Advertisement

ಅಕ್ಟೋಬರ್‌ 11ಕ್ಕೆ “ವೃತ್ರ’ತೆರೆಗೆ

11:14 AM Oct 07, 2019 | Team Udayavani |

“ವೃತ್ರ’ ಎಂಬ ಸಿನಿಮಾದಲ್ಲಿ ಆರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸುವುದಾಗಿ ಸುದ್ದಿಯಾಗಿದ್ದು, ಆ ನಂತರ ಕಾರಣಾಂತರಗಳಿಂದ ಆ ಚಿತ್ರದಿಂದ ರಶ್ಮಿಕಾ ಹೊರಬಂದಿದ್ದು ನಿಮಗೆ ನೆನಪಿರಬಹುದು. ಈಗ ಆ ಚಿತ್ರ ಸದ್ದಿಲ್ಲದೇ ಬಿಡುಗಡೆಯ ಹಂತಕ್ಕೆ ಬಂದಿದ್ದು, ಅಕ್ಟೋಬರ್‌ 11 ರಂದು ಚಿತ್ರ ತೆರೆಕಾಣುತ್ತಿದೆ. ಗೌತಮ್‌ ಅಯ್ಯರ್‌ ಈ ಚಿತ್ರದ ನಿರ್ದೇಶಕರು. ರಶ್ಮಿಕಾ ಮಂದಣ್ಣ ಜಾಗಕ್ಕೆ ನಿತ್ಯಾಶ್ರೀ ಬಂದಿದ್ದು, ಚಿತ್ರದಲ್ಲಿ ಅವರು ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

Advertisement

ಅಂದಹಾಗೆ, ಇದೊಂದು ಕ್ರೈಮ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಇಂದಿನ ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಮೂಡಿಬಂದಿದ್ದರಿಂದ ಚಿತ್ರವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಇನ್ನು, ರಶ್ಮಿಕಾ ಮಂದಣ್ಣ ಬಿಟ್ಟು ಹೋದ ಜಾಗಕ್ಕೆ ಹೊಸಬರನ್ನು ಕರೆತರಬೇಕೆಂದು ಸಿನಿಮಾ ತಂಡ, ಸಾಕಷ್ಟು ಮಂದಿಯನ್ನು ಆಡಿಷನ್‌ ನಡೆಸಿತು. ಆದರೆ, ಪಾತ್ರಕ್ಕೆ ಯಾರೂ ಹೊಂದಿಕೆಯಾಗದೇ ಇದ್ದ ಸಮಯದಲ್ಲಿ ಕಣ್ಣಿಗೆ ಬಿದ್ದವರು ನಿತ್ಯಾಶ್ರೀ.

ಹಾಗಂತ ನಿತ್ಯಾಶ್ರೀ ಈ ಚಿತ್ರಕ್ಕಾಗಿ ತಮ್ಮ ಬಯೋಡೇಟಾ ಕಳುಹಿಸಿ, ಆಯ್ಕೆಯಾದವರಲ್ಲ, ಬದಲಾಗಿ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡು, ಚಿತ್ರತಂಡದ ಗಮನ ಸೆಳೆಯುವ ಮೂಲಕ “ವೃತ್ರ’ ಚಿತ್ರಕ್ಕೆ ಆಯ್ಕೆಯಾದವರು. ಈ ಬಗ್ಗೆ ಮಾತನಾಡುವ ನಿರ್ದೇಶಕ, “ನಿತ್ಯಾಶ್ರೀ ಈ ಚಿತ್ರಕ್ಕಾಗಿ ತಮ್ಮ ವಿವರ ಕಳುಹಿಸಿ ಆಯ್ಕೆಯಾದವರಲ್ಲ. ಇನ್‌ಸ್ಟಾಗ್ರಾಮ್‌ ಮೂಲಕ ನಮಗೆ ಅವರು ಸಿಕ್ಕಿದ್ದು.

ನಮ್ಮ ತಂಡ ಇನ್‌ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ ಮೂಲಕ ಹೊಸ ಪ್ರತಿಭೆಗಳನ್ನು ಹುಡುಕುತ್ತಿತ್ತು. ನಮ್ಮ ಪಾತ್ರಕ್ಕೆ ಹೊಂದುವ ಲುಕ್‌ ಇರುವವರು ಸಿಕ್ಕರೆ ಆ ನಂತರ ಅವರಿಂದ ನಟನೆ ತೆಗೆಸಬಹುದು ಎಂಬ ವಿಶ್ವಾಸವಿತ್ತು. ಹೀಗೆ ನಾವು ಹುಡುಕುತ್ತಿದ್ದಾಗ ನಮ್ಮ ತಂಡದ ಸದಸ್ಯರೊಬ್ಬರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಿತ್ಯಾಶ್ರೀ ಕಾಣಿಸಿಕೊಂಡರು. ಆ ಮೂಲಕ ನಿತ್ಯಾಶ್ರೀ ಈ ಚಿತ್ರಕ್ಕೆ ಆಯ್ಕೆಯಾಗಿದ್ದು.

ನಮಗೆ ಮೊದಲು ನಿತ್ಯಾಶ್ರೀ ಅವರಿಗೆ ನಟನೆ ಹಿನ್ನೆಲೆ ಇದೆ ಎಂಬುದು ಗೊತ್ತಿರಲಿಲ್ಲ. ಆ ನಂತರ ಗೊತ್ತಾಗಿದ್ದು, ನಿತ್ಯಾಗೆ ರಂಗಭೂಮಿ ಹಿನ್ನೆಲೆಯಿದ್ದು, 500ಕ್ಕೂ ಹೆಚ್ಚು ಶೋಗಳನ್ನು ಮಾಡಿದ್ದಾರೆಂದು. ಬೆಂಗಳೂರು ಮೂಲದ ನಿತ್ಯಾಶ್ರೀ ತಮ್ಮ ಪಾತ್ರಕ್ಕೆ ತಾವೇ ಡಬ್‌ ಮಾಡಿದ್ದಾರೆಂದು’ ಎಂದು ವಿವರ ಕೊಡುತ್ತಾರೆ. ಚಿತ್ರದಲ್ಲಿ ನಿತ್ಯಾಶ್ರೀ, ಪ್ರಕಾಶ್‌ ಬೆಳವಾಡಿ, ಸುಧಾರಾಣಿ, ತರುಣ್‌ ಸುಧೀರ್‌ ಪ್ರಮುಖ ಪಾತ್ರ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next