Advertisement

“ಜಲ’ಪರ ಯೋಜನೆ-ಯೋಚನೆ ನಮ್ಮಲ್ಲೆಷ್ಟಿದೆ?

06:00 AM Apr 22, 2018 | |

ಪಂಚಭೂತಗಳಲ್ಲಿ ಯಾವುದೇ ಒಂದರಲ್ಲಿ ಅಸಮತೋಲನ ಕಂಡು ಬಂದರೂ ಅದು ನಮ್ಮ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಈ ಅಸಮತೋಲನಕ್ಕೆ ನಮ್ಮ ನಿರ್ಲಕ್ಷ್ಯ, ವೈಜ್ಞಾನಿಕ ದೃಷ್ಟಿಕೋನದ ಕೊರತೆ, ಪರಿಸರ ಕುರಿತ ಅಜ್ಞಾನ ಕಾರಣವಾಗಿದೆ. ಇವತ್ತಿನ ನೀರಿನ ಪರಿಸ್ಥಿತಿಯನ್ನೇ ತೆಗೆದುಕೊಂಡರೆ “ನೀರಿದೆ, ಕುಡಿಯಲು ನೀರಿಲ್ಲ’ ಎಂಬ ಹಾಹಾಕಾರವಿದೆ. “ನೀರಿದೆ, ಹೊಲಗದ್ದೆಗಳಿಗೆ ನೀರಿಲ್ಲ’ ಎಂಬ ರೈತರ ಕಣ್ಣೀರಿದೆ. ಹಾಗಾದರೆ ಪ್ರಕೃತಿ ಮಾತೆ ಮುನಿಸಿಕೊಂಡಿದ್ದಾಳೆಯೇ? ಯಾಕೆ ಹೀಗಾಯಿತು? ಇದಕ್ಕೇನು ಪರಿಹಾರ? ನೂರಾರು ಪ್ರಶ್ನೆಗಳು ಸಮಸ್ಯೆಗಳ ಗರ್ಭದಲ್ಲಿ ಅಡಗಿ ಕುಳಿತಿವೆ.

Advertisement

ಪ್ರಕೃತಿ ನಿಜಕ್ಕೂ ಕರುಣಾಮಯಿ. ಪೃಥ್ವಿಯಲ್ಲಿ ಮೂರನೇ ಒಂದರಷ್ಟು ಭೂಭಾಗವಿದ್ದರೆ ಮೂರನೇ ಎರಡು ಭಾಗದಷ್ಟು ನೀರು ಇದೆ. ಭಾರತ ಪರ್ಯಾಯ ದ್ವೀಪ. ಮೂರು ಕಡೆ ನೀರು. ಕರ್ನಾಟಕದಲ್ಲಿ ಕಾವೇರಿ, ಕೃಷ್ಣೆ, ತುಂಗೆ, ಭದ್ರೆ, ಹೇಮಾವತಿ, ಶರಾವತಿ, ನೇತ್ರಾವತಿ, ಕುಮಾರಧಾರಾ, ನಂದಿನಿ, ಸೀತಾ ಎಷ್ಟೊಂದು ನದಿಗಳಿವೆ. ಬಿಜಾಪುರ ಜಿಲ್ಲೆಯಂತೂ ಐದು ನದಿಗಳನ್ನು ಹೊಂದಿರುವ ಕಾರಣದಿಂದ ಕರ್ನಾಟಕದ ಪಂಜಾಬ್‌ ಎನ್ನಿಸಿಕೊಂಡಿದೆ. ಇಷ್ಟೆಲ್ಲ ಇದ್ದೂ ನೀರಿಲ್ಲ ಎಂದರೆ ಏನರ್ಥ? ಈ ಅನರ್ಥಕ್ಕೆ ಕಾರಣವೇನು? ನೀರು, ವಾಯು ಪ್ರಾಕೃತಿಕ ಕೊಡುಗೆಗಳಾದ್ದರಿಂದ ನಾವು ಯಾವತ್ತೂ ಇವನ್ನು ಅರ್ಥಪೂರ್ಣವಾಗಿ ಬಳಸುವ ಬದಲು ಬೇಕಾಬಿಟ್ಟಿಯಾಗಿ ಬಳಸಿಕೊಂಡಿದ್ದೇವೆ. ಜನಸಂಖ್ಯೆ ಏರಿಕೆಗೆ ತಕ್ಕಂತೆ ಭೂಮಿಯ ವಿಸ್ತಾರ ಹೆಚ್ಚುವುದಿಲ್ಲ. ಜಲ ಮೂಲ ವಿಸ್ತೃತಗೊಳುವುದಿಲ್ಲ ಎಂಬ ಕನಿಷ್ಟ ಅರಿವೂ ಇಲ್ಲದಂತೆ ಭಂಡ ನಿರ್ಲಕ್ಷ್ಯದಿಂದ ನಡೆದುಕೊಂಡಿದ್ದೇವೆ. ಹೀಗೇ ಆದರೆ 2025ರ ಹೊತ್ತಿಗೆ ಜಗತ್ತಿನಾದ್ಯಂತ ಹಾಹಾಕಾರ ಶುರುವಾಗುತ್ತದೆ. ನೀರಿಗಾಗಿ ಯುದ್ಧಗಳೂ ಸಂಭವಿಸುವ ಸಾಧ್ಯತೆ ಇದೆ ಎಂದು ವಿಶ್ವ ಸಂಸ್ಥೆಯ ಅಧ್ಯಯನ ತಿಳಿಸಿದೆ. ಕಾವೇರಿಗಾಗಿ ಕರ್ನಾಟಕ- ತಮಿಳುನಾಡು ನಡುವಿನ ವಿವಾದ ಗೊತ್ತಿದೆ. ಆದರೆ ಕಾಶ್ಮೀರದಲ್ಲಿನ ಜಲಕ್ಕಾಗಿ ಮುಂದೆ ಭಾರತ-ಪಾಕ್‌ ನಡುವೆ ಯುದ್ಧ ಸಂಭವಿಸಬಹುದು ಎನ್ನುತ್ತಾರೆ ತಜ್ಞರು.  

ಅದೇನೇ ಇರಲಿ. ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಯಾವ ಕ್ರಮ ಅನುಸರಿಬಹುದು? ಸಮಸ್ಯೆ ಪರಿಹಾರ, ವೈಯಕ್ತಿಕ, ಸಾಮಾಜಿಕ ಮತ್ತು ಸರಕಾರ ಎಂಬ ಮೂರು ಪ್ರತ್ಯೇಕ ಕ್ರಮಗಳಿಂದ ಸಾಧ್ಯವಿದೆ. ವೈಯಕ್ತಿಕ ಎಂದರೆ ನಾವು ಪ್ರತಿಯೊಬ್ಬರು ನೀರಿನ ಮಿತವ್ಯಯ ಸಾಧಿಸುವ ಮುನ್ನ ನೀರಿನ ದುರ್ಬಳಕೆ ತಪ್ಪಿಸಬೇಕು. ನೀರು ಅನಗತ್ಯವಾಗಿ ಹರಿದು ಹೋಗುವುದನ್ನು ತಪ್ಪಿಸಬೇಕು. ಇದು ನಮ್ಮ ಮನೆಯಿಂದಲೇ ಆರಂಭವಾಗಬೇಕು. ಬೇರೆಯವರ ಮನೆ ಅಥವಾ ಸರಕಾರಕ್ಕೆ ಸಂಬಂಧಿಸಿದ್ದು ಎನ್ನುವಾಗ ನಮ್ಮ ಮನೋಭಾವವೇ ಬದಲಾಗುತ್ತದೆ. ನಮ್ಮ ಹಣ, ಆಭರಣ, ಮಕ್ಕಳು, ಕುಟುಂಬದ ಮೇಲೆ ಇರುವ ಪ್ರೀತಿ, ಮಮಕಾರವನ್ನೇ ನೀರಿನ ಮೇಲೂ ತೋರುವಂತಾಗಬೇಕು. ವೈಯಕ್ತಿಕವಾಗಿ ನಾವು ನೀರಿನ ಅಪವ್ಯಯ ತಪ್ಪಿಸಲು ಸಾಧ್ಯವಾದಷ್ಟೂ ಪ್ರಯತ್ನಗಳನ್ನು ನಡೆಸಬೇಕು. ಮಳೆಗಾಲದಲ್ಲಂತೂ ನಲ್ಲಿ, ಬಾವಿ, ಬೋರ್‌ವೆಲ್‌ಗ‌ಳನ್ನು ಆಶ್ರಯಿಸುವ ಬದಲು ಮನೆಯ ಛಾವಣಿಯನ್ನು ಶುದ್ಧಗೊಳಿಸಿ ಛಾವಣಿಯ ನಾಲ್ಕೂ ಮೂಲೆಗಳಿಗೆ ಪೈಪ್‌ಗ್ಳನ್ನು ಅಳವಡಿಸಿ ಸಂಗ್ರಹಿಸಿ ಬಳಸುವ ಕ್ರಮ ಸ್ವಾಗತಾರ್ಹ. ಮನೆಯಲ್ಲಿರುವ ಬಾವಿ, ಬೋರ್‌ವೆಲ್‌, ಕೆರೆಗಳಿಗೆ ಹೆಚ್ಚುವರಿ ಮಳೆ ನೀರನ್ನು ಇಂಗುಗುಂಡಿಗಳ ಮುಖೇನ ತುಂಬಿಸುವ ಮೂಲಕ ಜಲಮೂಲಗಳನ್ನು ಸಮೃದ್ಧಗೊಳಿಸಬೇಕು. ಈ ಕ್ರಮ ಅನುಸರಿಸಿದ ಕೆಲವು ಬಾವಿಗಳಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವ ಉದಾಹರಣೆಗಳಿವೆ. 

ಸಾಮಾಜಿಕವಾಗಿ ನೀರಿನ ಉಳಿತಾಯ, ಸಂಗ್ರಹ ಹೇಗೆ ಸಾಧ್ಯ? ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರಗಳಲ್ಲಿ ಇರುವ ಕೆರೆಗಳನ್ನು ಕಾಪಾಡಬೇಕು. ಕೆರೆಗಳ ಹೂಳೆತ್ತಿಸಿ ಮಳೆ ನೀರು ಸಂಗ್ರಹವಾಗುವಂತೆ ಮಾಡಬೇಕು. ಇದು ಸ್ವಂತ ಖರ್ಚಿನಿಂದ ಸಾಧ್ಯವಾಗುವುದಿಲ್ಲ. ಸರಕಾರದ ಮೇಲೆ ಜವಾಬ್ದಾರಿ ಹೊರಿಸುವ ಬದಲು ಊರ ಸಂಘ ಸಂಸ್ಥೆಗಳು ಸಾಮಾಜಿಕ ಸಂಸ್ಥೆಗಳ ನೆರವಿನಿಂದ ಪ್ರತಿಯೊಬ್ಬರೂ ಪವಿತ್ರ ಕಾರ್ಯವೆಂದು ಭಾವಿಸಿ ಪಾಲ್ಗೊಳ್ಳ ಬೇಕು. ಪ್ರತಿಯೊಬ್ಬರೂ ಇನ್ನೊಬ್ಬರ ಮನವೊಲಿಸಿ ನೀರು ಅಮೂಲ್ಯ ಸಂಪತ್ತೆಂಬ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಬೇಕು. ಕೈಗಾರಿಕಾ ಕೇಂದ್ರಗಳು ತಮ್ಮ ಕೊಳಚೆ ನೀರನ್ನು ಕೆರೆ, ನದಿಗಳಿಗೆ ಬಿಡದಂತೆ ತಡೆಯಲು ಎಚ್ಚರವಹಿಸಬೇಕು.  ಮತ್ತೆ ಮಳೆಯ ಪ್ರಮಾಣ ಏರಬೇಕಾದರೆ ಅರಣ್ಯದ ವಿಸ್ತೀರ್ಣವೂ ಹೆಚ್ಚಾಗಬೇಕು. ಒಂದು ಮರ ಕಡಿಯುವ ಸಂದರ್ಭ ಬಂದಾಗ ಕಡಿಯುವ ಮೊದಲು ಇನ್ನೆರಡು ಗಿಡಗಳನ್ನು ನೆಡುವಂತಹ ಪ್ರವೃತ್ತಿ ನಮ್ಮಲ್ಲಿ ಬೆಳೆಯಬೇಕು. ಕಾವೇರಿ ನೀರಿನ ಪಾಲು ಕೇಳುವ ತಮಿಳುನಾಡಿಗೆ ಮಳೆ ಮತ್ತು ಅರಣ್ಯಕ್ಕಿರುವ ಸಂಬಂಧವನ್ನು ಮನವರಿಕೆ ಮಾಡಿಕೊಡಬೇಕು. ತಮಿಳುನಾಡು ಕೂಡ ಅರಣ್ಯಾಭಿವೃದ್ಧಿಗೆ ತನ್ನ ಪಾಲನ್ನು ನೀಡುವಂತೆ ನೋಡಿಕೊಳ್ಳಬೇಕು. 

ಹಳ್ಳಿಗಳಲ್ಲದೆ ಪಟ್ಟಣ, ನಗರ ಪ್ರದೇಶಗಳಿಗೂ ಅಗತ್ಯ ಕುಡಿಯುವ ನೀರನ್ನು ಪೂರೈಸುವುದು ಸಾಧ್ಯವಾಗುತ್ತದೆ. ಅಂದರೆ ಸರಕಾರ ಧಾರಾಳ ಮಳೆಯಾಗುವ ಕರಾವಳಿ, ಮಲೆನಾಡುಗಳಲ್ಲಿ ಮಳೆ ನೀರು ಸಂಗ್ರಹಿಸಿ ಅನಾವೃಷ್ಟಿ ಪ್ರದೇಶಗಳಿಗೆ ಹರಿಸುವ ಕೆಲಸ ಮಾಡಬೇಕು. ಬೇಸಿಗೆ ಕಾಲಿಟ್ಟ ಕೂಡಲೇ ಕರಾವಳಿ, ಮಲೆನಾಡುಗಳಲ್ಲೂ ನೀರಿನ ಸಮಸ್ಯೆ ಎದುರಾಗುತ್ತದೆ. ಸ್ಥಳೀಯ ಆಡಳಿತಗಳಿಗೆ ತಕ್ಷಣಕ್ಕೆ ಪರಿಹಾರ ಹೊಳೆಯುವುದು ಎಲ್ಲೆಂದರಲ್ಲಿ ಬೋರ್‌ವೆಲ್‌ ಕೊರೆಯಿ ಸುವುದೊಂದೇ. ಬೋರ್‌ವೆಲ್‌ಗ‌ಳು ಇರುವ ಬಾವಿ, ಜಲಮೂಲಗಳನ್ನು ಬತ್ತಿಸಿ ಬಾವಿ ಕೆರೆಗಳನ್ನು ನಾಶ ಮಾಡುತ್ತವೆ. ಕೆಲವೇ ವರ್ಷಗಳಲ್ಲಿ ಬೋರ್‌ವೆಲ್‌ನಲ್ಲಿಯೂ ನೀರಿಲ್ಲದ ಹಾಗೆ ಆಗುತ್ತದೆ. ಇದರ ಬದಲು ಬೋರ್‌ವೆಲ್‌ ಕೊರೆಯಿಸುವ ಹಣದಲ್ಲೇ ಮೇಲೆ ಹೇಳಿದ ಜಲ ಮರುಪೂರಣ ಕಾರ್ಯ ಮಾಡಿದರೆ ಶಾಶ್ವತ ನೀರಾವರಿ ಯೋಜನೆ ಮಾಡಿದ ಹಾಗೆ ಆಗುತ್ತದೆ.

Advertisement

ಮಳೆಗಾಲದಲ್ಲಿ ನದಿಗಳು ತುಂಬಿ ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಅಲ್ಲಲ್ಲಿ ಸರೋವರ ನಿರ್ಮಿಸಿ ನೀರು ಸಂಗ್ರಹಿಸುವಂತೆ ಸರಕಾರ ಕಡಿಮೆ ವೆಚ್ಚದಲ್ಲಿ ಯೋಜನೆಗಳನ್ನು ರೂಪಿಸಬಹುದು. ಅಲ್ಲಲ್ಲಿ ಪುಟ್ಟ ಸರೋವರಗಳು ನಿರ್ಮಾಣವಾದರೆ ಹಳ್ಳಿಗಳೇ ಮುಳುಗಡೆಯಾಗುವಂತಹ, ಆಗಿಂದಾಗ್ಗೆ ಭೂಕಂಪ ಸೃಷ್ಟಿಸುವಂತಹ ಭಾರೀ ಜಲಾಶಯಗಳು ಬೇಕಾಗುವುದಿಲ್ಲ ಎಂದು ಕೆಲವು ಜಲತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪಟ್ಟಣ ಮತ್ತು ನಗರ ಪ್ರದೇಶಗಳ ವಿವಿಧ ಬಡಾವಣೆಗಳಲ್ಲಿ ಮಳೆ ನೀರು ಸಂಗ್ರಹಿಸುವ ಟ್ಯಾಂಕ್‌ಗಳನ್ನು ನಿರ್ಮಿಸುವ ಬಗ್ಗೆಯೂ ಸರಕಾರ ಚಿಂತನೆ ನಡೆಸಬೇಕು. ಅತೀ ಕಡಿಮೆ ಖರ್ಚಿನಲ್ಲಿ ನೀರಿನ ಉಳಿತಾಯ, ಸಂಗ್ರಹ ಮತ್ತು ಮಿತವ್ಯಯಕ್ಕೆ ಜನ ಜಾಗೃತಿ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಳ್ಳಬೇಕು. ನೀರನ್ನು ಖನಿಜ ಎಂದು ಪರಿಗಣಿಸಿ ಕೂಡಲೇ ಸರಕಾರ ಈ ಬಗ್ಗೆ ಆದೇಶ ಹೊರಡಿಸಬೇಕು. 

ಜಲ ಸಂಪನ್ಮೂಲ ತಜ್ಞ ಜಿ.ಎಸ್‌.ಪರಮಶಿವಯ್ಯನವರು 2002ರಲ್ಲಿ ರಾಜ್ಯದ ಸಮಗ್ರ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿ ಸಂಬಂಧ ಸರಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದರು. ಅದರ ಪ್ರಕಾರ “ಊರಿಗೊಂದು ಕೆರೆ, ಆ ಕೆರೆಗೆ ನದಿ ನೀರು ಯೋಜನೆ’ ಹಮ್ಮಿಕೊಂಡು ಸರಕಾರ ಸಮೀಕ್ಷಾ ಕಾರ್ಯ ಪ್ರಾರಂಭಿಸಬೇಕು. ರಾಜ್ಯದಲ್ಲಿ ಈಗ 3438 ಟಿಎಂಸಿ ಜಲ ಸಂಪತ್ತಿದೆ. ರಾಜ್ಯದಲ್ಲಿ ಇರುವ 36,696 ಕೆರೆಗಳು ಮತ್ತು ಕೆರೆಗಳಿಲ್ಲದ ಗ್ರಾಮಗಳಲ್ಲಿ ಹೊಸದಾಗಿ 6,124 ಕೆರೆಗಳನ್ನು ನಿರ್ಮಿಸಿದರೂ ಒಟ್ಟು 42,820 ಕೆರೆಗಳ ಸಾಮರ್ಥ್ಯಕ್ಕೆ ಬೇಕಾಗುವ ನೀರು 300 ಟಿಎಂಸಿ. ಈ ಯೋಜನೆ ಯಶಸ್ವಿಯಾದರೆ ಯಾವುದೇ ಹೊಸ ನೀರಾವರಿ ಯೋಜನೆ ಅಗತ್ಯವಿಲ್ಲ ಎಂದು ಈ ವರದಿ ತಿಳಿಸಿತ್ತು. ಆದರೆ ವರದಿ ನೀಡಿ 16 ವರ್ಷಗಳೇ ಕಳೆದರೂ ಈ ವರದಿ ಇನ್ನೂ ಜಾರಿಯಾಗದಿರುವುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.

 ರಾಜ್ಯದ ಜಲ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ನಂತರ ಸಾವಿರಾರು ಟಿಎಂಸಿ ನೀರು ಸಮುದ್ರಕ್ಕೆ ಸೇರುತ್ತಿದೆ. ವಿದ್ಯುತ್‌ ಉತ್ಪಾದನೆಗೆ ಸೋಲಾರ್‌ ಸೇರಿದಂತೆ ಇತರ ಆಧುನಿಕ ವೈಜ್ಞಾನಿಕ ಆವಿಷ್ಕಾರಗಳನ್ನು ಬಳಸಿಕೊಂಡು ಜಲ ವಿದ್ಯುತ್‌ ಯೋಜನೆಗಳನ್ನು ಸ್ಥಗಿತಗೊಳಿಸುವುದರಿಂದಲೂ ಸಾಕಷ್ಟು ನೀರು ಉಳಿತಾಯವಾಗಲಿದೆ. ಸರಕಾರ ಅಂತರ್ಜಲ ಅಭಿವೃದ್ಧಿ ಜತೆಗೆ ಎಲ್ಲ ಪ್ರದೇಶಗಳಿಗೆ ಅಗತ್ಯ ಇರುವಷ್ಟು ನೀರನ್ನು ಪೂರೈಸಲು ಜನಪರ ಯೋಜನೆಗಳನ್ನು ಜಾರಿಗೊಳಿಸಬೇಕಾಗಿದೆ. ಆಗ ಮಾತ್ರ ನೀರಿನ ಸಮಸ್ಯೆಗೆ ನಿಜವಾದ ಪರಿಹಾರ ದೊರೆಯಬಹುದು. ಇತ್ತೀಚಿನ ಕೆಲವು ವರ್ಷಗಳಲ್ಲಿ ಏಪ್ರಿಲ್‌ ಮೇ ತಿಂಗಳುಗಳಲ್ಲಿ ಕೆಲವು ಬಾರಿ ಮಳೆಯಾಗುತ್ತಿದ್ದು ಪ್ರಕೃತಿಯ ಕೃಪೆಯು ಸರ್ವವ್ಯಾಪಿ ಎಂಬುದು ವ್ಯಕ್ತವಾಗುತ್ತದೆ. 

ಅನೂಷಾ ಹೊನ್ನೇಕೂಲು

Advertisement

Udayavani is now on Telegram. Click here to join our channel and stay updated with the latest news.

Next