Advertisement

Politics: ಕಾಂಗ್ರೆಸ್ಸಿಗರಿಗೆ ಕೇಸರಿ ಧ್ವಜದ ಮೇಲೇಕೆ ಸಿಟ್ಟು: ಪ್ರಮೋದ್‌ ಮುತಾಲಿಕ್ ಪ್ರಶ್ನೆ

06:45 PM Jan 28, 2024 | Team Udayavani |

ಗದಗ: ಕಾಂಗ್ರೆಸ್​ನವರಿಗೆ ಕೇಸರಿ ಕೆಂಡದಂತೆ ಕಾಣುತ್ತಿದೆ. ಕಾಂಗ್ರೆಸ್​ಗೆ ಹಿಂದೂ ಧರ್ಮದ ಧ್ವಜದ ಮೇಲೇಕೆ ಸಿಟ್ಟು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಕೆರಗೋಡ ಗ್ರಾಮದಲ್ಲಿ ಕೇಸರಿ ಧ್ವಜ ತೆರವು ಮಾಡಿರುವುದನ್ನು ಶ್ರೀರಾಮ ಸೇನೆ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.

Advertisement

ಕೇಸರಿ ಧ್ವಜ ಯಾವುದೋ ಪಕ್ಷ, ಸಂಘಟನೆಯದ್ದಲ್ಲ. ಸಾವಿರಾರು ವರ್ಷಗಳಿಂದ ಬಂದ ದೇಶದ ಧರ್ಮದ ಧ್ವಜ. ಗ್ರಾಮ ಪಂಚಾಯಿತಿ ಒಮ್ಮತದಿಂದ ಹಾರಿಸಿದ ಧ್ವಜ. ಕೇಸರಿ ತ್ಯಾಗ, ಸಂಸ್ಕೃತಿಯ, ಸಮೃದ್ಧಿಯ ಪ್ರತೀಕ. ಕೇಸರಿ ಧ್ವಜ ಬಿಜೆಪಿ, ಆರ್​ಎಸ್​ಎಸ್​ ಧ್ವಜ ಅಲ್ಲ ಎಂದರು.

ಧರ್ಮದ ಧ್ವಜವನ್ನ ಗೌರವಿಸುವುದನ್ನ ಕಾಂಗ್ರೆಸ್ ಕಲಿತುಕೊಳ್ಳಬೇಕು. ದ್ವೇಷ ಸಾಧಿಸಿದಷ್ಟು ಹಿಂದು ಸಮಾಜ ಕೆರಳುತ್ತದೆ, ನಿಮ್ಮನ್ನ ವಿರೋಧ ಮಾಡುತ್ತದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮೇಲಿಂದ ಮೇಲೆ ಈ‌ ರೀತಿಯ ಘಟನೆಗಳು ನಡೆಯುತ್ತಿವೆ ಎಂದರು.

ಕೇಸರಿ ಧ್ವಜ ತೆಗೆದು ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಅಲ್ಲದೇ, ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿ ಚಾರ್ಜ್ ಯಾಕೆ ಮಾಡಬೇಕು? ಅಲ್ಲೇನು ಕಲ್ಲೆಸೆದಿದ್ದಾರಾ ಗಲಾಟೆ ಮಾಡಿದ್ದಾರಾ? ಧ್ವಜ ತೆಗೆದಿದ್ದಕ್ಕೆ ಪ್ರತಿಭಟನೆ ಮಾಡಿದ್ದಾರೆ. ಅವರ ಮೇಲೆ ಲಾಠಿ ಚಾರ್ಜ್ ಮಾಡುತ್ತೀರಾ? ಯಾರ ಮೇಲೆ ಲಾಠಿ ಪ್ರಹಾರ ಮಾಡಬೇಕು ಅವರ ಮೇಲೆ ಮಾಡಲ್ಲ ಎಂದರು.

ಔರಂಗಜೇಬನ ಕಟೌಟ್ ಹಾಕಿ‌ ಮೆರವಣಿಗೆ ಮಾಡಿದಾಗ ಕಾನೂನು ನೆನಪಾಗಲಿಲ್ಲವೇ? ಈಗ ಹಿಂದೂಗಳ ಭಾವನೆಗೆ ಧಕ್ಕೆ ಕೊಡುವುದನ್ನ ನೋಡಿದರೆ ನೀವು ರಾವಣನ ಮಾನಸಿಕ ಸ್ಥಿತಿಗೆ ಬಂದಿದ್ದೀರಿ ಎಂದು ತಿಳಿಯುತ್ತದೆ. ಅಲ್ಲಿ ರಾಷ್ಟ್ರಧ್ವಜ ಹಾಕಿಸಲು‌ ಯಾರು ಬೇಡ ಅಂತಾರೆ. ಆದರೆ ಧ್ವೇಷ ಸಾಧಿಸುವುದು ಸರಿಯಲ್ಲ ಎಂದರು.

Advertisement

ಸಚಿವರ ವಿರುದ್ಧ ವಾಗ್ದಾಳಿ: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ್ ಮುತಾಲಿಕ್, ಸಚಿವರ ಹೇಳಿಕೆಯನ್ನು ನಾನು ಒಪ್ಪಲ್ಲ. ಗ್ರಾಮಸ್ಥರು, ಗ್ರಾಮ ಪಂಚಾಯತ್ ಅಧ್ಯಕ್ಷರು ಜಾತಿ, ಪಕ್ಷಗಳನ್ನು ಬಿಟ್ಟು, ಒಟ್ಟಾಗಿ ಧ್ವಜ ಹಾರಿಸಿದ್ದರು. ಎಲ್ಲರ ಪರಿಶ್ರಮದಿಂದ 108 ಅಡಿ ಕಂಬ ಹಾಕಲಾಗಿತ್ತು. ಈ ಸರ್ಕಾರ ಇಷ್ಟು ದೊಡ್ಡ ಕಂಬದ ಮೂಲಕ ರಾಷ್ಟ್ರ ಧ್ವಜ ಹಾರಿಸಲ್ಲ. ಮುಸ್ಲಿಂ ವೋಟ್​ಗಾಗಿ ಚೆಲುವರಾಯಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆ. ಸುಳ್ಳು ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ‌ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next