Advertisement

ವಿಷಾದವಾಗಲಿ, ವಿನೋದವಾಗಲಿ ಅದೇನೆ ಬಂದರೂ ಅವನೆ ಕಾರಣ!

03:23 PM Sep 25, 2017 | |

“ನೋ ರಿಗ್ರೆಟ್ಸ್‌… ಐ ಯಾಮ್‌ ಹ್ಯಾಪಿ’ 
– ಹೀಗೆ ಹೇಳಿ ನಗೆ ಬೀರಿದರು ಚಿರಂಜೀವಿ ಸರ್ಜಾ. ಅವರ ಎದುರು “ಸಂಹಾರ’ ಚಿತ್ರದ ಪೋಸ್ಟರ್‌ ಇತ್ತು. ಅದರಲ್ಲಿ ಅವರದೊಂದು ವಿಭಿನ್ನ ಗೆಟಪ್‌ನ ಫೋಟೋ ಹಾಕಲಾಗಿತ್ತು. “ನೋಡಿ ಈಗ “ಸಂಹಾರ’ ಮಾಡುತ್ತಿದ್ದೇನೆ. ಎಲ್ಲವೂ ಒಂದು ವಿಶ್ವಾಸದ, ನಂಬಿಕೆಯ ಮೇಲೆ ಮಾಡುವ ಸಿನಿಮಾ. ಪಾತ್ರ ಚೆನ್ನಾಗಿದೆ. ಮುಂದೆ ಚೆನ್ನಾಗಿ ಆಗಬಹುದೆಂಬ ವಿಶ್ವಾಸವಿದೆ. ಅದರಂತೆ ಇಷ್ಟು ವರ್ಷಗಳಲ್ಲಿ ಸಿನಿಮಾ ಒಪ್ಪಿಕೊಳ್ಳುತ್ತಾ ಬಂದೆ. ಅದರಲ್ಲಿ ಕೆಲವು ಸಿನಿಮಾ ಗೆದ್ದರೆ, ಇನ್ನು ಕೆಲವು ಚಿತ್ರಗಳು ನಿರೀಕ್ಷಿತ ಮಟ್ಟ ತಲುಪಲಿಲ್ಲ. ಹಾಗಂತ ನನ್ನ ಪ್ರಯತ್ನ, ಶ್ರಮ ಯಾವತ್ತೂ ಕಮ್ಮಿಯಾಗಿಲ್ಲ’ ಎನ್ನುತ್ತಾರೆ ಚಿರಂಜೀವಿ ಸರ್ಜಾ. 

Advertisement

ಚಿರಂಜೀವಿ ಸರ್ಜಾ ಚಿತ್ರರಂಗಕ್ಕೆ ಬಂದು ಹತ್ತು ವರ್ಷ ಆಗುತ್ತಾ ಬಂತು. ಈ ಹತ್ತು ವರ್ಷಗಳಲ್ಲಿ ಅವರು ಮಾಡಿದ್ದು 14 ಸಿನಿಮಾ. ಅವರೇ ಹೇಳಿದಂತೆ ಈ 14 ಸಿನಿಮಾಗಳಲ್ಲಿ ಸೋಲು-ಗೆಲುವು ಎರಡೂ ಇದೆ. ಈ ಹತ್ತು ವರ್ಷಗಳಲ್ಲಿ ಚಿರಂಜೀವಿ ಸರ್ಜಾ ಬದುಕನ್ನು ಕಲಿತಿದ್ದಾರೆ. ಮುಖ್ಯವಾಗಿ ಚಿತ್ರರಂಗದಲ್ಲಿ ಹೇಗೆ ಬದುಕಬೇಕು, ಇಲ್ಲಿ ನೆಲೆ ನಿಲ್ಲಬೇಕಾದರೆ ಹೇಗಿರಬೇಕಾಗುತ್ತದೆ ಎಂಬುದು ಅವರಿಗೆ ಚೆನ್ನಾಗಿ ಅರ್ಥವಾಗಿದೆ. ಹಾಗಾಗಿಯೇ “ಚಿತ್ರರಂಗ ನನಗೆ ಸಾಕಷ್ಟು ಕಲಿಸಿದೆ’ ಎನ್ನುತ್ತಾರೆ ಚಿರು. “ಚಿತ್ರರಂಗಕ್ಕೆ ಬಂದ ಮೇಲೆ ಸಾಕಷ್ಟು ಕಲಿತೆ. ಕಲಿತೆ ಅನ್ನೋದಕ್ಕಿಂತ ಚಿತ್ರರಂಗವೇ ಕಲಿಸಿತು ಎನ್ನಬಹುದು. ಒಳ್ಳೆಯದು, ಕೆಟ್ಟದು ಎಲ್ಲದನ್ನೂ ನೋಡಿಬಿಟ್ಟೆ. ಇಲ್ಲಿ ನೀವು ನೆಲೆನಿಲ್ಲಬೇಕೆಂದರೆ ನೀವು ಸ್ಟ್ರಾಂಗ್‌ ಆಗಲೇಬೇಕು. ಅದು ಒಳ್ಳೆಯ ರೀತಿಯಲ್ಲಿ. ನಿಮ್ಮ ಕೆರಿಯರ್‌ ರೂಪಿಸುವ ಜವಾಬ್ದಾರಿ ಕೂಡಾ ನಿಮ್ಮ ಕೈಯಲ್ಲಿದೆ. ನಿಮ್ಮೆದುರು ಒಂದು ಹುಲಿ ಇದೆ. ಅದರಿಂದ ತಪ್ಪಿಸಿಕೊಂಡರೆ ನೀವು ಬದುಕುತ್ತೀರಿ. ಇಲ್ಲವಾದರೆ ಕಥೆ ಮುಗಿಯುತ್ತದೆ. ಇಲ್ಲೂ ಅಷ್ಟೇ ನೀವು ಎಷ್ಟು ಜಾಣ್ಮೆಯಿಂದ ಹೆಜ್ಜೆ ಇಡುತ್ತೀರಿ ಅನ್ನೋದರ ಮೇಲೆ ನಿಮ್ಮ ಕೆರಿಯರ್‌ ರೂಪುಗೊಳ್ಳುತ್ತದೆ’ ಎನ್ನುವ ಚಿರು, ನೀವು ಚೂಸಿಯಾಗಿದ್ದಷ್ಟು ಒಳ್ಳೆಯದು ಎನ್ನಲು ಮರೆಯುವುದಿಲ್ಲ. “ಚಿತ್ರರಂಗದಲ್ಲಿ ಚೂಸಿಯಾಗಿದ್ದಷ್ಟು ಒಳ್ಳೆಯದು ಅನ್ನೋದು ನನ್ನ ಅನಿಸಿಕೆ. ತುಂಬಾ ಆಲೋಚಿಸಿ ಸಿನಿಮಾ ಒಪ್ಪಿಕೊಳ್ಳಬೇಕು. ಅದು ಬಿಟ್ಟು ನಾನು ವರ್ಷಕ್ಕೆ ಮೂರು ಸಿನಿಮಾ ಮಾಡಲೇಬೇಕು ಅಥವಾ ಇನ್ಯಾವುದೋ ಫೈನಾನ್ಷಿಯಲ್‌ ಕಮಿಟ್‌ಮೆಂಟ್‌ ಇದೆ, ಚಿತ್ರ ಬಾರದಿದ್ದರೆ ಯಾರು ಏನು ಭಾವಿಸುತ್ತಾರೋ ಅಂದುಕೊಂಡು ಇದ್ದಬದ್ದ ಸಿನಿಮಾ ಒಪ್ಪಿಕೊಂಡರೆ ಅದು ನಟನ ಕೆರಿಯರ್‌ ಮೇಲೆ ಪರಿಣಾಮ ಬೀರುತ್ತದೆ. ಅದರ ಬದಲು ತಡವಾದರೂ ವರ್ಷಕ್ಕೆ ಒಂದೇ ಸಿನಿಮಾ ಮಾಡ್ತೀನಿ. ಅದು ಕ್ವಾಲಿಟಿ ಸಿನಿಮಾ ಎಂದು ಕಮಿಟ್‌ ಆದರೆ ಚೆನ್ನಾಗಿರುತ್ತದೆ’ ಎನ್ನುತ್ತಾರೆ. ಆರಂಭದ ದಿನಗಳಲ್ಲಿ ಚಿರುಗೂ ಆ ತರಹದ ಒಂದು ಮನಃಸ್ಥಿತಿ ಇತ್ತಂತೆ. 

ನಟನೆ ಬರಲ್ಲ ಅಂದ್ರು
ಚಿರಂಜೀವಿ ಸರ್ಜಾ ಚೂಸಿಯಾಗಲು, ಸಿನಿಮಾದ ಕುರಿತಂತೆ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲು ಮಾಧ್ಯಮ ಕೂಡಾ ಒಂದು ಕಾರಣ ಎಂದರೆ ತಪ್ಪಲ್ಲ. ಅದನ್ನು ಚಿರು ಕೂಡಾ ಒಪ್ಪಿಕೊಳ್ಳುತ್ತಾರೆ. “ಆರಂಭದ ದಿನಗಳಲ್ಲಿ ಕೆಲವು ಪತ್ರಿಕೆಗಳಲ್ಲಿ ನನಗೆ ನಟನೆ ಬರಲ್ಲ ಅಂತಹ ಬರೆದರು. ನನಗೆ ಶಾಕ್‌ ಆಯಿತು, ಏಕೆಂದರೆ ಅಷ್ಟೊತ್ತಿಗಾಗಲೇ ನಾನು ಮೂರ್‍ನಾಲ್ಕು ಸಿನಿಮಾಗಳನ್ನು ಮಾಡಿದ್ದೆ. ಈಗ ನನಗೆ ನಟನೆ ಬರಲ್ಲ ಅಂದರೆ ಹೇಗೆ ಎಂದು ಆಲೋಚಿಸಿದೆ. ಹಾಗಂತ ನಾನು ಬೇಸರ, ಸಿಟ್ಟು ಮಾಡಿಕೊಳ್ಳಲಿಲ್ಲ. ಬದಲಾಗಿ ಅದನ್ನು ಸ್ಫೋರ್ಟಿವ್‌ ಆಗಿ ತಗೊಂಡೆ. ಸಿನಿಮಾ ನೋಡುವ ದೃಷ್ಟಿಕೋನವನ್ನು ಬದಲಿಸಿಕೊಳ್ಳುವ ಜೊತೆಗೆ ನಟನೆಯತ್ತ ಹೆಚ್ಚು ಗಮನಕೊಡಲಾರಂಭಿಸಿದೆ. ಮುಂದಿನ ಸಿನಿಮಾ ರಿಲೀಸ್‌ ಆದಾಗ ಮತ್ತೂಂದು ಕಾಮೆಂಟ್‌ ಬಂತು. ನಟನೆಯಲ್ಲಿ ಚಿರು ಸುಧಾರಿಸಿದ್ದಾರೆ. ಆದರೆ ಅವರು ಸಿನಿಮಾದ ಆಯ್ಕೆ ವಿಚಾರದಲ್ಲಿ ಎಚ್ಚರ ವಹಿಸಬೇಕು ಎಂದು. ಆಗ ಒಂದು ವಿಚಾರ ಅರ್ಥವಾಯಿತು ನನಗೆ, ದಾರಿಯಲ್ಲಿ ಮುಳ್ಳು ಹಾಕುವವರೂ ಜನರೇ. ಅದನ್ನು ನನ್ನ ಕೈಯಿಂದ ತೆಗೆಸುವಂತೆ ಮಾಡುವವರೂ ಅವರೇ ಎಂಬುದು. ಈ ಮೂಲಕ ಸರಿ ದಾರಿಯಲ್ಲಿ ನಡೆಯಲು ಜನ ಕಾರಣರಾದರು’ ಎನ್ನಲು ಚಿರು ಮರೆಯುವುದಿಲ್ಲ.

ಚಿರಂಜೀವಿ ಸರ್ಜಾಗೆ ಒಂದಷ್ಟು ವಿಭಿನ್ನ ಸಿನಿಮಾಗಳನ್ನು ಮಾಡಿದ ಹಾಗೂ ಯಾವುದೇ ಒಂದು ಜಾನರ್‌ಗೆ ಅಂಟಿಕೊಳ್ಳದ ಬಗ್ಗೆ ಖುಷಿ ಇದೆ. “ನಾನು “ಆಟಗಾರ’ ಕಥೆಯನ್ನು ರಾತ್ರಿ 12.30ಕ್ಕೆ ಕೇಳಿದ್ದು. ಅದು ಕೂಡಾ ನನಗಾಗಿ ಅಲ್ಲ. ಯೋಗಿ ಯಾರೋ ಹೊಸಬರಿಗೆ ಮಾಡಬೇಕೆಂದುಕೊಂಡಿದ್ದರು. ಸುಮ್ಮನೆ ಕಥೆ ಹೇಳಿದರು. ಕಥೆ ಕೇಳಿ ಖುಷಿಯಾಯಿತು, ನಾನು ಮಾಡುತ್ತೇನೆ ಎಂದೆ. ಆ ಸಿನಿಮಾ ಬಗ್ಗೆ ಒಳ್ಳೆಯ ಮೆಚ್ಚುಗೆ ಬಂತು. ಇನ್ನು, “ಚಂದ್ರಲೇಖಾ’ ಸಿನಿಮಾ ಮಾಡಲು ಹೊರಟಾಗಲೂ, “ನೀನು ಚಂದ್ರಲೇಖಾ ಮಾಡುತ್ತೀಯಾ, ನಿನಗೆ ಅದು ಸೆಟ್‌ ಆಗುತ್ತಾ, ನಿನ್ನ ಇಮೇಜ್‌ ಆ್ಯಕ್ಷನ್‌ ಹೀರೋ’ ಎಂದು ಅನೇಕರು ಹೇಳಿದರು. ಮೂಲ ಸಿನಿಮಾ ನೋಡಿದಾಗ ನನಗೆ ತುಂಬಾ ಇಷ್ಟವಾಯಿತು. ಹಾರರ್‌, ಕಾಮಿಡಿ ಎರಡೂ ಬ್ಲೆಂಡ್‌ ಆಗಿದ್ದ ಕಥೆಯದು. ನಾನು ಒಪ್ಪಿಕೊಂಡೆ. ಮುಖ್ಯವಾಗಿ ನನ್ನ ತಲೆಯಲ್ಲಿ ಇರೋದು ನಟ ಆಗಬೇಕು, ವಿಭಿನ್ನ ಪಾತ್ರ ಮಾಡಬೇಕೆಂದೇ ಹೊರತು, ಕೇವಲ ಆ್ಯಕ್ಷನ್‌ ಹೀರೋ ಆಗಬೇಕೆಂದಲ್ಲ. ಯಾರೇ ನಿರ್ದೇಶಕರು ಬಂದು ಕಥೆ ಹೇಳುವಾಗ ನಾನು ಒಬ್ಬ ಕಾಮನ್‌ ಆಡಿಯನ್ಸ್‌ ಆಗಿ ಕೇಳುತ್ತೇನೆ. ಕಥೆ ನನಗೆ ಓಕೆ ಅನಿಸಿ, ಸೂಥ್‌ ಆಗಿ ಹೋಗುತ್ತಿದೆ ಅನಿಸಿದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ಮೊದಲಿನಿಂದಲೂ ನಾನು ಅದನ್ನೇ ಮಾಡಿಕೊಂಡು ಬಂದಿದ್ದೇನೆ. ನನಗೆ ಈ ಸಿನಿಮಾ ಮಾಡಬೇಕೆಂದೆನಿಸಿದರೆ ಮಾತ್ರ ಮಾಡುತ್ತೇನೆ’ ಎಂದು ತಾವು ಚೂಸಿಯಾದ ಬಗ್ಗೆ ಹೇಳುತ್ತಾರೆ.

ಆಫ್ ಬೀಟ್‌ಗೂ ಬ್ರಾಂಡ್‌ ಆಗಲ್ಲ
ಚಿರು ಇತ್ತೀಚೆಗೆ “ಆಟಗಾರ’, “ಆಕೆ’ಯಂತಹ ಪ್ರಯೋಗಾತ್ಮಕ, ಆಫ್ಬೀಟ್‌ ಸಿನಿಮಾಗಳನ್ನು ಮಾಡಿದ್ದಾರೆ. ಹಾಗೆ ನೋಡಿದರೆ ಇವು ಅವರ ಆ್ಯಕ್ಷನ್‌ ಇಮೇಜ್‌ಗೆ ಸಂಪೂರ್ಣ ವಿಭಿನ್ನವಾದ ಸಿನಿಮಾ. ಆ ಬಗ್ಗೆ ಅವರಿಗೆ ಖುಷಿಯೂ ಇದೆ. ಜೊತೆಗೇ ಸಣ್ಣದೊಂದು ಭಯವೂ ಇದೆ. ಈ ಹಿಂದಿನ ಸಿನಿಮಾಗಳಿಗಿಂತ “ಆಕೆ’ ಸಿನಿಮಾದಲ್ಲಿ ಚಿರು ವಿಭಿನ್ನವಾಗಿ ನಟಿಸಿದ್ದಾರೆಂಬ ಮಾತು ಕೇಳಿಬರುತ್ತಿರುವುದು ಖುಷಿಗೆ ಕಾರಣವಾದರೆ, ಮುಂದೆ ಈ ತರಹದ್ದೇ ಸಿನಿಮಾಗಳಿಗೆ ಬ್ರಾಂಡ್‌ ಆದರೆ ಎಂಬುದು ಭಯಕ್ಕೆ ಕಾರಣವಂತೆ. ಹಾಗಾಗಿಯೇ ಚಿರು “ಸಂಹಾರ’ದಂತಹ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳನ್ನು ಒಪ್ಪಿಕೊಂಡಿದ್ದಂತೆ. “ಬರೀ ಆಫ್ಬೀಟ್‌ ಮಾಡ್ಕೊಂಡು ಇರೋದೇ ಬೇಡ ಎಂಬ ಕಾರಣಕ್ಕೆ ಈಗ “ಸಂಹಾರ’ ಮಾಡುತ್ತಿದ್ದೇನೆ. ಮೊದಲೇ ಹೇಳಿದಂತೆ ಯಾವುದೇ ಒಂದು ಜಾನರ್‌ಗೆ ಅಂಟಿಕೊಳ್ಳಲು ನನಗೆ ಇಷ್ಟವಿಲ್ಲ’ ಎನ್ನುತ್ತಾರೆ ಚಿರು. ಇನ್ನು, ಬಿಡುವಿದ್ದಾಗ ಚಿರುತುಂಬಾ ಸಿನಿಮಾ ನೋಡುತ್ತಾರಂತೆ. ಪ್ರತಿ ಸಿನಿಮಾದಿಂದಲೂ ಏನನ್ನಾದರೂ ಕಲಿಯಬಹುದೆಂಬ ಕಾರಣಕ್ಕೆ ಹೆಚ್ಚೆಚ್ಚು ಸಿನಿಮಾ ನೋಡುವುದಾಗಿ ಹೇಳುತ್ತಾರೆ ಚಿರು.

Advertisement

ಚಿರಂಜೀವಿ ಸರ್ಜಾ ಸಹೋದರ, ಧ್ರುವ ಸರ್ಜಾ ಕೂಡಾ ಹೀರೋ. ಒಂದೇ ಮನೆಯಲ್ಲಿ ಇಬ್ಬರು ಹೀರೋಗಳು. ಮನೆಯಲ್ಲಿ ಅವರ ಬಾಂಡಿಂಗ್‌ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. “ಮನೆಯಲ್ಲಿ ನಾವು ಸಿನಿಮಾ ಬಗ್ಗೆ ಮಾತನಾಡೋದು ಕಡಿಮೆ. ಮನೆಗೆ ಹೋದ ಮೇಲೆ ನಾನು ಅಣ್ಣ, ಅವನು ತಮ್ಮ ಅಷ್ಟೇ. ಅದು ಬಿಟ್ಟು ನನ್ನ ಸಿನಿಮಾದ ಲೈನ್‌ ಹೇಳಿದರೆ ಚೆನ್ನಾಗಿದೆ, ವಕೌìಟ್‌ ಆಗುತ್ತೆ ಅಂತಾನೆ’ ಎನ್ನುವ ಚಿರು, ಧ್ರುವ ಅವರ ಹ್ಯಾಟ್ರಿಕ್‌ ಕನಸಿನ ಬಗ್ಗೆ ಹೇಳುತ್ತಾರೆ. 

“ಧ್ರುವ ನಟಿಸಿದ ಎರಡು ಸಿನಿಮಾಗಳು ಹಿಟ್‌ ಆಗಿವೆ. ಸಹಜವಾಗಿಯೇ ಮೂರನೇ ಸಿನಿಮಾ ಹಿಟ್‌ ಆದರೆ ಹ್ಯಾಟ್ರಿಕ್‌ ಆಗುತ್ತದೆ ಎಂಬ ಆಸೆ ಎಲ್ಲರಿಗೂ ಇರುತ್ತದೆ. ಧ್ರುವಾಗೂ ಆ ಆಸೆ ಇದೆ. ಹಾಗಾಗಿಯೇ ಸಿನಿಮಾ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳುತ್ತಾನೆ. ಅವನನ್ನು ಕನ್ವಿನ್ಸ್‌ ಮಾಡೋದು ಕಷ್ಟ’ ಎನ್ನುವುದು ಚಿರು ಮಾತು. 

ತಮ್ಮನ ಎದುರು ವಿಲನ್‌ ಆಗಲು ರೆಡಿ
ಚಿರಂಜೀವಿ ಸರ್ಜಾ ಅವರಿಗೂ ಅಂತಹ ಆಸೆಯಾಗಿದೆ. ಅದು ವಿಲನ್‌ ಆಗಿ ನಟಿಸಬೇಕೆಂಬುದು. ಅದಕ್ಕೆ ಕಾರಣ ಹೀರೋ ಅನ್ನೋದಕ್ಕಿಂತ ನಟ ಆಗಿ ಮಿಂಚೋದು ಮುಖ್ಯ ಎಂಬುದು. “ಹೀರೋ ಎಂಬ ಇಮೇಜ್‌ಗಿಂತ ಹೆಚ್ಚಾಗಿ ನಟ ಎಂಬ ಇಮೇಜ್‌ ಮುಖ್ಯ. ಆ ಕಾರಣದಿಂದ ನನಗೆ ನಟಿಸುವ ಆಸೆಯೂ ಇದೆ’ ಎನ್ನುತ್ತಾರೆ ಚಿರಂಜೀವಿ ಸರ್ಜಾ. ಚಿರು ತಮ್ಮ ಧ್ರುವ ಸರ್ಜಾ ಕೂಡಾ ಹೀರೋ. ಈ ಸೋದರರನ್ನು ಒಂದೇ ಸಿನಿಮಾದಲ್ಲಿ ತೋರಿಸಬೇಕೆಂಬ ಆಸೆ ಅನೇಕರಿಗಿರುವುದು ಸುಳ್ಳಲ್ಲ. ಆ ತರಹದ ಆಸೆ ಚಿರಂಜೀವಿ ಸರ್ಜಾಗೂ ಇದೆ. ತಮ್ಮನ ಎದುರು ತಾನು ವಿಲನ್‌ ಆಗಿ ನಟಿಸಲೂ ರೆಡಿ ಎನ್ನುತ್ತಾರೆ.

 “ಧ್ರುವನೊಂದಿಗೆ ನಟಿಸುವ ಆಸೆ ನನಗಿದೆ. ಆದರೆ, ಅದಕ್ಕೆ ಒಳ್ಳೆಯ ಕಥೆ, ಪೂರ್ವತಯಾರಿ ಬೇಕು. ಧ್ರುವನನ್ನು ಹೀರೋ ಆಗಿ ತೋರಿಸಿ, ನನ್ನನ್ನು ವಿಲನ್‌ ಆಗಿ ತೋರಿಸುವುದಾದರೂ ನಾನು ರೆಡಿ. ನನಗೆ ಆ ತರಹದ ಪ್ರಯೋಗಗಳು ಇಷ್ಟ. ಒಂದಾ ಅವನನ್ನು ಫ‌ುಲ್‌ಪ್ಲೆಡ್ಜ್ ಹೀರೋ ಆಗಿ ತೋರಿಸಲಿ, ಇಲ್ಲಾ ನನ್ನ ಫ‌ುಲ್‌ಪ್ಲೆಡ್ಜ್ ವಿಲನ್‌ ಆಗಿ ತೋರಿಸಲಿ. ಆದರೆ ಆ ಸಿನಿಮಾದಲ್ಲಿ ಇಬ್ಬರಿಗೂ ಸಮಾನ ಅವಕಾಶ ಇರಬೇಕು. ನನಗೆ “ಬ್ರದರ್’ ಎಂಬ ಇಂಗ್ಲೀಷ್‌ ಸಿನಿಮಾ ರೀಮೇಕ್‌ ಮಾಡಿ, ನಾವಿಬ್ಬರೂ ಜೊತೆಯಾಗಿ ನಟಿಸಬೇಕೆಂಬ ಆಸೆಯಾಗುತ್ತದೆ. ಆದರೆ, ಅದು ಸ್ಲೋ ನರೇಶನ್‌, ಬೇಡ ಅಂತಾನೆ ಧ್ರುವ. ಮುಂದೆ ಒಳ್ಳೆಯ ಸಬೆjಕ್ಟ್ ಸಿಕ್ಕರೆ ನಟಿಸುತ್ತೇವೆ’ ಎನ್ನುತ್ತಾರೆ ಚಿರಂಜೀವಿ ಸರ್ಜಾ.

ರವಿಪ್ರಕಾಶ್‌ ರೈ; ಚಿತ್ರಗಳು: ಮನು ಮತ್ತು ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next