Advertisement

ಮತಯಂತ್ರ ದೂಷಣೆ: ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ 

12:30 AM Jan 24, 2019 | Team Udayavani |

ಮತಯಂತ್ರ ಕುರಿತಾದ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. ಸೈಯ್ಯದ್‌ ಶುಜಾ ಎಂಬ ವ್ಯಕ್ತಿ ವಿದೇಶದಲ್ಲಿದ್ದುಕೊಂಡು ಸ್ಕೈಪ್‌ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಮತಯಂತ್ರಗಳನ್ನು ಹ್ಯಾಕ್‌ ಮಾಡಲಾಗಿತ್ತು. ಈ ತಂಡದಲ್ಲಿ ನಾನೂ ಇದ್ದೆ. ನನ್ನ ತಂಡದಲ್ಲಿದ್ದ ಇತರ ಸದಸ್ಯರನ್ನು ಸಾಯಿಸಲಾಗಿದೆ. ನಾನು ಪಾರಾಗಿ ಬಂದು ವಿದೇಶದಲ್ಲಿ ಆಶ್ರಯ ಪಡೆದುಕೊಂಡಿದ್ದೇನೆ ಎಂದಿದ್ದಾನೆ. ಈ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಕೂಡಾ ಉಪಸ್ಥಿತರಿದ್ದರು. ಈ ಕಾರಣಕ್ಕೆ ಶುಜಾ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮತಯಂತ್ರದ ಮೇಲಿನ ಆರೋಪ ಇಂದು ನಿನ್ನೆಯದ್ದಲ್ಲ. ಪ್ರತಿ ಚುನಾವಣೆಯಲ್ಲಿ ಸೋತ ಪಕ್ಷಗಳು ತಮ್ಮ ಸೋಲಿಗೆ ಮತಯಂತ್ರಗಳನ್ನು ತಿರುಚಿದ್ದೇ ಕಾರಣ ಎಂದು ದೂಷಿಸುವುದು ಮಾಮೂಲಿಯಾಗಿದೆ. ಆದರೆ ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಾಗ ಮಾತ್ರ ಯಾರಿಗೂ ಮತಯಂತ್ರಗಳಲ್ಲಿ ದೋಷ ಕಾಣಿಸಿರಲಿಲ್ಲ. 

Advertisement

ಸೈಯ್ಯದ್‌ ಶುಜಾ ಎಂಬ ವ್ಯಕ್ತಿ ಇನ್ನೊಂದು ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿರುವಾಗ ದಿಢೀರ್‌ ಎಂದು ಕಾಣಿಸಿಕೊಂಡು ಮತಯಂತ್ರಗಳ ಮೇಲೆ ದೋಷಾರೋಪ ಹೊರಿಸಿದ್ದು ಏಕೆ? ಹಾಗೊಂದು ವೇಳೆ 2014ರಲ್ಲಿ ಮತಯಂತ್ರಗಳನ್ನು ತಿರುಚಲಾಗಿದ್ದರೆ ಆಗಲೇ ಅದನ್ನು ಬಹಿರಂಗ ಪಡಿಸಬಹುದಿತ್ತಲ್ಲವೆ? ಈ ಗೋಷ್ಠಿಯಲ್ಲಿ ಕಾಂಗ್ರೆಸ್‌ ನಾಯಕ ಏಕೆ ಉಪಸ್ಥಿತರಿದ್ದರು? ಇದಕ್ಕೆಲ್ಲ ಉತ್ತರ ಕಂಡುಕೊಳ್ಳುವ ಅಗತ್ಯವಿದೆ. ಮೇಲ್ನೋಟಕ್ಕೆ ಇದು ಒಂದು ರಾಜಕೀಯ ಷಡ್ಯಂತ್ರದಂತೆ ಕಾಣಿಸುತ್ತಿದೆಯಷ್ಟೆ. 

2014 ಲೋಕಸಭಾ ಚುನಾವಣೆಯ ಐತಿಹಾಸಿಕ ಫ‌ಲಿತಾಂಶಕ್ಕೆ ಕಾರಣ ಏನು ಎನ್ನುವುದರ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಬಲವಾಗಿ ಬೀಸಿದ ಆಡಳಿತ ವಿರೋಧಿ ಅಲೆ ಮತ್ತು ಮೋದಿಯವರ ಚರಿಷ್ಮಾ ಕಾಂಗ್ರೆಸ್‌ ನೇತೃತ್ವದ ಯುಪಿಎಯನ್ನು ಧೂಳೀಪಟ ಮಾಡಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ ಇನ್ನೊಂದು ಚುನಾವಣೆ ಹತ್ತಿರವಾಗುತ್ತಿರು ವಾಗಲಾದರೂ ವಿಪಕ್ಷಗಳು ಹಿಂದಿನ ಸೋಲಿಗೆ ಕಾರಣ ಏನು ಎನ್ನುವುದರ ಕುರಿತು ಆತ್ಮಾವಲೋಕನ ಮಾಡುವುದು ಬಿಟ್ಟು, ಈ ರೀತಿ ಕಾಗಕ್ಕ -ಗುಬ್ಬಕ್ಕ ಕತೆ ಕಟ್ಟಿ ಅದನ್ನು ಪ್ರಚಾರ ಮಾಡಲು ನಾನಾ ಗಿಮಿಕ್‌ಗಳನ್ನು ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್‌ನಂಥ ಪಕ್ಷ ಈ ರೀತಿಯ ಸ್ಟಂಟ್‌ಗಳ ಮೊರೆ ಹೋಗುವುದನ್ನು ಬಿಟ್ಟು ಆಡಳಿತ ಪಕ್ಷದ ವಿರುದ್ಧ ತಳಮಟ್ಟದ ತಯಾರಿ ಮಾಡಿಕೊಳ್ಳುವುದರತ್ತ ಗಮನ ಹರಿಸುವುದರಲ್ಲಿ ಅದರ ಭವಿಷ್ಯವಿದೆ. 

ಭಾರತದ ಚುನಾವಣಾ ಆಯೋಗ ಬಳಸುತ್ತಿರುವ ಮತಯಂತ್ರ ಸಂಪೂರ್ಣ ಸುರಕ್ಷಿತ ಎನ್ನುವುದು ಒಂದಕ್ಕಿಂತ ಹೆಚ್ಚು ಸಲ ಸಾಬೀತಾಗಿದೆ. ನ್ಯಾಯಾಲಯಗಳು ಕೂಡಾ ಮತಯಂತ್ರಗಳ ಸುರಕ್ಷತೆಯ ಬಗ್ಗೆ ಯಾವ ಅನುಮಾನವನ್ನೂ ಹೊಂದಿಲ್ಲ. ಮತಯಂತ್ರಗಳ ಮೇಲೆ ಓತಪ್ರೋತವಾಗಿ ಆರೋಪಗಳನ್ನು ಮಾಡಿದ ವಿಪಕ್ಷಗಳೂ ನ್ಯಾಯಾಲಯದಲ್ಲಿ ತಿರುಚಿ ತೋರಿಸುವ ಪ್ರಾತ್ಯಕ್ಷಿಕೆಯನ್ನು ನಡೆಸುವ ಸವಾಲು ಸ್ವೀಕರಿಸುವ ದಿಟ್ಟತನವನ್ನು ತೋರಿಸಿಲ್ಲ. ಹೀಗಿರುವಾಗ ಚುನಾವಣೆ ಸನ್ನಿಹಿತವಾಗುತ್ತಿರುವಾಗ ಮತ್ತೆ ಹಳೇ ಆರೋಪವನ್ನು ಪುನರಾವರ್ತಿಸುವುದರ ಮರ್ಮ ಏನೆಂದು ಅರಿಯದಷ್ಟು ಮುಗ್ಧರಲ್ಲ ಮತದಾರರು. 

ಸುಮಾರು 20 ದೇಶಗಳಲ್ಲಿ ಮತಯಂತ್ರಗಳನ್ನು ಬಳಸಲಾಗುತ್ತದೆ. ಈ ಎಲ್ಲ ಮತಯಂತ್ರಗಳಿಗಿಂತ ಭಾರತದ ಮತಯಂತ್ರ ಹೆಚ್ಚು ಸುರಕ್ಷಿತ ಎಂದು ಸಾಬೀತಾಗಿದೆ. ಕೆಲವು ದೇಶಗಳು ನಮ್ಮ ಮತಯಂತ್ರಗಳ ತಂತ್ರಜ್ಞಾನವನ್ನೂ ಕೇಳಿವೆ. ಹಾಗೆಂದು ನಮ್ಮ ಮತಯಂತ್ರಗಳು ಪರಿಪೂರ್ಣ ಎನ್ನುವುದು ಸರಿಯಲ್ಲ. ಮತಯಂತ್ರಗಳನ್ನು ತಿರುಚಿ ಚುನಾವಣೆ ಫ‌ಲಿತಾಂಶವನ್ನು ಬದಲಾಯಿಸುವುದು ಸಾಧ್ಯವಿಲ್ಲ ಎನ್ನುವುದು ನಿಜವಾಗಿದ್ದರೂ ಮತದಾನದ ಸಂದರ್ಭದಲ್ಲಿ ಮತಯಂತ್ರ ಮತ್ತು ವಿವಿಪ್ಯಾಟ್‌ಗಳಲ್ಲಿ ಕಾಣಿಸಿಕೊಳ್ಳುವ ತಾಂತ್ರಿಕ ದೋಷಗಳನ್ನು ಸರಿಪಡಿಸಲೇಬೇಕಾದ ಅನಿವಾರ್ಯತೆ ಇದೆ. ಇವೆಲ್ಲ ಸರಳವಾಗಿ ಸರಿಪಡಿಸಬಹುದಾದ ತಾಂತ್ರಿಕ ದೋಷಗಳು. ಅದೇ ರೀತಿ ಮತಯಂತ್ರಗಳ ನಿರ್ವಹಣೆಯನ್ನೂ ಗಂಭೀರವಾಗಿ ಪರಿಗಣಿಸಬೇಕು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮತಯಂತ್ರವೊಂದು ರಸ್ತೆ ಬದಿಯಲ್ಲಿ ಸಿಕ್ಕಿದ್ದು, ಮತಯಂತ್ರ ಇಟ್ಟಿದ್ದ ಕೊಠಡಿ ಸಮೀಪ ಸಂಶಯಾಸ್ಪದ ವ್ಯಕ್ತಿಗಳು ಸುಳಿದಾಡಿದ್ದು ಈ ಮಾದರಿಯ ಪ್ರಕರಣಗಳು ಪಾರದರ್ಶಕ ಮತ್ತು ಮುಕ್ತ ಚುನಾವಣೆ ನಡೆಸುವ ಪ್ರಕ್ರಿಯೆಯ ಮೇಲೆ ಸಂಶಯದ ನೆರಳು ಬೀಳುವಂತೆ ಮಾಡುತ್ತವೆೆ. ಇಂಥ ತಾಂತ್ರಿಕ ದೋಷಗಳನ್ನೇ ಮತಯಂತ್ರವನ್ನು ತಿರುಚುವ ಪ್ರಯತ್ನ ಎನ್ನುವವರು ರಾಷ್ಟ್ರೀಯ ಹಿತಾಸಕ್ತಿ, ಪ್ರಜಾತಂತ್ರ ವ್ಯವಸ್ಥೆ ಎರಡಕ್ಕೂ ಅಪಾಯ ತಂದೊಡ್ಡುತ್ತಿದ್ದಾರೆ. ಇಂದು ಮತಯಂತ್ರ ಸರಿಯಿಲ್ಲ ಎನ್ನುವವರು ನಾಳೆ ಮತಪತ್ರಗಳ ಮೇಲೂ ದೋಷಾರೋಪ ಹೊರಿಸಬಹುದು. 

Advertisement
Advertisement

Udayavani is now on Telegram. Click here to join our channel and stay updated with the latest news.

Next