Advertisement

ರಾಜ್ಯದ ಕ್ರೀಡಾ ಸ್ಥಿತಿ ಸುಧಾರಿಸುವುದ್ಯಾವಾಗ?

11:31 AM Apr 24, 2018 | Harsha Rao |

ಹರ್ಯಾಣದಲ್ಲಿ ಬರೀ ಕಾಮನ್‌ವೆಲ್ತ್‌ ಚಿನ್ನಕ್ಕೆ 1.50 ಕೋಟಿ ರೂ. ನೀಡುತ್ತಾರೆ. ಬೆಳ್ಳಿಗೆ 1 ಕೋಟಿ ರೂ., ಕಂಚಿಗೆ 50 ಲಕ್ಷ ರೂ. ನೀಡುತ್ತಾರೆ. ಕರ್ನಾಟಕದಲ್ಲಿ ಬೆಳ್ಳಿ ಗೆದ್ದ ಗುರುರಾಜ್‌ಗೆ ಘೋಷಣೆಯಾದ ಹಣ 25 ಲಕ್ಷ ರೂ. ಮಾತ್ರ. 

Advertisement

ವಿಶ್ವ ಕ್ರೀಡಾರಂಗವನ್ನು ಪರಿಗಣಿಸಿದರೆ ಭಾರತ ಈಗಲೂ ಅಭಿವೃದ್ಧಿ ಹೊಂದುತ್ತಿರುವ ದೇಶ. ಈಗಷ್ಟೇ ಒಂದೊಂದೇ ಕ್ರೀಡೆಯಲ್ಲಿ ಭಾರತೀಯರು ಹಿಡಿತ ಸಾಧಿಸುತ್ತಿದ್ದಾರೆ. ಶೂಟಿಂಗ್‌, ಬಾಕ್ಸಿಂಗ್‌, ಕುಸ್ತಿ, ವೇಟ್‌ಲಿಫ್ಟಿಂಗ್‌ ಇವೆಲ್ಲ ಭಾರತೀಯರು ವಿಶ್ವಮಟ್ಟದಲ್ಲಿ ಹಿಡಿತ ಸಾಧಿಸಿರುವ ಕ್ರೀಡೆಗಳು. ಇದೂ ಕಾಮನ್‌ವೆಲ್ತ್‌, ಏಷ್ಯನ್‌ ಗೇಮ್ಸ್‌ ಮಟ್ಟಿಗೆ ಮಾತ್ರ. ಒಲಿಂಪಿಕ್ಸ್‌ ಮಟ್ಟಿಗೆ ಬಂದರೆ ಭಾರತ ಬಡರಾಷ್ಟ್ರ.

ಭಾರತವೇ ಈ ಸ್ಥಿತಿಯಲ್ಲಿದೆ ಎಂದರೆ ಕರ್ನಾಟಕ ಅದಕ್ಕಿಂತ ಕೆಳ ಸ್ಥಿತಿಯಲ್ಲಿದೆ. ಹರ್ಯಾಣ, ಕೇರಳ, ಪಂಜಾಬ್‌ನ ಕ್ರೀಡಾಪಟುಗಳು ವಿಶ್ವವೇದಿಕೆಯಲ್ಲಿ ಮಿಂಚುವುದನ್ನು ನಾವು ಕಾಣುತ್ತೇವೆ. ರಾಜ್ಯದ ಆಟಗಾರರು ಇಂತಹ ಸಾಧನೆ ಮಾಡುವುದು ಕ್ರಿಕೆಟ್‌ನಲ್ಲಿ ಮಾತ್ರ. ಕ್ರಿಕೆಟ್‌ನಲ್ಲಿ ಸಿಗುವ ಪ್ರತಿಭೆಗಳು ಉಳಿದ ಕ್ರೀಡೆಗಳಲ್ಲಿ ಯಾಕೆ ಸಿಗುತ್ತಿಲ್ಲ? ಇದಕ್ಕೆ ಸಹಜವಾಗಿ ಸಿಗುವ ಉತ್ತರ ಪ್ರೋತ್ಸಾಹದ ಕೊರತೆ.

ಇದೇ ಅಭಿಪ್ರಾಯವನ್ನು ಈ ಬಾರಿ ಕಾಮನ್‌ವೆಲ್ತ್‌ನಲ್ಲಿ ಭಾರತದ ಪರ ಪದಕ ಖಾತೆ ತೆರೆದ ವೇಟ್‌ಲಿಫ್ಟರ್‌ (ಬೆಳ್ಳಿ) ಪಿ.ಗುರುರಾಜ್‌ ವ್ಯಕ್ತಪಡಿಸಿದ್ದಾರೆ. ರಾಜ್ಯವನ್ನು ಪ್ರತಿನಿಧಿಸಿದ 6 ಕ್ರೀಡಾಪಟುಗಳ ಪೈಕಿ ಪದಕ ಗೆದ್ದ ಮತ್ತೂಬ್ಟಾಕೆ ಅಶ್ವಿ‌ನಿ ಪೊನ್ನಪ್ಪ (ಬ್ಯಾಡ್ಮಿಂಟನ್‌ ಚಿನ್ನ). ಇದಕ್ಕೆ ಹೋಲಿಸಿದರೆ ಹರ್ಯಾಣದ ಸ್ಥಿತಿ ಮಜಬೂತು. ಈ ಬಾರಿಯ ಕಾಮನ್‌ವೆಲ್ತ್‌ನಲ್ಲಿ ಆ ರಾಜ್ಯದ 38 ಕ್ರೀಡಾಪಟುಗಳು ಭಾಗವಹಿಸಿ 22 ಪದಕ ಗೆದ್ದಿದ್ದಾರೆ. ಅದರಲ್ಲಿ 9 ಚಿನ್ನಗಳೇ ಇವೆ. ಇಂತಹ ವ್ಯತ್ಯಾಸ ಹೇಗೆ ಸಾಧ್ಯ? ಕ್ರಿಕೆಟ್‌ನಲ್ಲಿ ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌, ಜಿ.ಆರ್‌.ವಿಶ್ವನಾಥ್‌, ಕೆ.ಎಲ್‌. ರಾಹುಲ್‌ರಂತಹ ವಿಶ್ವ ಶ್ರೇಷ್ಠರು ಹುಟ್ಟಿಕೊಳ್ಳುತ್ತಾರೆಂದರೆ ಉಳಿದ ಕ್ರೀಡೆಯಲ್ಲಿ ಇಂತಹ ಕ್ರೀಡಾಪಟುಗಳು ಯಾಕಿಲ್ಲ? ಕ್ರಿಕೆಟಿಗರನ್ನು ನೋಡಿದಾಗ ರಾಜ್ಯದಲ್ಲಿ ಪ್ರತಿಭೆಗೆ ಬರವಿಲ್ಲ ಎನ್ನುವುದು ಖಚಿತ. ಸಮಸ್ಯೆ ಯಿರುವುದು ಪ್ರತಿಭೆಗಳನ್ನು ಹುಟ್ಟು ಹಾಕಲು ಇರುವ ವ್ಯವಸ್ಥೆಯಲ್ಲಿ. ಅದನ್ನೇ ಗುರುರಾಜ್‌ ನೇರವಾಗಿ ಸಂದರ್ಶನವೊಂದರಲ್ಲಿ ಹೇಳಿ ಕೊಂಡಿದ್ದಾರೆ. ಹರ್ಯಾಣದಲ್ಲಿ ಬರೀ ಕಾಮನ್‌ವೆಲ್ತ್‌ ಚಿನ್ನಕ್ಕೆ 1.50 ಕೋಟಿ ರೂ. ನೀಡುತ್ತಾರೆ. ಬೆಳ್ಳಿಗೆ 1 ಕೋಟಿ ರೂ., ಕಂಚಿಗೆ 50 ಲಕ್ಷ ರೂ. ನೀಡುತ್ತಾರೆ. ಕರ್ನಾಟಕದಲ್ಲಿ ಬೆಳ್ಳಿ ಗೆದ್ದ ಗುರುರಾಜ್‌ಗೆ ಘೋಷಣೆಯಾದ ಹಣ 25 ಲಕ್ಷ ರೂ. ಮಾತ್ರ. ಇದು ಎರಡೂ ರಾಜ್ಯದ ಕ್ರೀಡಾವ್ಯವಸ್ಥೆಯಲ್ಲಿ ಇರುವ ವ್ಯತ್ಯಾಸ.  ಕರ್ನಾಟಕ ಮಾತ್ರವಲ್ಲ ದೇಶದ ಎಲ್ಲ ಕಡೆ ಇರುವ ದೊಡ್ಡ ಸಮಸ್ಯೆಯೆಂದರೆ ವಿಶ್ವ ಮಟ್ಟದಲ್ಲಿ ಪದಕ ಗೆದ್ದ ನಂತರ ಕ್ರೀಡಾಪಟುವನ್ನು ಹಣದ ಕೊಪ್ಪರಿಗೆಯಲ್ಲಿ ಮುಳುಗಿಸುವುದು. ವಿಡಂಬನೆಯೆಂದರೆ ಪದಕ ಗೆಲ್ಲುವ ಮುನ್ನ ಆ ಕ್ರೀಡಾಪಟುಗಳ ಮೇಲೆ ಹೂಡಿಕೆ ಮಾಡಿ ಗೆಲ್ಲುವ ಸಾಮರ್ಥ್ಯ ಬರುವಂತೆ ಮಾಡುವುದಿಲ್ಲ. ಅದಕ್ಕೆ ಪೂರಕವಾಗಿ ವಿಶ್ವದರ್ಜೆಯ ತರಬೇತುದಾರರನ್ನು ಒದಗಿಸುವುದು, ವಿಶ್ವ ಮಟ್ಟದ ತರಬೇತಿ ಕೇಂದ್ರಗಳು, ಇತರೆ ಸೌಲಭ್ಯಗಳನ್ನು ನೀಡುವುದು, ಕ್ರೀಡಾ ಭ್ರಷ್ಟಾಚಾರದಿಂದ, ಇನ್ನಿತರ ಕಿರುಕುಳದಿಂದ ಮುಕ್ತರನ್ನಾಗಿ ಮಾಡುವ ಪರಿಸ್ಥಿತಿ ದೇಶದಲ್ಲಿ ಇಲ್ಲವೇ ಇಲ್ಲ. ಸ್ಪರ್ಧೆಗೂ ಮುನ್ನ ಅಗತ್ಯ ಪೂರ್ವತಯಾರಿ ಮಾಡದಿದ್ದರೆ ಗೆಲ್ಲುವುದಾದರೂ ಹೇಗೆ?

ದೇಶದ ಕೆಲ ರಾಜ್ಯಗಳನ್ನು ಪರಿಗಣಿಸಿದರೆ ಕರ್ನಾಟಕದ ಕ್ರೀಡಾ ಸ್ಥಿತಿಗತಿ ಸರಿಯಿಲ್ಲ. ಅಗತ್ಯ ತರಬೇತಿ ವ್ಯವಸ್ಥೆಗಳಾಗಲೀ, ಭವಿಷ್ಯಕ್ಕೆ ಬೇಕಾದ ತಯಾರಿಗಳಾಗಲೀ ಇಲ್ಲ. ಒಂದು ರಾಜ್ಯ ಮಾಡಬೇಕಾದ ತುರ್ತು ಕೆಲಸವೆಂದರೆ ಪ್ರತಿಭೆಯನ್ನು ಚಿಕ್ಕ ವಯಸ್ಸಿನಲ್ಲೇ ಗುರುತಿಸುವುದು. ಅಂತಹವರ ಮೇಲೆ ಸತತವಾಗಿ ಹೂಡಿಕೆ ಮಾಡುವುದು. ಸದ್ಯ ರಾಜ್ಯ ಅಂತಹ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಕಾಣುವುದಿಲ್ಲ. ಅದೇ ಕಾರಣಕ್ಕೆ ಇವರು ಮುಂದೆ ರಾಜ್ಯವನ್ನು ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಬಲ್ಲರು ಎಂದು ಹೇಳಬಲ್ಲ ಕ್ರೀಡಾಪಟುಗಳೂ ಕಾಣುವುದಿಲ್ಲ. 

Advertisement

ಈ ದುಸ್ಥಿತಿಯನ್ನು ರಾಜ್ಯ ಹಾಕಿಯಲ್ಲಿ ಸ್ಪಷ್ಟವಾಗಿ ಗುರ್ತಿಸಬಹುದು. ಈ ಬಾರಿ ಕಾಮನ್‌ವೆಲ್ತ್‌ನಲ್ಲಿ ರಾಜ್ಯದಿಂದ ಭಾರತ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದು ಎಸ್‌.ವಿ.ಸುನೀಲ್‌ ಮಾತ್ರ. ಸುನೀಲ್‌ ಕೂಡ ಸ್ಥಾನ ಕಳೆದುಕೊಂಡರೆ ಆ ಸ್ಥಾನ ತುಂಬುವವರು ಯಾರು? ಆ ರೀತಿಯ ಪ್ರತಿಭೆಗಳನ್ನೇನಾದರೂ ಗುರುತಿಸಲಾಗಿದೆಯಾ? ಉತ್ತರ ಶೂನ್ಯ. ಸದ್ಯ ರಾಜ್ಯ ಕ್ರೀಡಾ ವ್ಯವಸ್ಥೆಗೆ ಪ್ರತಿಭೆಗಳನ್ನು ಗುರ್ತಿಸಿ ಹೂಡಿಕೆ ಮಾಡಬಲ್ಲ ದೂರದೃಷ್ಟಿ ತುರ್ತಾಗಿ ಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next