Advertisement

Wildlife Protection Act:ವನ್ಯಜೀವಿ ಕೂದಲು, ನವಿಲಿನ ಗರಿಯನ್ನೂ ಇಟ್ಟುಕೊಳ್ಳುವಂತಿಲ್ಲ…

11:52 AM Oct 26, 2023 | Team Udayavani |

ಚಾಮರಾಜನಗರ: ಬಿಗ್‌ಬಾಸ್‌ ಮನೆಯಲ್ಲಿದ್ದ ವರ್ತೂರು ಸಂತೋಷ್‌ ಹುಲಿ ಉಗುರುಳ್ಳ ಚಿನ್ನದ ಸರ ಧರಿಸಿದ್ದ ಕಾರಣ ವನ್ಯಜೀವಿ ಕಾಯ್ದೆಯಡಿ ಅವರನ್ನು ಬಂಧಿಸಿದ ಪ್ರಕರಣದ ಬಳಿಕ ಹುಲಿ ಉಗುರು ಸೇರಿ ವನ್ಯಜೀವಿಗಳ ಅಂಗಾಂಗ ಹೊಂದುವುದು ಅಪರಾಧ ಎಂಬುದು ಅನೇಕ ಜನರಿಗೆ ಈಗ ಮನದಟ್ಟಾಗಿದೆ.

Advertisement

1972ರ ವನ್ಯಜೀವಿ ಕಾಯ್ದೆ ಅನ್ವಯ ವನ್ಯಜೀವಿ ಗಳ ಯಾವುದೇ ಅಂಗಾಂಗ, ಚರ್ಮ, ಉಗುರು, ಕೂದಲು ಇತ್ಯಾದಿ ಸಂಗ್ರಹ, ಪ್ರದರ್ಶಿಸುವುದು ಅಪರಾಧ. ನವಿಲುಗಳ ಗರಿಯನ್ನೂ ಇಟ್ಟುಕೊ ಳ್ಳುವುದು ಅಪರಾಧ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.

ನಿಷೇಧ: ದಶಕಗಳ ಹಿಂದೆ ಶ್ರೀಮಂತರ ಮನೆಗಳನ್ನು ಹೊಕ್ಕೊಡನೆ, ಬಾಗಿಲು ತೆರೆದರೆ ಹುಲಿಯ ಚರ್ಮವನ್ನು ಹೊತ್ತ ಮುಖವಾಡಗಳು ಕಾಣಸಿಗುತ್ತಿದ್ದವು. ಹಾಗೆಯೇ ಜಿಂಕೆ ಕೊಂಬುಗಳ ಶೀಲ್ಡ್‌, ಆನೆದಂತದ ಅಲಂಕಾರಿಕ ವಸ್ತುಗಳನ್ನು ಪ್ರದರ್ಶಿಸಲಾಗುತ್ತಿತ್ತು. ವನ್ಯಜೀವಿ ಕಾಯ್ದೆಗಳು ಬಲಿಷ್ಠವಾದಂತೆಲ್ಲ ವನ್ಯಜೀವಿಗಳ ಅಂಗಾಂಗಗಳಿಂದ ತಯಾರಿಸಿದ ವಸ್ತುಗಳ ಪ್ರದರ್ಶನ, ತಯಾರಿಕೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.

“ಉದಯವಾಣಿ’ ಜತೆ ಮಾತನಾಡಿದ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಅರಣ್ಯದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕಿ ದೀಪ್‌ ಜೆ.ಕಂಟ್ರಾಕ್ಟರ್‌, 1972ರ ವನ್ಯಜೀವಿ ಕಾಯ್ದೆ ವನ್ಯಜೀವಿ ವಸ್ತುಗಳ ಸಂಗ್ರಹ, ಪ್ರದರ್ಶನ ನಿಷೇಧಿಸಿತು. ಬಳಿಕ, 2006, 2012 ಹಾಗೂ 2022ರ ವನ್ಯಜೀವಿ ಕಾಯ್ದೆ ಇನ್ನಷ್ಟು ಬಲಿಷ್ಠವಾಗಿವೆ. ಇವುಗಳ ಅನ್ವಯ ವನ್ಯಜೀವಿ ಟ್ರೋಫಿ ಇಟ್ಟುಕೊಳ್ಳುವುದೂ ಅಪರಾಧ ಎಂದರು.

ವನ್ಯಜೀವಿಗಳ, ಚರ್ಮ, ದಂತ, ಉಗುರು ಇತ್ಯಾದಿಗಳಿಗೆ ಹೆಚ್ಚಿನ ಹಣದ ಮೌಲ್ಯ ಇದ್ದ ಕಾರಣ ಅವುಗಳ ಬೇಟೆಯೂ ಹೆಚ್ಚಾಗಿತ್ತು. ಇದನ್ನು ನಿಯಂತ್ರಿಸಲು ಅವುಗಳ ಪ್ರದರ್ಶನವನ್ನೇ ನಿಷೇಧಿಸಲಾಯಿತು. ವನ್ಯಜೀವಿಗಳ ಉಗುರು, ಹಲ್ಲು, ಕೂದಲನ್ನು ಯಾರೇ ಆಗಲಿ ಇಟ್ಟುಕೊಳ್ಳುವಂತಿಲ್ಲ. ನವಿಲು ಗರಿ ಕೂಡ ಇಟ್ಟುಕೊಳ್ಳುವಂತಿಲ್ಲ ಎಂದು ಹೇಳಿದರು.

Advertisement

ನವಿಲು ಸಾಕುವುದೂ ಅಪರಾಧ: ಹಾಗೆಯೇ ವನ್ಯಜೀವಿ ನವಿಲು ಸಾಕುವುದೂ ಅಪರಾಧ. ನವಿಲಿನ ಗರಿಯನ್ನೂ ಇಟ್ಟುಕೊಳ್ಳುವಂತಿಲ್ಲ. ಅರಣ್ಯದಂಚಿನ ಗ್ರಾಮದಲ್ಲಿದ್ದು, ನವಿಲು ಜನರ ಮನೆಯ ಆವರಣಕ್ಕೆ ಸ್ವ ಇಚ್ಛೆಯಿಂದ ಬಂದರೆ ಅಡ್ಡಿಯಿಲ್ಲ. ಆದರೆ, ಅದನ್ನು ಜನ ಸಾಕುವಂತಿಲ್ಲ ಎಂದು ಸಿಎಫ್ ದೀಪ್‌ ಕಂಟ್ರಾಕ್ಟರ್‌ ತಿಳಿಸಿದರು.

1972ರ ಕಾಯ್ದೆ ಬಂದ ಮೇಲೆ ಈಗಾಗಲೇ ವನ್ಯಜೀವಿ ಟ್ರೋಫಿ ಹೊಂದಿದ್ದರೆ ಅವುಗಳನ್ನು ಅರಣ್ಯ ಇಲಾಖೆಯಲ್ಲಿ ರಿಜಿಸ್ಟ್ರಾರ್‌ ಮಾಡಿಸಬೇಕು. ವಿವಿಗಳಲ್ಲಿ, ವನ್ಯಜೀವಿ ಶಿಕ್ಷಣದಲ್ಲಿ ಪ್ರಾಣಿಗಳ ಬಗ್ಗೆ ಅಧ್ಯಯನ ನಡೆಸಲು ಚರ್ಮ, ಉಗುರು ಇತ್ಯಾದಿ ಹೊಂದಿದ್ದರೆ ಅದನ್ನು ಮೊದಲೇ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಕಾನೂನು ಪ್ರಕಾರ ನೋಂದಾಯಿಸಲಾಗಿರುತ್ತದೆ. ಹಾಗಾಗಿ ಅಂಥದ್ದಕ್ಕೆ ವಿನಾಯ್ತಿ ಇದೆ ಎಂದು ಹೇಳಿದರು.

ಚಾಮರಾಜನಗರ ಬಿಳಿಗಿರಿ ರಂಗನಾಥ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹುಲಿ ಉಗುರು ಅಥವಾ ವನ್ಯಜೀವಿಗಳ ಅಂಗಾಂಗ ಸಂಗ್ರಹ ಪ್ರಕರಣ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಅಂಥ ಮಾಹಿತಿ ಇದ್ದರೆ ಇಲಾಖೆಗೆ ತಿಳಿಸಬಹುದು ಎಂದು ದೀಪ್‌ ಹೇಳಿದರು.

1997ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಏನು ಹೇಳುತ್ತದೆ?
ವನ್ಯಜೀವಿಗಳ ಯಾವುದೇ ಅಂಗಾಂಗ, ಚರ್ಮ, ಮೂಳೆ, ಕೊಂಬು, ಕೂದಲು, ಗರಿ ಇತ್ಯಾದಿ ಸಂಗ್ರಹಿಸುವುದು, ಪ್ರದರ್ಶಿಸುವುದು ಅಪರಾಧ. ಕಾಯ್ದೆ ಜಾರಿಯಾಗುವ ಮುನ್ನ ಸಂಗ್ರಹಿಸಿದ್ದರೆ ಅಂಥವನ್ನು ಅರಣ್ಯ ಇಲಾಖೆಗೆ ಒಪ್ಪಿಸಬೇಕು. ವನ್ಯಜೀವಿಗಳ ಅಂಗಾಂಗ ಸಂಗ್ರಹಿಸಿದ್ದು ಸಾಬೀತಾದರೆ ಅಂಥವರಿಗೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 10 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ

ಹುಲಿ ಉಗುರು ಲಾಕೆಟ್‌ನಲ್ಲಿ ಧರಿಸುವುದೇಕೆ?
ಹುಲಿ ಮಹದೇಶ್ವರನ ವಾಹನ, ಅವನ ವಾಹನವಾಗಿರುವ ಹುಲಿ ಉಗುರನ್ನು ಧರಿಸಿದಾಗ ಭಯ ನಿವಾರಣೆಯಾಗುತ್ತದೆ. ಭೂತ ಪ್ರೇತಗಳ ತೊಂದರೆ ದೂರವಾಗುತ್ತದೆ. ಇದು ಧೈರ್ಯದ ಸಂಕೇತ ಎಂಬ ಕಾರಣದಿಂದ ಧರಿಸುತ್ತಿದ್ದರು ಎನ್ನಲಾಗುತ್ತಿದೆ. ಕೆಲವು
ಶ್ರೀಮಂತರು ಅಲಂಕಾರಕ್ಕಾಗಿ, ಶೋಕಿಗಾಗಿ ಧರಿಸುತ್ತಾರೆ. ಹುಲಿ ಉಗುರು ಧರಿಸಿದರೆ ನಿಮಗೆ ಶ್ರೇಯಸ್ಸು ಲಭಿಸುತ್ತದೆ ಎಂದು ಕೆಲವು ಜ್ಯೋತಿಷಿಗಳು ಹೇಳಿರುತ್ತಾರೆ. ಹೀಗಾಗಿ ಧರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಅಲ್ಲದೇ ಆನೆ ಬಾಲದ ಕೂದಲಿನಿಂದ ಉಂಗುರ ಮಾಡಿಸಿಕೊಂಡು ಧರಿಸಿದರೆ ಅದರಿಂದ ಒಳ್ಳೆಯದಾಗುತ್ತದೆ ಎಂಬ ಕಾರಣಕ್ಕೆ, ಅನೇಕರು ವೃತ್ತಾಕಾರದ ಚಿನ್ನದ ರಿಂಗ್‌ಗೆ ಆನೆಬಾಲದ ಕೂದಲು ಹಾಕಿಸಿಕೊಂಡು ಧರಿಸುತ್ತಿದ್ದರು.

●ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next