ 600 ಭರವಸೆಗಳನ್ನು ನೀಡಿದ್ದರು ಮೂರು ವರ್ಷದ ಅವಧಿಯಲ್ಲಿ ಬರೀ 25 ಬೇಡಿಕೆ ಈಡೇರಿಸಿದ್ದು, 35 ಭರವಸೆಗಳು ಅರೆಬರೆಯಾಗಿದ್ದು ಕೇವಲ ಶೇ.10 ರಷ್ಟು ಬೇಡಿಕೆ ಈಡೇರಿಸಲಿಲ್ಲ. ನಮ್ಮ ಅಧಿಕಾರದ ಅವಧಿಯಲ್ಲಿ 165 ಭರವಸೆ ನೀಡಿ 158 ಬೇಡಿಕೆ ಈಡೇರಿಸಿ, 30 ಹೆಚ್ಚುವರಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದರು.

ಕುಷ್ಟಗಿಯಿಂದ ಸ್ಪರ್ಧಿಸಲಾರೆ

1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಜನತಾದಳದಿಂದ ಸ್ಪರ್ದಿಸಿದ ಸಂಧರ್ಭದಲ್ಲಿ ರಾಜೀವಗಾಂಧಿಯವರ ಹತ್ಯೆಯಾಗಿತ್ತು ಆಗ ಅನುಕಂಪಕ್ಕೆ ತಿರುಗಿ ನಾನು ಸೋಲಬೇಕಾಯಿತು ಎಂದು ಮಜಿ ಸಿಎಂ ಸಿದ್ದರಾಮಯ್ಯ ಅವರು. 31 ವರ್ಷಗಳ ಹಿಂದಿನ ಹಳೆ ನೆನಪುಗಳನ್ನು ಬಿಚ್ಚಿಟ್ಟರು.

ಒಂದು ವೇಳೆ ಕೊಪ್ಪಳ ಸಂಸದನಾಗಿದ್ದರೆ ದೆಹಲಿಯಲ್ಲಿರುತ್ತಿದ್ದೆ. ಆದರೆ ಈ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ಸಿಗುತ್ತಿರಲಿಲ್ಲ. ಕೊಪ್ಪಳದಲ್ಲಿ ಸೋತಿರುವುದೇ ಒಳ್ಳೆಯದಾಯಿತು. ಸೋಲು ಕೂಡ ಅನುಕೂಲವಾಗುತ್ತದೆ ಎನ್ನುವುದಕ್ಕೆ ಇದಕ್ಕೆ ನಿದರ್ಶನವಾಗಿದೆ. 1991ರಿಂದ ಇವತ್ತಿಗೂ ಕೊಪ್ಪಳ, ಕುಷ್ಟಗಿ ಜನರ ಅಭಿಮಾನದ ಋಣ ನನ್ನ ಮೇಲಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಕುಷ್ಟಗಿ ಕ್ಷೇತ್ರದಿಂದ ಸ್ಪರ್ದಿಸಲಾರೆ. ನಿಮ್ಮೆಲ್ಲರ ಅಭಿಮಾನಕ್ಕೆ ಧನ್ಯವಾದ ಸಲ್ಲಿಸುವ ಮೂಲಕ ಕುಷ್ಟಗಿಯಿಂದ ಸ್ಪರ್ಧಿಸುವ ವಿಚಾರಕ್ಕೆ ಸಿದ್ದರಾಮಯ್ಯ ತೆರೆ ಎಳೆದರು.

Advertisement

ಕಾಂಗ್ರೆಸ್ ಸರ್ಕಾರ ನೀರಾವರಿ ಯೋಜನೆಗಳಿಗೆ ಈಗಲೂ ಬದ್ದವಾಗಿದೆ. ಕೃಷ್ಣ ಮೇಲ್ದಂಡೆ, ಕಾವೇರಿ ಜಲಾನಯನ, ಮಹಾದಾಯಿ ಯೋಜನೆಗೆ 5 ವರ್ಷದಲ್ಲಿ 56 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಬಿಜೆಪಿಯವರು ನುಡಿದಂತೆ 1ಲಕ್ಷ ಕೋಟಿ ರೂ. ಖರ್ಚು ಮಾಡಲು ಸಾದ್ಯವಾಗಲಿಲ್ಲ. ನಾವೂ ಪುನಃ ಅಧಿಕಾರಕ್ಕೆ ಬಂದರೆ 5 ವರ್ಷದಲ್ಲಿ 1.5ಲಕ್ಷ ಕೋಟಿ ರೂ. ಖರ್ಚು ಮಾಡಿ, ಎಲ್ಲಾ ಬಾಕಿ ನೀರಾವರಿ ಯೋಜನೆಗಳನ್ನು ಪೂರ್ತಿಗೋಳಿಸಲಾಗುವುದು ಎಂದರು.

ಕೊಪ್ಪಳ ಏತ ನೀರಾವರಿ ಯೋಜನೆಗೆ ತಡೆಯಾಜ್ಞೆಯಾಗಿದ್ದು, ಕೇಂದ್ರದಲ್ಲಿ ಅವರದೇ ಬಿಜೆಪಿ ಸರ್ಕಾರವಿದ್ದು, ಮಹಾರಾಷ್ಟ್ರ, ಆಂಧ್ರ, ಕರ್ನಾಟಕದವರನ್ನು ಕರೆದು ಮಾತನಾಡಿ ತಡೆಯಾಜ್ಞೆ ತೆರವುಗೊಳಿಸಲು ಸಾಧ್ಯವಿತ್ತು. ಒಮ್ಮೆ ಪ್ರಧಾನಮಂತ್ರಿಗಳನ್ನು ಮಹಾದಾಯಿ ಸಂಬಂಧ ನಿಯೋಗದೊಂದಿಗೆ ಹೋಗಿದ್ದ ಸಂಧರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಗೋವಾದ ಅಲ್ಲಿರುವ ಕಾಂಗ್ರೆಸ್ ನವರನ್ನು ಒಪ್ಪಿಸಿಕೊಂಡು ಬರಲು ಹೇಳಿದ್ದರು ಪ್ರಧಾನಮಂತ್ರಿ ಪ್ರಯತ್ನ ಮಾಡಲಿಲ್ಲ ಎಂದರು.

ಶಾಸಕ ಬಯ್ಯಾಪೂರ ಅವರು 2013ರಲ್ಲಿ ಪಾರಾಭವಗೊಂಡರೂ ಕ್ಷೇತ್ರದ ಜನತೆಯ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. ಅವರು ಆಗ ಸೋತು ಮನೆಯಲ್ಲಿ ಕೂರದೇ ಕ್ಷೇತ್ರದ ಅಭಿವೃಧ್ಧಿ ಪ್ರಾಮಾಣಿಕ ಪ್ರಯತ್ನ ಮಾಡಿದವರಾಗಿದ್ದಾರೆ. ಕುಷ್ಟಗಿ-ಯಲಬುರ್ಗಾ ಕುಡಿಯುವ ನೀರಿನ ಅಭಿವೃಧ್ಧಿ ಕೆಲಸ ಬಯ್ಯಾಪೂರ, ರಾಯರೆಡ್ಡಿ ಅವರಿಂದ ಆಗಿವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್, ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮುಧೋಳ ಮಾಜಿ ಶಾಸಕ ಆರ್.ಬಿ. ತಿಮ್ಮಾಪೂರ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ್ರು, ಕೆಪಿಸಿಸಿ ಉಪಾಧ್ಯಕ್ಷ ಹಸನಸಾಬ್ ದೋಟಿಹಾಳ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿದರು.

ವೇದಿಕೆಯಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕರಾದ ಶಾಸಕ ಬಸವರಾಜ ರಾಯರೆಡ್ಡಿ., ಎನ್.ಎಸ್,ಬೋಸರಾಜು, ಇಕ್ಬಾಲ್ ಅನ್ಸಾರಿ, ಬಸಟೆಪ್ಪ ಹಿಟ್ನಾಳ, ಮಲ್ಲಿಕಾರ್ಜುನ ನಾಗಪ್ಪ, ಚನ್ನಾರಡ್ಡಿ, ಬಸವರಾಜ ಪಾಟೀಲ ಇಟಗಿ, ಜಿ.ಎಸ್. ಪಾಟೀಲ, ನಾಗರಾಜ್, ಹಂಪನಗೌಡ ಬಾದರ್ಲಿ,ಅಲ್ಕೋಡ್ ಹನಮಂತಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next