Advertisement

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

01:12 PM May 06, 2024 | Team Udayavani |

17ನೇ ಲೋಕಸಭೆ ಚುನಾವಣೆಯ ಎರಡು ಹಂತಗಳು ಮುಗಿದು, ಮೂರನೇ ಹಂತದ ಮತದಾನಕ್ಕೆ ದೇಶ ಸಜ್ಜಾಗಿದೆ. ಈವರೆಗೂ 16 ಲೋಕಸಭೆ ಚುನಾವಣೆಗಳು ನಡೆದರೂ ದೇಶಕ್ಕೆ ಅಗತ್ಯವಾಗಿರುವ ನೀರಾವರಿ ಮತ್ತು ಕೃಷಿಯು ಎಂದಿಗೂ ಚುನಾವಣೆಯ ಪ್ರಮುಖ ವಸ್ತುಗಳಾಗದೇ ಉಳಿದಿರುವುದು ಹಾಗೂ ಅವುಗಳ ಸಾರ್ಥಕ ಅನುಷ್ಠಾನವಾಗದಿರುವುದು ಅತ್ಯಂತ ಖೇದಕರ ಸಂಗತಿ!

Advertisement

ಭಾರತದಂಥ ಜನಸಂಖ್ಯಾ ಬಾಹುಳ್ಯ ದೇಶದಲ್ಲಿ ಕೃಷಿ ಮಾತ್ರ ದೇಶದ ಅಭಿವೃದ್ಧಿಗೆ ಸ್ಥಿರತೆ ತರಲು ಸಾಧ್ಯ. ಬೆಳೆಯುತ್ತಿರುವ ಜನಸಂಖ್ಯೆ, ಕೈಗಾರೀಕರಣ ಹಾಗೂ ನಗರೀಕರಣದ ಅವಶ್ಯಕತೆಗಳನ್ನು ಪೂರೈಸಲು ದೇಶದಲ್ಲಿ ನದಿ ಜೋಡಣೆ ಒಂದೇ ಪರಿಹಾರ ಎಂಬುದನ್ನು ಅರಿತು ದೇಶದ ಪ್ರಮುಖ ರಾಷ್ಟ್ರೀಯ ಪಕ್ಷಗಳು ಕೃಷಿ, ನೀರಾವರಿಯಂಥ ಅರ್ಥಪೂರ್ಣ ವಿಷಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ, ಅದರ ಅನುಷ್ಠಾನಕ್ಕಾಗಿ ಮುಂದಿನ 5 ವರ್ಷ ಕೆಲಸ ಮಾಡಲು ಮನಸ್ಸು
ಮಾಡಬೇಕಿತ್ತು.

ಭಾರತದಲ್ಲಿ ಮಳೆಗಾಲದ ಸರಾಸರಿ ಅವಧಿ 90- 100 ದಿನಗಳು. ಈಶಾನ್ಯ ಹಾಗೂ ನೈರುತ್ಯ ಮಾನ್ಸೂನ್‌ ಮಾರುತಗಳು ತರುವ ಮಳೆಯಿಂದ ಭಾರತದಲ್ಲಿ ವಾರ್ಷಿಕ ಸರಾಸರಿ 125 ಸೆಂಟಿ ಮೀಟರ್‌ ಮಳೆ ಸುರಿಯುತ್ತದೆ. 2022ರ ಅಂತ್ಯದಲ್ಲಿ ಭಾರತದಾದ್ಯಂತ ಸರಾಸರಿ 92.50 ಸೆಂ.ಮೀ. ಮಳೆ ಸುರಿದಿದೆ. ಆದರೆ ಈ ಮಳೆಯು ದೇಶಾದ್ಯಂತ ಸಮ ಪ್ರಮಾಣದಲ್ಲಿ ಹಂಚಿಕೆಯಾಗಿಲ್ಲ. ಹೀಗಾಗಿ ಪ್ರವಾಹದ ಆತಂಕ, ಬರದ ಛಾಯೆ, ಯೋಗ್ಯ ಕೃಷಿ ಭೂಮಿಗೆ ನೀರಿನ ಕೊರತೆ ಇವೆಲ್ಲವುಗಳನ್ನು ಮೆಟ್ಟಿ, ಹೊಸ ನೀರಾವರಿ ಕ್ಷೇತ್ರ ಸೃಷ್ಟಿಸುವ ತಾಕತ್ತು “ನದಿ ಜೋಡಣೆ’ಗಳಿಗಿದೆ.

ನೀರಾವರಿ ಪ್ರದೇಶ ವಿಸ್ತರಣೆ: 19ನೇ ಶತಮಾನದ ಆರಂಭದಲ್ಲಿ ಅಂದಿನ ಭಾರತದ ಪಾಕಿಸ್ತಾನ, ಬಾಂಗ್ಲಾ ದೇಶ ಸೇರಿ 1.3 ಕೋಟಿ ಹೆಕ್ಟೇರ್‌ ಪ್ರದೇಶ ನೀರಾವರಿ ಸೌಕರ್ಯ ಹೊಂದಿತ್ತು. 1951ರ ಹೊತ್ತಿಗೆ ಭಾರತದಲ್ಲಿ 2.26 ಕೋಟಿ ಹೆಕ್ಟೇರ್‌ ಭೂಮಿ ನೀರಾವರಿಯಾಯಿತು. ಸ್ವಾತಂತ್ರ್ಯ ನಂತರ ದೇಶದಲ್ಲಿ ಪ್ರಾರಂಭಿಸಿದ ಹೊಸ ನೀರಾವರಿ ಯೋಜನೆಗಳು, ಆಣೆಕಟ್ಟುಗಳ
ನಿರ್ಮಾಣದ ಪ್ರಯತ್ನದಿಂದಾಗಿ 1995ರ ಹೊತ್ತಿಗೆ ಭಾರತವು 9.0 ಕೋಟಿ ಹೆಕ್ಟೇರ್‌ ನೀರಾವರಿ ಪ್ರದೇಶ ಹೆಚ್ಚಿಗೆಯಾಯಿತು. ಭಾರತದಲ್ಲಿ ಒಟ್ಟು ಕೃಷಿ ಯೋಗ್ಯ ಭೂಮಿ 16.0 ಕೋಟಿ ಹೆಕ್ಟೇರ್‌ ಇದ್ದು, ಕಳವಳಕಾರಿ ಸಂಗತಿ ಎಂದರೆ 2001ರ ವಿಶ್ವಬ್ಯಾಂಕ್‌ ನೀಡಿದ ವರದಿಯ ಆಧಾರದಂತೆ ಭಾರತವು ಒಟ್ಟು ಕೃಷಿ ಯೋಗ್ಯ ಭೂಮಿಯಲ್ಲಿ ಕೇವಲ ಶೇ.35 ಮಾತ್ರ ವಿಶ್ವಾಸರ್ಹ ನೀರಾವರಿ
ಸೌಕರ್ಯ ಹೊಂದಿದೆ.

ಈ ಎಲ್ಲದಕ್ಕೂ ಮುಖ್ಯ ಕಾರಣ ಕೃಷಿ ಉದ್ಯಮದಲ್ಲಿ ಉಂಟಾಗುತ್ತಿರುವ ಅಸ್ಥಿರತೆ, ಹವಾಮಾನ ವೈಫ‌ರಿತ್ಯದಿಂದ ಉಂಟಾಗುವ ಹಾನಿ, ಸಮರ್ಪಕ ನೀರಾವರಿಯ ಕೊರತೆ ಹೀಗೆ ಹತ್ತು ಹಲವು ವಿಷಯಗಳು ಬೆಳಕು ಚಲ್ಲುತ್ತವೆ. ಸಮಗ್ರ ನೀರಾವರಿ, ರಾಷ್ಟ್ರೀಯ ನದಿ ಜೋಡಣೆ ಯೋಜನೆ ಹಾಗೂ ಪ್ರತಿ ರಾಜ್ಯಗಳಲ್ಲಿನ ಸಣ್ಣ-ಪುಟ್ಟ ನದಿಗಳ ಅಂತರ್‌ ಜೋಡಣೆಯಿಂದ ಭಾರತದ ಕೃಷಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯವಿದೆ.

Advertisement

ನದಿ ಜೋಡಣೆ ಪರಿಕಲ್ಪನೆ ಹೊಸದಲ್ಲ!: ನದಿ ಜೋಡಣೆ ಯೋಜನೆಯ ಪರಿಕಲ್ಪನೆಯು ಹಳೆಯದಾಗಿದೆ. 1838ರಲ್ಲೇ ಬ್ರಿಟಿಷ್‌ ಸಿವಿಲ್‌ ಎಂಜಿನಿಯರ್‌ ಸರ್‌ ಎ. ಆರ್ಥರ್‌ ಕಾರ್ಟನ್‌ ಬೃಹತ್‌ ಕಾಲುವೆ ನಿರ್ಮಿಸುವ ಮೂಲಕ ಗಂಗಾ ಕಾವೇರಿ ನದಿ ಜೋಡಣೆ ಯೋಜನೆ ರೂಪಿಸಿ ದ್ದರು. ಸರ್‌ ಎಂ. ವಿಶ್ವೇಶ್ವರಯ್ಯ ನದಿ ಜೋಡಣೆ ಯೋಜನೆಯ ಅಗತ್ಯಗಳನ್ನು ಸಮರ್ಥಿಸಿಕೊಂಡಿದ್ದಾರೆ. ಇಂದಿರಾ ಗಾಂಧಿ ಸಂಪುಟದಲ್ಲಿ ನೀರಾವರಿ ಮಂತ್ರಿಯಾಗಿದ್ದ ನೀರಾವರಿ ತಜ್ಞ ಕೆ. ಎಲ್‌ ರಾವ್‌ ಗಂಗಾ-ಕಾವೇರಿ ನದಿ ಜೋಡಣೆಯ ಉತ್ಸಾಹ ತೋರಿದ್ದರು. 1980ರಲ್ಲಿ ಹಿಮಾಲಯ ನದಿಗಳನ್ನು ದಕ್ಷಿಣ ಭಾರತದ ನದಿಗಳೊಂದಿಗೆ ಬೆಸೆಯುವುದಕ್ಕಾಗಿ ಕೇಂದ್ರ
ಸರ್ಕಾರವು ನ್ಯಾಷನಲ್‌ ಪರ್ಸೆಪೆಕ್ಟಿವ್‌ ಪ್ಲಾನ್‌ (ಎನ್‌ಪಿಪಿ) ರೂಪಿಸಿತ್ತು. ಅಲ್ಲದೇ, 1982ರಲ್ಲಿ ನ್ಯಾಷನಲ್‌ ವಾಟರ್‌ ಡೆವಲಪಮೆಂಟ್‌ ಸಂಸ್ಥೆಯನ್ನು ಪ್ರಾರಂಭಿಸಲಾಯಿತು.

3 ರೀತಿಯ ನದಿ ಜೋಡಣೆ: ನದಿ ಜೋಡಣೆ ಯೋಜನೆಯನ್ನು ಪ್ರಮುಖವಾಗಿ ಹಿಮಾಲಯ ನದಿಗಳು, ದಕ್ಷಿಣ ಭಾರತದ ನದಿಗಳು ಹಾಗೂ ರಾಜ್ಯಗಳಲ್ಲಿಯ ಅಂತರ್‌ ನದಿ ಜೋಡಣೆಗಳ 3 ವಿಭಾಗಗಳಾಗಿ ವಿಂಗಡಿಸಿ ಅನುಷ್ಠಾನಗೊಳಿಸಬಹುದು. ಗಂಗಾ ನದಿಯ ಪೂರ್ವ ತೀರದ ಉಪನದಿಗಳನ್ನು ನೇಪಾಳ ಹಾಗೂ ಭೂತಾನ್‌ ಮೂಲಕ ಅಂತರ್‌ ಜೋಡಣೆ ಮಾಡಿ, ಗಂಗಾ ನದಿಯ ಪಶ್ಚಿಮ ತೀರದ ಉಪ ನದಿಗಳಿಗೆ ಹರಿಸುವ ಮೂಲಕ ಬ್ರಹ್ಮಪುತ್ರ ಹಾಗೂ ಅದರ ಉಪನದಿ ಗಳನ್ನು ಗಂಗಾ ನದಿಗೆ ಸೇರಿಸುವುದು. ಅಲ್ಲಿಂದ ಗಂಗಾ ನದಿಯ ನೀರನ್ನು ಮಹಾನದಿಗೆ ಸೇರಿಸು ವುದು ಹಿಮಾಲಯ ನದಿ ಜೋಡಣೆಯ ಉದ್ದೇಶವಾಗಿದೆ.

ಹಿಮಾಲಯ ನದಿ ಜೋಡಣೆಯ ಮೂಲಕ
ಮಹಾನದಿಗೆ ಸೇರಿದ ಹೇರಳವಾದ ಜಲ ಸಂಪತ್ತನ್ನು ಗೋದಾವರಿ ನದಿಯ ಮೂಲಕ ಕೃಷ್ಣಾ, ಕಾವೇರಿ, ಪಾಲರ್‌, ಪೆನ್ನಾರ್‌, ವೈಗೈ ಹಾಗೂ ಗುಂಡೈ ನದಿಗಳಿಗೆ ಸೇರಿಸುವ ಮೂಲಕ ಭಾರತದ ದಕ್ಷಿಣ ತೀರದವರೆಗೂ ನೀರು ಹರಿಸುವ ಮಹತ್ವಾಕಾಂಕ್ಷೆ ನದಿ ಜೋಡಣೆ ಯೋಜನೆಗಿದೆ. ಕೇನ್‌-ಬೆತ್ವಾ, ಕೇನ್‌-ಚಂಬಲ್‌ ಯೋಜನೆಗಳ ಮೂಲಕ ಮಧ್ಯಪ್ರದೇಶ. ಉತ್ತರ ಪ್ರದೇಶ, ಗುಜರಾತ್‌, ರಾಜಸ್ಥಾನ ಭಾಗದ ಬರಪೀಡಿತ ಪ್ರದೇಶಗಳಿಗೆ ಶಾಶ್ವತ ನೀರಾವರಿ ಸೌಕರ್ಯ ಕಲ್ಪಿಸಬಹುದಾಗಿದೆ.

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಉತ್ತರ ಮುಂಬೈ ಪ್ರಾಂತ್ಯಕ್ಕೆ ಹಾಗೂ ತಾಪಿಯ ನದಿ ನೀರನ್ನು ದಕ್ಷಿಣ ಭಾಗಕ್ಕೆ
ಹರಿಸುವುದು. ಇದರಿಂದ ಮುಂಬೈ ನಗರಕ್ಕೆ ಕುಡಿ ಯುವ ನೀರು ಹಾಗೂ ಮಹಾರಾಷ್ಟ್ರದ ಕರಾವಳಿಗೆ ನೀರಾವರಿ ಸೌಕರ್ಯ ನೀಡಬಹು ದಾಗಿದೆ. ಪಶ್ಚಿಮ ಘಟ್ಟಗಳಲ್ಲಿನ ನದಿ ಮೂಲಗಳು ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರ ಸೇರುತ್ತವೆ. ಈ ನದಿ ಮೂಲಗಳನ್ನು ಪೂರ್ವಕ್ಕೆ ತಿರುಗಿಸುವ ಮೂಲಕ ಕರ್ನಾಟಕ, ಕೇರಳ ಭಾಗದ ಬರಪೀಡಿತ ಪ್ರದೇಶಗಳಿಗೆ ನೀರು ಹರಿಸಬಹುದು.

ಈ ನಿಟ್ಟಿನಲ್ಲಿ ರಾಷ್ಟ್ರೀಯ ನದಿ ಜೊಡಣೆ ಯೋಜನೆಯ ಆಶಯದಂತೆ ಪ್ರತಿ ರಾಜ್ಯಗಳ ಲ್ಲಿಯೂ ಅಂತರ್‌ ನದಿ ಜೋಡಣೆ ಯೋಜನೆಯು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಕರ್ನಾಟಕದ ಒಟ್ಟು ಜಲ ರಾಶಿಯಲ್ಲಿ 2000 ಟಿಎಂಸಿ ಪಾಲು ಹೊಂದಿರುವ ಪಶ್ಚಿಮಾಭಿಮುಖ ನದಿಗಳನ್ನು ಉತ್ತರ ಕರ್ನಾಟಕದ ಬಯಲು ಸೀಮೆಗೆ ಹರಿಸುವ ಮೂಲಕ ಸಂಪೂರ್ಣ ಉತ್ತರ ಕರ್ನಾಟಕವನ್ನು ನೀರಾವರಿಗೆ ಒಳಪಡಿಸಲು ಸಾಧ್ಯವಿದೆ.

ಈಗಾಗಲೇ ನಿರಾಣಿ ಫೌಂಡೇಶನ್‌ ಮೂಲಕ ಕಾಳಿ ನದಿ ನೀರನ್ನು ಮಲಪ್ರಭಾ, ಘಟಪ್ರಭಾ ನದಿಗೆ ಹರಿಸುವುದು, ಕೃಷ್ಣೆಯ ಪ್ರವಾಹದ ನೀರನ್ನು ಘಟಪ್ರಭಾ, ಮಲಪ್ರಭೆಗೆ ಹರಿಸುವುದು, ಹಿರಣ್ಯಕೇಶಿಯ ಪ್ರವಾಹದ ನೀರನ್ನು ಹಿಡಕಲ್‌ ಜಲಾಶಯದಲ್ಲಿ ಸಂಗ್ರಹಿಸುವುದು, ಕೂಡಲ ಸಂಗಮದಿಂದ ನವೀಲುತೀರ್ಥವರೆಗೆ ರಿವರ್ಸ್‌ ಲಿμrಂಗ್‌ ಮೂಲಕ ಮಲಪ್ರಭಾ ನದಿ ಪಾತ್ರದಲ್ಲಿ
ನೀರು ಹರಿಸುವ 4 ಯೋಜನೆಗಳ ಅಭ್ಯಾಸ ವರದಿ ತಯಾರಿಸಿ ಸರ್ಕಾರಕ್ಕೆ ನೀಡಲಾಗಿದೆ.

ಸಾಕಷ್ಟು ಲಾಭಗಳು: ನದಿ ಜೋಡಣೆ ಯೋಜನೆಯಿಂದ ದೇಶದ ಬರ ಸಮಸ್ಯೆಯನ್ನು ನಿರ್ವಹಣೆ ಮಾಡುವುದಷ್ಟೆ ಅಲ್ಲ, ಹೋಗಲಾಡಿಸಲು ಸಾಧ್ಯವಿದೆ. ಪ್ರವಾಹ ಸಮಸ್ಯೆ ಹತೋಟಿಗೆ ಬರುತ್ತದೆ. ಕೃಷಿ, ಕೈಗಾರಿಕೆ ಹಾಗೂ ಸಾರ್ವಜನಿಕ ವಲಯಗಳಿಗೆ ಕೊರತೆಯಾಗದಂತೆ ನಿರಂತರವಾಗಿ ನೀರಿನ ಸೌಕರ್ಯ ನೀಡಬಹುದು. ಇದರಿಂದ ಉದ್ಯೋಗ ಸೃಷ್ಟಿ, ಜಲಸಾರಿಗೆ ಅಭಿವೃದ್ಧಿ, ಮೀನುಗಾರಿಕೆ, ಸವಳು-ಜವಳು ಸಮಸ್ಯೆ ಪರಿಹಾರ, ಮಾಲಿನ್ಯ ನಿಯಂತ್ರಣ, ಮೂಲಸೌಕರ್ಯ ಅಭಿವೃದ್ಧಿ, ಸೌಲಭ್ಯಗಳ
ಉನ್ನತೀಕರಣ ಇವೆಲ್ಲವುಗಳ ಕಾರಣದಿಂದಾಗಿ ದೇಶದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಬಹುದೊಡ್ಡ ಪ್ರಗತಿ
ನಿರಿಕ್ಷೀಸಬಹುದಾಗಿದೆ.

ಎಕ್ಸ್‌ಪ್ರೆಸ್‌ ವೇ ಕಾರಿಡಾರ್‌, ಇಂಡಸ್ಟ್ರೀಯಲ್‌ ಕಾರಿಡಾರ್‌, ಎಕನಾಮಿಕ್‌ ಕಾರಿಡಾರ್‌, ಟೂರಿಸಂ ಕಾರಿಡಾರ್‌ಗಿಂತ ಮೊದಲು ಈ ದೇಶಕ್ಕೆ “ವಾಟರ್‌ ಕಾರಿಡಾರ್‌’ಗಳ ಅವಶ್ಯವಿದೆ. ಇದು ದೇಶದ ಆರ್ಥಿಕ ಶಕ್ತಿಗೆ ಹಾಗೂ ದೇಶವಾಸಿಗಳ ಜೀವನ ಮಟ್ಟ ಸುಧಾರಣೆಗೆ ಹೊಸ ಭಾಷ್ಯ ಬರೆಯಬಹು ದಾಗಿದೆ. ಇದೆಲ್ಲವೂ ನದಿ ಜೋಡಣೆಯಂಥ ಮಹತ್ವಾಕಾಂಕ್ಷೆಯಿಂದ ಮಾತ್ರ ಸಾಧ್ಯವಿದೆ. ಇದನ್ನು ನಮ್ಮನ್ನು ಆಳುವ ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕಿದೆ.
(ಲೇಖಕರು ಉತ್ತರ ಕರ್ನಾಟಕ ನೀರಾವರಿ
ಹೋರಾಟ ಸಮಿತಿ ಅಧ್ಯಕ್ಷರು)

*ಸಂಗಮೇಶ. ಆರ್‌. ನಿರಾಣಿ

Advertisement

Udayavani is now on Telegram. Click here to join our channel and stay updated with the latest news.

Next