Advertisement

ಕೇಂದ್ರ ಬಜೆಟ್‌ಗೆ ಜನ ಏನಂತಾರೆ?

04:55 AM Feb 02, 2019 | |

ಕೇಂದ್ರ ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಶುಕ್ರವಾರ ಮಂಡಿಸಿರುವ ಬಜೆಟ್‌ ಕುರಿತಂತೆ ದಾವಣಗೆರೆ ಜಿಲ್ಲೆಯ ಸಂಸದರು, ಶಾಸಕರು, ಕೈಗಾರಿಕೋದ್ಯಮಿಗಳು, ಜವಳಿ ವರ್ತಕರು, ವಾಣಿಜ್ಯ ಮಹಾಸಂಸ್ಥೆ ಪದಾಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ರೈತರು, ಸಾಮಾನ್ಯರ ಪರ
ಕೇಂದ್ರದ ಹಣಕಾಸು ಇಲಾಖೆ ಸಚಿವ ಪಿಯೂಷ್‌ ಗೋಯಲ್‌ ಮಂಡಿಸಿರುವ ಬಜೆಟ್‌ನಲ್ಲಿ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಿ ನೀಡಿರುವುದರಿಂದ ರಾಜ್ಯದ 59 ಲಕ್ಷ ರೈತರಿಗೆ ಅನುಕೂಲವಾಗಿದೆ. ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಅನುಕೂಲಕರವಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡಲಾಗಿದೆ. ಒಟ್ಟಾರೆಯಾಗಿ ರೈತರು, ಸಾಮಾನ್ಯರ ಪರ ಬಜೆಟ್.
•ಎಸ್‌.ಎ. ರವೀಂದ್ರನಾಥ್‌, ಶಾಸಕರು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ

ಜನರ ಪ್ರೀತಿ ಪಾತ್ರ ಬಜೆಟ್
ದೇಶದ ಬೆನ್ನಲುಬು ರೈತರಿಗೆ ಮೋದಿ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ನೀಡಿರುವುದರಿಂದ ಬಿತ್ತನೆ ಬೀಜ, ಗೊಬ್ಬರ ಇತರ ವೆಚ್ಚಕ್ಕೆ ಅನುಕೂಲವಾಗಿದೆ. ಕಾರ್ಮಿಕರ ವರ್ಗಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪಿಂಚಣಿ ಹೆಚ್ಚಳ ಮಾಡಿದ್ದಾರೆ. ದೇಶದ ಜನರ ಪ್ರೀತಿಗೆ ಪಾತ್ರವಾದ ಬಜೆಟ್.
•ಎಸ್‌.ವಿ. ರಾಮಚಂದ್ರ, ಶಾಸಕರು ಜಗಳೂರು ಕ್ಷೇತ್ರ

ಸರ್ವವ್ಯಾಪಿ-ಸರ್ವಸ್ಪರ್ಶಿ
ದಾವಣಗೆರೆ: ಕೇಂದ್ರ ಅರ್ಥ ಸಚಿವ ಪಿಯೂಷ್‌ ಗೋಯೆಲ್‌ ಶುಕ್ರವಾರ ಮಂಡಿಸಿದ್ದು ಎಲ್ಲಾ ವರ್ಗದವರಿಗೂ ತಲುಪುವ ಸರ್ವವ್ಯಾಪಿ-ಸರ್ವಸ್ಪರ್ಶಿ ಬಜೆಟ್ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್‌ ಬಣ್ಣಿಸಿದ್ದಾರೆ. ಇದೊಂದು ಐತಿಹಾಸಿಕ ಬಜೆಟ್ ಎಂದು ಭಾವಿಸುವೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಕೊಂಡು ಮಂಡಿಸಿರುವ ಬಜೆಟ್ ಅಲ್ಲ. ಮಂಡಿಸಿರುವ ಬಜೆಟ್‌ಗೆ ನಾವೂ ಉತ್ತರದಾಯಿತ್ವ ಹೊಂದಿದ್ದೇವೆ. ಈ ಕಾರಣದಿಂದಾಗಿಯೇ ಮುಂಬರುವ ಐದು ವರ್ಷಗಳಲ್ಲಿ ಭಾರತ ಹೇಗಿರಲಿದೆ ಎಂಬುದರ ಸ್ಪಷ್ಟ ಕಲ್ಪನೆ ಮೂಡಿರುವುದಂತೂ ಸತ್ಯ. ಕೂಲಿಕಾರ್ಮಿಕರಿಂದ ಹಿಡಿದು, ಕೃಷಿಕರು, ಸಣ್ಣ ಕೈಗಾರಿಕೆಗಳ ಉದ್ದಿಮೆದಾರರು, ಮಧ್ಯಮ ವರ್ಗದವರು, ತೆರಿಗೆ ಪಾವತಿದಾರರು, ಸೈನಿಕರು, ಮಹಿಳೆಯರು, ಸೇರಿದಂತೆ ಎಲ್ಲರೂ ಕೂಡ ಒಂದಿಲ್ಲೊಂದು ಪ್ರಯೋಜನ ಪಡೆಯಲಿರುವುದು ಬಜೆಟ್‌ನ ವಿಶೇಷ ಎಂದು ಅವರು ಹೇಳಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಮೂಲಕ ಸಣ್ಣ ಹಿಡುವಳಿ ರೈತರಿಗೆ ಪ್ರತಿವರ್ಷ 6 ಸಾವಿರ ರೂ. ಅವರ ಖಾತೆಗೆ ನೇರ ಜಮಾ ಆಗಲಿದೆ. ಇದರಿಂದ 12 ಕೋಟಿ ರೈತರು ಪ್ರಯೋಜನ ಪಡೆಯಲಿದ್ದಾರೆ. ಸಕಾಲದಲ್ಲಿ ಸಾಲ ಮರುಪಾವತಿಸಿದರೆ ಶೇ.3ರಷ್ಟು ಬಡ್ಡಿ ವಿನಾಯಿತಿ ಪ್ರಕಟಿಸಿದ್ದಾರೆ. ಒಟ್ಟಾರೆ ಇದೊಂದು ಐತಿಹಾಸಿಕ ಬಜೆಟ್ ಎಂದು ಪ್ರಕಟಣೆಯಲ್ಲಿ ಶ್ಲಾಘಿಸಿದ್ದಾರೆ.

ಜನಪ್ರಿಯ ಬಜೆಟ್…
ಕೇಂದ್ರ ಸರ್ಕಾರ ಜನಪ್ರಿಯ ಬಜೆಟ್ ಮಂಡಿಸಿದೆ. 5 ಲಕ್ಷದವರೆಗಿನ ಆದಾಯ ಹೊಂದಿರುವರಿಗೆ ತೆರಿಗೆ ವಿನಾಯತಿ ನೀಡಿರುವುದು, 24 ಗಂಟೆಯಲ್ಲಿ ತೆರಿಗೆ ಮರುಪಾವತಿ, ರೈತರಿಗೆ ವರ್ಷಕ್ಕೆ 6 ಸಾವಿರ, ಅಸಂಘಟಿತ ಕಾರ್ಮಿಕರಿಗೆ ವಿಮಾ ಸೌಲಭ್ಯ ಒಳ್ಳೆಯ ಯೋಜನೆ. ಕೃಷಿ ಉತ್ಪನ್ನಗಳಿಗೆ ದರ ನಿಗದಿಪಡಿಸದೇ ಇರುವುದು, ಕೈಗಾರಿಕೆ, ಉದ್ಯೋಗವಕಾಶಕ್ಕೆ ಒತ್ತು ನೀಡಬೇಕಿತ್ತು. ಒಟ್ಟಾರೆ ಜನಪ್ರಿಯ ಬಜೆಟ್.
•ಉಮೇಶ್‌ಶೆಟ್ಟಿ, ಅಧ್ಯಕ್ಷರು,ಕರಾವಳಿ ಸೊಸೈಟಿ

Advertisement

ಅತ್ಯುತ್ತಮ ಬಜೆಟ್…
ಕೇಂದ್ರ ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಮಂಡಿಸಿರುವ ಬಜೆಟ್ ಅತ್ಯುತ್ತಮ ಬಜೆಟ್. ರೈತರ, ಬಡ ಕಾರ್ಮಿಕರ, ಮಧ್ಯಮ ಹಾಗೂ ಸಾಮಾನ್ಯ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್ ಸಮತೋಲನದಿಂದ ಕೂಡಿದೆ. ದೇಶದ 12 ಕೋಟಿ ರೈತ ಕುಟುಂಬಗಳಿಗೆ ನೇರವಾಗಿ ಅವರ ಖಾತೆಗೆ ವರ್ಷಕ್ಕೆ 6 ಸಾವಿರ ರೂ. ಜಮೆ ಮಾಡುವ ಕಾರ್ಯ ಶ್ಲಾಘನೀಯ.
•ಎಂ.ಪಿ. ರೇಣುಕಾಚಾರ್ಯ, ಶಾಸಕರು ಹೊನ್ನಾಳಿ ಕ್ಷೇತ್ರ

ಮಿಶ್ರ ಬಜೆಟ್…
ತೆರಿಗೆ ವಿನಾಯತಿ ಹೆಚ್ಚಳ ಮಾಡುವ ಮೂಲಕ ಇನ್ನೂ ಹೆಚ್ಚಿನ ಜನರನ್ನು ತೆರಿಗೆ ವ್ಯಾಪ್ತಿಗೆ ತರಬಹುದಿತ್ತು. ರೈತರು ಇತರರಿಗೆ ಕೆಲವಾರು ಅನುಕೂಲ ಮಾಡಿಕೊಡಲಾಗಿದೆ. ಕೆಲವೊಂದಕ್ಕೆ ಇನ್ನಷ್ಟು ಕೊಡುಗೆ ನೀಡಬಹುದಿತ್ತು. ಒಟ್ಟಾರೆಯಾಗಿ ಕೆಲವರಿಗೆ ಅನುಕೂಲ, ಇನ್ನು ಕೆಲವರಿಗೆ ಅನಾನುಕೂಲ ಎರಡು ಆಗಿದೆ. ಹಾಗಾಗಿ ಇದೊಂದು ಮಿಶ್ರ ಬಜೆಟ್.
•ಅಜ್ಜಂಪುರಶೆಟ್ರಾ ಶಂಭುಲಿಂಗಪ್ಪ, ಕಾರ್ಯದರ್ಶಿ, ಚೇಂಬರ್‌ ಆಫ್‌ ಕಾಮರ್ಸ್‌

ಚುನಾವಣಾ ಭಿತ್ತಿಪತ್ರ…
ಬಜೆಟ್ ಚುನಾವಣಾ ಭಿತ್ತಿಪತ್ರದಂತೆ ಇದೆ. 5 ವರ್ಷ ರೈತರನ್ನು ಮರೆತಿದ್ದ ಮೋದಿಯವರು ಈಗ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡಲು ರಕ್ಷಣಾ ವೆಚ್ಚ ಹೆಚ್ಚಳ ಮಾಡಿದ್ದಾರೆ. 17 ಸಂಸದರನ್ನು ನೀಡಿರುವ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಮುಂದುವರೆಸಿದ್ದಾರೆ.
•ಡಿ. ಬಸವರಾಜ್‌, ಕೆಪಿಸಿಸಿ ಕಾರ್ಯದರ್ಶಿ ಕ್ಷೇತ್ರ

ಒಳ್ಳೆಯ ಬಜೆಟ್…
ಕೇಂದ್ರದ ಬಜೆಟ್‌ನಲ್ಲಿ ತೆರಿಗೆದಾರರಿಗೆ ಸಾಕಷ್ಟು ವಿನಾಯತಿ ನೀಡಲಾಗಿದೆ. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ನೀಡಿರುವುದರಿಂದ ಅನುಕೂಲ ಆಗಲಿದೆ. ಒಟ್ಟಾರೆಯಾಗಿ ಒಳ್ಳೆಯ ಬಜೆಟ್ ಅನಿಸುತ್ತದೆ.
•ಅಥಣಿ ಎಸ್‌. ವೀರಣ್ಣ, ಕಾರ್ಯದರ್ಶಿ, ಲೆಕ್ಕ ಪರಿಶೋಧಕರು

ಪರಿಣಾಮಕ್ಕೆ ಕಾಯಬೇಕಿದೆ
ಕೇಂದ್ರದ ಬಜೆಟ್ ಕೆಳ-ಮಧ್ಯಮ ವರ್ಗದವರು, ಕಾರ್ಮಿಕರು, ರೈತರು, ವೇತನದಾರರು, ಇತರಿಗೆ ಅನುಕೂಲವಾಗುವಂತಿದೆ. ಆದರೆ, ವ್ಯಾಪಾರ-ಉದ್ಯಮ, ಕೈಗಾರಿಕಾ ಕ್ಷೇತ್ರಕ್ಕೆ ಪ್ರತ್ಯಕ್ಷವಾಗಿ ಲಾಭವಾಗುವಂತಿಲ್ಲ. ಅನುಕೂಲವಾದವರಿಂದ ಮಾರುಕಟ್ಟೆಯಲ್ಲಿ ವಹಿವಾಟು ನಡೆದಾಗ ಉದ್ಯಮ-ವ್ಯಾಪಾರಿಗಳಿಗೂ ಅನುಕೂಲ ಆಗಬಹುದು. ಅದು ತಕ್ಷಣಕ್ಕೆ ಪರಿಣಾಮ ಬೀರಲಿದೆ ಎಂದು ಹೇಳಲಿಕ್ಕಾಗದು. ಭವಿಷ್ಯದಲ್ಲಿ ಬೆನಿಫಿಟ್ ಸಿಗಬಹುದು. ಅದಕ್ಕೆ ಒಂದಿಷ್ಟು ದಿನ ಕಾದು ನೋಡಬೇಕಿದೆ.
•ಬಿ.ಸಿ.ಶಿವಕುಮಾರ್‌, ಮಾಲೀಕರು,ಬಿಎಸ್‌ಸಿ ಆ್ಯಂಡ್‌ ಸನ್ಸ್‌

ರೈತರಿಗೆ ಮೋಸ
ಕೇಂದ್ರ ಸರ್ಕಾರದ ಬಜೆಟ್ ರೈತರನ್ನು ವಂಚಿಸುವ ಮತ್ತು ಕೈಗಾರಿಕೋದ್ಯಮಿಗಳಿಗೆ ನಿರಾಸೆಯ ಬಜೆಟ್. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸುಳ್ಳಿನಿಂದ ಪೋಷಿಸಿರುವ ಬಜೆಟ್. ರೈತರಿಗೆ ವಂಚಿಸುವ ತಂತ್ರವೇ ಹೊರತು ಮತ್ತೇನೂ ಇಲ್ಲ, ಇದು ಮೋದಿ ಸರ್ಕಾರದ ಕೊನೆಯ ಬಜೆಟ್ ಆಗಲಿದೆ. ಪಿಯುಷ್‌ ಗೋಯಲ್‌ ಮಂಡಿಸಿರುವ ಬಜೆಟ್ ಇಡೀ ದೇಶದ ಜನರ ಮೂಗಿಗೆ ತುಪ್ಪ ಸವರುವಂತೆ ಇದೆ. ಉದ್ಯೋಗ ಸೃಷ್ಟಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಸರ್ಕಾರ ಮತ್ತೂಮ್ಮೆ ಅವಕಾಶ ಕೇಳುತ್ತಿರುವುದು ನಾಚಿಕೆಗೇಡು.
•ದಿನೇಶ್‌ ಕೆ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್‌

ಚುನಾವಣಾ ಗಿಮಿಕ್‌
ಕೇಂದ್ರದ ಬಜೆಟ್‌ನಲ್ಲಿ ಮತ್ತೆ ರೈತಾಪಿ ಸಮುದಾಯವನ್ನು ಪೂರ್ಣ ಪ್ರಮಾಣದಲ್ಲಿ ನಿರ್ಲಕ್ಷಿಸಲಾಗಿದೆ. ರೈತರ ಖಾತೆಗೆ ದಿನಕ್ಕೆ 17 ರೂಪಾಯಿ ಹಾಕಿದ ತಕ್ಷಣ ಅವರ ಬದುಕು ಹಸನಾಗುತ್ತದೆ ಎಂಬ ಸಲಹೆ ಕೊಟ್ಟ ಆರ್ಥಿಕ ತಜ್ಞರಿಗೆ ಶಹಬಾಷ್‌ಗಿರಿ ಕೊಡಲೇಬೇಕು. ಸಾಲ ಮನ್ನಾ ಆಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಶೆಯಾಗಿದೆ. ಆದಾಯ ತೆರಿಗೆ ಮಿತಿಯನ್ನು 5 ಲಕ್ಷಕ್ಕೆ ಏರಿಸಿರುವುದು ಮಧ್ಯಮ ವರ್ಗದವರಿಗೆ ಖುಷಿ ತರಬಹುದು. ಉದ್ಯೋಗ ಸೃಷ್ಟಿಸುವ ಬಗ್ಗೆ, ಬಡವರ ಬದುಕು ಕಟ್ಟುವ ಯೋಜನೆಗಳ ಬಗ್ಗೆ ಇಡೀ ಬಜೆಟ್‌ನಲ್ಲಿ ಎಲ್ಲೂ ಪ್ರಸ್ತಾಪವಾಗಿಲ್ಲ. ವಾಸ್ತವವಾಗಿ ಚುನಾವಣಾ ಗಿಮಿಕ್‌ ಬಜೆಟ್.
•ಎಲ್‌.ಎಚ್. ಅರುಣಕುಮಾರ್‌, ವಕೀಲರು, ದಾವಣಗೆರೆ.

ಬೋಗಸ್‌ ಬಜೆಟ್
ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಈ ಬಜೆಟ್‌ನಲ್ಲಿ ನಿರುದ್ಯೋಗಿಗಳತ್ತ ಗಮನ ನೀಡಿಲ್ಲ. ರೈತರಿಗೆ ಬಂಪರ್‌ ಎನ್ನುತ್ತಾರೆ. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ನೀಡಿರುವುದನ್ನ ಲೆಕ್ಕ ಹಾಕಿದರೆ 500-600 ರೂಪಾಯಿ ಪರಿಹಾರ ಕೊಟ್ಟಂತಾಗುತ್ತದೆ. ಜನರ ಖಾತೆಗೆ 15 ಲಕ್ಷ ಜಮೆ ಮಾಡಲೇ ಇಲ್ಲ. ಚುನಾವಣಾ ವರ್ಷ ಜನರು ಬಹಳ ನಿರೀಕ್ಷೆ, ಭರವಸೆ ಹೊಂದಿದ್ದರು. ಅದು ಯಾವುದನ್ನೂ ಈಡೇರಿಸಿಲ್ಲ. ಇದೊಂದು ಬೋಗಸ್‌ ಬಜೆಟ್.
•ಎಸ್‌. ರಾಮಪ್ಪ, ಶಾಸಕರು ಹರಿಹರ ಕ್ಷೇತ್ರ

ಆಶಾದಾಯಕ
ಆದಾಯ ತೆರಿಗೆ 2.5 ಲಕ್ಷ ರೂ. ನಿಂದ 5 ಲಕ್ಷ ರೂ.ವರೆಗೆ ಏರಿಸಿರುವುದು ಸ್ವಾಗತಾರ್ಹ. ಜೊತೆಗೆ ಗ್ರಾಮೀಣ ಪ್ರದೇಶಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸರ್ಕಾರಿ ನೌಕರರಿಗೆ ಅನುಕೂಲದ ಜೊತೆಗೆ ಇದೊಂದು ಆಶಾದಾಯಕ ಬಜೆಟ್ ಆಗಿದೆ.
•ಗುರುಸಿದ್ದಸ್ವಾಮಿ, ಶಿಕ್ಷಕರು

ಅತ್ಯುತ್ತಮ ಆಯವ್ಯಯ
ಗೃಹಸಾಲದ ಮೇಲಿನ ಡಿಡಕ್ಷನ್‌ ಮಿತಿ ಹೆಚ್ಚುಗೊಳಿಸಿರುವುದು ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗಿದೆ. 60 ವರ್ಷ ಮೇಲ್ಪಟ್ಟವರಿಗೆ ಮಾಸಾಶನ, ವಿಧವೆಯರಿಗೆ ವಿಧವಾ ವೇತನ ಹೆಚ್ಚಳದ ಜೊತೆಗೆ ಇಷ್ಟು ದಿನ ಕಡಿಮೆ ಸಂಬಳಕ್ಕೆ ಹೆಚ್ಚು ಕೆಲಸ ಮಾಡುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡಿರುವ ಈ ಬಜೆಟ್ ಅತ್ಯುತ್ತಮವಾಗಿದೆ.
•ಕೆ.ಎಸ್‌.ಆರ್‌. ಶ್ರೀನಿವಾಸ್‌ ಮೂರ್ತಿ. ನಿವೃತ್ತ ಪ್ರಾಂಶುಪಾಲರು.

ಐತಿಹಾಸಿಕ ಬಜೆಟ್
ಸಣ್ಣ ರೈತರ ಖಾತೆಗೆ ವರ್ಷಕ್ಕೆ ಮೂರು ಕಂತುಗಳಲ್ಲಿ 6 ಸಾವಿರ ನೀಡುವುದರಿಂದ ಕೃಷಿಕರಿಗೆ ಹೆಚ್ಚು ಅನೂಕೂಲವಾಗುತ್ತದೆ. ಜೊತೆಗೆ ಎಲ್ಲಾ ವರ್ಗದ ಜನಕ್ಕೂ ಬೇಧ-ಭಾವವಿಲ್ಲದ ಬಜೆಟ್ ಇದಾಗಿದ್ದು, ಕಳೆದ 70ವರ್ಷಗಳ ಇತಿಹಾಸದಲ್ಲಿ ಇಂತಹ ಬಜೆಟ್ ಘೋಷಣೆ ಆಗಿರಲಿಲ್ಲ. ಇದು ನಿಜಕ್ಕೂ ದೇಶದ ಮೊದಲ ಉತ್ತಮ ಬಜೆಟ್.
•ಕೆ.ಎಂ. ನಿಜಗುಣಶಿವಯೋಗಿವ್ಯಾಪಾರಸ್ಥರು.

ದುಡಿವ ಮಹಿಳೆಯರ ವಿರೋಧಿ
ಕೇಂದ್ರದ ಹಣಕಾಸು ಸಚಿವರು ಮಂಡಿಸಿರುವ ಬಜೆಟ್‌ನಲ್ಲಿ ದೇಶದ 25 ಲಕ್ಷ ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ದುಡಿಯುವ ಮಹಿಳಾ ವಿರೋಧಿ ಬಜೆಟ್ ಇದಾಗಿದೆ.
•ಆವರಗೆರೆ ಚಂದ್ರು,ಕಾರ್ಮಿಕ ಮುಖಂಡ

ಒಳ್ಳೆಯ ಪ್ರಯತ್ನ
ಸರ್ವಧರ್ಮಿಯರಿಗೂ ಉದ್ಯೋಗದಲ್ಲಿ ಶೇ. 10ರಷ್ಟು ಮೀಸಲಾತಿ ನೀಡಿರುವುದು ಉತ್ತಮ ಆಲೋಚನೆ. ತೆರಿಗೆ ಮರುಪಾವತಿಗೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಸಮಸ್ಯೆ ಬಗೆಹರಿಸುವ ಪ್ರಯತ್ನ ಒಳ್ಳೆಯ ಬೆಳವಣಿಗೆಯಾಗಿದೆ.
 •ಕೆ.ಎಂ. ವಿಜಯ್‌ಕುಮಾರ್‌, ಎಲ್‌ಐಸಿ ಏಜೆಂಟ್‌

Advertisement

Udayavani is now on Telegram. Click here to join our channel and stay updated with the latest news.

Next