Advertisement

Explained:ಸಾವಿರಾರು ಜನರ ಸಾವು…ಈಗ ಕದನ ವಿರಾಮ: ಏನಿದು ಅಜರ್‌ ಬೈಜಾನ್‌-ಅರ್ಮೇನಿಯಾ ಸಂಘರ್ಷ

02:42 PM Sep 21, 2023 | Team Udayavani |

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್‌ ನಿರ್ಜಾರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಮತ್ತು ಭಾರತದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಾರಕ್ಕೇರುತ್ತಿದ್ದು, ಮತ್ತೊಂದೆಡೆ ಅರ್ಮೇನಿಯನ್‌ ಪ್ರತ್ಯೇಕತಾವಾದಿಗಳು ಗುರುವಾರ (ಸೆ.21) ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ನಾಗೋರ್ನೊ-ಕರಾಬಖ್‌ ಯುದ್ಧದಲ್ಲಿ ಜಯಗಳಿಸಿರುವುದಾಗಿ ಅಜರ್‌ ಬೈಜಾನ್ ಘೋಷಿಸಿದೆ.

Advertisement

ಏನಿದು ನಾಗೋರ್ನೊ-ಕರಾಬಖ್‌ ಸಂಘರ್ಷ?

ಆರ್ಟ್ಸಾಖ್‌ ಎಂದು ಕರೆಯಲ್ಪಡುವ ನಾಗೋರ್ನೊ-ಕರಾಬಖ್‌ ದಕ್ಷಿಣ ಕಾಕಸಸ್‌ ಪರ್ವತಗಳ ಪ್ರದೇಶವಾಗಿದೆ. ಇದು ಅಜರ್‌ ಬೈಜಾನ್‌ ನ ಭಾಗ ಎಂದು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿತ್ತು. ಆದರೆ ಪ್ರಧಾನವಾಗಿ ಇಲ್ಲಿ ಅರ್ಮೇನಿಯನ್‌ ಜನಸಂಖ್ಯೆಯೇ ಹೆಚ್ಚಾಗಿತ್ತು. ಈ ಪ್ರದೇಶ ತನ್ನದೇ ಸರ್ಕಾರವನ್ನು ಹೊಂದಿತ್ತು. ಇದು ಅರ್ಮೇನಿಯಾಕ್ಕೆ ಸಮೀಪದಲ್ಲಿದ್ದು, ನಾಗೋರ್ನೊ-ಕರಾಬಖ್‌ ವಿಶ್ವಸಂಸ್ಥೆ ಅಥವಾ ಇತರ ಯಾವುದೇ ದೇಶದಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿಲ್ಲವಾಗಿತ್ತು.

ಅರ್ಮೇನಿಯನ್‌ ರು ಹೆಚ್ಚಾಗಿ ಕ್ರಿಶ್ಚಿಯನ್ನರಾಗಿದ್ದು, ಅಜರ್‌ ಬೈಜಾನ್‌ ಪ್ರದೇಶದಲ್ಲಿ ಬಹುತೇಕ ತುರ್ಕಿ ಮುಸ್ಲಿಮ ಜನಸಂಖ್ಯೆಯನ್ನು ಹೊಂದಿದ್ದು, ಎರಡೂ ಪ್ರದೇಶ ದೀರ್ಘ ಇತಿಹಾಸವನ್ನು ಹೊಂದಿದ್ದವು. ಆದರೆ ಈ ಎರಡು ಜನಾಂಗದ ನಡುವಿನ ಸಂಘರ್ಷ ಒಂದು ಶತಮಾನಕ್ಕಿಂತಲೂ ಹಿಂದಿನದ್ದಾಗಿದೆ.

Advertisement

1922ರಲ್ಲಿ ಅರ್ಮೇನಿಯಾ ಮತ್ತು ಅಜರ್‌ ಬೈಜಾನ್‌ ಸೋವಿಯತ್‌ ಒಕ್ಕೂಟದ ಗಣರಾಜ್ಯಗಳಾಗಿದ್ದವು. 20ನೇ ಶತಮಾನದ ಅಂತ್ಯದ ವೇಳೆಗೆ ಸೋವಿಯತ್‌ ಒಕ್ಕೂಟ ಒಡೆದು ಹೋಳಾದ ನಂತರ ಅರ್ಮೇನಿಯನ್ನರು ಮತ್ತು ಅಜರ್‌ ಬೈಜಾನಿಗಳ ನಡುವೆ ನಾಗೋರ್ನೊ-ಕರಾಬಖ್‌ ಪ್ರದೇಶ ವಶಪಡಿಸಿಕೊಳ್ಳಲು ಸಂಘರ್ಷ ಆರಂಭವಾಗಿತ್ತು.

ಎರಡು ಜನಾಂಗದ ನಡುವೆ 1988ರಿಂದ 1994ರವರೆಗೂ ಯುದ್ಧ ನಡೆದಿದ್ದು, ಸುಮಾರು 3,000 ಜನರ ಸಾವಿಗೆ ಕಾರಣವಾಗಿತ್ತು. ಅಲ್ಲದೇ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿತ್ತು ಎಂದು ವರದಿ ವಿವರಿಸಿದೆ.

2020ರಲ್ಲಿ ಅಜರ್‌ ಬೈಜಾನ್‌ ಮಿಲಿಟರಿ ದಾಳಿ ಆರಂಭಿಸುವ ಮೂಲಕ ಎರಡನೇ ಬಾರಿಗೆ ಕರಾಬಖ್‌ ಸ್ವಾಧೀನಕ್ಕಾಗಿ ಯುದ್ಧವನ್ನು ಹುಟ್ಟು ಹಾಕಿತ್ತು. ಈ ಸಂದರ್ಭದಲ್ಲಿ ಅಜರ್‌ ಬೈಜಾನ್‌ ಸೇನೆ ಶೀಘ್ರವಾಗಿ ಅರ್ಮೇನಿಯನ್‌ ಪಡೆಗಳನ್ನು ಸೋಲಿಸಿತ್ತು. ಕೇವಲ 44 ದಿನಗಳ ಯುದ್ಧದಲ್ಲಿ ಸುತ್ತಮುತ್ತಲಿನ ಏಳು ಜಿಲ್ಲೆಗಳು ಮತ್ತು ನಾಗೋರ್ನೊ-ಕರಾಬಖ್‌ ನ ಮೂರನೇ ಒಂದರಷ್ಟು ಭಾಗದ ಮೇಲೆ ಅಜರ್‌ ಬೈಜಾನ್‌ ನಿಯಂತ್ರಣ ಸಾಧಿಸಿತ್ತು. ಈ ಯುದ್ಧದಲ್ಲಿ ಅಂದಾಜು 6,500 ಜನರು ಸಾವನ್ನಪ್ಪಿದ್ದರು.

ಏತನ್ಮಧ್ಯೆ ರಷ್ಯಾದ ಮಧ್ಯಸ್ಥಿಕೆಯ ಕದನ ವಿರಾಮ ಒಪ್ಪಂದದ ಮೂಲಕ ಈ ಪ್ರದೇಶದಲ್ಲಿ ಶಾಂತಿ ನೆಲೆಸಿತ್ತು. ನಂತರ ಅರ್ಮೇನಿಯಾದ ನಿಯಂತ್ರಣದಲ್ಲಿ ಇಲ್ಲದ ನಾಗೋರ್ನೊ-ಕರಾಬಖ್‌ ಅನ್ನು ಸಂಪರ್ಕಿಸುವ ರಸ್ತೆಯಾದ ಲಾಚಿನ್‌ ಕಾರಿಡಾರ್‌ ಗೆ ರಷ್ಯಾ 1,960 ಶಾಂತಿಪಾಲಕರನ್ನು ನಿಯೋಜಿಸಿತ್ತು.

2023ರಲ್ಲಿ ಬಿರುಸುಗೊಂಡ ಸಂಘರ್ಷ:

2023ರ ಸೆಪ್ಟೆಂಬರ್‌ 19ರಂದು ಅಜರ್‌ ಬೈಜಾನ್‌ ನಾಗೋರ್ನೊ-ಕರಾಬಖ್‌ ಪ್ರದೇಶದಲ್ಲಿ ಭಾರೀ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿತ್ತು. ಅರ್ಮೇನಿಯನ್‌ ನಮ್ಮ ಇಬ್ಬರು ನಾಗರಿಕರು ಹಾಗೂ ನಾಲ್ವರು ಪೊಲೀಸ್‌ ಅಧಿಕಾರಿಗಳನ್ನು ಹತ್ಯೆಗೈದಿದ್ದು, ಇದು ಭಯೋತ್ಪಾದಕ ಕೃತ್ಯವಾಗಿದೆ. ಇದಕ್ಕೆ ಪ್ರತೀಕಾರವಾಗಿ ಸೇನಾ ಕಾರ್ಯಾಚರಣೆ ನಡೆಸಿರುವುದಾಗಿ ಅಜರ್‌ ಬೈಜಾನ್‌ ರಕ್ಷಣಾ ಸಚಿವಾಲಯ ತಿಳಿಸಿತ್ತು. ಈ ಹೇಳಿಕೆಯ ಪರಿಣಾಮ ಎರಡೂ ದೇಶಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು.

ಕದನ ವಿರಾಮಕ್ಕೆ ಒಪ್ಪಿಗೆ:

ಸಾಕಷ್ಟು ಸಾವು, ನೋವು ಸಂಭವಿಸಿದ ಬಳಿಕ ಇದೀಗ ರಷ್ಯಾದ ಶಾಂತಿ ಮಧ್ಯಸ್ಥಿಕೆಯಿಂದಾಗಿ ಅಜರ್‌ ಬೈಜಾನ್‌ ಮತ್ತು ಅರ್ಮೇನಿಯನ್‌ ಪ್ರತ್ಯೇಕತಾವಾದಿಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಕರಾಬಖ್‌ ನಲ್ಲಿ ಭಯೋತ್ಪಾದಕ ನಿಗ್ರಹ ಯಶಸ್ವಿಯಾಗಿದ್ದು, ಅಜರ್‌ ಬೈಜಾನ್‌ ತನ್ನ ಸಾರ್ವಭೌಮತ್ವವನ್ನು ಮರಳಿ ಸ್ಥಾಪಿಸಿರುವುದಾಗಿ ಅಜರ್‌ ಬೈಜಾನ್‌ ಅಧ್ಯಕ್ಷ ಇಲ್ಹಾಮ್‌ ಅಲಿಯೆವ್‌ ಎಎಫ್‌ ಪಿ ನ್ಯೂಸ್‌ ಏಜೆನ್ಸಿಗೆ ತಿಳಿಸಿದ್ದಾರೆ.

ಶಾಂತಿ ಮಾತುಕತೆ:

ಗುರುವಾರ ಅಜರ್‌ ಬೈಜಾನ್‌ ಅರ್ಮೇನಿಯನ್‌ ಪ್ರತ್ಯೇಕತಾವಾದಿಗಳ ಜತೆ ಶಾಂತಿ ಮಾತುಕತೆ ನಡೆಸಿತ್ತು. ಅಜರ್‌ ಬೈಜಾನ್‌, ಅರ್ಮೇನಿಯನ್‌ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆ ಕರೆದಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next