Advertisement

ರಾಹುಲ್‌ ಹೇಳಿಕೆಗೆ ವನ್ಯಜೀವಿ ಪ್ರೇಮಿಗಳ ಆಕ್ರೋಶ

11:14 PM Apr 20, 2019 | Lakshmi GovindaRaju |

ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕಿರುವ ನಿರ್ಬಂಧವನ್ನು ತೆರವುಗೊಳಿಸುವ ಬಗ್ಗೆ ಪರಿಶೀಲಿಸುವುದಾಗಿ ಕೇರಳದ ವೈನಾಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಚುನಾವಣಾ ಪ್ರಚಾರದ ವೇಳೆ ಹೇಳಿರುವುದು ವನ್ಯಜೀವಿ ತಜ್ಞರು ಹಾಗೂ ಪರಿಸರವಾದಿಗಳಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿದೆ.

Advertisement

ಕೇರಳದ ವೈನಾಡಿನಲ್ಲಿ ಬುಧವಾರ ನಡೆದ ಚುನಾವಣಾ ಪ್ರಚಾರ ಭಾಷಣ ಸಂದರ್ಭದಲ್ಲಿ, ಸ್ಥಳೀಯ ಮುಖಂಡರು ಕರ್ನಾಟಕ ಮತ್ತು ಕೇರಳ ನಡುವೆ ವಾಹನ ಸಂಚಾರಕ್ಕೆ ಕರ್ನಾಟಕದ ಬಂಡೀಪುರದಲ್ಲಿ ರಾತ್ರಿ ವೇಳೆ ನಿರ್ಬಂಧ ಹೇರಲಾಗಿದೆ. ಈ ನಿರ್ಬಂಧ ತೆರವುಗೊಳಿಸಬೇಕೆಂದು ಮನವಿ ಮಾಡಿದ್ದರು.

ಈ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದ ರಾಹುಲ್‌, ಕರ್ನಾಟಕದ ಬಂಡೀಪುರ ಹುಲಿ ರಕ್ಷಿತ ಅರಣ್ಯದಲ್ಲಿ ರಾತ್ರಿ ವೇಳೆ ವಿಧಿಸಲಾಗಿರುವ ಸಂಚಾರ ನಿರ್ಬಂಧದ ಬಗ್ಗೆ ನನಗೆ ತಿಳಿದಿದೆ. ಅಭಿವೃದ್ಧಿ ಹಾಗೂ ಪರಿಸರ ಉಳಿಸಿಕೊಳ್ಳುವಿಕೆ ಬಗ್ಗೆ ಏರ್ಪಟ್ಟಿರುವ ಸಂಘರ್ಷದ ಬಗ್ಗೆ ಅರಿವಿದೆ. ಈ ವಿಷಯದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ನಂಬಿದ್ದೇನೆ ಎಂದಿದ್ದರು.

ವನ್ಯಜೀವಿ ಪ್ರೇಮಿಗಳ ಆಕ್ರೋಶ: ಬಂಡೀಪುರ ಅರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರದಿಂದ ಅಪಘಾತಕ್ಕೀಡಾಗಿ ಅನೇಕ ವನ್ಯಜೀವಿಗಳು ಮೃತಪಟ್ಟಿದ್ದರಿಂದ ರಾತ್ರಿ ವೇಳೆ ಸಂಚಾರವನ್ನು ರಾಜ್ಯ ಸರ್ಕಾರ ನಿರ್ಬಂಧಿಸಿದೆ. ಅದರನ್ವಯ ಈಗ ರಾತ್ರಿ ವೇಳೆ ವಾಹನಗಳು ಸಂಚಾರ ಸ್ಥಗಿತಗೊಂಡಿದೆ.

ಕೇರಳ ಸರ್ಕಾರ ಆಗಾಗ ಈ ವಿಷಯವನ್ನು ಕೆದಕುತ್ತಲೇ ಇದೆ. ಕೇಂದ್ರ ಸರ್ಕಾರದ ಮೇಲೂ ಒತ್ತಡ ತಂದಿದೆ. ಈ ಮಧ್ಯೆ, ಬಂಡೀಪುರ ಅರಣ್ಯದಲ್ಲಿ ಮೇಲ್ಸೇತುವೆ ರಸ್ತೆ ಮಾಡಿ ರಾತ್ರಿ ವೇಳೆ ವಾಹನ ಸಂಚಾರ ಮಾಡಬಹುದೆಂಬ ವಿಷಯವನ್ನೂ ಮುನ್ನೆಲೆಗೆ ತರಲಾಗಿದೆ.

Advertisement

ಇತ್ತೀಚೆಗೆ ಕೇರಳ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅದಕ್ಕಾಗಿ ಅನುದಾನವನ್ನೂ ತೆಗೆದಿಡುವ ಪ್ರಸ್ತಾಪ ಮಾಡಲಾಗಿದೆ. ವನ್ಯಜೀವಿಗಳ ಪ್ರಾಣಹಾನಿ ಮಾಡುವ ಇಂಥ ಪ್ರಸ್ತಾವನೆಗಳ ಬಗ್ಗೆ ಪರಿಸರವಾದಿಗಳಿಗೆ ಮೊದಲೇ ಅಸಮಾಧಾನ, ಆತಂಕ, ಸಿಟ್ಟು ಇದೆ. ಇಂತಿರುವಾಗ ರಾಹುಲ್‌ಗಾಂಧಿ ಈ ರೀತಿಯ ಹೇಳಿಕೆ ನೀಡಿರುವುದು ಇನ್ನಷ್ಟು ಆಕ್ರೋಶ ಮೂಡಿಸಿದೆ.

ಇಂದಿರಾ ಆಡಳಿತ ಸಂದರ್ಭದಲ್ಲಿ!: ವಿಪರ್ಯಾಸವೆಂದರೆ, ಮೈಸೂರು ಮಹಾರಾಜರ ಕಾಲದಲ್ಲಿ 1931ರಲ್ಲಿ ವೇಣುಗೋಪಾಲ ವನ್ಯಧಾಮವಾಗಿದ್ದ ಬಂಡೀಪುರ ಅರಣ್ಯವನ್ನು ಹುಲಿಗಳ ಸಂತತಿ ಹೆಚ್ಚಿಸುವ ಸಲುವಾಗಿ 1974ರಲ್ಲಿ ಹುಲಿಯೋಜನೆ ವ್ಯಾಪ್ತಿಗೊಳಪಡಿಸಲಾಯಿತು. ಆಗ ಪ್ರಧಾನಿಯಾಗಿದ್ದವರು ರಾಹುಲ್‌ ಗಾಂಧಿಯವರ ಅಜ್ಜಿ ಇಂದಿರಾಗಾಂಧಿ!

ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್‌ ಗಾಂಧಿಯವರ ಹೆಸರನ್ನೇ ಇಡಲಾಗಿದೆ. ಹೀಗಿರುವಾಗ ಅರಣ್ಯ ಹಾಗೂ ಅದನ್ನು ಅವಲಂಬಿಸಿರುವ ಜೀವರಾಶಿಗಳ ಮಹತ್ವ ಅರಿಯದೇ ರಾಹುಲ್‌, ಕೇವಲ ತನ್ನ ಕ್ಷೇತ್ರದಲ್ಲಿ ಮತಗಳಿಕೆಯ ಉದ್ದೇಶಕ್ಕಾಗಿ ಈ ರೀತಿಯ ಹೇಳಿಕೆ ನೀಡಿರುವುದು ವನ್ಯಜೀವಿ ತಜ್ಞರನ್ನು ಕೆರಳಿಸಿದೆ.

ರಾಹುಲ್‌ ಗಾಂಧಿ ಯೋಗ್ಯವಲ್ಲದ ಹೇಳಿಕೆ ನೀಡಿದ್ದಾರೆ. ಅಮೇಥಿ ಕ್ಷೇತ್ರದಲ್ಲಿ ಗೆಲುವಿನ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಕೇರಳದ ವೈನಾಡನ್ನು ಆರಿಸಿಕೊಂಡರು. ಈ ಪ್ರದೇಶದವರಲ್ಲದ ಅವರು, ಕೇವಲ ಮತಗಳಿಕೆಯ ಉದ್ದೇಶದಿಂದ ಕೇರಳದಲ್ಲಿ ಬಂಡೀಪುರ ಅರಣ್ಯದ ರಾತ್ರಿ ಸಂಚಾರ ನಿಷೇಧ ಪರಿಶೀಲಿಸುವ ಬಗ್ಗೆ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಪರಿಸರವಾದಿ ಪುಣಜನೂರು ದೊರೆಸ್ವಾಮಿ ಖಂಡಿಸಿದ್ದಾರೆ.

ನಿಷೇಧ ಬಳಿಕ ಪ್ರಾಣಿಗಳು ಸತ್ತಿಲ್ಲ: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಕ್ಕೂ ಹಿಂದಿನ ಕೇವಲ ಐದು ವರ್ಷಗಳಲ್ಲಿ ಒಟ್ಟು 91 ಪ್ರಾಣಿಗಳು ಮೃತಪಟ್ಟಿದ್ದವು. ವಾಹನ ಸಂಚಾರ ನಿಷೇಧದ ಬಳಿಕ 2009ರಿಂದ ರಾತ್ರಿ 9 ರಿಂದ ಬೆಳಗ್ಗೆ 6ರ ಅವಧಿಯಲ್ಲಿ ಅಪಘಾತದಿಂದ ಒಂದು ಪ್ರಾಣಿಯೂ ಸತ್ತಿಲ್ಲ ಎಂದು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಇಲಾಖೆಯ ದಾಖಲೆಗಳು ತಿಳಿಸುತ್ತವೆ.

ರಾತ್ರಿ ಸಂಚಾರ ನಿಷೇಧವೇಕೆ?: ಬಂಡೀಪುರ ಅರಣ್ಯ ಕೇವಲ ಒಂದು ಅರಣ್ಯ ಮಾತ್ರವಾಗಿರದೆ, ಇಲ್ಲಿರುವ ವೈವಿಧ್ಯಮಯ ಪ್ರಾಣಿ, ಪಕ್ಷಿ, ಕೀಟ, ಮರಗಿಡಗಳಿಂದಾಗಿ ರಾಷ್ಟ್ರೀಯ ಉದ್ಯಾನವನ, ಹುಲಿ ಯೋಜನೆ, ಹುಲಿ ಸಂರಕ್ಷಿತ ಅರಣ್ಯ ಪ್ರದೇಶ, ಪರಿಸರ ಸೂಕ್ಷ್ಮ ಜೀವಿ ವಲಯ ಎಲ್ಲವೂ ಆಗಿದೆ. ಬಂಡೀಪುರ ಅರಣ್ಯದ ಮಧ್ಯೆಯೇ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ.

766 ರಾಷ್ಟ್ರೀಯ ಹೆದ್ದಾರಿ (ಹಳೆಯ ಸಂಖ್ಯೆ 212) ಕೇರಳದ ಕಲ್ಲಿಕೋಟೆಗೆ ಸಂಪರ್ಕ ಕಲ್ಪಿಸುತ್ತದೆ. ಇನ್ನೊಂದು ರಾಷ್ಟ್ರೀಯ ಹೆದ್ದಾರಿ 67 ತಮಿಳುನಾಡಿನ ಉದಕಮಂಡಲಕ್ಕೆ ಸಂಪರ್ಕ ಕಲ್ಪಿಸುತ್ತದೆ.
ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರದ ಸಮಯದಲ್ಲಿ ವನ್ಯಜೀವಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿದ್ದವು.

10 ವರ್ಷಗಳ ಹಿಂದೆ ಬಂಡೀಪುರ ಅರಣ್ಯಾಧಿಕಾರಿಗಳು ಹಾಗೂ ವನ್ಯಜೀವಿ ತಜ್ಞರು, ಪರಿಸರವಾದಿಗಳು ಜಿಲ್ಲಾಡಳಿತಕ್ಕೆ ಒಂದು ಸಮೀಕ್ಷಾ ವರದಿ ನೀಡಿದ್ದರು. ಇದರ ಅಧ್ಯಯನ ನಡೆಸಿದ ಅಂದಿನ ಜಿಲ್ಲಾಧಿಕಾರಿ ಮನೋಜ್‌ಕುಮಾರ್‌ ಮೀನಾ ಅವರು 2009ರ ಜೂನ್‌ 3 ರಿಂದ ಬಂಡೀಪುರದಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಿದರು.

ನಿಷೇಧದ ಬೆನ್ನಲ್ಲೇ ಕೇರಳ, ರಾತ್ರಿ ಸಂಚಾರ ನಿಷೇಧದಿಂದ ಕರ್ನಾಟಕದಿಂದ ಕೇರಳಕ್ಕೆ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಗುತ್ತದೆ. ಆದ್ದರಿಂದ ಇದನ್ನು ತೆರವುಗೊಳಿಸಬೇಕೆಂದು ಹೈಕೋರ್ಟ್‌ಗೆ ಮನವಿ ಸಲ್ಲಿಸಿತು. ಜಿಲ್ಲಾಡಳಿತದ ಈ ಆಜ್ಞೆಯನ್ನು ಹೈಕೋರ್ಟ್‌ ಸಹ 2010ರಲ್ಲಿ ಎತ್ತಿ ಹಿಡಿದಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರಿಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

ರಾಹುಲ್‌ ಗಾಂಧಿ ಈ ರೀತಿ ಹೇಳಿಕೆ ನೀಡಿರುವುದು ತಪ್ಪು. ಅವರ ಅಜ್ಜಿ ಇಂದಿರಾಗಾಂಧಿ ವನ್ಯಜೀವಿ ರಕ್ಷಣಾ ಕಾಯ್ದೆ ಜಾರಿಗೆ ತಂದರು. ಅವರ ತಂದೆ ರಾಜೀವ್‌ಗಾಂಧಿ ಪರಿಸರ ರಕ್ಷಣಾ ಕಾಯ್ದೆ ಜಾರಿಗೆ ತಂದವರು. ಆ ಕುಟುಂಬದಿಂದ ಬಂದ ರಾಹುಲ್‌ ಇದನ್ನು ಅರಿತು ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು.
-ಜಿ. ಮಲ್ಲೇಶಪ್ಪ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next