Advertisement

Ganesh Chaturthi: ಏನಿದು ಗೌರಿ ಗಣೇಶ ಹಬ್ಬ? ಏನಿದರ ಮಹತ್ವ?

02:12 PM Sep 18, 2023 | Team Udayavani |

ಗಣೇಶ ಚತುರ್ಥಿಗೆ ಒಂದು ದಿನ ಮೊದಲು ಗೌರಿ ಪೂಜೆಯನ್ನು ಆಚರಿಸಲಾಗುತ್ತದೆ.  ಭಾದ್ರಪದ ಮಾಸ ಬಂದರೆ ಸಾಕು ಮನೆ ಮನೆಗೆ ಗೌರಿ ಮತ್ತು ಗಣೇಶ ಬರುವ ಸಡಗರ ಸಂಭ್ರಮ. ಸ್ವರ್ಣ ಗೌರಿಗಿಂತಲೂ ಹೆಚ್ಚು ಪ್ರಾಮುಖ್ಯತೆ ಹೊಂದಿರುವುದು ಗಣೇಶನಿಗೆ. ಊರು ಊರಿನ ಗಲ್ಲಿಗಳಲ್ಲಿ, ಮನೆ, ರಸ್ತೆ, ಎಲ್ಲಿ ನೋಡಿದರೂ ಗಣೇಶನದ್ದೆ ಅಬ್ಬರ. ಮೊದಲನೆಯ ದಿನದ ಗೌರಿ ಹಬ್ಬಕ್ಕಿಂತಲೂ ಗಣೇಶ ಹಬ್ಬಕ್ಕೆ ವಿಶೇಷ ಸಂಭ್ರಮವಿದೆ.

Advertisement

ಹೆಣ್ಣು ಮಕ್ಕಳಿಗೆ ಮೀಸಲಾದ ಹಬ್ಬಗಳಲ್ಲಿ ಪ್ರಮುಖ ಹಬ್ಬ ಗೌರಿ ಹಬ್ಬ. ಹಿಂದೂ ಮಹಿಳೆಯರು ಗೌರಿ ಪೂಜೆಯನ್ನು ಅತ್ಯಂತ  ಭಕ್ತಿಯುತವಾಗಿ ಆಚರಿಸುತ್ತಾರೆ. ಇದು ಪ್ರತಿ ಮನೆಯಲ್ಲಿ ಸೌಭಾಗ್ಯವನ್ನು ತರುವಂತಹ ಒಂದು ಹಬ್ಬವಾಗಿದೆ. ದೇವಿಯರಲ್ಲಿ ಅತಿ ಶಕ್ತಿಯಾದ ಆದಿಶಕ್ತಿಯ ಅವತಾರವೆಂದು ಗೌರಿ ದೇವಿಯನ್ನು ಪರಿಗಣಿಸಲಾಗುತ್ತದೆ. ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ಉಪವಾಸ ವ್ರತ ಆಚರಿಸುತ್ತಾರೆ. ವಿವಾಹಿತ  ಹೆಂಗಳೆಯರು ತಮ್ಮ ವೈವಾಹಿಕ ಜೀವನ ಚೆನ್ನಾಗಿರಲೆಂದು ಸ್ವರ್ಣ ಗೌರಿ ವ್ರತವನ್ನು ಆಚರಿಸಿದರೆ ಅವಿವಾಹಿತ ಮಹಿಳೆಯರು ಒಳ್ಳೆಯ ಕಂಕಣ ಭಾಗ್ಯ ಕೂಡಿ ಬರಲಿ ಎಂದು ವ್ರತವನ್ನು ಆಚರಿಸುವುದು ಎಂಬ ವಾಡಿಕೆಯು ಇದೆ.

ಉಪವಾಸ ವ್ರತದೊಂದಿಗೆ ಗೌರಿ ದೇವಿಯ ವಿಗ್ರಹವನ್ನು ಇಟ್ಟು ಅಲಂಕರಿಸುತ್ತಾರೆ. ಸಾಂಪ್ರಾಯಿಕವಾಗಿ ಎಲ್ಲಾ ಮುತ್ತೈದೆಯರಿಗೆ ಅರಿಶಿಣ, ಕುಂಕುಮ, ಬಳೆ, ತೆಂಗಿನಕಾಯಿ, ಸಿರಿಧಾನ್ಯ, ಕುಪ್ಪಸದ ತುಂಡು, ಬೆಲ್ಲವನ್ನು ನೀಡುತ್ತಾರೆ.

ಈ ಸಂದರ್ಭದಲ್ಲಿ ವಿವಾಹಿತ ಮಹಿಳೆಯರು ಹದಿನಾರು ಗಂಟುಗಳಿರುವ ಗೌರಿ ದಾರವನ್ನು ಕಟ್ಟಿಕೊಂಡು ದೇವಿಯ ಅನುಗ್ರಹವನ್ನು ಪಡೆಯುತ್ತಾರೆ. ಇನ್ನು ಹಳ್ಳಿಯ ಕಡೆ ನೋಡುವುದಾದರೆ ಹೊಸದಾಗಿ ಮದುವೆಯಾದ ನವದಂಪತಿಗಳಿಗೆ ಆಟದ ಹಬ್ಬ.

ಏಕೆಂದರೆ ಹುಡುಗಿಯ ಮನೆಯವರು ಹುಡುಗನ ಮನೆಗೆ ಬಾಗಿನವನ್ನು ತೆಗೆದುಕೊಂಡು ಹೋಗುವಾಗ ತೆಂಗಿನ ಕಾಯಿಯನ್ನು ಬರಿ ಕೈಯಿಂದ ಗುದ್ದುವ ಆಟವೊಂಡಿದೆ. ಹುಡುಗನ ಮನೆಯವರು ನೀಡುವ ತೆಂಗಿನಕಾಯಿಯನ್ನು ಹುಡುಗಿಯ ಮನೆಯವರು ಒಡೆಯುವುದು, ಹಾಗೆಯೇ ಹುಡುಗಿಯ ಮನೆಯಿಂದ ನೀಡುವ ತೆಂಗಿನಕಾಯಿಯನ್ನು ಹುಡುಗನ ಮನೆಯವರು ಒಡೆಯುವುದರ ಮೂಲಕ ಸಂಭ್ರಮಿಸುತ್ತಾರೆ.

Advertisement

“ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್”

ಮರುದಿನ ಬರುವ ಗಣೇಶ ಹಬ್ಬದ ಬಗ್ಗೆ ಹೇಳುವುದಾದರೆ ಇದು ಭಾರತದಲ್ಲಿಯೇ ಒಂದು ಪ್ರಮುಖವಾದಂತಹ ಹಬ್ಬ. ಬುದ್ಧಿವಂತಿಕೆ ಮತ್ತು ಶ್ರೀಮಂತಿಕೆಯ ದೇವರಾದ ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ. ಕೆಲವರು ಐದು ದಿನಗಳವರೆಗೆ ಗಣಪನನ್ನು ಪ್ರತಿಷ್ಠಾಪಿಸಿದರೆ, ಇನ್ನೂ ಕೆಲವರು ಹತ್ತು- ಹದಿನೈದು ದಿನಗಳವರೆಗೆ ಇಟ್ಟು ಪ್ರತಿದಿನ ಪೂಜಿಸಿ ಸಂಭ್ರಮಿಸುತ್ತಾರೆ.

ಗಣೇಶ ಚತುರ್ಥಿ ಹಬ್ಬವನ್ನು ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಆಚರಿಸಲಾಗುತ್ತದೆ. ಆದರೆ ಇದನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಅದಲ್ಲದೆ ವಿದೇಶಗಳಲ್ಲಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಗಣಪನ ಇಷ್ಟದ ತಿನಿಸಾದ ಮೋದಕ, ಕಾಯಿ ಕಡಬು, ಲಡ್ಡು, ಮಂಡಕ್ಕಿ ಉಂಡೆ, ಬಾಳೆಹಣ್ಣು, ಗರಿಕೆ ಹುಲ್ಲು ಹಾಗೆಯೇ ನೈವೇದ್ಯವನ್ನು ಇಡುತ್ತಾರೆ. ಎಲ್ಲಿ ನೋಡಿದರೂ ಹಾಡು, ನೃತ್ಯದ ಸಂಭ್ರಮ. ಆರ್ಕೆಸ್ಟ್ರಾದ ಹಾವಳಿ.

ಇಲ್ಲಿ ಜಾತಿ ಮತ ಎಂಬ ಯಾವುದೇ ಭೇದ-ಭಾವವಿಲ್ಲದೆ ಎಲ್ಲರೂ ಗಣಪತಿ ಪೂಜೆ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಯಾರು ಬೇಕಾದರೂ ತಮ್ಮ ಪ್ರತಿಭೆಯನ್ನು ತೋರಿಸಲು ಮುಕ್ತ ಅವಕಾಶ ಎಂದರೆ ಅದು ಸಾರ್ವಜನಿಕ ಗಣೆಶೋತ್ಸವ ಕಾರ್ಯಕ್ರಮ. ನಂತರ ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ವಿಸರ್ಜಿಸುವ ಸ್ಥಳಕ್ಕೆ ತಂದು ಮತ್ತೆ ಪೂಜಿಸಿ ನದಿಯಲ್ಲಿ ವಿಸರ್ಜಿಸುತ್ತಾರೆ.

ಹೀಗೆ ಭಾರತದಾದ್ಯಂತ ಗೌರಿ ಮತ್ತು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುವುದರ ಮೂಲಕ ಪ್ರಜೆಗಳು ಗಣೇಶ ಮತ್ತು ಗೌರಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಎಲ್ಲರಿಗೂ ಸ್ವರ್ಣ ಗೌರಿ ಮತ್ತು ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು.

-ಸ್ನೇಹ ವರ್ಗೀಸ್

ಪತ್ರಿಕೋದ್ಯಮ ವಿಭಾಗ

ಎಂ.ಜಿ.ಎಂ. ಕಾಲೇಜು

Advertisement

Udayavani is now on Telegram. Click here to join our channel and stay updated with the latest news.

Next