ಹುಬ್ಬಳ್ಳಿ: ವಿಧಾನ ಸೌಧದಲ್ಲಿ ಪಾಕಿಸ್ಥಾನ ಜಿಂದಾಬಾದ್ ಘೋಷಣೆ ಪ್ರಕರಣದಲ್ಲಿ ಯಾರೇ ತಪ್ಪುಮಾಡಲಿ ಅವರ ವಿರುದ್ಧ ಖಂಡಿತವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ”ಸರ್ಕಾರ ಇದನ್ನು ಸ್ವಯಂ ಪ್ರಕರಣ ಎಂದು ತೆಗೆದುಕೊಂಡು ತನಿಖೆ ನಡೆಸುತ್ತಿದೆ. ಬಿಜೆಪಿಯವರಿಗೆ ವಿಶೇಷವಾಗಿ ಒಂದು ಕೇಳುತ್ತೇವೆ, ಪುಲ್ವಾಮಾ ಪ್ರಕರಣದಲ್ಲಿ ಅವರದೇ ಚಾರ್ಜ್ ಸೀಟ್ ಇದೆ. ಅದರಲ್ಲಿ ಐವರ ಹೆಸರು ಮಾತ್ರ ಇದೆ. ಇನ್ನುಳಿದ 15 ಜನರು ಯಾರು ಅಂತಾ ಇನ್ನು ಕಂಡು ಹಿಡಿದಿಲ್ಲ. ಪ್ರಕರಣ ನಡೆದು ಐದು ವರ್ಷಗಳಾಯಿತು. ಈಗ ಅದರ ಬಗ್ಗೆ ಚರ್ಚೆ ಬೇಡವೇ? ಅವರದೆ ಸರ್ಕಾರವಿದೆ. ಅಲ್ಲಿ ಏನಾಗಿದೆ” ಎಂದು ಪ್ರಶ್ನಿಸಿದರು.
”ತನಿಖೆ ನಡೆಯುತ್ತಿರುವಾಗಲೇ ಸರ್ಕಾರ ವಜಾ ಮಾಡಿ ಎಂದರೆ ಏನು? ಆವಾಗ ಒಂದಲ್ಲಾ ಎರಡಲ್ಲ ಮೂನ್ನೂರು ಕೆಜೆ ಆರ್ ಡಿಎಕ್ಸ್ ಒಳಗಡೆ ಬಂದಾಗ ಅವರದೆ ಸರ್ಕಾರವಿತ್ತು. ಅಂದು ಸರ್ಕಾರ ವಜಾ ಮಾಡಬಹುದಿತ್ತಲ್ಲಾ. ದೇಶದೊಳಗಡೆ ಮೂನ್ನೂರು ಕೀಲೋ ಹೇಗೆ ಬಂತು. ಅದಕ್ಕೆ ಕಾರಣ ಯಾರು. ಆವಾಗ ಯಾಕೆ ರಾಜೀನಾಮೆ ಕೇಳಲಿಲ್ಲ. ಪ್ರಧಾನಿ ಮಂತ್ರಿ ಅವರನ್ನು ರಾಜೀನಾಮೆ ಕೇಳಬೇಕಾಗಿತ್ತು. ಹೋಗಲಿ ರಕ್ಷಣಾ ಸಚಿವರನ್ನಾದರು ಕೇಳಬಹುದಿತ್ತಲ್ಲ” ಎಂದು ಹರಿಹಾಯ್ದರು.
”ಇತ್ತೀಚೆಗೆ ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡು ಪಾಕಿಸ್ಥಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ಇದೆ. ಇದರ ಬಗ್ಗೆ ಬಿಜೆಪಿಯವರು ಅಂದು ಬೀದಿಗಳಿದು ಹೋರಾಟ ಮಾಡಬಹುದಿತ್ತು. ಅದರ ಬಗ್ಗೆ ಸಹ ಅಧಿವೇಶನದಲ್ಲಿ ಕೂಗಬಹುದಿತ್ತಲ್ಲ. ಯಾಕೆ ಕೂಗಲಿಲ್ಲ. ಕೇಸರಿ ಶಾಲು ಹಾಕಿಕೊಂಡು ಪಾಕಿಸ್ಥಾನ ಜಿಂದಾಬಾದ್ ಅಂತಾ ಕೂಗಿದರೆ ನಡೆಯುತ್ತಾ” ಎಂದು ಪ್ರಶ್ನಿಸಿದರು.
”ಈ ದೇಶದಲ್ಲಿ 10 ವರ್ಷಗಳಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿದ ಎಷ್ಟು ಪ್ರಕರಣಗಳಿವೆ. ಎಷ್ಟು ಜನರನ್ನು ಬಂಧನ ಮಾಡಿದ್ದಾರೆ? ನಮ್ಮ ಸರ್ಕಾರ ಯಾರನ್ನು ರಕ್ಷಣೆ ಮಾಡಲ್ಲ. ಯಾರ ಪರವಾಗಿಲ್ಲ. ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕ್ರಮಕೈಗೊಳ್ಳುತ್ತೇವೆ” ಎಂದರು.
”ರಾಜ್ಯಪಾಲರಿಗೆ ದೂರು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಳುವ ಹಕ್ಕು ಇದೆ ಕೇಳಲಿ. ನಾವು ಅದರಲ್ಲಿ ಏನು ತಪ್ಪು ಮಾಡಿದ್ದೇವೆ. ಸರ್ಕಾರ ಹಾಗೂ ಸಂಬಂಧಿಸಿದ ಸಚಿವರು ಉತ್ತರ ಕೊಟ್ಟಿದ್ದಾರೆ” ಎಂದರು.
”ಹಿಂದೂ ಧಾರ್ಮಿಕ ಮಸೂದೆ ಮುಂಡನೆಗೆ ಬಿಜೆಪಿ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದಕ್ಕೆ ಈಗಾಗಲೇ ಸರ್ಕಾರ ಉತ್ತರ ಕೊಟ್ಟಿದೆ”ಎಂದರು.
”ಜಾತಿ ಗಣತಿ ವರದಿ ಜಾರಿಗೆ ಬಿಜೆಪಿ ವಿರೋಧ ಬಗ್ಗೆ ಪ್ರತಿಕ್ರಿಯಿಸುತ್ತ, ಜಾತಿಗಣತಿ ವರದಿ ಯಾರು ನೋಡಿದ್ದಾರೆ. ಅದನ್ನು ನೋಡುವ ಮುಂಚೆ ಕೇಳುವುದು ಸರಿಯೇ? ವರದಿ ಸಲ್ಲಿಕೆ ಆಗಿದ್ದರೆ ಅದರ ವರದಿ ಎಲ್ಲಿದೆ” ಎಂದರು.