Advertisement

ಮತದಾನ

06:00 AM Aug 05, 2018 | |

ಈಗ ಸರಕಾರ ರಚನೆಯಾಗಿ ಆಡಳಿತಾತ್ಮಕ ವ್ಯವಹಾರ ಆರಂಭವಾಗಿದ್ದರೂ ನನಗೇಕೋ ಮೊನ್ನೆಯ ಚುನಾವಣೆಯೇ ನೆನಪಿಗೆ ಬರುತ್ತಿದೆ. ಈ ಸಲ ಚುನಾವಣೆಯಲ್ಲೊಂದು ವಿಶೇಷವಿತ್ತು. ಎರಡನೆಯ ಶನಿವಾರ ಬಂದದ್ದರಿಂದ ಸರ್ಕಾರಿ ನೌಕರರು, ಐಟಿಗರು, ಬ್ಯಾಂಕಿಗರು “ಒಂದು ರಜೆ’ ಹೋಯ್ತಲ್ಲ ಎಂದು ಗೊಣಗಾಡುವಂತಾಗಿತ್ತು. ಶನಿ, ಭಾನುಗಳ ವ್ಯತ್ಯಾಸವಿಲ್ಲದೆ ದುಡಿವ ಮಂದಿಗೆ  ಸಂತಸ “ಅಮ್ಮಂದಿರ ದಿನದ ಮುನ್ನಾ ದಿನ’ ಎಂದು ಸಂಭ್ರಮಿಸುವಂತಾಗಿತ್ತು.

Advertisement

“ಮರೆಯದಿರಿ, ಮರೆತು ನಿರಾಶರಾಗದಿರಿ’ ಕಿವಿಯ ತಮಟೆ ಒಡೆಯುವಂತೆ ಮೈಕಾಸುರ ಬೊಬ್ಬಿಡುತ್ತಿದ್ದ. ಮತ ಹಾಕದಿದ್ದರೆ ನಿರಾಶೆ ಯಾಕಾಗಬೇಕು? ಮತ ಹಾಕಿ ನಿರೀಕ್ಷೆಯಿಟ್ಟುಕೊಳ್ಳುವುದಕ್ಕಿಂತ ಹಾಕದೇ ಸುಮ್ಮನಿರೋದು ವಾಸಿಯಲ್ಲವೆ? ಸಾರ್ವಜನಿಕ ಸಮಸ್ಯೆಗಳು ಹೇಗಿತ್ತೋ ಅದೇ ಸ್ಥಿತಿಯಲ್ಲಿವೆ- ಎಂದೆಲ್ಲ ನೆರೆಮನೆಯವರು ಗೊಣಗುತ್ತಿರುವಾಗ ನಿಜ ಅನ್ನಿಸಿತು. ನಾಯಕರು ಮನೆಮನೆಗಳಿಗೆ ಬಂದು ಮತಯಾಚಿಸತೊಡಗಿದಾಗ, ಇದೇ ಸುಸಮಯವೆಂದು, “ನಮ್ಮ ಕೆರೆ ಪಾರ್ಕಿನ ಪಕ್ಕದ ಜೋಡಿ ರಸ್ತೆಗೆ ಸ್ಪೀಡ್‌ ಬ್ರೇಕರ್‌ ಬೇಕು, ಅದರ ಬದಿಗಿರುವ ಜಾಗ ಬಯಲು ಶೌಚಾಲಯವಾಗಿರುವುದರ ಕಡೆಗೆ ಗಮನಹರಿಸಿ ಆ ಉಪದ್ರವರಿಂದ ಮುಕ್ತರಾಗಿಸಬೇಕು’- ಹೀಗೆಲ್ಲ ಕೋರಿಕೆ ಮುಂದಿಟ್ಟೆ. ಅದರಿಂದಾದ ಪ್ರಯೋಜನ ಶೂನ್ಯ. ಚುನಾವಣೆ ಎಂದರೆ, ಟಿ.ವಿ.ಯಲ್ಲಿ ರಸವತ್ತಾದ ಕಾರ್ಯಕ್ರಮಗಳು. ಸಿನೆಮಾದ ಜನಪ್ರಿಯ ಹಾಡುಗಳ ಸಾಹಿತ್ಯವನ್ನು ಪಕ್ಷಗಳ, ಅಭ್ಯರ್ಥಿಗಳ ಸ್ಥಿತಿಗೆ ಬದಲಾಯಿಸಿ ಪ್ರಸ್ತುತಪಡಿಸುವ ಟಿ.ವಿ.ಯವರ ಕೌಶಲ ಅದ್ಭುತವಾದುದು.

ಕೆಲ ತಿಂಗಳುಗಳ ಹಿಂದಷ್ಟೇ ಮನೆ ಬದಲಾಯಿಸಿದ್ದ  ನೆಂಟರೊಬ್ಬರು ಚುನಾವಣೆಯ ದಿನ ಬೆಳಗ್ಗೆ ಎಂಟು ಗಂಟೆಗೇ ಪ್ರತ್ಯಕ್ಷರಾದರು. “ಹೆಚ್ಚು ಸಂದಣಿ ಇರಲಿಲ್ಲ, ಮತ ಹಾಕಿ ಬಂದೆ’ ಎಂದು ಮಹಾಯುದ್ಧವನ್ನು ಗೆದ್ದುಬಂದಂತೆ ಮಾತನಾಡಿದರು. “ಪಾಪ ನಮ್ಮ ಅಮ್ಮನ ಹೆಸರು ಹೊಸಮನೆ ವಿಳಾಸಕ್ಕೆ ಬದಲಾಗಿಲ್ಲ. ಅಪ್ಪನದು ಮಾತ್ರ ಆಗಿದೆ’ ಎಂದೆಲ್ಲ ವಿವರಿಸತೊಡಗಿದರು. “ನೀವು ತಡಮಾಡಬೇಡಿ. ಜನ ತುಂಬ ಸೇರಿದರೆ ಕ್ಯೂ ನಿಲ್ಲಬೇಕಾಗುತ್ತೆ’ ಎಂದು ಸಲಹೆ ನೀಡಿದರು. ಅದರರ್ಥ ಅಲಂಕಾರಕ್ಕೆ ಹೆಚ್ಚು ಸಮಯ ವಿನಿಯೋಗಿಸಬೇಡಿ, ಹಾಗೆ ನೇರವಾಗಿ ಹೊರಟುಬಿಡಿ ಅಂತ. ಬೇಗನೆ ಹೋಗಿ ಮತ ಹಾಕುವುದು, ಬಳಿಕ ಅಲ್ಲಿಂದ ನೇರವಾಗಿ ಹೊಟೇಲಿಗೆ ಹೋಗಿ ತಿಂಡಿ ತಿನ್ನುವುದೆಂದು ನಿರ್ಧರಿಸಲಾಯಿತು.

“ನಿಮ್ಮದು?’ ದಾರಿಯಲ್ಲಿ ಸಿಕ್ಕಿದ ಎದುರು ಮನೆಯಾಕೆಯನ್ನು ಕೇಳಿದೆ. “ಈ ವಿಳಾಸಕ್ಕೆ ಬದಲಾಗಿಲ್ಲ. ಮೊಬೈಲಿನಲ್ಲಿ ಪರಿಶೀಲಿಸಿದಾಗ  ಹಳೆಯ ವಿಳಾಸದ ಮತಗಟ್ಟೆಯನ್ನು ತೋರಿಸಿತು. ಮೂವತ್ತು ಕಿ.ಮೀ. ಹೋಗಿಬರಲು ಕಷ್ಟ, ಬೆಳಗಿನಿಂದ ಓಲಾ ಆಟೋ, ಕ್ಯಾಬ್‌ ಸಿಕ್ತಿಲ್ಲ. ಇನ್ನು ಲೋಕಸಭೆ ಚುನಾವಣೆಗೆ ಆಗುತ್ತೋ ನೋಡಬೇಕು’ ಎಂದು ಪೆಚ್ಚುನಗೆ ನಕ್ಕಾಗ ಪಾಪವೆನಿಸಿತು. 
 
ನಮ್ಮ ಮನೆಯಿಂದ ಹತ್ತೇ ಹೆಜ್ಜೆ; ಮತಗಟ್ಟೆ ! ಅಲ್ಲಿ ವಿವರಣೆ ಕೊಡಲು ಶಾಮಿಯಾನ ಹಾಕಿ ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದರು. ನನ್ನ ಮಗಳ ಹೆಸರು ತಕ್ಷಣ ಸಿಕ್ಕಿತು. ಬೂತ್‌ ಸಂಖ್ಯೆ, ಕ್ರಮ ಸಂಖ್ಯೆ ಮತ್ತು ಅವಳ ಫೋಟೊ ಇದ್ದ ಜೆರಾಕÕ… ಕೈಗೆ ಬಂತು. 

“ಅಮ್ಮಂದು’?

Advertisement

ಐದು ನಿಮಿಷ ಹುಡುಕಾಡಿದರು. “ಇವರದು ಇಲ್ಲ ‘  ಎಂದರು.

“ಹೋದ ಸಲ ವೋಟ್‌ ಮಾಡಿದ್ದೀನಿ’ ಮತದಾರ ಪರಿಚಯ ಪತ್ರ  ಕೊಟ್ಟೆ .

ಮೊಬೈಲಿನಲ್ಲಿ ಏನೇನೋ ಟಂಕಿಸಿದರು.

“ಇಲ್ಲ ಮೇಡಂ’ 

“ಮಗಳ ನ ಆಸುಪಾಸು ಇರಬೇಕು ನೋಡಿ’ ಬಿನ್ನವಿಸಿದೆ.

“ಇಲ್ಲ, ಎಲ್ಲೂ ಕಾಣಿಸ್ತಿಲ್ಲ ‘ಸಿಟ್ಟು ಬಂತು, “ಮನೆ ಖಾಲಿ ಮಾಡಿ ವರ್ಷಗಳೇ ಆಗಿರುವವರ ವಿವರ ಇದೆ. ನಾನು ಅನೇಕ ವರ್ಷಗಳಿಂದ ಇಲ್ಲೇ ಇದ್ದೀನಿ ನನ್ನದಿಲ್ಲ’

“ಇವರದ್ದು ನೋಡಿದಂತಿದೆ ಅದೇ, ಫೋಟೋ ಒಂಥರಾ ಇತ್ತು’ ಮತಗಟ್ಟೆಗೆ ಸಂಬಂಧಿಸಿದ ಕಾಗದದ ರಾಶಿ ಮುಂದೆ ಕುಳಿತವರೊಬ್ಬರು ಪಕ್ಕದವರಿಗೆ ಹೇಳಿದಾಗ ಇನ್ನಷ್ಟು ಕುಗ್ಗಿದೆ. ವೋಟರ್‌ ಐಡಿಯಲ್ಲಿರುವ ಮುಖ ಎಲ್ಲರಿಗೂ ಗೊತ್ತಿದ್ದದ್ದೇ. ಅನಾರೋಗ್ಯದ ಅಂಚಿನಲ್ಲಿದ್ದಂತೆಯೋ, ಪೆದ್ದುತನದ ಪರಮಾವಧಿಯಲ್ಲಿದ್ದಂತೆಯೋ- ಅದನ್ನು ಹೇಳುವ ಅಗತ್ಯವಿಲ್ಲವಲ್ಲ !

“ನಡೆಯಿರಿ ಹೋಗೋಣ, ತಿಂಡಿ ತಿಂದು ಬರೋಣವಂತೆ’  ಹೊಟೇಲಿನತ್ತ ಹೆಜ್ಜೆ ಹಾಕಿದೆ. ತಿಂಡಿ ಆರ್ಡರ್‌ ಮಾಡಿ ಕಾಯುವ ಸಮಯದಲ್ಲಿ ಮೊಬೈಲ್‌ನ ಇಂಟರ್ನೆಟ್‌ನಲ್ಲಿ ಬೂತ್‌, ಕ್ರಮಸಂಖ್ಯೆ ತಿಳಿದುಕೊಳ್ಳಲು ಮಗಳಿಗೆ ಹೇಳಿದೆ. ಅವಳು ಹಾಗೆ ಮಾಡಿದಳು. ಉತ್ತರವೇ ಇಲ್ಲ.

ಹೊಟೇಲಿನಿಂದ ಮರಳಿ ಬರುವಾಗ ದಾರಿಯಲ್ಲೊಂದು ಕಡೆ ಕಾರ್ಯಕರ್ತರ ಬಳಿ ಮತದಾರನೊಬ್ಬ ಸಿಡುಕುತ್ತಿದ್ದ. 

“ಸತೊØàಗಿರುವವರ ಹೆಸರು ಇದೆ, ನನ್ನದು ಇಲ್ಲ ಅಂದ್ರೆ ಹೇಗೆ? ಪ್ರತಿಬಾರಿಯೂ ಇದೆ ಗೋಳು’. ಅವನ ಮಾತಿನಲ್ಲಿಯೇ ಎಷ್ಟೋ ವರ್ಷಗಳಿಂದ ಆತ ಮತದಾನದ ಹಕ್ಕಿನಿಂದ ವಂಚಿತನಾಗಿರುವಂತೆ ಕಾಣುತ್ತಿತ್ತು.
ಆ ಗೋಳಿನ ಹಿಂದಿನ ನೋವು ಸರಿಯಾಗಿ ಅರ್ಥವಾದದ್ದು ನನಗೆ ಮಾತ್ರ. 

ವಾಪಸಾಗುತ್ತ ಮತಗಟ್ಟೆಯ ಸಮೀಪವಿದ್ದ ಇನ್ನೊಂದು ಕಾರ್ಯಕರ್ತರ ಟೇಬಲ್ಲಿಗೆ ಹೋದೆವು. ಪರಿಚಯದವರೇ.
“ಇನ್ನೂ ವೋಟ್‌ ಮಾಡಿಲ್ವ ‘ಮಗಳು ನಮ್ಮ ಸಂಕಷ್ಟವನ್ನು ವಿವರಿಸಿದಳು. 

ಹುಡುಕಿದರು. ಮೊದಲ ಬಾರಿಗೆ ಸಿಗಲಿಲ್ಲ. ಇನ್ನೇನೋ ಕಾಂಬಿನೇಷನ್ನಲ್ಲಿ ಹುಡುಕಿ, “ಇದೋ ನಿಮ್ಮದು’ ಎಂದು ಕೊಟ್ಟರು. ನೋಡಿದರೆ, ಎರಡು ಇನಿಷಿಯಲ್‌ಗ‌ಳಲ್ಲಿ ಒಂದು ಇಲ್ಲ.

“ಇದರಲ್ಲಿ ಹೆಸರು ಅಪೂರ್ಣ’

“ಪರವಾಗಿಲ್ಲ ಮೇಡಂ, ನಿಮ್ಮ ಐಡಿ ತೋರಿಸಿ ಸಾಕು’ ಎಂದು ಅಲ್ಲಿಂದ ಮತಗಟ್ಟೆಗೆ ಅಟ್ಟಿದರು.

ನನ್ನದು ಒಂದು ಬೂತ್‌. ಮಗಳದು ಬೇರೊಂದು. ನನ್ನ ಬೂತ್‌ನಲ್ಲಿ ಮಹಿಳೆಯರು, ಪುರುಷರ ಪ್ರತ್ಯೇಕ ಸಾಲು- ಹನುಮನ ಬಾಲದಷ್ಟು ಉದ್ದ. ವಿಧಿಯಿಲ್ಲದೇ ನಿಂತೆ. ಅಂದಿನ ಕಾಲದಲ್ಲಿ  ರಾಜ್‌ಕುಮಾರ್‌, ವಿಷ್ಣುವರ್ಧನ್‌ ಚಿತ್ರಗಳಿಗೆ ಹೀಗೆ ಸರತಿಯಲ್ಲಿ ಗಂಟೆಗಟ್ಟಲೆ ನಿಂತು ಟಿಕೆಟ್‌ ಕೊಂಡು ಹೊರಬರುವಾಗಿನ ಆನಂದ ನೆನೆದು ಪುಳಕಗೊಂಡೆ. ನೆಲದಿಂದ ನಾಲ್ಕು ಮೆಟ್ಟಿಲು ಹತ್ತಿದರೆ ಮತದಾರನ ಕೋಣೆ. ನಾನು ಎರಡನೆಯ ಮೆಟ್ಟಿಲಲ್ಲಿ ನಿಂತಿದ್ದೆ. ಹತ್ತು ನಿಮಿಷವಾದರೂ ಮೂರನೆಯದಕ್ಕೆ ಭಡ್ತಿ ಇಲ್ಲ ! “ಪಕ್ಕದ ಬೂತಿನವರು ಹೀಗೆ ಬಂದು ಹಾಗೆ ಹೋಗ್ತಿದ್ದಾರೆ. ನಮ್ಮದು ಯಾಕೆ ಹೀಗೆ?’ ಸಶಬ್ದವಾಗಿ ಬೇಸರಿಸಿಕೊಂಡೆ. 

“ಅಯ್ಯೋ, ಇಲ್ಲಿಯ ಕತೆ ಯಾಕೆ ಕೇಳ್ತೀರಿ? ಮತಯಂತ್ರ ಕೆಟ್ಟಿತ್ತು, ಈಗಷ್ಟೇ ರಿಪೇರಿ ಆಗಿದೆ. ಅದಕ್ಕೆ ಸಂದಣಿ’ ಪಕ್ಕದ ಸಾಲಿನವರು ಉತ್ತರಿಸಿದರು ಬೆವರೊರೆಸಿಕೊಳ್ಳುತ್ತ. ಪಾಪಿ ಸಮುದ್ರ ಹೊಕ್ಕರೂ ಮೊಣಕಾಲಷ್ಟೇ ನೀರಂತೆ ! ನನ್ನ ಮೇಲೆ ನನಗೇ ಸಿಟ್ಟು ಬಂತು. ನಿಂತಲ್ಲಿಯೇ ನಿಂತೆ. ಅಕ್ಕಪಕ್ಕ ಗಮನಿಸುತ್ತ.

“ಯಾವಾಗ ಬಂದೆ, ಚೆನ್ನಾಗಿದ್ದೀಯ?’

“ಹೂಂ! ಬೆಳಿಗ್ಗೆ ಬಂದೆ ವೋಟ್‌ ಮಾಡೋಕ್ಕೆ ಅಂತಲೇ, ನೀನು ಯಾವಾಗ ಬಂದೆ’

“ನಿನ್ನೆ ಸಂಜೆ ಅಪ್ಪ ಬಂದಿದ್ರು, ನಾಳೆ ಮಧ್ಯಾಹ್ನ ಹೊರಟುಬಿಡ್ತೀನಿ’

“ಮಗೂನ ಅಮ್ಮನ ಹತ್ತಿರ ಬಿಟ್ಟು ಬಂದಿದ್ದೀನಿ, ಬರ್ತೀನಿ’ ಇಬ್ಬರು ಚೂಡಿಧಾರಿಣಿಯರ ವಿಷಯ ವಿನಿಮಯ ನಡೆಯುತ್ತಿತ್ತು. ವೋಟು ಮಾಡಲು ತವರಿಗೆ ಬಂದ  ಸಡಗರ ಇಬ್ಬರಲ್ಲೂ ! ಅಷ್ಟರಲ್ಲೇ ಮಗಳು ಬಂದವಳೇ, ಹೆಮ್ಮೆಯಿಂದ ಶಾಯಿ ಹಚ್ಚಿದ ತೋರುಬೆರಳನ್ನು ತೋರಿದಳು. “ಇನ್ನು ಇಲ್ಲೇ ಇದ್ದೀಯಾ?’

“ಹೂಂ’  ಎಂದೆ. “ನಾನು ಕ್ಯೂ ನಿಲ್ಲುವೆ, ನೀನು ಕೂತ್ಕೊà’ ಎಂದಾಗ ನಿರಾಕರಿಸಿದೆ. “ನನಗಿಂತ ವಯೋವೃದ್ಧರು ನಿಂತೇ ಇದ್ದಾರಲ್ಲ?’ ನಾನು ಇನ್ನೂ ಯುವತಿ ಎಂದು ತೋರಿಸಿಕೊಳ್ಳುವ ಆಸೆ ಒಳಗೊಳಗೆ !

ಬೆಂಗಳೂರು ಸಿಟಿಯ ಪೀಕ್‌ ಅವರ್‌ ಟ್ರಾಫಿಕ್‌ನಲ್ಲಿ ವಾಹನಗಳ ಮಂದಗತಿಯ ಜರುಗುವಿಕೆಯಂತೆ, ನಮ್ಮ ಕ್ಯೂ ಕರಗುವ ಲಕ್ಷಣ ಇಲ್ಲ. 

“ಹೇಗೂ ಸಂಜೆ ತನಕ ಇದೆಯಲ್ಲ . ಊಟ ಮಾಡಿ ಬರೋಣ’ ಮಗಳ ಸಜೆಸ್ಟಿದಾಗ ಶಾಯಿರಹಿತ ಬೆರಳಿನೊಂದಿಗೆ ಮನೆಗೆ ಅಭಿಮುಖವಾಗಿ ಹೆಜ್ಜೆ ಇಟ್ಟೆ. 

ಮನೆಯ ಸಮೀಪದ ಕಾರ್ಯಕರ್ತರು ನನ್ನನ್ನು ನೋಡಿದೊಡನೆ, “ನಿಮ್ಮದು ಎಲ್ಲ ವಿವರ ಸಿಕ್ಕಿದೆ’ ಎಂದು ಸಂಪೂರ್ಣ ಹೆಸರು ವಿವರಗಳ ಬರೆದ ಕಾಗದದ ಚೀಟಿ ಕೊಟ್ಟರು. ಈ ವಿವರದಲ್ಲಿ ಬೂತ್‌ ಸಂಖ್ಯೆ ಬೇರೆ ಇತ್ತು. ಇಲ್ಲಿ  ಸಂದಣಿ ಇರಲಿಲ್ಲ. ಹೀಗೆ ಹೋಗಿ, ಹಾಗೆ ಬಂದೆ. ನಾನು ಮೊದಲು ನಿಂತಿದ್ದ ಸರತಿಯವರೆಲ್ಲ ಅಲ್ಲÇÉೇ ನಿಂತಿದ್ದು ನೋಡಿ ಕನಿಕರವೆನಿಸಿತು.

ಮನೆಗೆ ಬಂದು ಮೊಬೈಲ್‌ ನೋಡಿದೆ. ಫೇಸ್‌ಬುಕ್‌ನಲ್ಲಿ ಗೆಳತಿಯೊಬ್ಬಳ ಪೋಸ್ಟ್  ಇತ್ತು- “ಚುನಾವಣೆ ಅಧಿಕಾರಿಗಳು ವೋಟ್‌ ಹಾಕಲು ಅವಕಾಶ ಕೊಡಲಿಲ್ಲ, ಕಾರಣ ಕೇಳಿದ್ರೆ ನಿಮಗೆ ಇನ್ನು 18 ವರ್ಷ ಆಗಿಲ್ಲ ಅಂದರಂತೆ. ಛೆ, ಹಾಳಾದ್ದು ಸಂತೂರ್‌ ಸೋಪಿನ ಎಫೆಕr…, ತಾರುಣ್ಯಭರಿತ ತ್ವಚೆ- ವಯಸ್ಸು 18 ಮೀರದು'”ಫೇರ್‌ ಅಂಡ್‌ ಲವ್ಲೀ ಬಳಸಿದ  ಪರಿಣಾಮ- ನಿಮ್ಮ ಅಕ್ಕನಾ- ಎಂದು ಭುಜದೆತ್ತರ ಬೆಳೆದ ನನ್ನ ಮಗನನ್ನು ಕೇಳಿದ್ದರು!’ ಮತ್ತೂಬ್ಬಳು ಬೀಗಿದ್ದಳು. 
ನಿಜವೋ ಸುಳ್ಳೋ, ಇಂಥ ಮೆಸೇಜ್‌ಗಳು ನನ್ನ ಹೊಟ್ಟೆ ಉರಿಸಿದ್ದು ನಿಜವೇ.
.
“ಅಮ್ಮ, ನಾನು ಆನ್‌ಲೈನ್‌ನಲ್ಲಿ ಹಣ್ಣು-ತರಕಾರಿ ಆರ್ಡರ್‌ ಮಾಡ್ತಿದ್ದೇನೆ. ಬೇರೆ ಏನಾದರೂ ಬೇಕಾ ಅಂತ ಕೇಳಿದು 
ಮಗಳು. ನಾನು, “ಏನೂ ಬೇಡ’ ಎಂದವಳು ಥಟ್ಟನೆ,  “ಒಂದು ಸಂತೂರ್‌ ಸಾಬೂನು, ಮತ್ತು ಫೇರ್‌ ಆ್ಯಂಡ್‌ ಲವ್ಲೀ  ಕ್ರೀಮ್‌ ಹಾಕು’ ಎಂದೆ.

– ಕೆ. ವಿ. ರಾಜಲಕ್ಷ್ಮೀ

Advertisement

Udayavani is now on Telegram. Click here to join our channel and stay updated with the latest news.

Next