Advertisement

ಏನಿದು ಯೋಗಿ ಮಾಡೆಲ್‌? ಉತ್ತರಪ್ರದೇಶದ ಜನ ಏನಂತಾರೆ…

11:30 AM Jul 30, 2022 | Team Udayavani |

10 ದಿನಗಳಿಂದ ಈಚೆಗೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಒಟ್ಟು ಮೂರು ಹತ್ಯೆಗಳಾಗಿವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರಕಾರ ವಿಫ‌ಲವಾಗಿದೆ ಎಂಬುದು ವಿಪಕ್ಷಗಳ ಆರೋಪ. ಇದರ ನಡುವೆಯೇ, ರಾಜ್ಯದಲ್ಲಿಯೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಮಾಡೆಲ್‌ ಜಾರಿಗೆ ಬರಲಿ ಎಂಬ ಒತ್ತಾಯ ಕೇಳಿಬರುತ್ತಿದೆ. ನೋಡೋಣ, ಅಗತ್ಯಬಿದ್ದರೆ ಜಾರಿ ಮಾಡೋಣ ಅಂತಿದ್ದಾರೆ ಸಿಎಂ. ಹಾಗಾದರೆ ಈ ಯೋಗಿ ಮಾಡೆಲ್‌ ಅಂದರೆ ಏನು? ಯಾಕೆ ಈ ನಿಯಮ ಜಾರಿಗೆ ಒತ್ತಾಯ ಕೇಳಿಬರುತ್ತಿದೆ? ಇಲ್ಲಿದೆ ಒಂದು ಮಾಹಿತಿ.

Advertisement

ಏನಿದು ಯೋಗಿ ಮಾಡೆಲ್‌?
ಅತ್ಯಂತ ಸರಳವಾಗಿ ಹೇಳುವುದಾದಾದರೆ ಯೋಗಿ ಮಾಡೆಲ್‌ ಅಂದರೆ, ತತ್‌ಕ್ಷಣಕ್ಕೇ ಕೈಗೊಳ್ಳುವ ಕ್ರಮ. ಹಾಗಂಥ, ಕೊಲೆ ಮಾಡಿದವರಿಗೋ ಅಥವಾ ಕಳ್ಳತನ ಮಾಡಿದವರಿಗೋ ಸ್ಥಳದಲ್ಲೇ ಶಿಕ್ಷೆ ಕೊಡುವುದು ಅಂತಲ್ಲ. ಬದಲಾಗಿ, ಸಾರ್ವಜನಿಕ ಆಸ್ತಿ ನಾಶಪಡಿಸಿದವರ ಗುರುತು ಪತ್ತೆ ಹಚ್ಚಿ, ಅವರ ಮನೆ ಮಠಗಳನ್ನೇ ಬುಲ್ಡೋಜರ್‌ ಮೂಲಕ ನಾಶ ಮಾಡುವುದು. ಆಗ ಸಾರ್ವಜನಿಕ ಆಸ್ತಿಯ ತಂಟೆಗೆ ಹೋಗಲ್ಲ ಅಂತಾರೆ ತಜ್ಞರು. ಇದಕ್ಕಾಗಿ ಅಲ್ಲಿ ಒಂದು ಕಾಯ್ದೆಯನ್ನೇ ತರಲಾಗಿದೆ. ಇದಷ್ಟೇ ಅಲ್ಲ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಸರಕಾರ ಬಂದ ಮೇಲೆ, ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಅಕ್ಷರಶಃ ಭೂಗತದೊರೆಗಳ ಕಿರುಕುಳದಿಂದ ನಲುಗಿದ್ದ ಜನತೆ ಈಗ ನಿಟ್ಟುಸಿರು ಬಿಡುವ ಸ್ಥಿತಿ ಎದು ರಾಗಿದೆ. 2017ಕ್ಕೂ ಹಿಂದಿನ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀರಾ ಹದಗೆಟ್ಟ ಸ್ಥಿತಿಯಲ್ಲಿ ಇತ್ತು. ಆದರೆ, ಅನಂತರದಲ್ಲಿ ಈ ಪ್ರಮಾಣ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ.

8472 ಎನ್‌ಕೌಂಟರ್‌ಗಳು !
ಅಲ್ಲಿನ ಜನಸಾಮಾನ್ಯರ ಪ್ರಕಾರ, ಯೋಗಿ ಆದಿತ್ಯನಾಥ್‌ ಅವರು ಗೂಂಡಾಗಳು, ಮಾಫಿಯಾ ದೊರೆಗಳನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. 2017ರಿಂದ 2022ರ ವರೆಗೆ ಇದನ್ನೇ ಆದ್ಯತೆಯಾಗಿ ತೆಗೆದುಕೊಂಡಿದ್ದ ಯೋಗಿ ಆದಿತ್ಯನಾಥ್‌, ಪೊಲೀಸರ ಮೂಲಕವೇ ಭೂಗತದೊರೆಗಳು ಮತ್ತು ಗೂಂಡಾಗಳಿಗೆ ಬಿಸಿ ಮುಟ್ಟಿಸಿದ್ದರು. ಅಂದರೆ, ಈ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ಗಳ ಸಂಖ್ಯೆ 8,472. ಇವುಗಳಲ್ಲಿ 3,302 ಮಂದಿ ಗಾಯಗೊಂಡಿದ್ದಾರೆ. 146 ಮಂದಿ ಸತ್ತಿದ್ದಾರೆ. ವಿಶೇಷವೆಂದರೆ, ಉತ್ತರ ಪ್ರದೇಶಕ್ಕೆ ಸವಾಲಾಗಿದ್ದ ದೊಡ್ಡ ದೊಡ್ಡ ಗೂಂಡಾ ದೊರೆಗಳನ್ನೇ ಬಲಿಹಾಕಲಾಗಿದೆ. ಬಹುತೇಕ ಎನ್‌ಕೌಂಟರ್‌ಗಳಲ್ಲಿ ಆರೋಪಿಗಳ ಕಾಲಿಗೆ ಗುಂಡಿಟ್ಟು ಸೆರೆ ಹಿಡಿಯಲಾಗಿದೆ. ಜತೆಗೆ 1,157 ಮಂದಿ ಪೊಲೀಸರು ಗಾಯಗೊಂಡಿªದ್ದರೆ, 13 ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಎನ್‌ಕೌಂಟರ್‌ಗಳ ಕಾರಣದಿಂದಾಗಿ ಒಟ್ಟಾರೆಯಾಗಿ 18,225 ಮಂದಿಯನ್ನು ಬಂಧಿಸಲಾಗಿದೆ. ಯೋಗಿ ಸರಕಾರದ ಈ ಕ್ರಮದಿಂದ ಗೂಂಡಾಗಳು ಹೆದರಿ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದ್ದರೆ, ಕೆಲವರಂತೂ ತಾವೇ ಕೋರ್ಟ್‌ ಮುಂದೆ ಶರಣಾಗಿದ್ದಾರೆ.

ಎರಡನೇ ಅವಧಿಯಲ್ಲೂ ಕಠಿನ ಕ್ರಮ
ಇನ್ನು ಎರಡನೇ ಅವಧಿಯಲ್ಲಿಯೂ ಯೋಗಿ ಆದಿತ್ಯನಾಥ್‌ ಅವರು, ರೌಡಿಗಳು, ಗೂಂಡಾಗಳ ವಿರುದ್ಧ ತಮ್ಮ ಕಠಿನ ಕ್ರಮವನ್ನು ನಿಲ್ಲಿಸಿಲ್ಲ. ಇತ್ತೀಚೆಗಷ್ಟೇ ಯೋಗಿ ಸರಕಾರದ ಮೊದಲ 100 ದಿನದ ಸಂಭ್ರಮಾಚರಣೆ ಮುಗಿದಿದೆ. ಈ ಸಂದರ್ಭಕ್ಕೆ ಒಟ್ಟಾರೆಯಾಗಿ 525 ಎನ್‌ಕೌಂಟರ್‌, 1023 ಬಂಧನ, 425 ಮಂದಿಗೆ ಗಾಯ, ಐವರನ್ನು ಹೊಡೆದುರುಳಿಸಲಾಗಿದೆ. ಈ ಮೂಲಕ ಸಮಾಜದಲ್ಲಿ ಯಾವುದೇ ರೀತಿಯ ಅಶಾಂತಿಗೆ ಯತ್ನಿಸಿದರೆ, ಸುಮ್ಮನೆ ಬಿಡಲ್ಲ ಎಂಬ ಸಂದೇಶವನ್ನೂ ರವಾನಿಸಲಾಗಿದೆ.

ಬ್ಯಾನರ್‌ಗಳ ಬಳಕೆ
ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಾನ್ಪುರದಲ್ಲಿ ಹೋರ್ಡಿಂಗ್‌ ಹಾಕಿ ಇವರ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಕಾನ್ಪುರದ 100 ಕಡೆಗಳಲ್ಲಿ 57 ಮಂದಿಯ ಫೋಟೋ ಸಮೇತ ಇಂಥ ಬ್ಯಾನರ್‌ಗಳನ್ನು ಹಾಕಿ, ಇವರೆಲ್ಲರೂ ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ನೀಡಲಾಗಿತ್ತು. ಒಂದು ವೇಳೆ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಮಾಡಿದರೆ, ಈ ರೀತಿ ಬ್ಯಾನರ್‌ ಹಾಕುವುದಷ್ಟೇ ಅಲ್ಲ, ಅವರ ಆಸ್ತಿಯನ್ನೂ ಜಪ್ತಿ ಮಾಡಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.

Advertisement

ಆಸ್ತಿಗಳ ವಶ
ಬರೀ ಪೊಲೀಸ್‌ ಕ್ರಮವಷ್ಟೇ ಅಲ್ಲ, ಇದರ ಜತೆಗೆ ಸಮಾಜಘಾತುಕರ ಆಸ್ತಿಯನ್ನೂ ವಶಪಡಿಸಿಕೊಂಡು, ಬುಲ್ಡೋಜರ್‌ ಮೂಲಕ ನಾಶ ಮಾಡಲಾಗಿದೆ. ಗ್ಯಾಂಗ್‌ಸ್ಟರ್‌ ಕಾಯ್ದೆ ಬಳಸಿಕೊಂಡು 190 ಕೋಟಿ ರೂ. ಮೌಲ್ಯದ 582 ಆಸ್ತಿಗಳ ವಶ ಪಡಿಸಿಕೊಳ್ಳಲಾಗಿದೆ. ಜತೆಗೆ 2,433 ಮಾಫಿಯಾ ದೊರೆಗಳನ್ನು ಗುರುತಿಸಲಾಗಿದೆ. 17,169 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 1,645 ಮಂದಿಯನ್ನು ಬಂಧಿಸಲಾಗಿದ್ದು, 134 ಮಂದಿ ಕೋರ್ಟ್‌ ಮುಂದೆಯೇ ಶರಣಾಗಿದ್ದಾರೆ. 15 ಅಪರಾಧಿಗಳ ಆಸ್ತಿಯನ್ನೇ ವಶಕ್ಕೆ ತೆಗೆದುಕೊಳ್ಳಲಾಗಿದೆ. 36 ಮಂದಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಮೂಲಕ ಪ್ರಕರಣ ದಾಖಲಿಸಲಾಗಿದೆ.

ಅಲ್ಲಿನ ಜನ ಏನಂತಾರೆ?
ಯೋಗಿ ಆದಿತ್ಯನಾಥ್‌ ಅಧಿಕಾರಕ್ಕೇರಿದ ಮೇಲೆ ರಾಜ್ಯದಲ್ಲಿ ಗೂಂಡಾ ಸಂಸ್ಕೃತಿ ಬಹುತೇಕ ನಿಯಂತ್ರಣಕ್ಕೆ ಬಂದಿದೆ ಎಂಬುದು ಅಲ್ಲಿನ ಜನರ ಅಭಿಪ್ರಾಯ. 2017ಕ್ಕೂ ಮುನ್ನ, ಉತ್ತರ ಪ್ರದೇಶದ ಬಹುತೇಕ ಕಡೆಗಳಲ್ಲಿ ಮಹಿಳೆಯರು ಓಡಾಡುವುದೇ ಕಷ್ಟವಾಗಿತ್ತು. ಬೆಳಗ್ಗೆಯ ವಾಕಿಂಗ್‌ ಅಂತೂ ಕನಸಿನಲ್ಲೂ ಊಹೆ ಮಾಡಿಕೊಳ್ಳದಂಥ ಪರಿಸ್ಥಿತಿ ಇತ್ತು. ಆದರೆ ಈಗ ಯೋಗಿ ಆದಿತ್ಯನಾಥ್‌ ಅವರ ಬುಲ್ಡೋಜರ್‌ ಚೆನ್ನಾಗಿಯೇ ಸದ್ದು ಮಾಡುತ್ತಿದ್ದು, ಬಹುತೇಕ ಕ್ರಿಮಿನಲ್‌ಗ‌ಳು ಜೈಲಿಗೆ ಸೇರಿದ್ದಾರೆ. ಈಗ ಮಹಿಳೆಯರಾದಿಯಾಗಿ ಎಲ್ಲರಿಗೂ ರಕ್ಷಣೆ ಸಿಕ್ಕುತ್ತಿದೆ ಎಂದು ಅಭಿಪ್ರಾಯಪಡುತ್ತಾರೆ.

ಕರ್ನಾಟಕದಲ್ಲಿ ಏಕೆ ಒತ್ತಾಯ?
ಕರಾವಳಿ ಪ್ರದೇಶದಲ್ಲಿ ಕಳೆದ 10 ದಿನಗಳಲ್ಲಿ ಮೂರು ಕೊಲೆಗಳಾಗಿವೆ. ಕೊಲೆಗೆ ಕಾರಣರಾದವರ ಮೇಲೆ ಶಕ್ತಿಯುತ ಅಸ್ತ್ರ ಪ್ರಯೋಗಿಸಬೇಕು ಎಂಬುದು ಜನರ ಒತ್ತಾಯ. ಹೀಗಾಗಿ ಯೋಗಿಯ ಮಾಡೆಲ್‌ ಅನ್ನು ಇಲ್ಲೂ ಜಾರಿ ಮಾಡಿ. ಅಪರಾಧಕ್ಕೆ ಕಾರಣವಾಗುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಸಿಎಂ, ಅಗತ್ಯಬಿದ್ದರೆ, ರಾಜ್ಯದಲ್ಲೂ ಯೋಗಿ ಮಾದರಿ ತರುತ್ತೇವೆ ಎಂದು ಹೇಳಿರುವುದು.

Advertisement

Udayavani is now on Telegram. Click here to join our channel and stay updated with the latest news.

Next