Advertisement

ಶಿವಸೇನೆಯ ವಿಚಾರದಲ್ಲಿ ಏಕಿಷ್ಟು “ಸೆಕ್ಯುಲರ್‌ ಸೈಲೆನ್ಸ್‌’?

09:52 PM Nov 29, 2019 | mahesh |

ಕೇವಲ ನಾಲ್ಕು ವರ್ಷಗಳ ಹಿಂದೆ, ಇದೇ ಶಿವಸೇನೆಯೇ ಅಲ್ಲವೇ “ಮುಸಲ್ಮಾನರ ಮತದಾನದ ಹಕ್ಕನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದ್ದು? ಈ ಮಾತನ್ನಾಡಿದವರು ಮತ್ಯಾರೂ ಅಲ್ಲ, ಈಗ ಎಡಪಂಥೀಯರಿಂದ “ಕಿಂಗ್‌ಮೇಕರ್‌” ಎಂದು ಹೊಗಳಿಸಿಕೊಳ್ಳುತ್ತಿರುವ ಶಿವಸೇನೆಯ ಇದೇ ಸಂಜಯ್‌ ರಾವತ್‌! ಆದರೂ ಏನಂತೆ, ಸಂಜಯ್‌ ರಾವತ್‌ ಬಿಜೆಪಿಯನ್ನು ಅತ್ಯಂತ ಉಗ್ರವಾಗಿ ವಿರೋಧಿಸುತ್ತಾರಲ್ಲವೇ? ಹೀಗಾಗಿ ಅವರ “ಕೋಮುವಾದಿ ಪಾಪಗಳೆಲ್ಲ’ ತೊಳೆದುಹೋದವು!

Advertisement

“”ಯುದ್ಧವೆನ್ನುವುದೇ ಶಾಂತಿ. ಸ್ವಾತಂತ್ರ್ಯವೆನ್ನುವುದು ಗುಲಾಮಗಿರಿ. ನಿರ್ಲಕ್ಷ್ಯವೇ ಶಕ್ತಿ!”
ಆಂಗ್ಲ ಲೇಖಕ ಜಾರ್ಜ್‌ ಆರ್ವೆಲ್‌ ಬರೆದ ಲೋಕವಿಖ್ಯಾತ ಕಾದಂಬರಿ “1984’ರಲ್ಲಿ ಬರುವ ಸಾಲುಗಳಿವು. ಇವು ನಿರಂಕುಶ ಪ್ರಭುತ್ವವನ್ನು ನಡೆಸುತ್ತಿರುವ ಪಕ್ಷವೊಂದರ ಪ್ರಮುಖ ಘೋಷಣೆಯಾಗಿರುತ್ತದೆ.
ಆರ್ವೆಲ್‌ರ ಧಾಟಿಯಲ್ಲೇ ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳನ್ನು ಒಂದೇ ಒಂದು ಘೋಷವಾಕ್ಯದಲ್ಲಿ ಬಣ್ಣಿಸಬೇಕು ಎಂದರೆ, ಹೀಗೆ ಬಣ್ಣಿಸಬಹುದೇನೋ: ಈಗ “”ಕೋಮುವಾದವೇ
ಜಾತ್ಯತೀತತೆ”!

ಭಾರತೀಯ ಜನತಾಪಾರ್ಟಿಯನ್ನು ಏನಕೇನ ಅಧಿಕಾರದಿಂದ ದೂರವಿಡಬೇಕು ಎಂಬ ಕಾರಣಕ್ಕಾಗಿ ಪ್ರಬಲ ಬಲಪಂಥೀಯ ಪಕ್ಷವಾದ ಶಿವಸೇನೆಯು, ಪ್ರಬಲ ಜಾತಿವಾದಿ ಪಕ್ಷವಾದ ಎನ್‌ಸಿಪಿ ಮತ್ತು ಪ್ರಬಲ ಎಡಪಂಥೀಯ ಪಕ್ಷವಾದ ಕಾಂಗ್ರೆಸ್‌ ಜತೆ ಮಾಡಿಕೊಂಡಿರುವ ಈ ಅವಕಾಶವಾದಿ ಮೈತ್ರಿಯನ್ನು ನೋಡಿದಾಗ, “ಜಾತ್ಯತೀತತೆ’ ಎಂಬ ಪದಕ್ಕೆ ತಿಲಾಂಜಲಿ ಇಡಲು ಇದು ಸುಸಮಯ ಎಂದೆನಿಸುತ್ತದೆ. ಎಲ್ಲಾ ರೀತಿಯಿಂದಲೂ ಈ ಪದವು ಎಂದೋ ತನ್ನ ಅರ್ಥವನ್ನುಕಳೆದುಕೊಂಡು ನಿರ್ಜೀವವಾಗಿದೆ.

ಇನ್ನು ಮುಂದೆ ಯಾರಾದರೂ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ ಮತ್ತು ಅದರ ಸಮಾನ ಮನಸ್ಕ ಪಕ್ಷಗಳೇನಾದರೂ “ಸೆಕ್ಯುಲರ್‌-ಕಮ್ಯುನಲ್‌’ ಎನ್ನುವ ಪದ ಬಳಸಿ, ತಮ್ಮನ್ನು ತಾವು ಎದುರಿನವರಿಗಿಂತ ಭಿನ್ನವೆಂದು ಬಿಂಬಿಸಿಕೊಳ್ಳಲು ಬಯಸಿದರೆ, ಅವುಗಳಂಥ ವಂಚಕರು ಮತ್ಯಾರೂ ಇಲ್ಲ ಎನ್ನುವುದರಲ್ಲಿ ಸಂಶಯವೇ ಬೇಡ. ಇಂದು ಸೆಕ್ಯುಲರಿಸಂ ಎನ್ನುವ ಪದಕ್ಕೆ ಅರ್ಥವೇ ಉಳಿದಿಲ್ಲ. ಅದೀಗ “ಎಡಪಂಥೀಯರಿಗೆ ಅಪೇಕ್ಷಣೀಯವಲ್ಲದ್ದು’ ಎಂಬುದಕ್ಕೆ ಉದಾಹರಣೆಯಾಗಿ ಉಳಿದಿದೆಯಷ್ಟೆ.

ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್‌ ನಾಥೂರಾಮ್‌ ಗೋಡ್ಸೆಯನ್ನು “ರಾಷ್ಟ್ರವಾದಿ’ ಎಂದು ಕರೆದಿದ್ದಾರೆೆ. ಈ ಕಾರಣಕ್ಕಾಗಿ ಆಕ್ರೋಶಗೊಂಡ ರಾಹುಲ್‌ ಗಾಂಧಿಯವರು “”ಉಗ್ರವಾದಿ ಪ್ರಜ್ಞಾ ಠಾಕೂರ್‌, ಉಗ್ರವಾದಿ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಾರೆ. ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಇದೊಂದು ದುಃಖದ ದಿನ” ಎಂದಿದ್ದಾರೆ. ಆದರೆ ಅತ್ತ ಶಿವಸೇನೆ ಗೋಡ್ಸೆಯನ್ನು ಹೊಗಳುತ್ತಲೇ ಬಂದಿರುವ ಪಕ್ಷ. ಇದೇ ಶಿವಸೇನೆಯು ತನ್ನ ಮುಖವಾಣಿ ಸಾಮ್ನಾದಲ್ಲಿ “”ನಾಥೂರಾಮ್‌ ಗೋಡ್ಸೆ ಇಟಲಿಯಿಂದ ಬಂದವರಲ್ಲ, ಅವರೊಬ್ಬ ಅಪ್ರತಿಮ ದೇಶಭಕ್ತರಾಗಿದ್ದರು” ಎಂದು ಹೇಳುವ ಮೂಲಕ ಗೋಡ್ಸೆಗೆ “ದೇಶಭಕ್ತ’ ಪಟ್ಟ ಕೊಟ್ಟಿತ್ತು! ಅಫ್ಕೋರ್ಸ್‌ ಶಿವಸೇನೆಯನ್ನು ಪ್ರಶ್ನಿಸಲು “ಜಾತ್ಯತೀತತೆ’ ಅಲಿಯಾಸ್‌
“ಅವಕಾಶವಾದಿತನ’ದಲ್ಲಿ ಅವಕಾಶವಿಲ್ಲ!

Advertisement

ಕೇವಲ ಏಳು ವರ್ಷಗಳ ಹಿಂದೆಯಷ್ಟೇ ಶಿವಸೇನೆಯ ಮುಖ್ಯಸ್ಥ ಬಾಳಾ ಸಾಹೇಬ್‌ ಠಾಕ್ರೆಯವರು, ಸೋನಿಯಾರ ದೇಶ ನಿಷ್ಠೆಯನ್ನು ಪ್ರಶ್ನಿಸಿದ್ದರು. “”ಸೋನಿಯಾ ವಿದೇಶಿ ಮಹಿಳೆ. ಭಾರತದ ಬಗ್ಗೆ ಅವರಿಗೆಂಥ ಪ್ರೀತಿಯಿರಬಲ್ಲದು?” ಎಂದು 2012ರಲ್ಲಿ  ಪ್ರಶ್ನಿಸಿದ್ದರು ಬಾಳಾ ಠಾಕ್ರೆ. ರಾಹುಲ್‌ ಗಾಂಧಿಯವರಿಗೆ ಮೇಲಿನ ಮಾತುಗಳಿಗಿಂತಲೂ “ಜಾತ್ಯತೀತತೆಯ’ ಮೈತ್ರಿ ಧರ್ಮವೇ ಮುಖ್ಯವೆಂದು ಕಾಣಿಸುತ್ತದೆ. ಇದೇ ವೇಳೆಯಲ್ಲೇ ಮುಖ್ಯವಾಹಿನಿ ಮಾಧ್ಯಮಗಳೂ ಗೋಡ್ಸೆ ವಿಚಾರದಲ್ಲಿ ಶಿವಸೇನೆಯ ನಿಲುವನ್ನು ಪ್ರಶ್ನಿಸುತ್ತಿಲ್ಲ ಎನ್ನುವುದನ್ನೂ ಗಮನಿಸಿ! ಮಾಧ್ಯಮಗಳು ಶಿವಸೇನೆಯ ವಿಷಯದಲ್ಲಿ ಸೆಕ್ಯುಲರ್‌ ಸೈಲೆನ್ಸ್‌(ಜಾತ್ಯತೀತ ಮೌನ)ವನ್ನು ತಾಳಿವೆ!

ಕೇವಲ ನಾಲ್ಕು ವರ್ಷಗಳ ಹಿಂದೆ, ಇದೇ ಶಿವಸೇನೆಯೇ ಅಲ್ಲವೇ “ಮುಸಲ್ಮಾನರ ಮತದಾನದ ಹಕ್ಕನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದ್ದು? ಈ ಮಾತನ್ನಾಡಿದವರು ಮತ್ಯಾರೂ ಅಲ್ಲ, ಈಗ ಎಡಪಂಥೀಯರಿಂದ “”ಕಿಂಗ್‌ಮೇಕರ್‌” ಎಂದು ಹೊಗಳಿಸಿಕೊಳ್ಳುತ್ತಿರುವ ಇದೇ ಸಂಜಯ್‌ ರಾವತ್‌! ಕಳೆದ ವರ್ಷವಷ್ಟೇ ಇದೇ ವ್ಯಕ್ತಿ, ತಮ್ಮ ಪಕ್ಷದವರು ಬಾಬ್ರಿ ಮಸೀದಿಯನ್ನು ಕೇವಲ 17 ನಿಮಿಷದಲ್ಲಿ ಧ್ವಂಸ ಮಾಡಿದ್ದರು ಎಂದಿದ್ದರು. ಆದರೂ ಏನಂತೆ, ಸಂಜಯ್‌ ರಾವತ್‌ ಬಿಜೆಪಿಯನ್ನು ಅತ್ಯಂತ ಉಗ್ರವಾಗಿ ವಿರೋಧಿಸುತ್ತಾರಲ್ಲವೇ? ಹೀಗಾಗಿ ಅವರ “ಕೋಮುವಾದಿ ಪಾಪಗಳೆಲ್ಲ’ ತೊಳೆದುಹೋದವು!

ಇದೇ ವರ್ಷದ ಆರಂಭದಲ್ಲಿ, ಅಂದರೆ ಲೋಕಸಭಾ ಚುನಾವಣೆಗೂ ಮುನ್ನ ಶಿವಸೇನೆಯು, “”ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಶ್ರೀಲಂಕಾದಲ್ಲಿನಂತೆ ಭಾರತದಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧ ಜಾರಿ ಮಾಡಬೇಕು” ಎಂದು ಮೋದಿ ಸರ್ಕಾರಕ್ಕೆ ಆಗ್ರಹಿಸಿತ್ತು. ಆಗ ಬಿಜೆಪಿಯು ಶಿವಸೇನೆಯ ಈ
ಬೇಡಿಕೆಯನ್ನು ವಿರೋಧಿಸಿತು. ಈಗ ಹೇಗಿದ್ದರು ಶಿವಸೇನೆ

ಅಘಾಡಿಯ ಭಾಗವಾಗಿದೆಯಲ್ಲವೇ? ಇನ್ಮುಂದೆ ಯಾರೂ ಅದನ್ನು ಪ್ರಶ್ನಿಸುವುದಿಲ್ಲ ಬಿಡಿ. ಅಷ್ಟೊಂದು ಪ್ರಬಲ ಹಿಂದುತ್ವವಾದಿಯಲ್ಲದ ಬಿಜೆಪಿಯನ್ನು ಕೋಮುವಾದಿ ಎಂದೇ ಕರೆಯಲಾಗುತ್ತದೆ, ಆದರೆ ತೀವ್ರ ಬಲಪಂಥೀಯ ಪಕ್ಷವಾದ ಶಿವಸೇನೆ ಈಗ ಸರಿಹೋಗಿದೆಯಂತೆ. ಏಕೆಂದರೆ, ಅದು ಬಿಜೆಪಿಗೆ ಮೋಸ ಮಾಡಿದೆಯಲ್ಲವೇ! 1993ರ ಮುಂಬೈ ದಾಳಿಯ ನಂತರ ನಡೆದ ಕೋಮುದಂಗೆಗಳಲ್ಲಿ 900ಕ್ಕೂ ಹೆಚ್ಚು ಜನರು ಸಾವಿಗೀಡಾದರು. ಆದರೆ ಕಾಂಗ್ರೆಸ್‌ ಪಾಲಿಗೆ ನರೇಂದ್ರ ಮೋದಿ ಯಾವಾಗಲೂ “ಸಾವಿನ ವ್ಯಾಪಾರಿ’ ಆಗಿ ಇರುತ್ತಾರೆ, ಶಿವಸೇನೆ ಮಾತ್ರ ಪ್ರಜಾಪ್ರಭುತ್ವದ ದೀವಟಿಗೆ ಹೊತ್ತು ಅಡ್ಡಾಡುವ ಪಕ್ಷವಾಗುತ್ತದೆ.

ಕಳೆದ ಮೂರು ದಶಕಗಳಲ್ಲಿನ ಶಿವಸೇನೆಯ ಕೋಮುವಾದದ ಬಗ್ಗೆ ಹೀಗೆ ಪುಟಗಟ್ಟಲೇ ಬರೆಯುತ್ತಲೇ ಸಾಗಬಹುದು. ಬಿಜೆಪಿಗಿಂತಲೂ ಎಷ್ಟೋ ಪ್ರಬಲ ಬಲಪಂಥೀಯ ಪಕ್ಷವಾಗಿಯೇ ಉಳಿದಿದೆ ಶಿವಸೇನೆ. ಆದರೆ ಅದ್ಯಾವುದೂ ಈಗ ಲೆಕ್ಕಕ್ಕೆ ಬರುವುದಿಲ್ಲ ಬಿಡಿ. ಕಾಂಗ್ರೆಸ್‌ನವರು ಏನು ಹೇಳುತ್ತಾರೋ ಅದೇ ಜಾತ್ಯತೀತತೆ. ಆದರೆ ನಾವು ಇನ್ನೆಷ್ಟು ದಿನ ಈ ರಾಜಕೀಯದಾಟದಲ್ಲಿ ಭಾಗಿಯಾಗಬೇಕು, ಜಾತ್ಯತೀತತೆ ಎಂಬ ಅರ್ಥ ಕಳೆದುಕೊಂಡ ಪದವನ್ನು ಇತಿಹಾಸದ ಪುಟ ಸೇರಿಸುವುದೇ ಸರಿಯೇನೋ.
(ಲೇಖನ ಮೂಲ- ಸ್ವರಾಜ್ಯ.ಕಾಂ)

– ಅರಿಹಂತ ಪವಾರಿಯ

Advertisement

Udayavani is now on Telegram. Click here to join our channel and stay updated with the latest news.

Next