ಮುಂಬೈ: ಎರಡುವರೆ ತಿಂಗಳ ಐಪಿಎಲ್ ಕೂಟದ ಬಳಿಕ ಟೀಂ ಇಂಡಿಯಾ ಮತ್ತೊಂದು ಸುದೀರ್ಘ ಪ್ರವಾಸ ಮಾಡಲಿದೆ. ನಾಲ್ಕು ಟೆಸ್ಟ್ ಪಂದ್ಯಗಳು, ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳಿಗೆ ಭಾರತ ತಂಡ ಆಸ್ಟ್ರೇಲಿಯಾಗೆ ಹಾರಲಿದೆ. ಕಾಂಗರೂ ಪ್ರವಾಸಕ್ಕಾಗಿ ಟೀಂ ಇಂಡಿಯಾ ಆಯ್ಕೆ ನಡೆದಿದ್ದು, ರೋಹಿತ್ ಶರ್ಮಾರನ್ನು ಕೈ ಬಿಡಲಾಗಿದೆ.
ಕಳೆದ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ರೋಹಿತ್ ಶರ್ಮಾ ನಂತರದ ಎರಡು ಪಂದ್ಯಗಳನ್ನು ಆಡಿರಲಿಲ್ಲ. ಕೈರನ್ ಪೊಲಾರ್ಡ್ ನಾಯಕತ್ವ ನಿಭಾಯಿಸಿದ್ದರು. ಆದರೆ ರೋಹಿತ್ ನಂತರ ಅಭ್ಯಾಸ ನಡೆಸುವ ವಿಡಿಯೋವೊಂದನ್ನು ಮುಂಬೈ ಇಂಡಿಯನ್ಸ್ ಪೋಸ್ಟ್ ಮಾಡಿತ್ತು. ರೋಹಿತ್ ಗುಣಮುಖರಾದರು, ಮುಂದಿನ ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ಖುಷಿಯಾಗಿದ್ದ ಅಭಿಮಾನಿಗಳಿಗೆ ಆಯ್ಕೆ ಸಮಿತಿ ಶಾಕ್ ನೀಡಿದೆ.
ಆಸೀಸ್ ಸರಣಿಯಲ್ಲಿ ಮೂರು ಮಾದರಿಯ ಕ್ರಿಕೆಟಿಗೂ ರೋಹಿತ್ ರನ್ನು ಕೈಬಿಡಲಾಗಿದೆ. ನಿಗದಿತ ಓವರ್ ಮಾದರಿ ಕ್ರಿಕೆಟಿಗೆ ಕೆ ಎಲ್ ರಾಹುಲ್ ರನ್ನು ಆಯ್ಕೆ ಮಾಡಲಾಗಿದೆ. ಸರಣಿಗೆ ಇನ್ನೂ ಒಂದೂವರೆ ತಿಂಗಳು ಬಾಕಿ ಇರುವಾಗ ಗಾಯದ ನೆಪ ಹೇಳಿ ರೋಹಿತ್ ರನ್ನು ಹೊರಗಿರಿಸಿದ್ದು ಹಲವರ ಕಣ್ಣು ಕೆಂಪಗಾಗಿಸಿದೆ.
ಇದನ್ನೂ ಓದಿ:“ಮತ್ತೆ ಕಡೆಗಣನೆ..” ಭಾರತೀಯ ತಂಡ ಸೇರಲು ಈತ ಇನ್ನೆಷ್ಟು ಉತ್ತಮ ಪ್ರದರ್ಶನ ತೋರಬೇಕು?
Related Articles
ಭಾರತದ ಮಾಜಿ ನಾಯಕ ಸುನೀಲ್ ಗಾವಸ್ಕರ್ ಈ ಬಗ್ಗೆ ಮಾತನಾಡಿದ್ದು, ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರವಾಗಿ ಅಭ್ಯಾಸ ಮಾಡುತ್ತಿದ್ದರೆ, ಅದು ಯಾವ ರೀತಿಯ ಗಾಯ ಎಂದು ನನಗೆ ತಿಳಿದಿಲ್ಲ. ಸರಣಿಗೆ ಇನ್ನೂ ಒಂದೂವರೆ ತಿಂಗಳಿದೆ. ರೋಹಿತ್ ಆಯ್ಕೆ ಆಗದೆ ಇರುವ ನಿಜವಾದ ಕಾರಣವನ್ನು ಹೇಳಿದರೆ ಉತ್ತಮ ಎಂದಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಓಪನರ್ ಮಾಯಾಂಕ್ ಅಗರ್ವಾಲ್ ಅವರನ್ನು ಉಲ್ಲೇಖಿಸಿ ಮಾತನಾಡಿದ ಗಾವಸ್ಕರ್, ಮಯಾಂಕ್ ಗಾಯಗೊಂಡು ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಆದರೆ ಆಸೀಸ್ ಸರಣಿಯ ಎಲ್ಲಾ ಮೂರು ಮಾದರಿಯ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂದರು.
ಇದರ ಕಾರಣವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಿಳಿದುಕೊಳ್ಳಲು ಅರ್ಹರಾಗಿದ್ದಾರೆ. ಫ್ರಾಂಚೈಸಿಗಳು ವಿರೋಧಿಗಳಿಗೆ ಯಾವುದೇ ಮಾನಸಿಕ ಪ್ರಯೋಜನವನ್ನು ನೀಡಲು ಬಯಸುವುದಿಲ್ಲ. ಆದರೆ ನಾವು ಇಲ್ಲಿ ಭಾರತೀಯ ತಂಡದ ಬಗ್ಗೆ ಮಾತನಾಡುತ್ತಿದ್ದೇವೆ. ಉದಾಹರಣೆಗೆ ಮಾಯಾಂಕ್ ಅಗರ್ವಾಲ್ ಕೂಡ. ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅವರ ಇಬ್ಬರು ಪ್ರಮುಖ ಆಟಗಾರರಿಗೆ ಏನಾಗುತ್ತದೆ ಎಂದು ಅವರು ತಿಳಿದುಕೊಳ್ಳುವ ಅಧಿಕಾರವಿದೆ ಎಂದು ಗವಾಸ್ಕರ್ ಹೇಳಿದರು.