Advertisement

ಇರುಳು ಸರಿದು, ಬೆಳಕು ಹರಿದಿದೆ ; ತಲಾಖ್‌ ತಲಾಖ್‌ ತಲಾಖ್‌

12:44 PM Dec 30, 2017 | Sharanya Alva |

ಹಿಂದೂ ವಿವಾಹ ಕಾಯ್ದೆ ಜಾರಿಗೆ ಬಂದದ್ದು 1955ರಲ್ಲಿ. ಭಾರತೀಯ ದಂಡ ಸಂಹಿತೆ 1890ರದ್ದು. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 17ರ ಪ್ರಕಾರ, ಹಿಂದೂ ಪುರುಷ ಅಥವಾ ಮಹಿಳೆಗೆ ವಿವಾಹದ ಸಮಯದಲ್ಲಿ ಮತ್ತೋರ್ವ ಹೆಂಡತಿ ಅಥವಾ ಗಂಡ ಜೀವಂತವಿದ್ದು ಅವರ ಮಧ್ಯೆ
ವಿಚ್ಛೇದನವಾಗಿರದಿದ್ದಲ್ಲಿ ಅಂತಹ ವಿವಾಹ ಅಸಿಂಧುವಾಗಿರುತ್ತದೆ. ಅದಕ್ಕೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 494, 495 ಅನ್ವಯವಾಗುತ್ತವೆ. ಅರ್ಥಾತ್‌, ದ್ವಿಪತ್ನಿತ್ವದ ಕಾರಣ ಗಂಡನಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಡಿ ಅವಕಾಶವಿದೆ. 

Advertisement

ನನ್ನ  ವಿಚಾರವಿಷ್ಟೆ..ಮುಸಲ್ಮಾನರ ಮದುವೆ ಒಂದು ಸಿವಿಲ್‌ ಒಪ್ಪಂದವಾಗಿದ್ದು, ಅದರೊಳಗೆ ಅಪರಾಧವನ್ನು ತುರುಕುವ ಪ್ರಯತ್ನ ಸರಿಯಲ್ಲವೆಂದು ಸದನದಲ್ಲಿ ಅಸಾದುದ್ದಿನ್‌ ಓವೈಸಿ ಬೊಬ್ಬೆ ಹೊಡೆದಾಗ, ಈ ಕಾನೂನು ಅವರಿಗೆ ನೆನಪಾಗಲಿಲ್ಲ ಯಾಕೆ? ತಲಾಖ್‌ ಎ ಬಿದ್ದತ್‌/ತ್ರಿವಳಿ ತಲಾಖ್‌, ಅರ್ಥಾತ್‌ ಒಂದೇ ಉಸಿರಿನಲ್ಲಿ ಮೂರು ಬಾರಿ ಫೋನಿನಲ್ಲೋ, ವಾಟ್ಸಾಪಲ್ಲೋ, ಇ-ಮೇಲಲ್ಲೋ ಅಥವಾ ಪತ್ರದ ಮುಖೇನ ಸಾವಿರಾರು ಜನರ ಮುಂದೆ ಕೈಹಿಡಿದ ಶೊಹರ್‌/ಗಂಡ ಮೂರೇ ಕ್ಷಣಗಳಲ್ಲಿ ಆ ಸಂಬಂಧವನ್ನು ಮುರಿದು ಹೆಂಡತಿಯನ್ನು ಏಕಾಂಗಿಯಾಗೋ ಮಕ್ಕಳೊಂದಿಗೋ ರಾತ್ರೋರಾತ್ರಿ ಮನೆಯಿಂದ ಆಚೆಗಟ್ಟುವ ಒಂದು ಅನಿಷ್ಟ ಪದ್ಧತಿ ಕಳೆದ ಕೆಲವು ವರ್ಷಗಳಲ್ಲಿ ಹುಟ್ಟಿಕೊಂಡಿತ್ತು. ಲಕ್ಷಾಂತರ ನೊಂದ ಮಹಿಳೆಯರು ಮೋದಿಜಿ ಕೈಗೆ ರಾಖೀ ಕಟ್ಟಿ, ತಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದರು. 

ಶಾಯಿರಾ ಬಾನೊ ಪ್ರಕರಣದಲ್ಲಿ ಮಿಕ್ಕೆಲ್ಲಾ ಮನವಿಗಳನ್ನು ಒಟ್ಟಾಗಿಸಿ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡು 2017ರ ಜೂನಿನಲ್ಲಿ ಐತಿಹಾಸಿಕ ತೀರ್ಪೊಂದನ್ನು ಹೊರಹಾಕಿತು. ಆ ತೀರ್ಪಿನ ಪ್ರಕಾರ ತ್ರಿವಳಿ ತಲಾಖ್‌ ಕಾನೂನು ಬಾಹಿರವೆಂದು ಘೋಷಿಸಲಾಯಿತು. ಸಂವಿಧಾನದಲ್ಲಿ ಸ್ತ್ರೀ ಪುರುಷರ ಸಮಾನತೆಯನ್ನು ಉಲ್ಲೇಖೀಸುವ ವಿಧಿ 12 ಮತ್ತು ಗೌರವಪೂರ್ವಕವಾಗಿ ಜೀವನ ನಡೆಸುವ ಹಕ್ಕನ್ನು ನೀಡುವ ವಿಧಿ 21ರ ಮಹತ್ವವನ್ನು ನ್ಯಾಯಾಲಯ ಸ್ಪಷ್ಟಪಡಿಸಿತು. ಸಮಾನತೆಯ ಸಾಂವಿಧಾನಿಕ ಹಕ್ಕು, ವಿಧಿ 25ರಡಿ ಲಭಿಸುವ ಮತೀಯ ಸ್ವಾತಂತ್ರ ಹಕ್ಕುಗಳಿಗಿಂತ ಶ್ರೇಷ್ಠವೆಂಬುದರ ನಿರೂಪಣೆಯಾಯಿತು. 

ಹೀಗಿದ್ದರೂ ಮುಸಲ್ಮಾನ ಹೆಣ್ಣು ಮಕ್ಕಳ ರೋದನೆ ನಿಲ್ಲಲಿಲ್ಲ. ಏಕೆಂದರೆ, ತ್ರಿವಳಿ ತಲಾಖನ್ನು ಸುಪ್ರೀಂ ಕೋಟೇನೋ ಅಸಿಂಧುವಾಗಿಸಿತು. ಆದರೆ ಹಕ್ಕಿನ ಪ್ರತಿಪಾದನೆಗೆ ಸೂಕ್ತ ಕಾನೂನಿರಲಿಲ್ಲವಲ್ಲ? ಉದಾಹರಣೆಗೆ, ಮೈಸೂರಿನ ಒಬ್ಬ ಬಡ ಹೆಣ್ಣುಮಗಳು ತ್ರಿವಳಿ ತಲಾಖ್‌ನಿಂದ ಸಂತ್ರಸ್ತಳಾಗಿದ್ದರೆ, ನಿಮ್ಮ ಆದೇಶದ ಉಲ್ಲಂಘನೆಯಾಗಿದೆಯೆಂದು, ನ್ಯಾಯಾಲಯ ನಿಂದನೆಯ ಮೊಕದ್ದಮೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಬೇಕಿತ್ತು. ಮಹಿಳೆಯರ ಕೈಗೆಟಕುವ ಕಾನೂನಿನ ಬೇಡಿಕೆಯನ್ನು ಪೂರೈಸುವ ಸಲುವಾಗಿ ಮುಸಲ್ಮಾನ ಮಹಿಳೆ(ವೈವಾಹಿಕ ಹಕ್ಕುಗಳ ರಕ್ಷಣೆ)ಮಸೂದೆ 2017ನ್ನು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಲೋಕಸಭೆಯಲ್ಲಿ ಮೊನ್ನೆ ಡಿಸೆಂಬರ್‌ 28ರಂದು ಮಂಡಿಸಿತು.

ಮಸೂದೆಯ ಪ್ರಮುಖ ಅಂಶಗಳೆಂದರೆ, 1) ತ್ರಿವಳಿ ತಲಾಖ್‌ ಕಾನೂನು ಬಾಹಿರ ಮತ್ತು ಅಸಿಂಧು 2) ಅಪ್ರಾಪ್ತ ಮಕ್ಕಳ ಪಾಲನೆಗೆ ಮತ್ತು ಜೀವನಾಂಶ ಪಡೆದುಕೊಳ್ಳುವುದಕ್ಕೆ ಸಂತ್ರಸ್ತರಿಗೆ ಮೊಕದ್ದಮೆ ಹೂಡುವ ಹಕ್ಕಿರುತ್ತದೆ 3) ತ್ರಿವಳಿ ತಲಾಖನ್ನು ನೀಡಿದ ಪುರುಷನಿಗೆ ಜಾಮೀನೇತರ ಅಪರಾಧವೆಂದು ಪರಿಗಣಿಸಿ ಬಂಧನ 4) ಅಪರಾಧ ಸಾಬೀತಾದಲ್ಲಿ ಮೂರು ವರ್ಷಗಳವರೆಗೆ ಶಿಕ್ಷೆ ಮತ್ತು ಸೂಕ್ತ ದಂಡವನ್ನು ವಿಧಿಸಲಾಗುವುದು. 

Advertisement

ಭಾರತದ ಎಲ್ಲಾ ಕಾನೂನುಗಳು ಅರ್ಥಾತ್‌ ಸಿವಿಲ್‌ ಮತ್ತು ಕ್ರಿಮಿನಲ್‌, ಸ್ತ್ರೀ/ಪುರುಷರಿಗೆ ಸಮಾನವಾಗಿ ಅನ್ವಯವಾಗುತ್ತವೆ. ನಮ್ಮ ವೈಯಕ್ತಿಕ ಕಾನೂನುಗಳು, ಮದುವೆ ಮತ್ತು ಆಸ್ತಿಹಕ್ಕುಗಳಿಗೆ ಸಂಬಂಧಿಸಿದವು ಮಾತ್ರ ಮತಕ್ಕೆ ತಕ್ಕಂತೆ ಪ್ರತ್ಯೇಕ. ಹಾಗಿದ್ದರೆ ನಾನು ಆಗಲೇ ಉಲ್ಲೇಖೀಸಿದ ಐಪಿಸಿ 494-495 ಮುಸಲ್ಮಾನರಿಗೆ ಅನ್ವಯವಾಗುವುದಿಲ್ಲವೇ? ಆಗುತ್ತವೆ, ಆದರೆ ವಿಪರ್ಯಾಸ ನೋಡಿ, ಇಸ್ಲಾಮಿಕ್‌ ಕಾನೂನು ಒಬ³ ಪುರುಷನಿಗೆ ನಾಲ್ಕು ಮಹಿಳೆಯರಿಗೆ ಏಕಕಾಲದಲ್ಲಿ ಗಂಡನಾಗಿರಲು ಅವಕಾಶ ನೀಡುತ್ತದೆ. ಹಾಗಾಗೇ ಉಳಿದೆಲ್ಲರಿಗೂ ಅನ್ವಯವಾಗುವ ದ್ವಿಪತ್ನಿತ್ವದ ಅಪರಾಧ ಮುಸಲ್ಮಾನ ಪುರುಷನಿಗೆ ತಾಗುವುದು, ನಾಲ್ಕು ಹೆಂಡಿರಿದ್ದೂ ಅವನು ಐದನೇ ಮದುವೆಯಾದಾಗ ಮಾತ್ರ! ಈ ಬಹುಪತ್ನಿತ್ವದ ಕಾನೂನಿನಿಂದಾಗುವ ಅನ್ಯಾಯದಿಂದಲೂ ಮುಸಲ್ಮಾನ ಮಹಿಳೆಯರಿಗೆ ವಿಮೋಚನೆ ನೀಡಬೇಕೆಂಬ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ, ಶಾಯಿರಾ ಬಾನು ಪ್ರಕರಣದಲ್ಲಿ ಮನಸ್ಸು ಮಾಡಲಿಲ್ಲ. ತನ್ನನ್ನು ತ್ರಿವಳಿ ತಲಾಖೀಗಷ್ಟೆ ಸೀಮಿತವಾಗಿಸಿಕೊಂಡಿತು.

ಕ್ರಿಮಿನಲ್ ಪ್ರೊಸೀಜರ್‌ ಕೋಡ್‌ 125ರ ಅಡಿ ತಲಾಖ್‌ ಪಡೆದು ದಿಕ್ಕಿಲ್ಲದೇ ನಿಂತ ಶಾಬಾನು ಬೇಗಂಗೆ ತಿಂಗಳಿಗೆ ರೂ.500 ನೀಡಬೇಕೆಂದು 1986ರಲ್ಲಿ ಸರ್ವೋಚ್ಚ ನ್ಯಾಯಾಲಯ ಆದೇಶವನ್ನು ನೀಡಿತ್ತು. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪೌರುಷಕ್ಕೆ ಹೆದರಿ, ತನ್ನ ತುಷ್ಟೀಕರಣ ರಾಜಕಾರಣದ ಗುಂಗಿನಲ್ಲಿ, ಕೋರ್ಟಿನ ಆದೇಶವನ್ನು ತಿರಸ್ಕರಿಸಿ ಕಾಂಗ್ರೆಸ್‌ ಪಕ್ಷ ತನ್ನ 400+ ಸದಸ್ಯರ ತಾಕತ್ತನ್ನು ಬಡ ಮುಸಲ್ಮಾನ ಮಹಿಳೆಯರ ಮೇಲೆ ಪ್ರದರ್ಶಿಸಿತ್ತು. ಮುಸ್ಲಿಂ ಮಹಿಳೆ (ವಿಚ್ಛೇದನಾ ಹಕ್ಕುಗಳ ರಕ್ಷಣೆ)ಕಾಯ್ದೆ 1986ನ್ನು ಜಾರಿಗೊಳಿಸಿ ಜೀವನಾಂಶವನ್ನು ತಪ್ಪಿಸಿ ಅವರ ಶೋಷಣೆಗೆ ರಾಜಮಾರ್ಗವನ್ನು ಪುರುಷರಿಗೆ ಕಲ್ಪಿಸಿಕೊಟ್ಟಿತ್ತು. 31 ವರ್ಷಗಳ ನಂತರ ನೊಂದ
ಮಹಿಳೆಯರಿಗೆ ಸಶಕ್ತೀಕರಣದ ಆಶಾಕಿರಣವಾಗಿ ಮೋದಿ ಸರ್ಕಾರ ತ್ರಿವಳಿ ತಲಾಖ್‌ ಮಸೂದೆಯನ್ನು, ಲೋಕಸಭೆಯಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಕ್ತಾರರಂತಾಡುವ ಕಾಂಗ್ರೆಸ್‌, ಓವೈಸಿಯಂತಹವರ ವಿರೋಧದ ನಡುವೆ ಪಾರಿತಗೊಳಿಸಿದೆ.

ಇನ್ನು ಈ ಮಸೂದೆ ಕಾನೂನಾಗಿ ಜಾರಿಯಾಗಲು ರಾಜ್ಯಸಭೆಯಲ್ಲಿ ಪಾರಾಗಿ ರಾಷ್ಟ್ರಪತಿಗಳ ಅಂಗೀಕಾರ ಪಡೆಯಬೇಕು. ಸ್ವತಂತ್ರವಾಗಿ, ಕಾನೂನಿನ ಭಯವೇ ಇಲ್ಲದೆ ಮನಸೋ ಇಚ್ಛೆ ಸ್ತ್ರೀಯನ್ನು ವಸ್ತುಗಳಂತೆ ಬಳಸಿ ಬಿಸಾಡುತ್ತಿದ್ದ ಹಲವು ಮುಸಲ್ಮಾನ ಗಂಡಸರಿಗೆ ವಿದ್ಯುತ್‌ ಶಾಕ್‌ ಹೊಡೆದಂತಾಗಿದೆ. ತ್ರಿವಳಿ ತಲಾಖ್‌ ಎಂದರೆ ಜೈಲು! ಜೈಲಿನಲ್ಲಿರುವವ ಜೀವನಾಂಶ ಹೇಗೆ ಕೊಡಬಲ್ಲನೆಂಬ ಅರ್ಥರಹಿತ ಪ್ರಶ್ನೆಗೆ ಜವಾಬಿಷ್ಟೆ: ಅಪರಾಧಿಗೆ ಕಾನೂನಿನ ಭಯವಿದ್ದರೆ ಅಪರಾಧ ಮಾಡುವುದರಿಂದ ಅವನನ್ನದು ತಡೆಹಿಡಿಯುತ್ತದೆ. ಡಿಟರೆಂಟ್‌ ಆಗಿ ಕಾನೂನು ಪರಿಣಮಿಸುತ್ತದೆ ಎನ್ನುತ್ತದೆ ನ್ಯಾಯಶಾಸ್ತ್ರ. ಇದನ್ನು ಮೀರಿ ತಪ್ಪೆಸಗಿದರೆ ಅವನ ಆದಾಯ ಆಸ್ತಿಗಳನ್ನು ತೂಕಹಾಕಿ ಕೋರ್ಟ್‌ ತಕ್ಕ ಪರಿಹಾರವನ್ನು ನೀಡುತ್ತದೆ. ವರದಕ್ಷಿಣೆ ತಡೆ ಕಾನೂನು, ಐಪಿಸಿ 498ಎ ಅದೆಷ್ಟು ಹೆಣ್ಣು ಮಕ್ಕಳಿಗೆ ಜೀವದಾನ ಮಾಡಿಲ್ಲ? ಇನ್ನು ತಮಗೆ ಗೌರವದಿಂದ ಬದುಕಲು ದಾರಿ ಹಾಕಿಕೊಟ್ಟ ಮೋದಿಜಿಯ ಭಾಜಪಕ್ಕೆ ಮತದಾನದ ಮೂಲಕ ಮುಸಲ್ಮಾನ ಹೆಣ್ಣುಮಕ್ಕಳು ಕೃತಜ್ಞತೆ ಸಲ್ಲಿಸಿಬಿಟ್ಟರೆ? ಅಲ್ಪಸಂಖ್ಯಾತರನ್ನು ದಮನಿಸಿ-ವಂಚಿತಗೊಳಿಸಿ ವೋಟ್‌ ರಾಜಕಾರಣ ಮಾಡುತ್ತಿದ್ದ ಕಾಂಗ್ರೆಸ್ಸಿಗೆ ಸಿಡಿಲು ಬಡಿದಂತಾಗಿದೆ.

*ಮಾಳವಿಕಾ ಅವಿನಾಶ್

Advertisement

Udayavani is now on Telegram. Click here to join our channel and stay updated with the latest news.

Next