Advertisement

VIP ಕಾಲಂ: ನಿಮ್ಮ ಬದುಕಿನ ಕಥೆ ನೀವೇ ಬರೆಯಿರಿ!

03:23 AM Oct 07, 2020 | Hari Prasad |

ನೀವು ಯಾವ ರೀತಿಯ ಆಹಾರ ಸೇವಿಸುತ್ತೀರಿ ಎನ್ನುವುದು ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ, ನಿಮ್ಮ ಬಾಳ ಸಂಗಾತಿ ಹೇಗಿದ್ದಾರೆ ಎನ್ನುವುದು ನಿಮ್ಮ ಸಂತೋಷವನ್ನು ನಿರ್ಧರಿಸುತ್ತದೆ, ನಿಮ್ಮ ದಿನಚರಿಯಲ್ಲಿ ಯಾವುದಕ್ಕೆ ಆದ್ಯತೆ ಕೊಡುತ್ತೀರಿ ಎನ್ನುವುದು ನಿಮ್ಮ ಮಾನಸಿಕ ಒತ್ತಡದ ಮಟ್ಟವನ್ನು ನಿರ್ಧರಿಸುತ್ತದೆ.

Advertisement

ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ತೆಗಳುವುದು ಬಹಳ ಸುಲಭದ ಕೆಲಸ. ವಿಚಿತ್ರ ಎಂದರೆ, ಇಂಥ ಮಾತುಗಳನ್ನು ಕೇಳಿಸಿಕೊಳ್ಳಲು ಹಾಗೂ ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳಲು ಜನ ಸದಾ ಸಿದ್ಧರಿರುತ್ತಾರೆ. ಅದಕ್ಕಿಂತಲೂ ವಿಚಿತ್ರವಾದ ಸಂಗತಿಯೆಂದರೆ, ತೆಗಳಿಕೆಯ ವಿಚಾರದಲ್ಲಿ ಅನ್ವಯವಾಗುವ ಈ ಮಾತು “ಹೊಗಳಿಕೆ’ಯ ವಿಚಾರದಲ್ಲಿ ಮಾತ್ರ ಅನ್ವಯವಾಗುವುದಿಲ್ಲ!

ಯಾರನ್ನೋ ಹೀಗಳೆದು, ಅವರ ಬಗ್ಗೆ ಕೀಳಾಗಿ ಮಾತನಾಡುವುದರಿಂದ ಜನರಿಗೆ ಬಹಳ ಸಂತುಷ್ಟಿ ಸಿಗುತ್ತದೆ. ಏಕೆಂದರೆ, ಹೀಗೆ ಮಾಡುವುದರಿಂದ ಅವರಿಗೆ ತಾವು ಶ್ರೇಷ್ಠ ಎಂಬ ಮೇಲರಿಮೆಯ ಭಾವನೆ ಬರುತ್ತದೆ.

ಆದರೆ ನೀವು ಯಾರನ್ನಾದರೂ ಹೊಗಳಿಬಿಟ್ಟರೆ ಏನಾಗುತ್ತದೆ? ಆಗ ಆ ವ್ಯಕ್ತಿಯೊಂದಿಗೆ ನೀವು ನಿಮ್ಮನ್ನು ನೀವು ಹೋಲಿಸಿಕೊಳ್ಳಲು ಆರಂಭಿಸುತ್ತೀರಿ, ಉಪಪ್ರಜ್ಞೆಯಲ್ಲಿ ಒಂದು ರೀತಿಯ ಸ್ಪರ್ಧೆ ಆರಂಭವಾಗಿಬಿಡುತ್ತದೆ.

ಈ ಕಾರಣಕ್ಕಾಗಿಯೇ ಅನೇಕರು, ಯಾರನ್ನೋ ನೋಡಿ ಅಚ್ಚರಿಪಡುವ ಅಥವಾ ಅವರಿಂದ ಪ್ರೇರಣೆ ಪಡೆಯುವ ಬದಲು, ಅವರನ್ನು ನೋಡಿ ಹೊಟ್ಟೆಕಿಚ್ಚುಪಡುತ್ತಾರೆ, ಅವರಿಗಿಂತ ತಾವು ಕೀಳು ಎಂಬ ಭಾವನೆ ಅನುಭವಿಸುತ್ತಾರೆ. ಇದರ ಪರಿಣಾಮವಾಗಿ, ಆ ವ್ಯಕ್ತಿಯ ಬಗ್ಗೆ ತುತ್ಛವಾಗಿ ಮಾತನಾಡಲು ಒಂದಲ್ಲ ಒಂದು ರೀತಿಯ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ.

Advertisement

ಉದಾಹರಣೆಗೆ, ನೀವು ಹೆಣ್ಣು ಮಗಳೊಬ್ಬಳ ಸೌಂದರ್ಯವನ್ನೋ ಅಥವಾ ಆಕೆಯ ಆರೋಗ್ಯವಂತ ದೇಹವನ್ನೋ ಹೊಗಳಿದಿರಿ ಎಂದುಕೊಳ್ಳಿ, ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುವವರು, “ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿರ್ತಾರೆ ಅಥವಾ ತೆಳ್ಳಗೆ ಇರಬೇಕೆಂದು ಹುಚ್ಚುಹುಚ್ಚಾಗಿ ಉಪವಾಸ ಮಾಡಿ ಇಷ್ಟು ತೆಳ್ಳಗಾಗಿದ್ದಾರೆ” ಎನ್ನುವ ಸಾಧ್ಯತೆಯೇ ಹೆಚ್ಚು! ಇಲ್ಲವೇ, “ನೋಡ್ರಿ, ಬದುಕಲ್ಲಿ ಸೌಂದರ್ಯವೇ ಮುಖ್ಯವಲ್ಲ” ಎಂದು ಷರಾ ಬರೆಯುತ್ತಾರೆ. ಅಂದರೆ, ಯಾರಾದರೂ ಸುಂದರವಾಗಿದ್ದಾರೆ ಎಂದರೆ ಅವರ ಜೀವನದಲ್ಲಿ ಬೇರೇನೋ ಕೊರತೆಗಳಿರುತ್ತವೆ ಎಂಬ ಧಾಟಿಯಲ್ಲಿ ಮಾತನಾಡಲಾಗುತ್ತದೆ.

ಅರೆ, ಇನ್ನೊಬ್ಬರನ್ನು ಹೊಗಳುವುದು “ವಾವ್‌, ವೆಲ್‌ ಡನ್‌!’ ಎನ್ನುವುದು ಅಷ್ಟು ಕಷ್ಟದ ಕೆಲಸವೇ? ಅಥವಾ ಪ್ರತಿ ಹೊಗಳಿಕೆಯ ಜತೆಗೂ “ಆದರೂ…’ ಎಂದು ಸೇರಿಸಲೇಬೇಕೇ?

ಮಹಿಳೆಯರು ಇನ್ನೊಬ್ಬ ಹೆಣ್ಣಿನ ಸೌಂದರ್ಯವನ್ನು ನೋಡಿ “ಬೊಟಾಕ್ಸ್‌ ಅಥವಾ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿರ್ತಾರೆ. ಅದಕ್ಕೇ ಅಷ್ಟು ಚೆಂದ ಕಾಣಾ¤ರೆ’ ಎಂದು ತಿರಸ್ಕಾರದ ನಗೆ ಬೀರುತ್ತಾರೆ. ಆದರೆ ಈ ರೀತಿ ಕುಹಕದ ಮಾತನಾಡುವವರೇ ತಮ್ಮ ಕೂದಲಿಗೆ ಬಣ್ಣ ಬಳಿದುಕೊಳ್ಳುತ್ತಾರೆ, ಮೇಕಪ್‌ ಮಾಡಿಕೊಳ್ಳುತ್ತಾರೆ, ನೈಟ್‌ ಕ್ರೀಮ್‌ ಹಚ್ಚಿಕೊಳ್ಳುತ್ತಾರೆ, ತಮ್ಮ ಫೋಟೋಗಳು ಚೆನ್ನಾಗಿ ಕಾಣಬೇಕೆಂದು ಫಿಲ್ಟರ್‌ ಬಳಸುತ್ತಾರೆ.

ಇನ್ನೊಬ್ಬರ ಬಗ್ಗೆ ಕೀಳಾಗಿ ಮಾತನಾಡುವುದು ಅಥವಾ ಖುದ್ದು ಕುಹಕಕ್ಕೆ ಒಳಗಾಗುವುದು ಒಂದು ವಿಷ ಚಕ್ರವಿದ್ದಂತೆ. ಇದು ಮನದಲ್ಲಿ ಅನೇಕ ಸಂಕೀರ್ಣತೆಗಳನ್ನು, ಅಭದ್ರತೆಯನ್ನು, ಋಣಾತ್ಮಕತೆಯನ್ನು, ಅಸೂಯೆಯನ್ನು ಭದ್ರವಾಗಿ ಬೇರೂರಿಸಿಬಿಡುತ್ತದೆ.

ಇದರ ಬದಲು ನಾವೆಲ್ಲ ಸಕಾರಾತ್ಮಕತೆಯ ಚಕ್ರವನ್ನು ಆರಂಭಿಸಬಹುದಲ್ಲವೇ? ‘ಮಾಡಿದ್ದುಣ್ಣೋ ಮಹಾರಾಯ’ ಎನ್ನುವ ಒಂದು ಮಾತಿದೆ. ಅಂದರೆ ನಾವು ಮಾಡಿದ್ದು ನಮಗೇ ಹಿಂದಿರುಗಿ ಬರುತ್ತದೆ ಎಂದರ್ಥ. ಹೀಗಿರುವಾಗ, ಸಕಾರಾತ್ಮಕತೆಯನ್ನು ಪಸರಿಸುವುದೇ ಸರಿಯಲ್ಲವೇ? ಆದರೆ ಇನ್ನೊಬ್ಬರನ್ನು ಟೀಕಿಸುವ ಗುಣ ನಮ್ಮಲ್ಲಿ ಬಲವಾಗಿ ಬೇರೂರಿರುತ್ತದೆ.

ಯಾವ ಮಟ್ಟಕ್ಕೆಂದರೆ, ಯಾರನ್ನಾದರೂ ಟೀಕಿಸುವ ಮುನ್ನ ಒಮ್ಮೆ ಯೋಚಿಸಿ ನೋಡಿ- ‘ಇವರನ್ನು ತೆಗಳುವ ಬದಲು, ಇವರ ಬಗ್ಗೆ ಯಾವ ಒಳ್ಳೆಯ ಮಾತುಗಳನ್ನಾಡಬಹುದು?’ ಎಂದು. ಆಗ ನಿಮಗೆ ಇನ್ನೊಬ್ಬರನ್ನು ಟೀಕಿಸುವುದು ಬಹಳ ಸುಲಭ, ಆದರೆ ಹೊಗಳುವುದು ಎಷ್ಟು ಕಷ್ಟ ಎನ್ನುವುದು ಅರಿವಾಗುತ್ತದೆ!  ಈ ರೀತಿಯ ಗುಣ ನಮ್ಮ ಮನದಲ್ಲಿ ಪ್ರೋಗ್ರಾಮಿಂಗ್‌ ಆಗಿಬಿಟ್ಟಿರುತ್ತದೆ, ಅದೊಂದು ಅಭ್ಯಾಸವಾಗಿ ಬದಲಾಗಿರುತ್ತದೆ.

ನಿಮಗೆ ಸಂತೋಷದಾಯಕ ಜೀವನಬೇಕೆಂದರೆ ಈ ಅಭ್ಯಾಸವನ್ನು, ಪ್ರೋಗ್ರಾಮಿಂಗ್‌ ಅನ್ನು ನೀವು ಮುರಿಯಲೇಬೇಕು. ನಿಮ್ಮ ಮನಃಸ್ಥಿತಿಯನ್ನು ಬದಲಿಸಿದರೆ, ನಿಮ್ಮ ಬದುಕೇ ಬದಲಾಗುತ್ತದೆ.

ನಾವು ಕೋವಿಡ್‌ ಲಾಕ್‌ಡೌನ್‌ನಿಂದ ಹೊರಬರುತ್ತಿದ್ದೇವೆ, ಇದೇ ವೇಳೆಯಲ್ಲೇ ದಶಕಗಳಿಂದ ನಮ್ಮನ್ನು ಬಂಧಿಸಿಟ್ಟಿರುವ ಮಾನಸಿಕ ಲಾಕ್‌ಡೌನ್‌ನಿಂದಲೂ ಹೊರಬರೋಣ. ಬರೀ ಋಣಾತ್ಮಕತೆಯಲ್ಲೇ ತೃಪ್ತಿ ಅನುಭವಿಸುವವರ ಜತೆ ಸ್ನೇಹ ಉಳಿಸಿಕೊಳ್ಳುವುದಕ್ಕಾಗಿ, ನಮ್ಮಲ್ಲಿನ ಒಳ್ಳೆಯ ಭಾವನೆಗಳನ್ನು ಬಂಧಿಸಿಡುವುದು ಬೇಡ. ಆ ಮೂಲಕ ನಾವು ಏಕಕಾಲದಲ್ಲೇ ಋಣಾತ್ಮಕತೆಯ ಪ್ರಸರಕರು ಹಾಗೂ ಸಂತ್ರಸ್ತರಾಗುವುದಕ್ಕೆ ಅವಕಾಶ ಸಿಗದಂತೆ ನೋಡಿಕೊಳ್ಳೋಣ.

* * *

ನಮ್ಮ ಜೀವನವು ಬಹಳಷ್ಟು ಆಯ್ಕೆಗಳಿಂದ ತುಂಬಿಹೋಗಿದೆ. ನೀವು ಯಾವ ರೀತಿಯ ಆಹಾರ ಸೇವಿಸುತ್ತೀರಿ ಎನ್ನುವುದು ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ, ನಿಮ್ಮ ಬಾಳ ಸಂಗಾತಿ ಹೇಗಿದ್ದಾರೆ ಎನ್ನುವುದು ನಿಮ್ಮ ಸಂತೋಷವನ್ನು ನಿರ್ಧರಿಸುತ್ತದೆ, ನಿಮ್ಮ ದಿನಚರಿಯಲ್ಲಿ ಯಾವುದಕ್ಕೆ ಆದ್ಯತೆ ಕೊಡುತ್ತೀರಿ ಎನ್ನುವುದು ನಿಮ್ಮ ಮಾನಸಿಕ ಒತ್ತಡದ ಮಟ್ಟವನ್ನು ನಿರ್ಧರಿಸುತ್ತದೆ…ಇದಷ್ಟೇ ಅಲ್ಲ, ನಿಮ್ಮ ಅಭ್ಯಾಸಗಳು, ಆಟಗಳು ಮತ್ತು ಸ್ನೇಹ ವಲಯ ನಿಮ್ಮ ನೆಮ್ಮದಿಯನ್ನು ನಿರ್ಧರಿಸುತ್ತದೆ.

ಒಟ್ಟಿನಲ್ಲಿ ನಿಮ್ಮ ಜೀವನಾನುಭವಗಳು ಹಾಗೂ ನೀವು ಬೆಳೆದು ಬಂದ ರೀತಿಯೆಲ್ಲವೂ, “ನಿಮ್ಮ ಆದ್ಯತೆ ಕೆಲಸವೋ ಅಥವಾ ಪ್ರೀತಿಯೋ’ ಎನ್ನುವುದನ್ನು ಕಲಿಸಿಕೊಡುತ್ತವೆ. ಅಲ್ಲದೇ ನಿಮ್ಮ ಮಾನಸಿಕ ರಚನೆ ಹೇಗಿರುತ್ತದೆಂದರೆ, ನೀವು ಅಭದ್ರತೆಯ ಕಾರಣದಿಂದಾಗಿಯೂ ಕೆಲಸಕ್ಕಿಂತ ಪ್ರೀತಿಯನ್ನೇ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಇನ್ನೊಬ್ಬರಿಗಾಗಿ ನಿಮ್ಮ ಆದ್ಯತೆಗಳನ್ನೆಲ್ಲ ಅವಗಣಿಸಿಬಿಡಬಹುದು.

ಇನ್ನೊಬ್ಬರಿಗೆ ಸಹಾಯ ಮಾಡುವುದು, ಕಾಳಜಿ ಮಾಡುವುದು ಅದ್ಭುತ ಗುಣ. ಆದರೆ ಬೇರೆಯವರಿಗೇ ಆದ್ಯತೆ ಕೊಡುತ್ತಾ, ನಿಮ್ಮ ಅಗತ್ಯಗಳನ್ನು ಅವಗಣಿಸುವಂತಾಗಬಾರದು. ನೀವು ನಿಮ್ಮ ಬೆಳವಣಿಗೆಗೆ ಒಂದಿಷ್ಟೂ ಸಮಯ ಕೊಡದೇ ಬರೀ ಬೇರೆಯವರ ಕನಸುಗಳಿಗೇ ನೀರೆರೆಯುತ್ತಾ “ತ್ಯಾಗ’ ಮಾಡುವುದು ದೊಡ್ಡತನವಲ್ಲ ಅಥವಾ ಮಹತ್ತರಕಾರ್ಯವಲ್ಲ. ಜೀವನದಲ್ಲಿನ ಆಯ್ಕೆಗಳು ನಿಮ್ಮನ್ನು ಸಶಕ್ತಗೊಳಿಸಬೇಕೆಂದರೆ ನಿಮ್ಮ ಬದುಕಿನ ಸ್ಕ್ರಿಪ್ಟ್ ಅನ್ನು ನೀವೇ ಬರೆಯಬೇಕು.

ಇನ್ನೊಬ್ಬರಿಗೆ ಸಹಾಯ ಮಾಡುತ್ತಲೇ ನೀವು ಬೆಳೆಯುತ್ತಿದ್ದೀರಿ ಎಂದರೆ ಅದು ಒಳ್ಳೆಯದು. ಆದರೆ ಅದಕ್ಕಾಗಿ ನಿಮ್ಮ ಕನಸು, ಆಕಾಂಕ್ಷೆಗಳನ್ನು ಬಲಿಕೊಡುತ್ತಿದ್ದೀರಿ ಎಂದರೆ ನೀವು ತಪ್ಪು ಹಾದಿಯಲ್ಲಿ ಓಡುತ್ತಿದ್ದೀರಿ ಎಂದರ್ಥ.  ಈ ಕಾರಣಕ್ಕಾಗಿಯೇ ನಿಮ್ಮ ವರ್ತನೆ ಹೇಗಿದೆ ಎಂದು ಗಮನಿಸಲಾರಂಭಿಸಿ. ನಿಮ್ಮ ಆದ್ಯತೆಗಳೇನು? ಬದುಕಲ್ಲಿ ಯಾವುದಕ್ಕೆ ಮಹತ್ವ ಕೊಡಬೇಕು? ಎನ್ನುವುದರ ಬಗ್ಗೆ ಚಿಂತಿಸಿ, ಆ ಪ್ರಶ್ನೆಗಳಿಗೆಲ್ಲ ಉತ್ತರ ಕಂಡುಕೊಳ್ಳಿ.

ನಮ್ಮಲ್ಲಿ ಅನೇಕರಿಗೆ ಕೀಳರಿಮೆ ಅಥವಾ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಈ ಕಾರಣಕ್ಕಾಗಿಯೇ ಇನ್ನೊಬ್ಬರಿಂದ ಮೆಚ್ಚುಗೆ ಗಳಿಸುವ ಏಕೈಕ ಕಾರಣದಿಂದಾಗಿ ಎದುರಿನವರಿಗೆ ಸಹಾಯ ಮಾಡುತ್ತಿರುತ್ತೇವೆ. ಆತ್ಮ ತೃಪ್ತಿಯ ಕಾರಣಕ್ಕಾಗಿ ಇನ್ನೊಬ್ಬರಿಗೆ ಸಹಾಯ ಮಾಡುವುದಕ್ಕೂ ಹಾಗೂ ಎದುರಿನವರಿಂದ ಮೆಚ್ಚುಗೆ ಗಳಿಸಲು, ಅವರ ಕಣ್ಣಲ್ಲಿ ಮಿಂಚಲು ನಮ್ಮ ಅಗತ್ಯಗಳನ್ನು ಬಲಿಕೊಡುವು ದಕ್ಕೂ ಬಹಳ ಅಂತರವಿದೆ.

ಒಂದು ವೇಳೆ ನಿಮಗೇನಾದರೂ ಬದುಕಲ್ಲಿ ನೋವು, ಹತಾಶೆ, ಬೇಸರ ಕಾಡುತ್ತಿದ್ದರೆ,ಅಂದುಕೊಂಡಿದ್ದನ್ನು ಮಾಡಲು ಸಮಯ ಸಿಗುತ್ತಿಲ್ಲ ಎಂದು ಕಿರಿಕಿರಿಯಾಗುತ್ತಿದ್ದರೆ, ನಿಮ್ಮ ಆದ್ಯತೆಗಳನ್ನು ಮರುರೂಪಿಸಿಕೊಳ್ಳುವ ಸಮಯ ಬಂದಿದೆ ಎಂದರ್ಥ. ಹೌದು, ಇದುವರೆಗೂ ನಿಮ್ಮಿಂದ ಸಹಾಯ ಪಡೆಯುವುದನ್ನು ಅಭ್ಯಾಸ ಮಾಡಿಕೊಂಡಿರುವ ಜನರಿಂದ ನಿಮಗೆ ಆರಂಭದಲ್ಲಿ ಪ್ರತಿರೋಧ ಎದುರಾಗುವುದು ಸಹಜ. ಆದರೆ ಸಮಯ ಕಳೆದಂತೆ ಎಲ್ಲವೂ ಸರಿಯಾಗುತ್ತದೆ. ನಿಮ್ಮ ಬೆಳವಣಿಗೆಗೆ ಅಗತ್ಯವಾದ ಕೆಲಸಗಳಿಗೆ ನಿತ್ಯವೂ ಸಮಯ ಮೀಸಲಿಡಿ. ಆಗ ಬದುಕಿನ ಪಯಣ ಎಷ್ಟು ಸುಂದರವಾಗಿ ತೆರೆದುಕೊಳ್ಳುತ್ತದೋ ಗಮನಿಸಿನೋಡಿ!

– ಪೂಜಾ ಬೇಡಿ, ನಟಿ
(ಕೃಪೆ-ಟಿಓಐ)

Advertisement

Udayavani is now on Telegram. Click here to join our channel and stay updated with the latest news.

Next