Advertisement

ತಿಂಗಳ ಮೊದಲ ಸೋಮವಾರ ಹಳ್ಳಿಗಳ ಭೇಟಿ ಕಡ್ಡಾಯ

10:15 PM Oct 21, 2019 | Team Udayavani |

ಮೈಸೂರು: ತಿಂಗಳ ಮೊದಲನೇ ಸೋಮವಾರ ಗ್ರಾಮಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಳ್ಳಿಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲು ಆಲಿಸಿ ಸ್ಥಳದಲ್ಲೇ ಜನರ ಸಮಸ್ಯೆ ಬಗೆಹರಿಸಿಕೊಡಬೇಕು. ಸಾಧ್ಯವಾಗದಿದ್ದಲ್ಲಿ ಹಿಂಬರಹ ನೀಡಿ ಒಂದು ವಾರದಲ್ಲಿ ಪರಿಹರಿಸ‌ಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ತಾಕೀತು ಮಾಡಿದರು. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸೋಮವಾರ ಮೈಸೂರು ತಾಲೂಕು ವ್ಯಾಪ್ತಿಯ ಚಾಮುಂಡೇಶ್ವರಿ ಮತ್ತು ವರುಣಾ ವಿಧಾನಸಭಾ ಕ್ಷೇತ್ರಗಳ ಪ್ರಗತಿಪರಿಶೀಲನಾ ಸಭೆ ನಡೆಯಿತು.

Advertisement

ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ತಮ್ಮ ಸೂಚನೆ ಮೇರೆಗೆ ತಹಶೀಲ್ದಾರ್‌ ಸುತ್ತೋಲೆ ಹೊರಡಿಸಿದ್ದು, ನವೆಂಬರ್‌ ಮೊದಲ ಸೋಮವಾರದಿಂದ ಪ್ರತಿ ತಿಂಗಳ ಮೊದಲನೇ ಸೋಮವಾರ ಬೆಳಗ್ಗೆ 10.30 ರಿಂದ 11.30ರವರೆಗೆ ಗ್ರಾಮಮಟ್ಟದ ಎಲ್ಲಾ ಅಧಿಕಾರಿಗಳು ಗ್ರಾಮ ಪಂಚಾಯ್ತಿಗಳಲ್ಲಿ ಹಾಜರಿದ್ದು, ಸಾರ್ವಜನಿಕರ ಅಹವಾಲು ಆಲಿಸಿ ಬಗೆಹರಿಸಿಕೊಡಬೇಕು.

ಮೇಲ್ವಿಚಾರಣೆ: ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರು, ಭೂ ಮಾಪಕರು, ಮುಡಾ ಸಹಾಯಕ ಹಾಗೂ ಕಿರಿಯ ಎಂಜಿನಿಯರ್‌ಗಳು ಈ ಸಭೆಗಳಲ್ಲಿ ಭಾಗವಹಿಸಬೇಕು. ತಾಲೂಕುಮಟ್ಟದ ಅಧಿಕಾರಿಗಳು ಈ ಸಭೆಗಳ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು.

ಗ್ರಾಪಂ ಜವಾಬ್ದಾರಿ: ಮೈಸೂರು ಸುತ್ತಲಿನ ಗ್ರಾಪಂಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ. ಪಿಡಿಒಗಳು ಸಮಸ್ಯೆ ಎದುರಿಸುತ್ತಿರುವುದು ತಮಗೆ ಗೊತ್ತಿದೆ. ಅದರ ನಡುವೆಯೂ ಸ್ವಚ್ಛತೆ, ಕುಡಿಯುವ ನೀರು, ಬೀದಿದೀಪ, ಅಂಗನವಾಡಿ, ಶಾಲೆ, ಆಶ್ರಯ ಯೋಜನೆಗಳಿಗೆ ಒತ್ತು ನೀಡಿ ಕೆಲಸ ಮಾಡಿ ಎಂದು ಅವರು ತಿಳಿಸಿದರು.

ಜನಸಂಪರ್ಕ ಸಭೆ: ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಈ ರೀತಿಯ ಆದೇಶ ಹೊರಡಿಸಿದಾಗ ಆರಂಭದಲ್ಲಿ ಕೆಲ ದಿನ ಸಭೆಗಳನ್ನು ಮಾಡಿ ನಂತರ ಕೈಬಿಡುತ್ತಾರೆ. ಹಳ್ಳಿಗಳಲ್ಲಿ ಈಗ ಜನ ಸಂಪರ್ಕ ಸಭೆ, ಕಂದಾಯ ಅದಾಲತ್‌ಗಳೂ ನಡೆಯುತ್ತಿಲ್ಲ. ಕನಿಷ್ಠ 3 ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ಮಾಡಿ ಎಂದು ತಾಕೀತು ಮಾಡಿದರು.

Advertisement

ಹಳ್ಳಿಗಳಲ್ಲಿ ಸಭೆ ನಡೆಸಿ ಜನರ ಅಹವಾಲು ಆಲಿಸಿ ಬಗೆಹರಿಸಿಕೊಡುವ ಜೊತೆಗೆ ಈ ಎಲ್ಲಾ ಅಧಿಕಾರಿಗಳೂ ಕೂಡಿ ಆ ಹಳ್ಳಿಯಲ್ಲಿ ಅಂಗನವಾಡಿ, ಶಾಲೆ, ಆಶ್ರಯ ಯೋಜನೆ, ಸ್ಮಶಾನಗಳಿಗೆ ಜಾಗ ಗುರುತಿಸಿ ಎಂದು ತಿಳಿಸಿದರು.

ಕೆಆರ್‌ಎಸ್‌ ತುಂಬಿದ್ದರೂ ಕುಡಿಯಲೂ ನೀರಿಲ್ಲ: ಕೆಆರ್‌ಎಸ್‌ ತುಂಬಿ ಹರಿಯುತ್ತಿದ್ದರೂ ಮೈಸೂರು ತಾಲೂಕಿನ ಹಳ್ಳಿಗಳಿಗೇ ಕುಡಿಯುವ ನೀರಿಲ್ಲ ಎಂದರೆ ಏನರ್ಥ? ನಮ್ಮೂರಿಗೇ (ಗುಂಗ್ರಾಲ್‌ ಛತ್ರ) ಕುಡಿಯುವ ನೀರು ಬರುತ್ತಿಲ್ಲ. ಕೇಳಿದರೆ ವಿದ್ಯುತ್‌ ಸಮಸ್ಯೆ ಎಂದು ಕಾರಣಗಳನ್ನು ಹೇಳುತ್ತೀರಿ ಎಂದು ಅಧಿಕಾರಿಗಳನ್ನು ಜಿ.ಟಿ.ದೇವೇಗೌಡ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಉಂಡವಾಡಿ ಯೋಜನೆಯನ್ನು 350 ಕೋಟಿಗೆ ಸೀಮಿತವಾಗಿ ಡಿಪಿಆರ್‌ ಮಾಡಿದ್ದೇವೆ.

ಜಿಲ್ಲಾಧಿಕಾರಿಯವರು ಯೋಜನೆ ಸಂಬಂಧ ರಚಿಸಿರುವ ತಾಂತ್ರಿಕ ಸಮಿತಿ ಸಭೆ 24ಕ್ಕೆ ಇದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಟಿಡಿ, ಉಂಡವಾಡಿ ಯೋಜನೆ ಟೆಂಡರ್‌ ಕರೆಯುವುದು ಬಾಕಿ ಇದೆ. ಪಾಂಡವಪುರ ಭಾಗದಲ್ಲಿ ಭೂ ಸ್ವಾಧೀನವಾಗುತ್ತಿದೆ. ಮೈಸೂರು ತಾಲೂಕಿನಲ್ಲಿ ಇನ್ನೂ ಆಗಿಲ್ಲ. ಬೇಗ ಭೂಸ್ವಾಧೀನ ಮಾಡಿಕೊಟ್ಟರೆ ತಾಂತ್ರಿಕ ಸಮಿತಿ ಅನುಮೋದನೆ ಕೊಡಿಸಿ, ಟೆಂಡರ್‌ ಕರೆಯಲು ಒಪ್ಪಿಗೆ ಕೊಡಿಸುವುದಾಗಿ ಹೇಳಿದರು.

ಕಬ್ಬು, ಭತ್ತ, ತೆಂಗಿನಿಂದ ರೈತರಿಗೆ ಹೆಚ್ಚು ಲಾಭ ಸಿಗುತ್ತಿಲ್ಲ. ಹೀಗಾಗಿ ತರಕಾರಿ ಮತ್ತು ಪುಷ್ಪ ಕೃಷಿಗೆ ಒತ್ತು ನೀಡುವಂತೆ ತೋಟಗಾರಿಕೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಮೈಸೂರಿನಲ್ಲಿ ರೇಷ್ಮೆ ಮಾರುಕಟ್ಟೆ ಆರಂಭವಾಗಿರುವುದರಿಂದ ರೇಷ್ಮೆ ಕೃಷಿಗೆ ಉತ್ತಮ ಅವಕಾಶವಿದೆ ಎಂದು ಹೇಳಿದರು.

ಹಾಸ್ಟೆಲ್‌ಗ‌ಳಲ್ಲಿ ಚಿಕನ್‌, ಮೊಟ್ಟೆ ತಾರತಮ್ಯ: ಸಿದ್ದರಾಮನಹುಂಡಿಯ ಆಸ್ಪತ್ರೆಗೆ ವೈದ್ಯರು ಬರುತ್ತಿಲ್ಲ ಎಂದು ಜನರಿಂದ ದೂರಿದೆ. ಅಲ್ಲಿಗೆ ಉತ್ತಮ ವೈದ್ಯರನ್ನು ನೇಮಕ ಮಾಡುವಂತೆ ಶಾಸಕ ಡಾ.ಯತೀಂದ್ರ ತಿಳಿಸಿದರು. ಹಿಂದುಳಿದ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ವಾರಕ್ಕೊಮ್ಮೆ ಚಿಕನ್‌, 3 ಮೊಟ್ಟೆ, 3 ಬಾಳೆಹಣ್ಣು ಕೊಡಲಾಗುತ್ತದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಲ್ಲಿ 15 ದಿನಕ್ಕೊಮ್ಮೆ ಚಿಕನ್‌, 2 ಮೊಟ್ಟೆ, 2 ಬಾಳೆಹಣ್ಣು ನೀಡಲಾಗುತ್ತಿದೆ. ಈ ರೀತಿಯ ತಾರತಮ್ಯ ಏಕೆ ಎಂದು ಸಮಾಜಕಲ್ಯಾಣ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕಿನಲ್ಲಿ ಪಡಿತರ ಚೀಟಿಗೆ ಅರ್ಜಿ ಹಾಕಿರುವವರ ಪೈಕಿ 1800 ಅರ್ಜಿಗಳ ವಿಲೇವಾರಿ ಬಾಕಿ ಇದೆ ಎಂದು ಆಹಾರ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಹಳ್ಳಿಗಳಲ್ಲಿರುವ ಅನಕ್ಷರಸ್ಥರು, ಅಸಹಾಯಕರು ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು ಗೊತ್ತಾಗದೆ ಪಡಿತರ ಚೀಟಿ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಅಂಥವರನ್ನು ಗುರುತಿಸಿ ಅರ್ಜಿ ಹಾಕಿಸುವ ಜವಾಬ್ದಾರಿಯನ್ನು ಅಲ್ಲಿನ ನ್ಯಾಯಬೆಲೆ ಅಂಗಡಿಯವರಿಗೆ ವಹಿಸಿ ಎಂದು ಹೇಳಿದರು.

ಮೈಸೂರು ತಾಲೂಕು ಕೆಡಿಪಿ ಸಭೆಗೆ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಷ್ಟೇ ಬರುವುದಿಲ್ಲ. ವರುಣಾ ಕ್ಷೇತ್ರವು ಬರುವುದರಿಂದ ಎರಡೂ ಕ್ಷೇತ್ರಗಳ ಪ್ರಗತಿ ವರದಿಯನ್ನೂ ನೀಡಬೇಕು.
-ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next