Advertisement

ನೆಮ್ಮದಿಯಿಂದ ಬದುಕುವುದು ಅಂದರೆ ಏನು?

03:25 AM Nov 24, 2018 | |

ಕೇವಲ ನಮ್ಮ ನೋವನ್ನಷ್ಟೇ ಅಲ್ಲದೆ ಎಲ್ಲರ ನೋವುಗಳನ್ನು ಅರಿತು, ಅದೂ ಕೂಡ ತನ್ನದೇ ನೋವು ಎಂಬ ಪ್ರಜ್ಞೆಯೊಂದಿಗೆ ಬಾಂಧವ್ಯವನ್ನು ಬೆಸೆದುಕೊಂಡು ಜೀವಿಸುವವನೇ ಪರಮಯೋಗಿ. ಎಲ್ಲೆಲ್ಲಿಯೂ ಏಕತೆಯನ್ನು ಕಾಣುವವನು ಅಂದರೆ ಎಲ್ಲರೂ ಒಂದೇ, ನಾನು ಎಂಬುದನ್ನು ಬಿಟ್ಟು ನಾವು ಎಂಬ ದೃಷ್ಟಿಯನ್ನು ಹೊಂದಿದವನು ಪರಮಯೋಗಿಯಾಗುತ್ತಾನೆ. 

Advertisement

ಮಾನವನಾದವನಿಗೆ ಬದುಕಿನಲ್ಲಿ ನೆಮ್ಮದಿಯೊಂದಿದ್ದರೆ ಏನಿದ್ದರೂ ಬದುಕಬಲ್ಲ; ಏನಿರದಿದ್ದರೂ ಬದುಕಬಲ್ಲ! ಈ ನೆಮ್ಮದಿ ಎಂಬುದಕ್ಕೆ ವಿಶಾಲ ಅರ್ಥವಿದೆ. ನೆಮ್ಮದಿಯೆಂದರೆ, ನಮ್ಮೆಲ್ಲ ವಾಂಛೆಗಳು ಈಡೇರುವುದು ಎಂದುಕೊಂಡಿದ್ದೇವೆ. ಆದರೆ, ಈ ನೆಮ್ಮದಿ ಎಂಬುದು ಕೇವಲ ಐಹಿಕ ಸಂತೃಪ್ತಿಯಲ್ಲ. ಅದು ನಾವು ಪರಮಯೋಗಿಯಾಗುವುದೇ ನಿಜವಾದ ನೆಮ್ಮದಿ. ರೂಢಿಯೊಲ್ಲೊಂದು ಮಾತಿದೆ:”ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎಂಬುದಾಗಿ. ಇದು ತೀರಾ ಸರಳವಾದ ನುಡಿ. ಆದರೆ ಇಲ್ಲಿ ಚಿಂತೆ ಎಂಬುದು ಕೇವಲ ತಮಗೆ ಮಾತ್ರ ಸಂಬಂಧಿಸಿದ್ದು, ಅದೇ ಸಂತೆ ಎಂಬುದು ಜಗತ್ತು, ಎಲ್ಲರಿಗೂ ಸಂಬಂಧಿಸಿದ್ದು. ಅಂಥ ಜಾಗದಲ್ಲೂ ವ್ಯಕ್ತಿಯೊಬ್ಬ ನಿದ್ರಿಸುತ್ತಾನೆ ಎಂದರೆ, ಒಂದೋ ಆತ ತನ್ನೊಳಗಿನ ಚಿಂತೆಯನ್ನು ಬಿಟ್ಟವನಾಗಿದ್ದಾನೆ ಅಥವಾ ಪ್ರಪಂಚದ ಎಲ್ಲರ ಚಿಂತೆಯನ್ನು ಅನುಭವಿಸಿದವನಾಗಿದ್ದಾ ನೆ ಎಂದರ್ಥ.ಅರ್ಥಾತ್‌ ಆತ ಪರಮಯೋಗಿಯೇ ಆಗಿದ್ದಾನೆ ಅನ್ನಬಹುದು. 

ಭಗವದ್ಗೀತೆಯಲ್ಲಿ ಕೃಷ್ಣ ನು ಪರಮಯೋಗಿ ಯಾರೆಂಬುದನ್ನು ಸರಳವಾಗಿ ಹೇಳಿದ್ದಾನೆ.
ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋರ್ಜುನ |
ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ || (ಅಧ್ಯಾಯ 6 ಶ್ಲೋಕ 32)

ಸಕಲ ಜೀವಿಗಳ ಸುಖವನ್ನೂ ದುಃಖವನ್ನೂ ಯಾವನು ತನ್ನದೇ ಎಂದು ಭಾವಿಸುತ್ತಾನೋ, ಎಲ್ಲೆಲ್ಲಿಯೂ ಯಾರು ಏಕತೆಯನ್ನು ಕಾಣುತ್ತಾನೆಯೋ ಅವನೇ ಪರಮಯೋಗಿ ಎಂಬುದು ಇದರ ಅರ್ಥ.
ಪ್ರತಿಯೊಬ್ಬರ ಜೀವನವೂ ಸುಖದುಃಖಗಳಿಂದ ಕೂಡಿರುತ್ತದೆ. ಅಂದರೆ, ಪ್ರತಿಯೊಬ್ಬನಿಗೂ ನೋವುನಲಿವುಗಳ ಸಂಪೂರ್ಣ ಅರಿವಿದೆ. ಇಲ್ಲಿ ನಾವು ಉದಾತ್ತರಾಗಬೇಕು. ಕೇವಲ ನಮ್ಮ ನೋವನ್ನಷ್ಟೇ ಅಲ್ಲದೆ ಎಲ್ಲರ ನೋವುಗಳನ್ನು ಅರಿತು, ಅದೂ ಕೂಡ ತನ್ನದೇ ನೋವು ಎಂಬ ಪ್ರಜ್ಞೆಯೊಂದಿಗೆ ಬಾಂಧವ್ಯವನ್ನು ಬೆಸೆದುಕೊಂಡು ಜೀವಿಸುವವನೇ ಪರಮಯೋಗಿ. ಎÇÉೆಲ್ಲಿಯೂ ಏಕತೆಯನ್ನು ಕಾಣುವವನು ಅಂದರೆ ಎಲ್ಲರೂ ಒಂದೇ, ನಾನು ಎಂಬುದನ್ನು ಬಿಟ್ಟು ನಾವು ಎಂಬ ದೃಷ್ಟಿಯನ್ನು ಹೊಂದಿದವನು ಪರಮಯೋಗಿಯಾಗುತ್ತಾನೆ. ಈ ಏಕತಾಭಾವದಿಂದಾಗಿ ಎಲ್ಲರೂ ಪರಮಯೋಗಿಗಳಾಗಿ ಪರಿವರ್ತನೆ ಹೊಂದಿದ ಜಗತ್ತಿನಲ್ಲಿ ನೆಮ್ಮದಿಯು ಶಾಶ್ವತವಾಗಿ ನೆಲೆಸುತ್ತದೆ. ಯಾಕೆಂದರೆ ಪ್ರತಿಯೊಬ್ಬರ ಕಷ್ಟವನ್ನು ತನ್ನದೇ ಕಷ್ಟವೆಂದುಕೊಂಡು ವ್ಯವಹರಿಸುವಾಗ ಪರಸ್ಪರ ಸಹಾಯಕ್ಕೆ ನಿಲ್ಲುವ ಮನಸ್ಸು ಸರ್ವವ್ಯಾಪಿಯಾಗಿ ಎಲ್ಲರೂ ಆನಂದದ ಬದುಕನ್ನು ಹೊಂದಲು ಸಾಧ್ಯ.

ಆತ್ಮವೆನ್ನುವುದು ದೇವರ ಸ್ವರೂಪ. ಭಕ್ತ ಪ್ರಹ್ಲಾದ ಹೇಳಿದಂತೆ ದೇವರು ಎಲ್ಲೆಲ್ಲಿಯೂ ಇದ್ದಾನೆ. ನಮ್ಮಲ್ಲೂ ಇದ್ದಾನೆ; ನಿಮ್ಮಲ್ಲೂ ಇದ್ದಾನೆ. ಹಾಗಾಗಿ, ದೇಹದ ರೂಪಗಳು ಮಾತ್ರ ಭಿನ್ನವಾಗಿದೆ. ಈ ಭಿನ್ನತೆಯನ್ನು ಮರೆತು, ಏಕತೆಯನ್ನು ಸಾಧಿಸುವ ಮನಸ್ಸು ನಮ್ಮದಾಗಬೇಕು. ಮನಸ್ಸನ್ನು ಹಿಡಿದಿಡುವುದು ಮಾತ್ರ ಕಠಿಣ. ಚಾಂಚಲ್ಯವಾದ ಮನಸ್ಸು ನಮ್ಮ ದೇಹದಿಂದ ಘಟಿಸುವ ಎಲ್ಲಾ ಕ್ರಿಯೆ-ಪ್ರತಿಕ್ರಿಯೆಗಳನ್ನು ಸದಾ ನಿಯಂತ್ರಿಸುತ್ತಿರುತ್ತದೆ. ಇಂಥ ಮನಸ್ಸನ್ನು ಪ್ರತಿಯೊಬ್ಬನೂ ನಿಯಂತ್ರಣದಲ್ಲಿಟ್ಟುಕೊಂಡು ಯೋಗಿಯಾಗಬೇಕು. ಪ್ರಸ್ತುತ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳು ಕಳೆದು ಹೋಗಿವೆ. ಸತ್ಯವೆಂಬುದು ಹತ್ತಿರದÇÉೆಲ್ಲೂ ಸುಳಿಯುತ್ತಿಲ್ಲ. ಆತ್ಮವೆಂಬುದು ಪೂಜನೀಯ. ಆದರೆ ಆತ್ಮಸಾಕ್ಷಿ$ ಎಂಬುದು ಯಾರಲ್ಲಿಯೂ ಇಲ್ಲ. ನಾವು ಮೊದಲು ಸುಳ್ಳು ಹೇಳುವುದನ್ನು ಬಿಡಬೇಕು. ಇದುರಿಗೆ ಇರುವ ವ್ಯಕ್ತಿಯಲ್ಲಿ ನಮ್ಮ ಇಷ್ಟ ದೇವರನ್ನು ಕಾಣಬೇಕು. ಆಗ ಮಾತ್ರ ನಾವು ಸತ್ಯನಿಷ್ಠರಾಗಿ ಬಾಳಲು  ಸಾಧ್ಯ. ನೆಮ್ಮದಿ ಎಂಬುದು ಬೆಳಕನ್ನು ತೋರಿಸುವ ನಂದಾದೀಪವಲ್ಲ. ಗೀತೆಯಲ್ಲಿ ಹೇಳಿದ ಈ ಏಕತಾಭಾವ ಮತ್ತು ಎಲ್ಲವೂ ನಮ್ಮದೆಂಬ ಜ್ಞಾನ ನಮ್ಮಲ್ಲಿ ಹುಟ್ಟಿಕೊಂಡರೆ ಆ ಕ್ಷಣದಿಂದಲೇ ನಾವು ಪರಮಯೋಗಿಯಾಗುತ್ತೇವೆ, ಅಂದಿನಿಂದ ನಮ್ಮ ಬಾಳಲ್ಲಿ ನೆಮ್ಮದಿ ನೆಲೆಯಾಗುತ್ತದೆ ಮತ್ತು ಬದುಕು ಪರಿಪೂರ್ಣವಾಗುತ್ತದೆ.

Advertisement

ವಿಷ್ಣು ಭಟ್‌ , ಹೊಸ್ಮನೆ (ಭಾಸ್ವ)

Advertisement

Udayavani is now on Telegram. Click here to join our channel and stay updated with the latest news.

Next