Advertisement

ರಾಮ ಮಂದಿರ ಏಕೆ ಕಟ್ಟುತ್ತಿಲ್ಲ ?

12:30 AM Feb 26, 2019 | Team Udayavani |

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಕಾಂಗ್ರೆಸ್‌-ಜೆಡಿಎಸ್‌ ಜೊತೆಗೆ ಮೈತ್ರಿ ಮಾತುಕತೆ ಆರಂಭಿವಾಗಿದೆ. ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ ತನ್ನದೇ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದೆ. ಮೈತ್ರಿ ಪಕ್ಷಗಳ ಹೊಂದಾಣಿಕೆ ಹಾಗೂ ಮೋದಿ ಆಡಳಿತ ವಿರುದ್ಧ ಕಾಂಗ್ರೆಸ್‌ನ ಕಾರ್ಯತಂತ್ರ  ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಉದಯವಾಣಿಯೊಂದಿಗೆ ಮಾತನಾಡಿದ್ದಾರೆ.

Advertisement

ಮೋದಿ ಅಲೆಯಿಂದ ಬಿಜೆಪಿಗೆ ಲಾಭವಾಗುತ್ತದೆ ಎಂಬ ಮಾತಿದೆಯಲ್ಲ ?
                ಮೋದಿಯವರು ಈಗ ಅಚ್ಛೇದಿನ್‌ ಬಗ್ಗೆ ಮಾತನಾಡುತ್ತಿಲ್ಲ. ಯುವಕರಿಗೆ ಉದ್ಯೋಗ, ಆರ್ಥಿಕ ಭದ್ರತೆ, ಜನರ ಸುಕರÒತೆ, ಭ್ರಷ್ಟಾಚಾರ ನಿಯಂತ್ರಣ, ಲೋಕಪಾಲ್‌ ಮಸೂದೆ ಜಾರಿ ಮಾಡದಿರುವ ಬಗ್ಗೆ ಹೇಳಬೇಕು. ಬಿಜೆಪಿಯವರು ರಾಮಂದಿರ ಏಕೆ ಕಟ್ಟಿಲ್ಲ ಎನ್ನುವುದನ್ನು ಮೊದಲು ಹೇಳಬೇಕು. ವಾಜಪೇಯಿ ಅವಧಿಯಲ್ಲಿಯೂ ಅದೇ ಮಾತು ಹೇಳಿದ್ದೀರಿ, ಈಗ ಐದು ವರ್ಷ ಬಿಜೆಪಿಯ ಬಹುಮತದ ಸರ್ಕಾರ ಇತ್ತು. ಆದರೂ ರಾಮ ಮಂದಿರ ಏಕೆ ಕಟ್ಟಿಲ್ಲ. ಈಗ ಆರ್‌ಎಸ್‌ಎಸ್‌ನವರು ಮತ್ತೆ ಅಧಿಕಾರ ಕೊಟ್ಟರೆ ರಾಮ ಮಂದಿರ ಕಟ್ಟುತ್ತೇವೆ ಎನ್ನುತ್ತಾರೆ. ಎಷ್ಟು ದಿನ ಅಂತ ನಿಮ್ಮ ಸುಳ್ಳುಗಳನ್ನು ನಂಬುವುದು. ಪ್ರಧಾನಿ ಚೌಕಿದಾರ ಎಂದು ಹೇಳುತ್ತಾರೆ. ಅವರ ಸ್ನೇಹಿತರೇ ಲೂಟಿ ಮಾಡಿ ಓಡಿ ಹೋಗಿದ್ದಾರೆ.

ಪುಲ್ವಾಮಾ ದಾಳಿ ಬಿಜೆಪಿಗೆ ಲಾಭವಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ ?
              ಪುಲ್ವಾಮಾ ಪ್ರಕರಣ ಮೋದಿ ಸರ್ಕಾರದ ದೊಡ್ಡ ವೈಫ‌ಲ್ಯ. ಕಾಶ್ಮೀರದಲ್ಲಿ ಇವರ ಕಾಲದಲ್ಲಿಯೇ ಹೆಚ್ಚು ಸೈನಿಕರ ಹತ್ಯೆಯಾಗಿದೆ. ಪಠಾಣಕೋಟ್‌, ಗುರುದಾಸ್‌ಪುರ, ಉರಿಯಲ್ಲಿ ಸೈನಿಕರ ಮೇಲೆ ದಾಳಿಯಾಯಿತು.  ಮನಮೋಹನ್‌ ಸಿಂಗ್‌ 10 ವರ್ಷ ಪಾಕಿಸ್ತಾನದ ಕಡೆ ಮುಖ  ಮಾಡಿರಲಿಲ್ಲ. ಮೋದಿ ಪಾಕಿಸ್ತಾನಕ್ಕೆ ಹೋಗಿದ್ದಾರೆ. ಸೌದಿ ದೊರೆ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡಿ, ಭಾರತಕ್ಕೆ ಬಂದರೆ, ಓಡಿ ಹೋಗಿ ಅವರನ್ನು ತಬ್ಬಿಕೊಳ್ಳುತ್ತಾರೆ.

ಬಿಜೆಪಿ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆಯಾ ?
               ಇಂತ ವಿಷಯಗಳನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಈ ಬಗ್ಗೆ ಪ್ರಶ್ನಿಸಿದರೆ, ನಾವು ದೇಶವನ್ನು ಟೀಕಿಸುತ್ತಿದ್ದೇವೆ ಎನ್ನುವಂತೆ ಬಿಂಬಿಸುತ್ತಾರೆ. ಪಾಕಿಸ್ತಾನಕ್ಕೆ ಬೆಂಬಲಿಸುತ್ತಿದ್ದೇವೆ ಎನ್ನುವಂತೆ ಬಿಂಬಿಸುತ್ತಾರೆ. ಈ ರೀತಿಯ ಸ್ವಾರ್ಥಕ್ಕೆ ಉಪಯೋಗಿಸುವುದು ಒಳ್ಳೆಯದಲ್ಲ.

ಜೆಡಿಎಸ್‌ನವರು ಬಿಜೆಪಿಯವರ ಜೊತೆ ಹೊಂದಾಣಿಕೆಗೂ ಮುಕ್ತ ಅವಕಾಶ ಇಟ್ಟುಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ ?
            ಜೆಡಿಎಸ್‌ನವರು ಬಿಜೆಪಿ ಜೊತೆಗೆ ಹೋಗುತ್ತಾರೆ ಎನ್ನುವ ವದಂತಿ ಹಬ್ಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ದೇವೇಗೌಡರು ಮೋದಿ ಸರ್ಕಾರದ ವಿರುದ್ಧ ಸ್ಪಷ್ಟ ನಿಲುವು ಹೊಂದಿದ್ದಾರೆ. ಮೋದಿ ನಾಯಕತ್ವದಿಂದ ದೇಶಕ್ಕೆ ದೊಡ್ಡ ಗಂಡಾತರ ಇದೆ ಎನ್ನುವ ಅಭಿಪ್ರಾಯ ದೇವೇಗೌಡರಿಗಿದೆ. ಇದು ಕೇವಲ ಬಿಜೆಪಿಯ ಸೃಷ್ಟಿಸುವ  ವದಂತಿ. ಗೆಲ್ಲುವುದೊಂದೇ ನಮ್ಮ ಉದ್ದೇಶ.  ಕನಿಷ್ಟ 25 ಸ್ಥಾನ ಗೆಲ್ಲುವ ಗುರಿ ಹೊಂದಿದಾಗ ಸೋಲುವ ಅಭ್ಯರ್ಥಿ ಇದ್ದರೆ, ಅವರನ್ನು ಗೆಲ್ಲಿಸಲು ಪ್ರಯತ್ನ ಪಡಬೇಕಾ ಅಥವಾ ಬದಲಾಯಿಸಬೇಕಾ ಎನ್ನುವ ಬಗ್ಗೆ ತೀರ್ಮಾನ ಮಾಡುತ್ತೇವೆ.

Advertisement

ಸೀಟು ಹಂಚಿಕೆ ಚರ್ಚೆಯೆ ಬಗೆ ಹರಿಯುತ್ತಿಲ್ಲ. ನೀವು ಹೆಚ್ಚು ಸೀಟು ಹೇಗೆ ಗೆಲ್ಲುತ್ತೀರಿ ?
         ನಾವು ಸೀಟು ಹಂಚಿಕೆಯ ಕುರಿತು ಮುಕ್ತವಾಗಿ ಚರ್ಚೆ ನಡೆದಿದೆ. ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವ ಆಧಾರದ ಮೇಲೆ ಸೀಟು ಹಂಚಿಕೆಯಾಗಬೇಕು ಎನ್ನುವುದು ಎರಡೂ ಪಕ್ಷಗಳ ಅಭಿಪ್ರಾಯ. ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ, ಹೈಕಮಾಂಡ್‌ ಮಟ್ಟದಲ್ಲಿ ಮಾರ್ಚ್‌ ಮೊದಲ ವಾರದಲ್ಲಿ ಅಂತಿಮ ಪಟ್ಟಿ ಸಿದ್ದಪಡಿಸುತ್ತೇವೆ. ಇದರಲ್ಲಿ ಏನೂ ಗೊಂದಲ ಇಲ್ಲ.

ಜೆಡಿಎಸ್‌ನವರು ನಿಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಇದೆಯಲ್ಲ?
         ಎಚ್‌.ಡಿ. ರೇವಣ್ಣ ಹಾಗೂ ವಿಶ್ವನಾಥ್‌ ಅವರು ಪ್ರತಿಷ್ಟೆ ಬಿಟ್ಟು ಸೀಟು ಹಂಚಿಕೆ ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ. ಸದ್ಯದ ವಾತಾವರಣ ನೋಡಿ ಸೀಟು ಹಂಚಿಕೆ ಮಾಡಿಕೊಳ್ಳಲು ಸಿದ್ಧರಿದ್ದಾರೆ. ಸಾಮಾಜಿಕ ನ್ಯಾಯ, ಜಾತ್ಯತೀತ ಶಕ್ತಿಗಳು ಉಳಿಯಬೇಕು ಎನ್ನುವ ಕಾರಣಕ್ಕೆ ನಾವು ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಬಿಜೆಪಿಯ ಸರ್ವಾಧಿಕಾರಿ ಧೋರಣೆ ವಿರುದ್ಧ ನಮ್ಮ ಹೋರಾಟ.

ಜೆಡಿಎಸ್‌ ನಿಮ್ಮನ್ನ ಥರ್ಡ್‌ಗ್ರೇಡ್‌ ಆಗಿ ನೋಡುತ್ತಿದೆ ಎನ್ನುವ ಭಾವನೆ ಮೂಡುತ್ತಿದೆಯಾ?
         ಸಮ್ಮಿಶ್ರ ಸರ್ಕಾರ ಅಂದ ಮೇಲೆ ಸಣ್ಣ ಪುಟ್ಟ ಸಮಸ್ಯೆಗಳು ಇರುತ್ತವೆ. ಬಹುಮತ ಇರುವ ಸರ್ಕಾರ ಇದ್ದಾಗಲೇ ಸಮಸ್ಯೆಗಳಿರುತ್ತವೆ. ಆ ರೀತಿಯ ಭಾವನೆ  ಕಾಂಗ್ರೆಸ್‌ಗಿಲ್ಲ.

ಕುಮಾರಸ್ವಾಮಿ ಹೇಳಿಕೆಗಳು ನಿಮಗೆ ಡ್ಯಾಮೇಜ್‌ ಮಾಡುತ್ತಿದೆಯೇ?
          ಬೆಗ್ಗರ್ಸ್‌ ಅನ್ನುವ ಹೇಳಿಕೆ ಅನವಶ್ಯವಾಗಿತ್ತು. ಈ ರೀತಿಯ ಹೇಳಿಕೆಗಳನ್ನು ಕೊಡುವಾಗ ಅಧಿಕಾರದಲ್ಲಿರುವವರು ಯೋಚನೆ ಮಾಡಬೇಕು. ನಮ್ಮ ಪಕ್ಷದಲ್ಲಿರುವವರಿಗೂ ಇದು ಅನ್ವಯ ಆಗುತ್ತದೆ. ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ ಅನ್ನುವುದೂ ಕೂಡ ತಪ್ಪು ಸಂದೇಶ ಹೋಗುತ್ತದೆ. ಹೀಗಾಗಿ ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಜೆಡಿಎಸ್‌, ಕಾಂಗ್ರೆಸ್‌ನ ಹಾಲಿ ಎಂಪಿ ಕ್ಷೇತ್ರಗಳನ್ನು ಕೇಳುತ್ತಿದೆಯಲ್ಲಾ?
         ಬಿಜೆಪಿಯ ಅಲೆ ಇದ್ದಾಗಲೇ ನಮ್ಮ ಸಂಸದರು ಗೆದ್ದು ಬಂದಿದ್ದಾರೆ. ಅಂತಹ ಕ್ಷೇತ್ರಗಳನ್ನು ಬಿಟ್ಟು ಕೊಡಿ ಎಂದು ನಾವು ಹೇಳುವುದಿಲ್ಲ. ಆ ರೀತಿಯ ತೀರ್ಮಾನ ಆಗುವುದಿದ್ದರೆ, ಹೈ ಕಮಾಂಡ್‌ ಮಟ್ಟದಲ್ಲಿಯೇ ಆಗುತ್ತದೆ. ನಾನು ಈ ಸಂದರ್ಭದಲ್ಲಿ ಎಲ್ಲವನ್ನೂ ಹೇಳಲು ಅಗುವುದಿಲ್ಲ.

ಸುಮಲತಾ ಅಂಬರೀಶ್‌  ಬಗ್ಗೆ ನಿಮ್ಮ ನಿಲುವೇನು ?
          ಅವರಿಗೆ ಮಂಡ್ಯದಿಂದ ಸ್ಪರ್ಧಿಸುವ ಆಸೆ ಇದೆ. ಸೀಟು ಹಂಚಿಕೆ ತೀರ್ಮಾನ ಆಗುವವರೆಗೂ ನಾನೇನು ಭರವಸೆ ನೀಡಲು ಸಾಧ್ಯವಿಲ್ಲ. ಅದನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಪ್ರಶ್ನೆ ಬಂದರೆ, ಅವರಿಗೆ ಟಿಕೆಟ್‌ ನೀಡುವ ಪ್ರಶ್ನೆಯೇ ಇಲ್ಲ. ನಾವು ಮೈತ್ರಿಗೆ ಹೆಚ್ಚಿನ ಅದ್ಯತೆ ನೀಡುತ್ತೇವೆ. ಸುಮಲತಾ ಅವರು ಪಕ್ಷೇತರರಾಗಿ ಸ್ಪರ್ಧಿಸಲು ಹೋಗುವುದಿಲ್ಲ ಎಂಬ ನಂಬಿಕೆ ನನಗಿದೆ.

ಬಿಜೆಪಿಯ ಸೆಂಟಿಮೆಂಟ್‌ ಕಾರ್ಯತಂತ್ರಕ್ಕೆ ನಿಮ್ಮ ಪ್ರತಿತಂತ್ರ ಏನು?
          ನಾವು ಜನ ಸಂಪರ್ಕ ಅಭಿಯಾನದ ಮೂಲಕ ನಮ್ಮ ಕಾರ್ಯಕರ್ತರಿಗೆ ಎಲ್ಲ ಮಾಹಿತಿ ಒದಗಿಸುತ್ತಿದ್ದೇವೆ. ಬಿಜೆಪಿಯ ಸುಳ್ಳುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ಜನರು ಪ್ರಶ್ನೆ ಮಾಡುತ್ತಿದ್ದಾರೆ. ರೈತರ ಪರವಾಗಿ ಐದು ವರ್ಷ ಒಂದು ದಿನವೂ ಮಾತನಾಡದೇ, ಈಗ ಚುನಾವಣೆಗೋಸ್ಕರ ರೈತರಿಗೆ ವರ್ಷಕ್ಕೆ 6 ಸಾವಿರ ಹಣ ನೀಡುತ್ತಿದ್ದಾರೆ. ಮೋದಿ ಸ್ವಾರ್ಥಕ್ಕೆ ಯೋಜನೆಗಳನ್ನು ಬಳಸಿಕೊಳ್ಳುತ್ತಾರೆ. ಇಂತ ಸುಳ್ಳುಗಾರ, ಮೋಸಗಾರ ಪ್ರಧಾನಿ ದೇಶದಲ್ಲಿ ನಾವು ಕಂಡಿಲ್ಲ. ಇವರನ್ನು ವಾಜಪೇಯಿ ಅವರಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ.

ವಿಶ್ವ ಮಟ್ಟದಲ್ಲಿ ಭಾರತ ಎದ್ದು ನಿಲ್ಲುವಂತೆ ಮೋದಿ ಮಾಡಿದ್ದಾರೆ ಎಂದು ಹೇಳುತ್ತಾರಲ್ಲಾ ?
         ಎಲ್ಲಿ ಆಗಿದೆ? ನಿರುದ್ಯೋಗದ ಬಗ್ಗೆ ಸರ್ಕಾರದ ಸಂಸ್ಥೆಯ ವರದಿಯನ್ನೇ ಬಿಡುಗಡೆ ಮಾಡದೇ ಮುಚ್ಚಿಟ್ಟಿದ್ದಾರೆ. ಉದ್ಯೋಗ ಸೃಷ್ಟಿಸುವ ಬದಲು ಉದ್ಯೋಗ ಕಳೆದುಕೊಳ್ಳುವ ಆರ್ಥಿಕ ಸ್ಥಿತಿ ನಿರ್ಮಾಣವಾಗಿದೆ ಎಂದು ಮನಮೋಹನ್‌ ಸಿಂಗ್‌ ಹೇಳಿದ್ದಾರೆ. ವಿದೇಶಕ್ಕೆ ಹೋಗಿ ಪ್ರಧಾನಿ ನಮ್ಮ ಜನರನ್ನೇ ಭೇಟಿಯಾಗಿದ್ದಾರೆ ಬಿಟ್ಟರೆ, ಅಲ್ಲಿನ ಉದ್ಯಮಿಗಳನ್ನು ಭೇಟಿ ಮಾಡಿ ಬಂಡವಾಳ ತರುವ ಕೆಲಸ ಮಾಡಿಲ್ಲ. ಪಾಕಿಸ್ತಾನದ ವಿರುದ್ಧ ಇವರೇನು ಕ್ರಮ ಕೈಗೊಂಡಿದ್ದಾರೆ. ನಮ್ಮ ಮೇಲೆ ದಾಳಿ ಮಾಡಿರುವ ಉಗ್ರನನ್ನು ಕಂದಹಾರಕ್ಕೆ ಹೋಗಿ ಬಿಟ್ಟು ಬಂದವರು ಯಾರು ? ನೀವೇ ಹೋಗಿ ಬಿಟ್ಟು ಬಂದು ಅವರನ್ನು ಉಗ್ರ ಅಂತ ಈಗ ಘೋಷಣೆ ಮಾಡಲು ಹೇಳುತ್ತಿದ್ದೀರಾ.

ಮಹಾಘಟಬಂಧನ್‌ನಲ್ಲಿ ಎಲ್ಲರೂ ಪ್ರಧಾನಿ ಅಭ್ಯರ್ಥಿಗಳೇ ಆಗಿದ್ದಾರಲ್ಲಾ ?
          ಸಮ್ಮಿಶ್ರ ಸರ್ಕಾರ ಆದಾಗ ಯಾವ ಪಕ್ಷದ  ಸಂಸದರು ಎಷ್ಟು ಜನ ಇರುತ್ತಾರೆ ಎನ್ನುವ ಆಧಾರದ ಮೇಲೆ ಪ್ರಧಾನಿ ಅಭ್ಯರ್ಥಿ ನಿರ್ಧಾರ ಆಗುತ್ತದೆ. ರಾಜೀವ್‌ ಗಾಂಧಿ ನಿಧನದ ನಂತರ ದೇಶದಲ್ಲಿ ಸಮ್ಮಿಶ್ರ ಸರ್ಕಾರಗಳೇ ಬಂದಿವೆ. ನರಸಿಂಹ್‌ರಾವ್‌, ಮನಮೋಹನ್‌ಸಿಂಗ್‌, ವಾಜಪೇಯಿ ಅವರು ಪ್ರಧಾನಿಯಾಗುತ್ತಾರೆ ಎಂದು ಯಾರು ಅಂದುಕೊಂಡಿದ್ದರು. ಮೋದಿಯವರಿಗೆ  ಪೂರ್ತಿ ಬಹುಮತ ಬಂದಿದ್ದರೂ, ಅತ್ಯಂಕ ಕಳಪೆ ಸರ್ಕಾರ ನೀಡಿದ್ದಾರೆ. ಹೇಳಿಕೊಳ್ಳಲು ಐವತ್ತಾರು ಇಂಚಿನ ಎದೆ ಇದೆ. ಯಾವುದೇ ಪ್ರಯೋಜನ ಇಲ್ಲ. ಮಹಾಘಟಬಂಧನ್‌ನಲ್ಲಿ ಶರದ್‌ಪವಾರ್‌, ಚಂದ್ರಬಾಬು ನಾಯ್ಡು, ರಾಹುಲ್‌ ಗಾಂಧಿಗೆ ಪ್ರಧಾನಿ ಆಗುವ ಅರ್ಹತೆ ಇದೆ.

ಖರ್ಗೆ ಪ್ರಧಾನಿ ಆಗಲಿ ಎಂಬ ಬೇಡಿಕೆ ಶುರುವಾಗಿದೆಯಲ್ಲ?
         ಖರ್ಗೆಯವರಿಗೆ ಯಾವುದೇ ಸ್ಥಾನ ನೀಡಿದರೂ, ಅದನ್ನು ನಡೆಸುವ ಶಕ್ತಿ ಅವರಿಗೆ ಇದೆ. ದೇಶದಲ್ಲಿ ಅವರು ಸಾಕಷ್ಟು ಗೌರವ ಬೆಳೆಸಿಕೊಂಡಿದ್ದಾರೆ. ಅತ್ಯುನ್ನತ ಹುದ್ದೆ ನಿಭಾಯಿಸುವ ಅರ್ಹತೆ ಅವರಿಗಿದೆ. ರಾಹುಲ್‌ ಗಾಂಧಿ ಪ್ರಧಾನಿ ಆಗಬೇಕು ಎನ್ನುವುದು ನಮ್ಮೆಲ್ಲರ ಬಯಕೆ.

ಸಂದರ್ಶನ – ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next