Advertisement

ಮೋದಿ ಅಲೆಯೂ ಇಲ್ಲ, ಬಿಜೆಪಿ ಗಾಳಿಯೂ ಇಲ್ಲ; ಫ‌ಲಿತಾಂಶದ ಬಳಿಕವೂ ನಮ್ಮ ಸರಕಾರ ಸುಭದ್ರ

11:48 PM Apr 20, 2024 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದಕ್ಷಿಣ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಎಲ್ಲಿಯೂ ಇಲ್ಲ, ಬಿಜೆಪಿ ಗಾಳಿಯೂ ಇಲ್ಲ. ರಾಜ್ಯದಲ್ಲಿ ಎಲ್ಲೆಡೆ ಕಾಂಗ್ರೆಸ್‌ನ ದೊಡ್ಡಮಟ್ಟದ ಅಲೆ ಎದ್ದು ಕಾಣುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಿದ್ದ ವಾತಾವರಣವೇ ಈಗಿನ ಲೋಕಸಮರದಲ್ಲೂ ಕಾಣಬಹುದಾಗಿದೆ. ಹೀಗಾಗಿ ನಮ್ಮ ಗುರಿಯನ್ನು ನಾವು ತಲುಪುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಚುನಾವಣೆ ಹಿನ್ನೆಲೆಯಲ್ಲಿ “ಉದಯವಾಣಿ’ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳನ್ನು ಮೆಲುಕು ಹಾಕಿದ ಅವರು, ಲೋಕಸಭಾ ಚುನಾವಣೆಯ ಫ‌ಲಿತಾಂಶದ ಬಳಿಕವೂ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಸುಭದ್ರವಾಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ, ಜೆಡಿಎಸ್‌ನವರು ತಮ್ಮ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಈ ರೀತಿಯ ಗುಲ್ಲು ಹಬ್ಬಿಸುತ್ತಿದ್ದಾರೆ. ಇದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು. 10 ವರ್ಷಗಳ ಅವಧಿಯಲ್ಲಿ ಬಿಜೆಪಿ ಸಾಧನೆ ಏನೆಂಬುದನ್ನು ತೋರಿಸಲಿ. ನಾವು ಯಶಸ್ವಿಯಾಗಿ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ, ಈಗ ಮೋದಿ ಗ್ಯಾರಂಟಿ ಎಂದು ಬೊಬ್ಬೆ ಹಾಕುತ್ತಿರುವವರು 10 ವರ್ಷ ಏನು ಮಾಡುತ್ತಿದ್ದರು. ಆ ಕಾರಣಕ್ಕಾಗಿಯೇ ನಾವು ಬಿಜೆಪಿ ವಿರುದ್ಧ ಚೊಂಬು ಜಾಹೀರಾತು ನೀಡಿದ್ದೇವೆ ಎಂದರು.
ಸಂದರ್ಶನದ ಪೂರ್ಣ ಪಾಠ ಇಲ್ಲಿದೆ….

ಮೊದಲ ಹಂತದ ಕ್ಷೇತ್ರಗಳ ಹಲವು ಪ್ರಚಾರ ಸಭೆ ಗಳಲ್ಲಿ ಭಾಗವಹಿಸಿದ್ದೀರಿ, ಜನ ಸ್ಪಂದನೆ ಹೇಗಿದೆ?
ರಾಜಕೀಯ ಸಭೆ, ಸಮಾರಂಭಗಳು, ರ್ಯಾಲಿ, ರೋಡ್‌ಶೋಗಳಿಗೆ ಜನರನ್ನು ಕರೆದುಕೊಂಡು ಬರಬೇಕೆಂಬುದು ನಿಮಗೆ ಗೊತ್ತೇ ಇದೆ. ಆದರೆ ಈಗ ಕಾಂಗ್ರೆಸ್‌ನ ಸಮಾವೇಶಗಳಿಗೆ ಸ್ವಯಂಪ್ರೇರಣೆಯಿಂದ ಜನ ಬರುತ್ತಿದ್ದಾರೆ, ಅದರಲ್ಲೂ ವಿಶೇಷವಾಗಿ ಮಹಿಳೆಯರು, ಯುವಕ-ಯುವತಿಯರೇ ಹೆಚ್ಚಾಗಿ ಕಾಣುತ್ತಾರೆ. ಅಷ್ಟೇ ಅಲ್ಲದೆ ಸಮಾಜದ ಪ್ರತಿಯೊಂದು ಜಾತಿ, ಧರ್ಮ, ಜನಾಂಗದ ಜನರು ಕಾಂಗ್ರೆಸ್‌ ಸಮಾವೇಶ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆಂದರೆ ಅದು ಜನಸ್ಪಂದನೆ ಅಲ್ಲವೇ? ಹೋದ ಕಡೆಯಲ್ಲೆಲ್ಲ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ದೊರೆತಿದೆ. ಆ ಕಾರಣಕ್ಕಾಗಿಯೇ ನಾನು ಹೇಳಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಪರವಾಗಿ ದೊಡ್ಡ ಅಲೆ ಇದೆ ಎಂದು.

ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಬಿಟ್ಟು ಜನರ ಬಳಿ ಮತ ಕೇಳಲು ಏನಿದೆ?
ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಯುವ ನಿಧಿ ಒಂದಲ್ಲ ಒಂದು ರೀತಿ ರಾಜ್ಯದ ಪ್ರತಿ ಮನೆ ತಲುಪಿವೆ. ಹೀಗಾಗಿ ರಾಜ್ಯದ 1.20 ಕೋಟಿ ಕುಟುಂಬದಲ್ಲೂ ನಾವು ಇದ್ದೇವೆ. ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ರೂ. ಖರ್ಚಾಗುತ್ತಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ನೀರಾವರಿ, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಸಮಾಜ ಕಲ್ಯಾಣ ಸಹಿತ ಅನೇಕ ಇಲಾಖೆಗಳಲ್ಲಿ ಅಭಿವೃದ್ಧಿ ಕೆಲಸಗಳು ನಿರಂತವಾಗಿ ನಡೆದಿವೆ, ಯಾವುದನ್ನೂ ನಿಲ್ಲಿಸಿಲ್ಲ. ಬಿಜೆಪಿ-ಜೆಡಿಎಸ್‌ನವರು ಕೇವಲ ಅಪಪ್ರಚಾರ ಮಾಡುತ್ತಿದ್ದಾರೆ ಅಷ್ಟೆ.

ನಿಮ್ಮ ಗ್ಯಾರಂಟಿ ತಾತ್ಕಾಲಿಕ, ಮೋದಿ ಗ್ಯಾರಂಟಿಯೇ ಖಾಯಂ ಎನ್ನುತ್ತಿದೆ ಬಿಜೆಪಿ?
ಮೊದಲು ಬೆಲೆ ಏರಿಕೆ ತಡೆಗಟ್ಟಲಿ, ಕೋಟ್ಯಂತರ ನಿರುದ್ಯೋಗಿಗಳಿಗೆ ಕೆಲಸ ಕೊಡಲಿ. ಬೆಲೆ ಕುಸಿತ ಸಹಿತ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ರೈತ ಸಮುದಾಯವನ್ನು ರಕ್ಷಣೆ ಮಾಡಲಿ. ವಿಶೇಷವಾಗಿ ಕೇಂದ್ರ ಸರಕಾರದ ಕೆಲವು ನೀತಿ-ನಿಯಮಗಳಿಂದ ರೈತರಿಗೆ ಆಗಿರುವ ಅನ್ಯಾಯ-ಮೋಸವನ್ನು ಸರಿಪಡಿಸಲಿ.ಆಮೇಲೆ ಯಾವುದು ತಾತ್ಕಾಲಿಕ, ಯಾವುದು ಕಾಯಂ ಗ್ಯಾರಂಟಿ ಎಂಬುದರ ಬಗ್ಗೆ ಬಿಜೆಪಿ ಮಾತನಾಡಲಿ. ನಮ್ಮ ಗ್ಯಾರಂಟಿಗಳನ್ನು ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಅದಕ್ಕಾಗಿ ಈ ರೀತಿ ಟೀಕೆಗಳು.

Advertisement

ಹಾಗಾದರೆ ಬಿಜೆಪಿ ಸರಕಾರದಿಂದ ರಾಜ್ಯಕ್ಕೆ ಏನು ಅನುಕೂಲ ಆಗಿಲ್ಲವೇ?
ಏನು ಅಗಿಲ್ಲವೆಂದು ಹೇಳುವುದಕ್ಕಿಂತಲೂ ರಾಜ್ಯದ ಮೂರು ಪ್ರಮುಖ ನೀರಾವರಿ (ಕುಡಿಯುವ) ಯೋಜನೆಗಳಾದ ಮಹಾದಾಯಿ, ಮೇಕೆದಾಟು ಹಾಗೂ ಭದ್ರಾ ಯೋಜನೆಗಳಿಗೆ ಕೇಂದ್ರದ ಕೆಲವು ಇಲಾಖೆಗಳಿಂದ ಸಿಗಬೇಕಾದ ಅನುಮತಿ, ಅನುಮೋದನೆ ಯಾಕೆ ನೀಡಿಲ್ಲ. ಕೇಂದ್ರದ ಬಜೆಟ್‌ನಲ್ಲಿ ಭದ್ರಾ ಯೋಜನೆಗೆ ಘೋಷಿಸಿದ ಹಣದಲ್ಲಿ ಒಂದು ಪೈಸೆ ಕೂಡ ನೀಡಿಲ್ಲ. ಇದಕ್ಕಾಗಿಯೇ ಹೇಳಿದ್ದು ಇದೆಲ್ಲ “ಚೊಂಬು’.

ಸಚಿವರಿಗೆ ಕೇಳಿದರೂ ಸ್ಪರ್ಧಿಸುವ ಧೈರ್ಯ ತೋರಲಿಲ್ಲ ಎಂಬ ಮಾತಿದೆ. ಅಂತಿಮವಾಗಿ ಸಚಿವರ ಮಕ್ಕಳಿಗೆ ಟಿಕೆಟ್‌ ಕೊಡಲಾಗಿದೆ, ಬೇರೆ ಯಾರೂ ಅಭ್ಯರ್ಥಿಗಳು ಇರಲಿಲ್ಲವೇ?
ಹಿರಿಯರು, ಅನುಭವಿಗಳು ಆಗಿರುವ ಸಚಿವ ಡಾ| ಎಚ್‌.ಸಿ.ಮಹದೇವಪ್ಪ ಅವರಂತಹವರು ಲೋಕಸಭೆಯಲ್ಲಿ ಇರಬೇಕೆಂದು ಪಕ್ಷ ಬಯಸಿತ್ತು. ಕ್ಷೇತ್ರದ ಶಾಸಕರೆಲ್ಲರೂ ಒಟ್ಟಿಗೆ ಬಂದು ಮಹದೇವಪ್ಪ ಅವರೇ ಸೂಕ್ತ ಅಭ್ಯರ್ಥಿಯೆಂದು ಹೇಳಿದ್ದರು. ಉಳಿದಂತೆ ಯಾವುದೇ ಸಚಿವರ ಸ್ಪರ್ಧೆ ಬಗ್ಗೆ ಚರ್ಚೆ ಆಗಿರಲಿಲ್ಲ. ಆದರೆ ಮಹದೇವಪ್ಪ ಅವರು ರಾಜ್ಯ ರಾಜಕಾರಣದಲ್ಲೇ ಮುಂದುವರಿಯುವುದಾಗಿ ಹೇಳಿದ್ದರಿಂದ ಅವರ ಸ್ಪರ್ಧೆಯ ಪ್ರಸ್ತಾವ ಕೈಬಿಡಲಾಯಿತು. ಸಚಿವರ ಮಕ್ಕಳು, ಸಂಬಂಧಿಕರು ಅನ್ನುವುದಕ್ಕಿಂತಲೂ ಅವರೆಲ್ಲರೂ ಪಕ್ಷದ ಕಾರ್ಯಕರ್ತರು. ಹೀಗಾಗಿ ಭವಿಷ್ಯದ ನಾಯಕತ್ವ ರೂಪಿಸುವುದಕ್ಕಾಗಿ ಯುವ ಮುಖಗಳಿಗೆ ಅವಕಾಶ ಕೊಡಲಾಗಿದೆ.

ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಡಾ| ಸಿ.ಎನ್‌.ಮಂಜುನಾಥ್‌ ಸ್ಪರ್ಧೆ ಕಾಂಗ್ರೆಸ್‌ ನಿದ್ದೆಗೆಡಿಸಿದೆಯಾ?
ನೋಡಿ, ವೃತ್ತಿಗೂ ಸಮಾಜ ಸೇವೆಗೂ ಬಹಳ ವ್ಯತ್ಯಾಸವಿದೆ. ಡಾ| ಮಂಜುನಾಥ್‌ ಸರಕಾರಿ ಸೇವಕರಾಗಿ ಅವರ ಕರ್ತವ್ಯವನ್ನು ಅವರು ಮಾಡಿದ್ದಾರೆ. ಅದರಲ್ಲಿ ದೊಡ್ಡತನ ಏನಿಲ್ಲ. ಎಲ್ಲ ಸರಕಾರಗಳು ಜಯದೇವ ಸಂಸ್ಥೆ ಬೆಳವಣಿಗೆಗೆ ಬೆಂಬಲವಾಗಿ ನಿಂತು ಕೆಲಸ ಮಾಡಿವೆ. ಆದರೆ ಸಂಸದ ಡಿ.ಕೆ.ಸುರೇಶ್‌ ಕೇವಲ ಕೊರೊನಾ ಮಾತ್ರವಲ್ಲದೆ, ಕಳೆದ 5 ವರ್ಷಗಳಲ್ಲಿ ಕ್ಷೇತ್ರಗಳಲ್ಲಿ ಮಾಡಿರುವ ಕೆಲಸಗಳು, ಸಾಧನೆಗಳಿಗೆ ದೇಶದ ಯಾವುದೇ ಲೋಕಸಭಾ ಸದಸ್ಯ ಸರಿಸಾಟಿ ಇಲ್ಲ. ಇದನ್ನು ನಾನು ಹೆಮ್ಮೆ ಹಾಗೂ ಧೈರ್ಯದಿಂದ ಹೇಳುತ್ತೇನೆ. ಕೇಂದ್ರದಲ್ಲಿ ಸಚಿವರಾಗಿದ್ದ ರಾಜ್ಯದ ಸಂಸದರೊಬ್ಬರು ಕೊರೊನಾದಿಂದ ಮೃತಪಟ್ಟ ಸಂದರ್ಭದಲ್ಲಿ ಅವರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತಂದು ಅಂತಿಮ ಸಂಸ್ಕಾರ ಮಾಡಲು ಈ ಬಿಜೆಪಿ ಸರಕಾರಕ್ಕೆ ಆಗಲಿಲ್ಲ. ಆದರೆ ಡಿ.ಕೆ.ಸುರೇಶ್‌ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೆಣ ಹೊತ್ತು ಅಂತ್ಯಸಂಸ್ಕಾರ ಮಾಡಿದ್ದಾರೆ. ಕ್ಷೇತ್ರದ ಜನರಿಗೆ ಆಗ ಬೇಕಾಗಿದ್ದ ಆಸ್ಪತ್ರೆ, ಔಷಧಗಳನ್ನು ಪೂರೈಸಿದ್ದಾರೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಏನೇನು ಕೆಲಸ ಮಾಡಿದ್ದಾರೆ ಗೊತ್ತಾ? ದೇವೇಗೌಡರು, ಕುಮಾರಸ್ವಾಮಿ ಏನು ಮಾಡಿದ್ದಾರೆ ಹೇಳಲಿ?

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಸರಕಾರ ಪತನಗೊಳ್ಳಲಿದೆ ಎಂದು ದೇವೇಗೌಡರು ಹೇಳಿದ್ದಾರಲ್ಲ?
ಜೂ. 4ರಂದು ಚುನಾವಣೆ ಫ‌ಲಿತಾಂಶ ಹೊರಬಿದ್ದ ಬಳಿಕವೂ ನಮ್ಮ ಸರಕಾರ ಸುಭದ್ರವಾಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಆದರೆ ಫ‌ಲಿತಾಂಶ ಬಂದ ಬಳಿಕ ಜೆಡಿಎಸ್‌ ಹೋಳಾಗಲಿದೆ ಇಲ್ಲವೇ ಬಿಜೆಪಿ ಜತೆ ವಿಲೀನವಾಗಲಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಮಾತ್ರ ಬಿಜೆಪಿ ಜತೆ ಹೋಗಿದ್ದಾರೆ, ಕಾರ್ಯಕರ್ತರು ಈ ಮೈತ್ರಿಯನ್ನು ಒಪ್ಪಿಲ್ಲ, ಜೆಡಿಎಸ್‌ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಕಾದು ನೋಡಿ.

ಈ ಚುನಾವಣೆಯಲ್ಲಿ ಗೆದ್ದರೆ ಯಶಸ್ಸು ಯಾರ ಹೆಗಲಿಗೆ, ಸೋತರೆ ಹೊಣೆ ಯಾರು?
ಸೋಲುವ ಪ್ರಶ್ನೆ ಇಲ್ಲ, ಸೋಲೇ ಇಲ್ಲದಿರುವಾಗ ಗೆದ್ದೇ ಗೆಲ್ಲುತ್ತೇವೆ, ಆ ಯಶಸ್ಸು ಎಲ್ಲರಿಗೂ ಸಿಗುತ್ತದೆ.

ದೇವೇಗೌಡರು ಹಾಗೂ ಕುಮಾರಸ್ವಾಮಿ ಇತ್ತೀಚೆಗೆ ಮಾಡಿರುವ ಆರೋಪಗಳ ಬಗ್ಗೆ ಏನು ಹೇಳುವಿರಿ?
ಅವರಿಬ್ಬರ ಬಗ್ಗೆ ನನಗೆ ಈಗಲೂ ಗೌರವವಿದೆ. ಆದರೆ ವೈಯಕ್ತಿಕ ನಿಂದನೆಗಿಳಿದಾಗ ಸುಮ್ಮನೆ ಇರುವುದಿಲ್ಲ. ಏಟಿಗೆ ಎದುರೇಟು ಕೊಡಬೇಕಾಗುತ್ತದೆ. ಬೆನ್ನಿಗೆ ಚೂರಿ, ವಿಷ ಹಾಕಿದರೆಂದು ಹೇಳುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕಿದವರನ್ನೇ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ, ಅವರಿಗೆ ಮಾನ, ಮರ್ಯಾದೆ ಇಲ್ಲವೇ? ನನ್ನ ಮೇಲೆ ಏನೇ ಆರೋಪ ಮಾಡಲಿ, ಭಯ ಇಲ್ಲ. ಆದರೆ, ಆರೋಪಗಳ ಬಗ್ಗೆ ದೂರು ಕೊಟ್ಟು ತನಿಖೆ ಮಾಡಿಸಲಿ, ಅದಕ್ಕೂ ನಾನು ಸಿದ್ಧನಿದ್ದೇನೆ. ಇದು ಒಕ್ಕಲಿಗರ ಸ್ವಾಭಿಮಾನದ ಪ್ರಶ್ನೆ.

– ಎಂ.ಎನ್‌.ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next