Advertisement

ರಾಹುಲ್‌ ಹೆದರಿಕೆ ಏಕೆ : ಬಿಜೆಪಿಗೆ ಶಿವಸೇನೆ  ಪ್ರಶ್ನೆ 

11:53 AM May 14, 2018 | Team Udayavani |

ಮುಂಬಯಿ: ಕರ್ನಾಟಕ ವಿಧಾನಸಭೆ ಚುನಾವಣೆಯ  ಪ್ರಚಾರದ  ಸಂದರ್ಭದಲ್ಲಿ  ಎಐಸಿಸಿ  ಅಧ್ಯಕ್ಷ  ರಾಹುಲ್‌ ಗಾಂಧಿ  ಅವರು  ಪ್ರಧಾನಿ ಹುದ್ದೆಗೇರುವ  ತಮ್ಮ ಮನೋಭಿಲಾಷೆಯನ್ನು  ವ್ಯಕ್ತಪಡಿಸಿರುವುದನ್ನು ಬಿಜೆಪಿ ಹಗಲುಕನಸು ಎಂದು ಟೀಕಿಸಿರುವುದಕ್ಕೆ  ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ  ಶಿವಸೇನೆ  ಬಿಜೆಪಿಗೆ ರಾಹುಲ್‌ ಗಾಂಧಿ ಬಗೆಗೆ ಹೆದರಿಕೆ ಏಕೆ ಎಂದು ಪ್ರಶ್ನಿಸಿದೆ. 

Advertisement

“ದೇಶದಲ್ಲಿ  ಪ್ರಜಾಸತ್ತೆ ಉಳಿದಿದ್ದರೆ ಬಿಜೆಪಿ  ರಾಹುಲ್‌ ಗಾಂಧಿ  ಅವರ  ಹೇಳಿಕೆಯನ್ನು  ಸ್ವಾಗತಿಸಿ, 2019ರ  ಚುನಾವಣೆಯಲ್ಲಿ  ರಾಹುಲ್‌ ಗಾಂಧಿ  ಅವರನ್ನು  ಸೋಲಿಸುವುದಾಗಿ  ಬಿಜೆಪಿ  ಘೋಷಣೆ ಮಾಡಬೇಕಿತ್ತು’ ಎಂದು  ಶಿವಸೇನೆ  ತನ್ನ  ಮುಖವಾಣಿಯಾದ “ಸಾಮ್ನಾ’ದ ಸಂಪಾದಕೀಯದಲ್ಲಿ  ಪ್ರಧಾನಿ  ನರೇಂದ್ರ ಮೋದಿ ಮತ್ತು  ಬಿಜೆಪಿಯ ಇತರ ನಾಯಕರನ್ನು  ತರಾಟೆಗೆ ತೆಗೆದುಕೊಂಡಿದೆ. 

2019ರಲ್ಲಿ  ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ  ಕಾಂಗ್ರೆಸ್‌  ಗರಿಷ್ಠ ಸ್ಥಾನಗಳಲ್ಲಿ  ಜಯಗಳಿಸಿದ್ದೇ ಆದಲ್ಲಿ  ಪ್ರಧಾನಿಯಾಗಲು ನಾನು ಸಿದ್ಧ  ಎಂದು  ರಾಹುಲ್‌ ಗಾಂಧಿ  ಇತ್ತೀಚೆಗೆ  ಬೆಂಗಳೂರಿನಲ್ಲಿ  ಹೇಳಿಕೆ ನೀಡಿದ್ದರು. ಇದಕ್ಕೆ  ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ  ನರೇಂದ್ರ ಮೋದಿ  ಅವರು  ಕಾಂಗ್ರೆಸ್‌  ಅಧ್ಯಕ್ಷರು ಪ್ರಧಾನಿ ಹುದ್ದೆಯ ಕನಸು ಕಾಣುತ್ತಿದ್ದಾರೆ. ರಾಹುಲ್‌ ಗಾಂಧಿ ಅವರು  ತಮ್ಮ  ಪ್ರಜಾಸತ್ತಾತ್ಮಕ ಹಕ್ಕನ್ನು  ಬಳಸಿ ತಮ್ಮ ನಿಲುವನ್ನು  ವ್ಯಕ್ತಪಡಿಸಿದ್ದು ಇದನ್ನು  ಯಾರೂ ಗೇಲಿ  ಮಾಡುವುದು  ಸರಿಯಲ್ಲ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ. 

ಎನ್‌ಡಿಎಯಲ್ಲಿ  ಬಿಜೆಪಿಯಿಂದ ಮಿತ್ರಪಕ್ಷಗಳ  ಕಡೆಗಣನೆ
ಕಾಂಗ್ರೆಸ್‌  ನೇತೃತ್ವದ  ಯುಪಿಎನ ಮಿತ್ರ ಪಕ್ಷಗಳನ್ನು  ವಿಶ್ವಾಸಕ್ಕೆ  ತೆಗೆದುಕೊಳ್ಳದೇ  ರಾಹುಲ್‌ ಗಾಂಧಿ  ಅವರು  ತಾನು ಪ್ರಧಾನಿ  ಅಭ್ಯರ್ಥಿ ಎಂದು  ಘೋಷಿಸಿರುವುದು  ಸರಿಯಲ್ಲ  ಎಂಬ ಬಿಜೆಪಿ  ನಾಯಕರ  ಪ್ರತಿಕ್ರಿಯೆಗೂ  ತುಸು ಖಾರವಾಗಿಯೇ  ತಿರುಗೇಟು ನೀಡಿರುವ  ಶಿವಸೇನೆ  ಪ್ರಧಾನಿ  ನರೇಂದ್ರ ಮೋದಿ ಅವರಿಗೆ  ಇದೀಗ  ಮೈತ್ರಿ ಧರ್ಮದ  ನೆನಪಾಗತೊಡಗಿದೆ. ಇದು ನಮಗೆ  ಸಂತಸ ತಂದಿದೆ. ಒಂದೆಡೆಯಿಂದ ಕಾಂಗ್ರೆಸ್‌  ಮೈತ್ರಿಕೂಟ ರಚನೆಗೆ  ಪ್ರಯತ್ನ ಆರಂಭಿಸಿದ್ದರೆ  ಇನ್ನೊಂದೆಡೆಯಿಂದ  ಬಿಜೆಪಿ  ಏಕಪಕ್ಷೀಯವಾಗಿ  ಪ್ರಧಾನಿ ಹುದ್ದೆಯ ಮೇಲೆ  ಅಧಿಪತ್ಯವನ್ನು  ಸ್ಥಾಪಿಸಿದೆ. ಇದನ್ನು  ಸ್ವತಃ ಪ್ರಧಾನಿ ಮೋದಿ  ಅವರ ಹೇಳಿಕೆಗಳೇ  ಸಾಬೀತುಪಡಿಸುತ್ತವೆೆ. ಕಾಂಗ್ರೆಸ್‌  ನೇತೃತ್ವದ  ಮೈತ್ರಿಕೂಟದಲ್ಲಿ ಮಿತ್ರಪಕ್ಷಗಳ ನಡುವೆ ಸಂವಹನ ಕೊರತೆ ಇದೆ ಎಂದು  ಪ್ರಧಾನಿ  ಮೋದಿ  ಅಭಿಪ್ರಾಯಪಟ್ಟಿದ್ದಾರೆ. ಆದರೆ  ಎನ್‌ಡಿಎಯಲ್ಲಿ  ಮಿತ್ರಪಕ್ಷಗಳನ್ನು  ವಿಶ್ವಾಸಕ್ಕೆ  ತೆಗದುಕೊಂಡು ಎಷ್ಟು ನಿರ್ಧಾರಗಳನ್ನು  ಕೈಗೊಳ್ಳಲಾಗಿದೆ ಎಂದು  ಸಂಪಾದಕೀಯದಲ್ಲಿ  ಬಿಜೆಪಿ  ಮತ್ತು  ಪ್ರಧಾನಿಯವರನ್ನು  ಪ್ರಶ್ನಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next