Advertisement

ಪೇಟೆಂಟ್‌ ಎಂದರೆ ಏನು? ಅದರ ನಿಬಂಧನೆಗಳೇನು?

09:29 PM Jul 26, 2020 | Karthik A |

ಯಾವುದಾದರೂ ಉತ್ಪನ್ನ ಶೋಧಿಸಿದಾಗ ಅಥವಾ ಆವಿಷ್ಕರಿಸಿದಾಗ ಅದಕ್ಕೆ ಪೇಟೆಂಟ್‌ ಪಡೆದುಕೊಳ್ಳುವುದು ಅವಶ್ಯ ಎನ್ನುವುದನ್ನು ಕೇಳಿದ್ದೇವೆ.

Advertisement

ಹಾಗಾದರೆ ಪೇಟೆಂಟ್‌ ಎಂದರೇನು? ಅದನ್ನು ಪಡೆಯಲಿರುವ ಮಾನದಂಡವೇನು? ಪೇಟೆಂಟ್‌ ಪಡೆದುಕೊಳ್ಳುವುದು ಯಾಕೆ ಅವಶ್ಯ? ಮುಂತಾದವುಗಳನ್ನು ತಿಳಿದುಕೊಳ್ಳೋಣ.

ಹಕ್ಕು ಸ್ವಾಮ್ಯದ ಆವಿಷ್ಕಾರಕ್ಕೆ ಅದರ ಮಾಲಕರಿಗೆ ನೀಡಲಾಗುವ ವಿಶೇಷ ಅಧಿಕಾರವನ್ನು ಪೇಟೆಂಟ್‌ ಅಥವಾ ಬೌದ್ಧಿಕ ಹಕ್ಕು ಸ್ವಾಮ್ಯ ಎನ್ನಲಾಗುತ್ತದೆ. ಇನ್ನೂ ಸುಲಭವಾಗಿ ಹೇಳುವುದಾದರೆ ಒಂದು ವಸ್ತುವಿನ ಮೇಲೆ ಅದರ ನಿಜವಾದ ವಾರಸುದಾರರಿಗೆ ನೀಡಲಾಗುವ ಹಕ್ಕು.

ಉದಾಹರಣೆಗೆ ಓರ್ವ ವ್ಯಕ್ತಿ ಅಥವಾ ಒಂದು ಕಂಪೆನಿ ಲೋಗೋವನ್ನು ತಯಾರಿಸಿದರೆ ಅದನ್ನು ಬಳಸುವ, ಇತರೆಡೆಗಳಲ್ಲಿ ಉಪಯೋಗಿಸುವ ಹಕ್ಕು ಕೇವಲ ಅವರದ್ದು ಮಾತ್ರ ಆಗಿರುತ್ತದೆ.

ಯಾರು ಕೊಡುತ್ತಾರೆ?
ಪೇಟೆಂಟ್‌ ನೀಡುವ ಅಧಿಕಾರ ಸರಕಾರಕ್ಕಿರುತ್ತದೆ. ಅರ್ಜಿ ಸಲ್ಲಿಸುವ ವ್ಯಕ್ತಿ ಅಥವಾ ಕಂಪೆನಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಇಂತಿಷ್ಟು ವರ್ಷದ ವರೆಗೆ ಪೇಟೆಂಟ್‌ ಅಧಿಕಾರವನ್ನು ನೀಡಲಾಗುತ್ತದೆ. ಇದು ತಂತ್ರಜ್ಞಾನ ಯುಗ. ಎಲ್ಲ ವಸ್ತುಗಳ ಮೇಲೆ ತಮ್ಮ ಗುರುತಿರಬೇಕೆಂದು ಬಯಸುವ ಮಲ್ಟಿನ್ಯಾಷನಲ್‌ ಕಂಪೆನಿಗಳು; ಸಾಧನೆಯನ್ನು ಕೇವಲ ತಮ್ಮ ಹೆಸರಲ್ಲೇ ಸೀಮಿತವಾಗಿಡಲು ಪೇಟೆಂಟ್‌ನ ಸಹಾಯ ಪಡೆಯುತ್ತಾರೆ. ಇದರ ಬಳಿಕ ಅವರ ಅನುಮತಿಯಲ್ಲದೆ ಇತರರು ಬಳಸಿದರೆ ಕೇಸ್‌ ದಾಖಲಿಸಬಹುದಾಗಿದೆ.

Advertisement

ಪೇಟೆಂಟ್‌ನಲ್ಲಿ ಬೇರೆ ಬೇರೆ ವಿಧಗಳಿವೆ. ದೇಶ ಬದಲಾದಂತೆ ನಿಯಮಗಳೂ ಬದಲಾಗು ತ್ತವೆ. ಎಲ್ಲ ಹೊಸ ಆವಿಷ್ಕಾರಗಳಿಗೆ ಭಾರತೀಯ ಪೇಟೆಂಟ್‌ ಕಾಯ್ದೆಯಡಿ ಪೇಟೆಂಟ್‌ ಪಡೆಯಲಾಗುವುದಿಲ್ಲ. ಇನ್ನೊಂದು ಮುಖ್ಯ ವಿಚಾರ ಎಂದರೆ ಆವಿಷ್ಕಾರದಿಂದ ಸಮಾಜಕ್ಕೆ, ಪ್ರಕೃತಿಗೆ ಹಾನಿಗಳು ಉಂಟಾಗುತ್ತಿದ್ದರೆ ಅಂತಹವುಗಳಿಗೆ ಪೇಟೆಂಟ್‌ಗಳು ಲಭಿಸುವುದಿಲ್ಲ.

ಭಾರತದಲ್ಲಿ ಸಾಮಾನ್ಯ ಪೇಟೆಂಟ್‌, ಸಾಂಪ್ರದಾಯಿಕ ಪೇಟೆಂಟ್‌, ಪಿಸಿಟಿ ರಾಷ್ಟ್ರೀಯ ಹಂತದ ಪೇಟೆಂಟ್‌ ಎಂಬ ಮೂರು ವಿಧಗಳಿವೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಹೊಸ ಆವಿಷ್ಕಾರಗಳು ದುರುಪಯೋಗವಾಗದಿರಲು ಪೇಟೆಂಟ್‌ ನಿಯಮಗಳು ಸಹಾಯಕ್ಕೆ ಬರುತ್ತವೆ. ಇದರಿಂದ ಪ್ರತಿಭೆಗೆ ಯಾವುದೇ ಮೋಸವಾಗುವುದಿಲ್ಲ. ಜತೆಗೆ ಕೆಲವೊಂದು ಬಾರಿ ಪೇಟೆಂಟ್‌ಗಳು ಕೆಲವು ವಸ್ತುಗಳನ್ನು ಉಪಯೋಗಿಸುವ ನಮ್ಮ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ. ಯಾವುದೇ ಮಲ್ಟಿ ನ್ಯಾಷನಲ್‌ ಕಂಪೆನಿಗಳ ಹೆಸರಿನಲ್ಲಿರುವ ಪೇಟೆಂಟ್‌ ವಸ್ತು (ಸಸ್ಯ, ಔಷಧ)ಗಳನ್ನು ನಮಗೆ ಅಧಿಕಾರಯುತವಾಗಿ ಉಪಯೋಗಿಸಲಾಗುವುದಿಲ್ಲ.

ಪಡೆಯುವುದು ಹೇಗೆ?
ನಿಮ್ಮ ಸಂಶೋಧನೆಗೆ ಪೇಟೆಂಟ್‌ ಸಿಗಬೇಕಾದರೆ ನೀವು ಪೇಟೆಂಟ್‌ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ ಮೊದಲಿಗ ರಾಗಿರಬೇಕು. ನಿಮ್ಮದೇ ಸಂಶೋಧನೆಯನ್ನು ನಿಮಗಿಂತ ಮೊದಲೇ ಯಾರಾದರೂ ಅರ್ಜಿ ಸಲ್ಲಿಸಿ ಪೇಟೆಂಟ್‌ ಪಡೆದುಕೊಂಡಿದ್ದರೆ ನೀವು ಏನೂ ಮಾಡುವ ಹಾಗಿಲ್ಲ. ಅಂದರೆ ಪೇಟೆಂಟ್‌ ವ್ಯವಸ್ಥೆಯಲ್ಲಿ ಮೊದಲು ಬಂದವರಿಗೇ ಆದ್ಯತೆ. ಮೊದಲಿಗೆ ಪೇಟೆಂಟ್‌ ಕಾರ್ಯಾಲಯಕ್ಕೆ ಅರ್ಜಿ ಹಾಕಬೇಕು. ಇದರ ಜತೆಯಲ್ಲಿ ಸ್ವಲ್ಪ ದುಬಾರಿಯೆನಿಸುವ ಶುಲ್ಕವನ್ನು ಕಟ್ಟಬೇಕು. ಅರ್ಜಿಯಲ್ಲಿ ಸಂಶೋಧನೆಯ ಎಲ್ಲ ವಿವರಣೆಗಳನ್ನು ನೀಡಬೇಕು.

ಈ ಅರ್ಜಿ ಸಲ್ಲಿಸಿದ ಸುಮಾರು 24-36 ತಿಂಗಳುಗಳ ಬಳಿಕ ಪೇಟೆಂಟ್‌ ಸಿಗುತ್ತದೆ. ಆದ್ದರಿಂದ ಪೇಟೆಂಟ್‌ನಲ್ಲಿ ಸಮಯಕ್ಕೆ ಬಹಳ ಮಹತ್ವವಿದೆ. ಪೇಟೆಂಟ್‌ ಸಿಗಲು ನೀವು ಹೊಸ ಸಂಶೋಧನೆಯನ್ನೇನೂ ಮಾಡಬೇಕಾಗಿಲ್ಲ. ನಿಮಗೆ ಏನಾದರೂ ಹೊಸ ಯಂತ್ರದ ಯೋಚನೆ ಬಂದು, ಅದರ ಕಾಲ್ಪನಿಕ ಚಿತ್ರ ಬರೆದು ಕಳಿಸಿದರೂ ಸಾಕು, ನಿಮಗೆ ಅದರ ಪೇಟೆಂಟ್‌ ಲಭ್ಯವಾಗುತ್ತದೆ.

ಪೇಟೆಂಟ್‌ ಕಾನೂನು
ಭಾರತದಲ್ಲಿ ಪೇಟೆಂಟ್‌ ಕಾನೂನು 1970ರಲ್ಲಿ ಜಾರಿಗೆ ಬಂದಿತು. 1999 ಮತ್ತು 2002ರಲ್ಲಿ ಅದಕ್ಕೆ ತಿದ್ದುಪಡಿ ತರಲಾಯಿತು. ಸರಕಾರ ಡಿಸೆಂಬರ್‌ 27, 2004ರಂದು ಪೇಟೆಂಟ್‌ ಕಾನೂನಿಗೆ ಮತ್ತೂಂದು ತಿದ್ದುಪಡಿ ತಂದಿತು. ಗಮನಿಸಬೇಕಾದ ಅಂಶವೆಂದರೆ ಇಂತಹ ಮಹತ್ವದ ಕಾನೂನಿನ ತಿದ್ದುಪಡಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯೇ ನಡೆದಿಲ್ಲ. ಸಂಸತ್ತಿನ ಹೊರಗೆ ಅಧಿಸೂಚನೆಯ ಮೂಲಕ ತಿದ್ದುಪಡಿ ತರಲಾಯಿತು. ಈ ಹೊಸ ಕಾನೂನಿನ ಪ್ರಕಾರ ಇನ್ನು ಭಾರತದಲ್ಲಿ ಎಲ್ಲ ಬಗೆಯ ಹೊಸ ವಸ್ತುಗಳ ಸಂಶೋಧನೆಯೂ ಪೇಟೆಂಟ್‌ಗೆ ಅರ್ಹವಾಗಿರುತ್ತವೆ. ಈ ತಿದ್ದುಪಡಿಯನ್ನು ಗ್ಯಾಟ್ಸ್‌ ಒಪ್ಪಂದದ ಅನ್ವಯ ಮಾಡಲಾಗಿದೆ. ಹಿಂದೆಲ್ಲ ಒಂದು ದೇಶದ ಪೇಟೆಂಟೆಗೆ ಇನ್ನೊಂದು ದೇಶದಲ್ಲಿ ಮಾನ್ಯತೆ ಇರಲಿಲ್ಲ. ಆದರೆ ಈಗ ಗ್ಯಾಟ್ಸ್‌ ಒಪ್ಪಂದದ ಪ್ರಕಾರ ಪೇಟೆಂಟ್‌ಗಳಿಗೆ ವಿಶ್ವಮಾನ್ಯತೆ ನೀಡಬೇಕಾಗಿದೆ.

ಅರ್ಹತೆಗಳೇನು?
ಯಾವುದೇ ಹೊಸ ಆವಿಷ್ಕಾರ ಪೇಟೆಂಟ್‌ ಅರ್ಹವಾಗಬೇಕಾದರೆ 3 ಪರೀಕ್ಷೆಗಳಿಗೆ ಒಳಪಡಬೇಕಾಗುತ್ತದೆ. ಹೊಸ ಆವಿಷ್ಕಾರ ಅರ್ಹವಾಗಿರುವ ನಿರ್ದಿಷ್ಟ ವಿಭಾಗಗಳಲ್ಲಿ ಒಂದಕ್ಕೆ ಸೇರಿರಬೇಕು, ಹೊಸ ಉಪಯುಕ್ತ ಆವಿಷ್ಕಾರವಾಗಿರಬೇಕು ಮತ್ತು ತೀರ ಸಹಜವಾದ ಪ್ರಕ್ರಿಯೆಯಾಗಿರಬಾರದು. ಈ ಎಲ್ಲವುದರ ಪರೀಕ್ಷೆಗಳು ಮುಗಿದ ಬಳಿಕ ಆ ಆವಿಷ್ಕಾರಕ್ಕೆ ಪೇಟೆಂಟ್‌ ನೀಡಲಾಗುತ್ತದೆ. ಈ “ಪೇಟೆಂಟ್‌’ ಹೊಂದಿರುವ ವ್ಯಕ್ತಿ ಅನಂತರದ 20 ವರ್ಷಗಳ ತನಕ ಆ ಆವಿಷ್ಕಾರದ ಸಂಪೂರ್ಣ ಯಜಮಾನನಾಗಿರುತ್ತಾನೆ.

ಯಾವುದಕ್ಕೆ  ಆಗುವುದಿಲ್ಲ
ಪೇಟೆಂಟ್‌ ಎಂಬುದು ಹೊಸ ಆವಿಷ್ಕಾರಗಳಿಗೆ ಕಾನೂನಿನ ಮೂಲಕ ಸಿಗುವ ಮಾನ್ಯತೆ. ಸಾಮಾನ್ಯವಾಗಿ 3 ಬಗೆಯ ಆವಿಷ್ಕಾರಗಳಿಗೆ ನೀಡಲಾಗುತ್ತದೆ. ಹೊಸ ಸಸ್ಯ ಪ್ರಕಾರಗಳ ಸಂಶೋಧನೆ, ಹೊಸ ವಿನ್ಯಾಸಗಳ ತಯಾರಿಕೆ ಮತ್ತು ಹೊಸ ಉಪಯುಕ್ತ ವಸ್ತುಗಳ ಉತ್ಪಾದನೆ. ಉಪಯುಕ್ತ ವಸ್ತುಗಳ ವಿಭಾಗದಲ್ಲಿ ಹೊಸ ಯಂತ್ರಗಳು, ಹೊಸ ಮಿಶ್ರಣಗಳು, ಹೊಸ ಸಂಸ್ಕರಣಾ ವಿಧಾನಗಳು ಮತ್ತು ಹೊಸ ಸಾಧನಗಳು ಪೇಟೆಂಟ್‌ ಪಡೆದುಕೊಳ್ಳಲು ಅರ್ಹವಾಗಿರುತ್ತವೆ.

ಹಾಗೆಂದು ಎಲ್ಲ ಹೊಸ ಆವಿಷ್ಕಾರಗಳು ಪೇಟೆಂಟ್‌ಗೆ ಅರ್ಹವಾಗುವುದಿಲ್ಲ. ಕೆಲವು ಮೂಲ ವಿಜ್ಞಾನ ಮತ್ತು ಗಣಿತದ ಸಿದ್ಧಾಂತಗಳು, ಪ್ರಾಕೃತಿಕ ಸತ್ಯಗಳು, ಮನುಷ್ಯನ ಚಿಂತನೆಗಳು ಮತ್ತು ಅತ್ಯಂತ ಸಹಜ ವಿಚಾರಗಳನ್ನು ಪೇಟೆಂಟ್‌ ಮಾಡಿಕೊಳ್ಳುವಂತಿಲ್ಲ. ಉದಾ: + , – , *, ಈ ಚಿಹ್ನೆಗಳ ಕ್ರಿಯೆಗಳು, ಮಳೆ, ಗಾಳಿ, ನೀರು ಮುಂತಾದ ಪ್ರಾಕೃತಿಕ ವಿಚಾರಗಳು, ಮನುಷ್ಯ ಕಂಡ ಕನಸು ಇತ್ಯಾದಿ.

-ಸುಶ್ಮಿತಾ ಶೆಟ್ಟಿ

 

 

Advertisement

Udayavani is now on Telegram. Click here to join our channel and stay updated with the latest news.

Next