Advertisement

ನಿರ್ಭೀತಿಯಿಂದ ಮತ ಚಲಾಯಿಸಿ

09:37 PM Nov 27, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯ ಮತದಾನದ ಪ್ರಮಾಣವನ್ನು ಹೆಚ್ಚಿಸಿ ನೈತಿಕ ಮತದಾನವನ್ನು ಉತ್ತೇಜಿಸುವುದಕ್ಕೆ ಪ್ರತಿಯೊಬ್ಬ ಮತದಾರ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಿಪಂ ಸಿಇಒ ಹಾಗೂ ಮಾದರಿ ನೀತಿ ಸಂಹಿತೆ ನೋಡಲ್‌ ಅಧಿಕಾರಿ ಬಿ. ಫೌಜಿಯಾ ತರನ್ನುಮ್‌ ಹೇಳಿದರು.

Advertisement

ನಗರದ ಹೊರ ವಲಯದ ಟೈಟಾನ್‌ ಹಾಗೂ ಮೈಕ್ರೋ ಟೆಕ್‌ ಕಂಪನಿಗಳಲ್ಲಿ ಕಾರ್ಮಿಕರಿಗೆ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಆಯೋಜಿಸಿದ್ದ ಮತದಾನದ ಜಾಗೃತಿ ಜಾಥಾದಲ್ಲಿ ಮಾತನಾಡಿ, ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಯಾರೊಬ್ಬರು ಹೊರಗೊಳಿಯಬಾರದು ಎಂದರು.

ಉತ್ತಮ ವ್ಯಕ್ತಿ ಆಯ್ಕೆ ಮಾಡಿ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಉತ್ತಮ ಜನ ಪ್ರತಿನಿಧಿ ಆಯ್ಕೆ ಮಾಡಿಕೊಳ್ಳಲು ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತೇವೆ. ಆದ್ದರಿಂದ ಮತದಾರರು ವಿವೇಚನೆಯಿಂದ ಸಂವಿಧಾನ ಬದ್ಧವಾಗಿ ತಮ್ಮ ಹಕ್ಕುನ್ನು ಕಡ್ಡಾಯವಾಗಿ ಚಲಾಯಿಸಬೇಕು. ಯಾವುದೇ ಆಸೆ, ಅಮಿಷಗಳಿಗೆ ಮತದಾರರು ಒಳಗಾಗದೇ ನೈತಿಕವಾಗಿ ತಮ್ಮ ಹಕ್ಕನ್ನು ಚಲಾಯಸಬೇಕು ಎಂದು ಸಲಹೆ ನೀಡಿದರು.

ನೂರಕ್ಕೆ ನೂರರಷ್ಟು ಮತದಾನವಾಗಬೇಕು: ಕಳೆದ 2018 ಸಾರ್ವತ್ರಿಕ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.82 ರಷ್ಟು ಮತದಾನ ದಾಖಲುಗೊಂಡಿದ್ದು, ಈ ಚುನಾವಣೆಯಲ್ಲಿ ನೂರಕ್ಕೆ ನೂರಷ್ಟು ಮತದಾನ ದಾಖಲಾಗಬೇಕೆಂದರು. ಮತದಾನದ ದಿನ ಮತಗಟ್ಟೆಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತದೆ. ವಿಕಲಚೇತನರಿಗೆ ವ್ಹೀಲ್‌ಚೇರ್‌ ಹಾಗೂ ಮತಗಟ್ಟೆಗೆ ಆಗಮಿಸಲು ಸಾಧ್ಯವಾಗದ ಅಸಹಾಯಕರಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಕಾರ್ಮಿಕರಿಗೆ ವೇತನ ಸಹಿತ ರಜೆ: ಮತಗಟ್ಟೆಯಲ್ಲಿ ಕುಡಿಯುವ ನೀರು, ವಿದ್ಯುತ್‌ ಬೆಳಕು, ವಿಕಲಚೇತನರಿಗೆ ರ್‍ಯಾಂಪ್‌ ವ್ಯವಸ್ಥೆ ಮಾಡಲಾಗಿದೆ ಎಂದರು. ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿವರ್ಗದವರಿಗೆ ಹಾಗೂ ಕಾರ್ಮಿಕ ವೃಂದದವರಿಗೆ ಡಿ.5 ರಂದು ನಡೆಯುವ ಉಪ ಚುನಾವಣೆ ಮತದಾನದ ಪ್ರಯುಕ್ತ ವೇತನ ಸಹಿತ ರಜೆ ನೀಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್‌, ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಕಡ್ಡಾಯ ಮತದಾನಕ್ಕೆ ಪ್ರೇರೇಪಿಸಿ ಅರಿವು ಮೂಡಿಸಿದರು.

Advertisement

ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಶರೀಫ್, ಟೈಟಾನ್‌ ಕಂಪನಿಯ ವ್ಯವಸ್ಥಾಪಕರಾದ ರಾಜಶೇಖರ್‌, ಕಾರ್ಮಿಕಾಧಿಕಾರಿ ವರಲಕ್ಷಿ¾à ಸೇರಿದಂತೆ ಜಿಲ್ಲಾ ಸ್ವೀಪ್‌ ಸಮಿತಿ ಸದಸ್ಯರು, ಕಾಲೇಜು ಉಪನ್ಯಾಸಕರು ಉಪಸ್ಥಿತರಿದ್ದರು.

ಮತದಾನ ಜಾಗೃತಿಗೆ ಸೆಳೆದ ಬೈಕ್‌ ರ್ಯಾಲಿ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್‌ ಸಮಿತಿ ವತಿಯಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಬುಧವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಿಂದ ಎಂ.ಜಿ.ರಸ್ತೆ ಮುಖಾಂತರವಾಗಿ ಜೂನಿಯರ್‌ ಕಾಲೇಜು ಮೈದಾನವರೆಗೂ ಹಮ್ಮಿಕೊಂಡಿದ್ದ ಬೈಕ್‌ ರ್ಯಾಲಿಗೆ ಚಿಕ್ಕಬಳ್ಳಾಪುರ ತಾಪಂ ಸಿಇಒ ಹಾಗೂ ತಾಲ್ಲೂಕು ಸ್ವೀಪ್‌ ಸಮಿತಿ ಅಧ್ಯಕ್ಷ ಹರ್ಷವರ್ಧನ್‌ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಹರ್ಷವರ್ಧನ್‌, ಉಪ ಚುನಾವಣೆಯಲ್ಲಿ ಹೆಚ್ಚು ಮತದಾನ ಆಗಿ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿರಬೇಕೆಂದರು. ಮತದಾರರು ನೈತಿಕವಾಗಿ ತಮ್ಮ ಹಕ್ಕು ಚಲಾಯಿಸಬೇಕು. ರಾಜಕೀಯ ಪಕ್ಷಗಳು ನೀಡುವ ಆಸೆ, ಅಮಿಷಗಳನ್ನು ತಿರಸ್ಕರಿಸಬೇಕೆಂದರು.

ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತರಾದ ಡಿ.ಲೋಹಿತ್‌ ಕುಮಾರ್‌ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು. ನೂರಾರು ಸಂಖ್ಯೆಯಲ್ಲಿ ಗ್ರಾಪಂ ನೌಕರರು, ಶಿಕ್ಷಕರು ಬೈಕ್‌ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಬೈಕ್‌ ರ್ಯಾಲಿ ಬಳಿಕ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೌಕರರು ಕಡ್ಡಾಯ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಸ್ಪೀಕರಿಸಿದರು.

ವಿಶೇಷ ಅಧಿಕಾರಿಯಾಗಿ ಮುನಿಷ್‌ ನೇಮಕ: ರಾಜ್ಯದಲ್ಲಿನ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾದರಿ ನೀತಿ ಸಂಹಿತೆ ಅನುಷ್ಠಾನ ತಂಡಗಳ ಮೇಲ್ವಿಚಾರಣೆಗಾಗಿ ರಾಜ್ಯ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತರಾದ ಮುನಿಷ್‌ ಮೌದ್ಗಿಲ್‌ರನ್ನು ವಿಶೇಷ ಅಧಿಕಾರಿಯಾಗಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ಚುನಾವಣಾ ಆಯೋಗ ನೇಮಿಸಿದ್ದು,

ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ-2019 ರ ಸಂಬಂಧ ರಚಿಸಲಾಗಿರುವ ವಿವಿಧ ಮಾದರಿ ನೀತಿ ಸಂಹಿತೆ ಅನುಷ್ಠಾನ ತಂಡಗಳಾದ ಎಸ್‌ಎಸ್‌ಟಿ, ಎಫ್ಎಸ್‌ಟಿ, ಅಬಕಾರಿ ಹಾಗೂ ಇತರೆ ತಂಡಗಳ ಪ್ರತಿ ದಿನದ ಕಾರ್ಯಚಟುವಟಿಕೆಗಳನ್ನು ಇವರು ಮೇಲ್ವಿಚಾರಣೆ ಮಾಡಲಿದ್ದು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅಥವ ಏಜೆಂಟರು ಹಾಗೂ ಸಾರ್ವಜನಿಕರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ವಿಚಾರವಾಗಿ ಮೊ. 9900099111 ಅನ್ನು ಸಂಪರ್ಕಿಸಬಹುದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next