Advertisement

BJP ಸೇರಿದ್ದಕ್ಕೆ ರಾಮ್‌ ಕೃಪಾಲ್‌ ಕೈಕಟ್‌ ಮಾಡಲು ಬಯಸಿದ್ದೆ: ಮೀಸಾ

10:35 AM Jan 19, 2019 | udayavani editorial |

ಪಟ್ನಾ : ‘ಭಾರತೀಯ ಜನತಾ ಪಕ್ಷ  ಸೇರಿದ್ದಕ್ಕೆ ಕೇಂದ್ರ ಸಚಿವ ರಾಮ್‌ ಕೃಪಾಲ್‌ ಯಾದವ್‌ ಅವರ ಕೈಗಳನ್ನು ಅಂದೇ ಕತ್ತರಿಸಿ ಹಾಕಲು ಬಯಸಿದ್ದೆ’ ಎಂದು ಕ್ರೌರ್ಯ ಹಾಗೂ ಸೇಡಿನ ಮಾತನ್ನಾಡಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರಿ ಮೀಸಾ ಭಾರತಿ ಅವರು ವಿವಾದದ ಜೇನುಗೂಡಿಗೆ ಕೈಹಾಕಿದ್ದಾರೆ.

Advertisement

‘ನಮ್ಮದೇ ಪಕ್ಷದವರಾಗಿದ್ದ ರಾಮ್‌ ಕೃಪಾಲ್‌ ಅವರ ಬಗ್ಗೆ ನಮಗೆ ಅಪಾರ ಗೌರವಿತ್ತು. ಆದರೆ ಅವರು ಸುಶೀಲ್‌ ಕುಮಾರ್‌ ಮೋದಿ ಅವರೊಂದಿಗೆ ಕೈಜೋಡಿಸಲು ಮುಂದಾದಾಗ ನಮಗೆ ಅವರ ಮೇಲಿನ ಗೌರವವೆಲ್ಲ ನಾಶವಾಯಿತು. ಆ ಸಮಯದಲ್ಲಿ ನಾನು ಅವರ ಕೈಗಳನ್ನೇ ಕತ್ತರಿಸಿ ಹಾಕಲು ಬಯಸಿದ್ದೆ’  ಎಂದು ಪಟ್ನಾದ ಬಿಕ್ರಮ್‌ ಪ್ರದೇಶದಲ್ಲಿ ಏರ್ಪಟ್ಟಿದ್ದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  

ಆರ್‌ಜೆಡಿ ಮುಖ್ಯಸ್ಥ ಲಾಲು ಮತ್ತು ಅವರ ಹಿರಿಯ ಪುತ್ರಿ ಭಾರತಿ ಅವರು ರಾಮ್‌ ಕೃಪಾಲ್‌ ಅವರನ್ನು ಚಾಚಾ ಎಂದೇ ಕರೆಯುತ್ತಿದ್ದರು. ಕೃಪಾಲ್‌ ಗೆ ಪಾಟಲೀಪುತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ನೀಡದಿದ್ದ ಕಾರಣಕ್ಕೆ,  ಕೃಪಾಲ್‌ ಆರ್‌ಜೆಡಿಯಿಂದ ದೂರವಾಗಿದ್ದರು. 2014ರ ಲೋಕಸಭಾ ಚುನಾವಣೆಯನ್ನು ಪಾಟಲೀಪುತ್ರ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲ್ಲುವಲ್ಲಿ ಕೃಪಾಲ್‌ ಅವರು ಮೀಸಾ ಭಾರತಿಯನ್ನು ಸೋಲಿಸಿದ್ದರು. 

61ರ ಹರೆಯದ ಕೃಪಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಾರತವು ಭಾರೀ ನಿರೀಕ್ಷೆ ಇಟ್ಟಿರುವ ಜನನಾಯಕ’ ಎಂದೇ ಬಣ್ಣಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next