Advertisement

ಯಾರ ಉಸಿರಲ್ಯಾರ ಹೆಸರು?

12:30 AM Jan 01, 2019 | |

ನೂರಾರು ತಮ್ಮಂದಿರು ಒಟ್ಟಿಗೆ ಹುಟ್ಟಿದ್ದರೂ ದುರ್ಯೋಧನನ ಬಳಗವೆಂದರೆ ಕರ್ಣನೇ. ಹೊರಲಿಲ್ಲ-ಹೆರಲಿಲ್ಲ, ಆದರೂ ಮಮತೆಯ ವಿಷಯದಲ್ಲಿ ಇದುವರೆಗೂ ಯಶೋದೆಗೆ ಯಾರೂ ಸಾಟಿಯಾಗಿಲ್ಲ. ಅದೆಷ್ಟು ಕರುಳು -ಹೃದಯಗಳೊಂದಿಗೆ ಭೂಮಿಗೆ ಬಂದಿದ್ದಳ್ಳೋ ಮದರ್‌ ತೆರೇಸಾ! ಆಕೆ ಸಲುಹಿ, ಜತನ ಮಾಡಿದ ಯಾರೂ ಆಕೆಯ ಸಂಬಂಧಿಗಳಲ್ಲ.

Advertisement

ರಾತ್ರಿ ಸರಿಸುಮಾರು 9.40ರ ಸಮಯ. ಬಹಳ ಸುಸ್ತಾಗಿದ್ದರಿಂದ ಹಾಸಿಗೆಗೆ ಬಿದ್ದರೆ ಸಾಕಪ್ಪಾ ಎನಿಸುತ್ತಿತ್ತು. ಅಷ್ಟರಲ್ಲಿ ಮೊಬೈಲು ರಿಂಗಣಿಸಿತು. ಉತ್ತರಿಸದೆ ವಿಧಿಯಿರಲಿಲ್ಲ. ನೋಡಿದರೆ ಯಾವುದೋ ಅಪರಿಚಿತ ಸಂಖ್ಯೆ. ಫೋನೆತ್ತಿ ಹಲೋ, ಯಾರು? ಅಂದೆ.
ಆ ಕಡೆಯ ಧ್ವನಿ, “ಮೇಡಮ್ಮಾರೆ’ ಅಂದಿತು
ಇಷ್ಟೇ ಕೇಳಿದ್ದು, ಮೆದುಳಿನ ತಂತುಗಳೆಲ್ಲ ವೇಗಗೊಂಡವು..ಉತ್ತರಕರ್ನಾಟಕದ ಅತ್ಯಾಪ್ತವೆನಿಸಿದ ಆತ್ಮಗಳೆಲ್ಲ ಕಣ್ಮುಂದೆ ಬಂದವು…ಬಳಿಗಾರ, ಕೊಲ್ಕಾರ, ಕತ್ತಿ, ಹರಕೂನಿ, ಹಂಚಿ…ಹೀಗೆ…

ಆ ಕಡೆಯ ಧ್ವನಿ ಹೇಳಿತು… “ನಾನ್ರೀ ಮೇಡಂ, ನದಾಫ‌..ರಾಜು’
ನಧಾಫ್ ಅವರ ಕುಟುಂಬ, ಕಾಣದ ನಾಡೊಂದರಲ್ಲಿ ತಿಳಿಯದವಳನ್ನು ದೊಡ್ಡಮಗಳಾಗಿಸಿಕೊಂಡವರು.ಯಾವುದೇ ಹಬ್ಬ-ಹರಿದಿನವಾಗಲಿ, ನನ್ನನ್ನು ಕೂಡಿಸಿಕೊಂಡೇ ಲೆಕ್ಕ ಹಾಕಿ ಆಚರಿಸಿದವರು. ಸಂಪರ್ಕ ಕಡಿದು ಐದಾರು ವರ್ಷಗಳಾಗಿರಬೇಕು. ಆದರೆ ಆಪ್ತತೆ ಅದೇ ಮಟ್ಟದಲ್ಲಿದೆ. ಅದ್ಯಾವಾಗ ಸುಸ್ತು ಮಾಯವಾಗಿತ್ತೋ, ಹಾಸಿಗೆಯಿಂದ ಸೋಫಾಕ್ಕೆ ಶಿಫ್ಟ್ ಆಗಿದ್ದೆ.

“ರಾಜು ಹೇಗಿದ್ದೀಯಾ? ಅಮ್ಮ ಹೇಗಿದ್ದಾರೆ? ಅವರಿಗೆ ಫೋನ್‌ ಕೊಡು’ ಒಂದೇ ಸಮನೆ ಉಸುರಿದೆ.
ನಿನ್ನೆಯಷ್ಟೇ ಮಾತಾಡಿ, ಫೋನಿಟ್ಟಿರುವಂಥ ಭಾವ..ಅಮ್ಮ ಫೋನೆತ್ತಿಕೊಂಡವರೇ ಮೂರ್ನಾಲ್ಕು ನಿಮಿಷ ಮಾತಾಡಿದವರು ಬಿಕ್ಕಲು ಆರಂಭಿಸಿದರು. ನನಗೂ ಮಾತು ಹೊಳೆಯಲಿಲ್ಲ. ಅರಿವಿಲ್ಲದೆ ಕಣ್ಣು ತುಂಬಿ ಬಂದಿದ್ದವು.
ತಿಂಗಳ ಹಿಂದಿನ ನಾಗರಪಂಚಮಿಯ ದಿನ ಬಿಟ್ಟೂಬಿಡದೇ ನದಾಫ್ರವರು ನೆನಪಾಗಿದ್ದರು. ಒಂದೆರಡು ತಾಸು ಅವರ ನೆನಪು ಒ¨ªಾಡುವಷ್ಟು ಕಾಡಿಸಿತು. ಅವತ್ತು ರಾತ್ರಿ 9.40ರ ಹೊತ್ತಿಗೆ ಇದ್ದಕ್ಕಿದ್ದಂತೆ ಕುಸಿದವರು ಹಾಗೇ ಉಸಿರು ನಿಲ್ಲಿಸಿ¨ªಾರೆ. ನದಾಫ್ ಅಮ್ಮ, ರಾಜು, ಮಗಳು ಪ್ಯಾರಿಜಾನ್‌ ಇವರ್ಯಾರಿಗೂ ನನಗೆ ಹೇಳಬೇಕೆಂದು ತೋಚಿಲ್ಲ. ಸಹಜವೇ. ಸಂಪರ್ಕ ಕಡಿದು ವರ್ಷಗಳಾಗಿವೆ. ನಮ್ಮದು ರಕ್ತ ಸಂಬಂಧವೇನೂ ಇಲ್ಲ..ಆದರೆ ಆತ ಮಾತ್ರ ನನ್ನನ್ನು ಮಗಳಾಗಿ ಆತ್ಮದಿಂದ ಒಪ್ಪಿಕೊಂಡಿದ್ದರು. ಪಂಚಮಿಯ ದಿನ ತನ್ನ ಕೊನೆಗಳಿಗೆ ಎಂದು ತಿಳಿದಿತ್ತೋ ಏನೋ, ತೀವ್ರವಾಗಿ ನೆನಪಿಸಿಕೊಂಡಿರಬೇಕು. ಛೇ, ಅವತ್ತು ಒಂದು ಫೋನಾದರೂ ಮಾಡಬಹುದಿತ್ತಲ್ಲ ಎಂದು ತೀವ್ರವಾಗಿ ಹಲುಬಿದೆ…

ಸಾವಿನ ದಿನ ನೆನೆಯದ ಮನೆಯವರು, ಈ ಸರಿರಾತ್ರಿ ನೆನಪಿಸಿಕೊಂಡು ಕರೆ ಮಾಡಲು ಕಾರಣವಿಷ್ಟೇ. ಬ್ಯಾಂಕ್‌ನ ಖಾತೆ ಕ್ಲೋಸ್‌ ಮಾಡಿಸಲು ಅದ್ಯಾವುದೋ ದಾಖಲೆಗಾಗಿ ನದಾಫ್ರವರ ಪರ್ಸ್‌ ತಡಕಾಡಿದಾಗ, ಅಪಘಾತದಲ್ಲಿ ಮರೆಯಾದ ಅವರ ಭೀಮನಂಥ ಎರಡನೇ ಮಗ, ಅವರ ಮೊಮ್ಮಗಳು ಮತ್ತು ನನ್ನದೊಂದು ಚಿಕ್ಕ ಫೋಟೋ ಅವರಿಗೆ ಸಿಕ್ಕಿವೆ. ಮೊದಲೆರಡು ಫೋಟೋ ಪರ್ಸ್‌ನಲ್ಲಿರುವುದು ತೀರಾ ಸಹಜ. ಆದರೆ, ನನ್ನ ಫೋಟೋ? ಕೂಡಲೇ ನದಾಫ್ ಅಮ್ಮ, ರಾಜು ಕೈಲಿ ಫೋನ್‌ ಮಾಡಿಸಿದ್ದಾರೆ.

Advertisement

ಸುತ್ತಲಿರುವ ಜಗತ್ತು ನಿಶ್ಚಲವಾದಂತೆ ಕುಸಿದು ಕುಳಿತಿದ್ದೆ. ಕೆಲವು ಸಂದರ್ಭಗಳಲ್ಲಿ ಆತ ಜತನ ಮಾಡಿದ ರೀತಿ ಕಣ್ಮುಂದೆ ಹಾದು, ಪದೇ ಪದೆ ಕಣ್ಣು ತುಂಬುತ್ತಿದ್ದವು. ಹೌದು, ಅಲ್ಲಿರುವಷ್ಟು ದಿನ ನಿಜಕ್ಕೂ ಆತನಿಗೆ ಮಗಳಾಗಿ¨ªೆ, ಪ್ರತಿ ದುಃಖ-ಸಡಗರದಲ್ಲಿ ಭಾಗಿಯಾಗಿದ್ದೆ. ನಿಜಕ್ಕೂ ಅವರ ಧರ್ಮ ಬೇರೆಯಾದದ್ದು, ನನಗೆ ಅವರನ್ನು ಅಪ್ಪನ ಸ್ಥಾನದಲ್ಲಿ ನೋಡಲು, ಅವರಿಗೆ ನನ್ನನ್ನು ಮಗಳೆಂದುಕೊಳ್ಳಲು ಎಂದಿಗೂ ಅಡ್ಡ ಬರಲಿಲ್ಲ..

ಹೆತ್ತವರು-ಒಡಹುಟ್ಟಿದವರು ನಮ್ಮೆಲ್ಲ ನೋವು-ನಲಿವುಗಳ ಭಾಗೀದಾರರಾಗುವುದು ಅವರ ಹೊಣೆಗಾರಿಕೆ. ಗುರುತು- ಪರಿಚಯ ತಿಳಿಯದ ಒಬ್ಬಳಿಗೆ ದೊಡ್ಡಮಗಳ ಸ್ಥಾನ ಕೊಟ್ಟು, ಕೈಮುರಿದುಕೊಂಡು ಬಿ¨ªಾಗ ದಿನಗಟ್ಟಲೆ ಜತನ ಮಾಡುವುದೆಂದರೆ? ನಾನು ನೊಂದಾಗ ಜೈನ ಮುನಿಗಳ ಬಳಿ ಕರೆದೊಯ್ದು ತಾಯಿಯಾಗಿ ಸಂತೈಸಿದ ಜೈನರ ಅಮ್ಮ, ನನ್ನ ಸಂಕಟಕ್ಕೆ ತಾವೇ ಕಣ್ಣೀರಾಗಿ ಅಧಿಕಾರದಲ್ಲಿ ದೊಡ್ಡವರು ಎನಿಸಿದವರಿಂದ ಸಹಾಯ ಮಾಡಿಸಿದ ಹರಕೂನಿ ಅಂಕಲ್‌, ಇವರೆಲ್ಲಾ ಮನುಷ್ಯ ರೂಪದಲ್ಲಿ ಸಲುಹಿದ ದೇವರುಗಳು.

ನೂರಾರು ತಮ್ಮಂದಿರು ಒಟ್ಟಿಗೆ ಹುಟ್ಟಿದ್ದರೂ ದುರ್ಯೋಧನನ ಬಳಗವೆಂದರೆ ಕರ್ಣನೇ. ಹೊರಲಿಲ್ಲ-ಹೆರಲಿಲ್ಲ, ಆದರೂ ಮಮತೆಯ ವಿಷಯದಲ್ಲಿ ಇದುವರೆಗೂ ಯಶೋದೆಗೆ ಯಾರೂ ಸಾಟಿಯಾಗಿಲ್ಲ. ಅದೆಷ್ಟು ಕರುಳು -ಹೃದಯಗಳೊಂದಿಗೆ ಭೂಮಿಗೆ ಬಂದಿದ್ದಳ್ಳೋ ಮದರ್‌ ತೆರೇಸಾ! ಆಕೆ ಸಲುಹಿ, ಜತನ ಮಾಡಿದ ಯಾರೂ ಆಕೆಯ ಸಂಬಂಧಿಗಳಲ್ಲ.

 ಆಕೆ ಇರುವಲ್ಲಿ ಆತ ಇದ್ದೇ ತೀರಬೇಕು. ಆಕೆಯ ಧ್ವನಿಗೆ ಮಾತಾಗಿ, ಉಸಿರಿನಷ್ಟು ಸಹಜವಾಗಿ ಆಕೆಯೊಳಗೆ ಬೆರೆತಿ¨ªಾನೆ. ಆತ ಆಕೆಯ ಬಾಯ್‌ಫ್ರೆಂಡ್‌ ಅಲ್ಲ, ಕನಿಷ್ಠ ಸ್ನೇಹಿತನೂ ಅಲ್ಲ, ಗಂಡನೂ ಅಲ್ಲ. ಆಕೆಗೆ ಬೇರೊಬ್ಬನೊಂದಿಗೆ ಮದುವೆಯಾಗಿದೆ. ಅಣ್ಣ-ತಂಗಿ, ಉಹೂ, ಅದೂ ಅಲ್ಲ. ಯಾವುದೇ ನಂಟಿಲ್ಲ. ಆದರೂ ಒಂದರೊಳಗೊಂದು ಬೆರೆತ ಜೀವಗಳು. ಬೆಸೆದಿರುವ ರೀತಿಯೇ ಒಂದು ಕಂಪು. ಆಕೆಯೇ ಮ್ಯಾಟ್ರಿ ಮರ್ಲಿನ್‌. ಸಂಪೂರ್ಣ ಕಿವುಡಿ. ಸಂಜ್ಞಾ ಭಾಷೆಯೇ ಬದುಕಿಗೆ ಆಧಾರವಾದಾಕೆ, ಶ್ರೇಷ್ಠ ಹಾಲಿವುಡ್‌ ಅಭಿನೇತ್ರಿಯಾಗಿ ಆಕೆ ಬೆಳೆದ ಪರಿಯೇ ವಿಸ್ಮಯಕಾರಿ. ಈಕೆಯ ಪ್ರತಿ ಹೆಜ್ಜೆಯಲ್ಲಿ ಧ್ವನಿಯಾಗಿ-ಉಸಿರಾಗಿ ನಿಂತವ ಜಾಕ್‌ ಜಾಸನ್‌… ಈಕೆಯ ಸಂಜ್ಞಾ ಭಾಷೆಯ ಭಾಷಾಂತರಕಾರ. ಇವರಿಬ್ಬರ ಬದುಕು ಬೆಸಿದಿರುವ ರೀತಿ, ಅರಿಯುತ್ತಾ ಹೋದಂತೆ ಇಬ್ಬರೂ ಒಬ್ಬರಂತೆ ಗೋಚರವಾಗುತ್ತಾರೆ. ಅವಳು ಹೇಳಬೇಕೆಂದಿದ್ದನ್ನು ಈತ ಮೊದಲೇ ಊಹಿಸಿ ಹೇಳಿಬಿಡುವಷ್ಟು! ಅವನ ಇರುವಿಕೆಯೇ ಅವಳ ಬದುಕಿನ ಮೂಲಾಧಾರ.

ಸಂಭ್ರಮಾಚರಣೆಯ ಕಾರ್ಯಕ್ರಮಗಳಾದರೆ ದಟ್ಟಣೆ ಹೆಚ್ಚು ಮತ್ತು ಇದಕ್ಕೆ ಯಾರಾದರೂ ಸರಿ, ನಡೆದೇ ತೀರುತ್ತದೆ. ಹೆಚ್ಚು ವ್ಯತ್ಯಾಸವಾಗದು. ಆದರೆ ನೋವು-ಸಂಕಟಗಳಿವೆಯಲ್ಲ, ಇವಕ್ಕೆ ನಿರ್ದಿಷ್ಟ ಭುಜಗಳೇ ಬೇಕು. ಅವನಿದ್ದಾನೆ/ಅವಳಿದ್ದಾಳೆ ಬಿಡು, ಎಂಬ ಚಿಕ್ಕ ಸಾಲು ನಿರಾಳತೆಯ ಜಾಡು ಹಿಡಿದು ಬದುಕು ಸಾಗಿಸುವಂತೆ ಪ್ರೋತ್ಸಾಹಿಸುತ್ತದೆ. ಜಗತ್ತಿನ ಪ್ರತಿ ಜೀವವೂ ಈ ತೆರನಾದ ಒಂದು ನಂಬಿಕೆಯನ್ನಾಧರಿಸಿ ಉಸಿರು ಹಿಡಿದಿರುತ್ತದೆ. ಯಾವ ಮೂಲೆಯಿಂದಲೂ ಇದು ಸೈಂಟಿಫಿಕ್‌ ವಿವರಣೆಗೆ ನಿಲುಕಲಾರದು. ಸೂತ್ರ- ಸಂಬಂಧ ಇಲ್ಲದೇ ಮೂಡುವ ಇಂಥ ಭಾವಗಳು ನಿಸ್ಸಹಾಯಕ ಗಳಿಗೆಗಳಲ್ಲಿ ಕೈಹಿಡಿದು ಮುನ್ನಡೆಸುತ್ತವೆ. ಅದೆಂಥ ಧಾವಂತವಿದ್ದರೂ, ಆಕಾಶ ಕಳಚಿ ಬೀಳುವ ಸ್ಥಿತಿಯಲ್ಲಿದ್ದರೂ ಇಂಥ ನಂಬಿಕೆಗಳನ್ನು ಹುಸಿಗೊಳಿಸದಿರೋಣ. ಏಕೆಂದರೆ, ಜಗತ್ತು ನಡೆಯುತ್ತಿರುವುದೇ ಇಂಥ ನಂಬಿಕೆಯ ಊರುಗೋಲಿನ ಮೇಲೆ.

ಅಮ್ಮನ ಪರಮ ಸ್ನೇಹಿತೆಯೊಬ್ಬರ ಮನೆಯಲ್ಲಿ ಇತ್ತೀಚೆಗೆ ನಡೆದ ರಣರಂಗದ ಚಿತ್ರಣಗಳು ಕಣ್ಮುಂದೆ ಸುಳಿದು ಹೋದವು. ಸ್ವಲ್ಪ ಹೆಚ್ಚು ಎನಿಸುವಷ್ಟೇ ಹಣಕಾಸಿನ ಅನುಕೂಲಸ್ಥ ಕುಟುಂಬ ಅವರದ್ದು. ಒಬ್ಬನೇ ಮಗ. ಒಂದೆರಡು ತಲೆಮಾರು ಕುಳಿತು ಬದುಕಬಹುದಾ ದಷ್ಟು ಆಸ್ತಿ. ಆ ಮಗನೋ, ಮದುವೆಯಾದ ನಾಲ್ಕು ತಿಂಗಳಿಗೆ ವಿದೇಶಕ್ಕೆ ಹೊರಟು ನಿಂತಿ¨ªಾನೆ. ಜಾತಿ ಅಂತ ನೆಪವೊಡ್ಡಿ ಇಷ್ಟಪಟ್ಟವಳನ್ನು(?) ಬಿಟ್ಟು, ಅಮ್ಮ ತೋರಿಸಿದವಳನ್ನೇ ಮದುವೆಯಾದವನು ಇವನೇನಾ ಎನ್ನುವ ಅನುಮಾನ ಕಾಡಿತ್ತು. ಕುಟುಂಬದ ಮುಖ್ಯಸ್ಥರು, ಗೆಳೆಯರು ಎಷ್ಟೇ ತಿಳಿ ಹೇಳಿದರೂ ಅವನು ನಿರ್ಧಾರ ಬದಲಿಸಲಿಲ್ಲ. ಸ್ನೇಹಿತೆಯ ನೋವು ಕಡಿಮೆ ಮಾಡಲು ಅಮ್ಮನೂ, ಮಗನ ಮನಸ್ಸು ಬದಲಿಸಲು ಯತ್ನಿಸಿ ಸೋತು ಹೋದರು. 

ಕಾಣದೂರಿನಲ್ಲಿ ಅಪರಿಚಿತ ಹೆಣ್ಣು ಮಗಳನ್ನು ತಂದೆಯಾಗಿ ಕಾಯ್ದ ನದಾಫ್ ಒಂದು ಕಡೆಯಾದರೆ, ಹೆತ್ತವರನ್ನೇ ಬಿಟ್ಟು ವಿದೇಶಕ್ಕೆ ಹಾರಲು ಹೊರಟಿರುವ ಮಗ ಇನ್ನೊಂದು ಕಡೆ! 

ಮಂಜುಳಾ ಡಿ.

Advertisement

Udayavani is now on Telegram. Click here to join our channel and stay updated with the latest news.

Next