Advertisement

ಸಾರ್ವಜನಿಕ ಶೌಚಾಲಯಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

11:31 AM Aug 11, 2017 | |

ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ ಆಗ್ರಹಿಸಿ ಮಹಿಳೆಯರು
ಸೇರಿದಂತೆ ಗ್ರಾಮಸ್ಥರು ಗ್ರಾಪಂ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು. ಗ್ರಾಮದ ಚೌಡಿಯ ಆವರಣದಲ್ಲಿ ಜಮಾಯಿಸಿದ ನೂರಾರು ಮಹಿಳೆಯರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಗ್ರಾಪಂ ಅವರಣ ತಲುಪಿ ಸುಮಾರು ನಾಲ್ಕು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರತಿ ಮನೆಗೆ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಹಣಕಾಸಿನ ನೆರವು ನೀಡುತ್ತಿವೆ. ಮನೆಯಲ್ಲಿ ಶೌಚಾಲಯ
ನಿರ್ಮಾಣ ಮಾಡಿಕೊಳ್ಳದಿದ್ದರೆ ಸೌಲಭ್ಯಗಳು ಸಿಗುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ಜಾಗೆ ಇಲ್ಲದವರ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕಾದ ಅಗತ್ಯತೆ ಇದೆ.
ಅಲ್ಲದೇ ಕೆಲ ಮನೆಯವರು ಶೌಚಾಲಯ ನಿರ್ಮಿಸಿಕೊಂಡಿದ್ದರೂ ನೀರಿನ ಕೊರತೆಯಿಂದಾಗಿ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದಾರೆ ಎಂದು ಹೇಳಿದರು. ಅರಳಿಚಂಡಿ ಗ್ರಾಮಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಜಾಗೆಯಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳವಿಲ್ಲದವರ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವಂತೆ ಐದು ವರ್ಷಗಳಿಂದ ಮನವಿ ಮಾಡುತ್ತ ಬಂದರೂ ಪ್ರಯೋಜನವಾಗಿಲ್ಲ. ಸರಕಾರ ಬಯಲು ಬಹಿರ್ದೆಸೆ ತಡೆಯುವ ಕುರಿತು ಹಲವು ಯೋಜನೆಗಳನ್ನು ಹಾಕಿಕೊಂಡರೂ ನಮಗೆ ಪ್ರಯೋಜನವಾಗದಂತಿದೆ ಎಂದು ಪ್ರತಿಭಟನಾ
ನಿರತ ಮಹಿಳೆಯರು ಹೇಳಿದರು. ಭರವಸೆ-ಧರಣಿ ಹಿಂದಕ್ಕೆ: ಪ್ರತಿಭಟನಾ ಸ್ಥಳಕ್ಕೆ ಬಂದ ಪಿಡಿಒ ಆರ್‌.ಎಸ್‌. ಪಾಟೀಲ ಮಾತನಾಡಿ, ಆ. 16ರಂದು ಗ್ರಾಪಂದಲ್ಲಿ ಠರಾವು ಪಾಸು ಮಾಡಿ ಮಹಿಳೆಯರ ಶೌಚಾಲಯ ಜಾಗೆಯಲ್ಲಿ ನಾಮಫಲಕ ಹಾಕಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಮಲ್ಲಮ್ಮ ತಕ್ಕೋಡ, ಲಕ್ಷ್ಮೀಬಾಯಿ ಬಾಗೇವಾಡಿ, ಬಸಮ್ಮ ಹಿರೇಮಠ, ಶಂಕ್ರೆಮ್ಮ ಹದಿಮೂರ, ಶಿವಲೀಲಾ ಗಣಿ, ಮಹಾದೇವಿ ತಕ್ಕೋಡ, ಶಾಂತಾ ಬಾಗೇವಾಡಿ, ಶೇಖವ್ವ ತಾಳಿಕೋಟಿ, ಕಮಲವ್ವ ಅವಟಿ, ಶಂಕ್ರೆಮ್ಮ ಅವಟಿ, ಸಿದ್ದವ್ವ ಬಾಗೇವಾಡಿ, ಜಯಶ್ರೀ ವಡ್ಡರ, ಶೋಭಾ ಹಿರೇಮಠ, ಕಮಲವ್ವ, ಮಹಾದೇವಿ ಬಾಗೇವಾಡಿ, ಸಂಗೊಂಡಪ್ಪ ನಡಕಟ್ಟಿ, ಮಲ್ಲಪ್ಪ ತಕ್ಕೋಡ, ಮಲ್ಲಪ್ಪ ಪಟ್ಟಣಶೆಟ್ಟಿ, ಮರಲಿಂಗಪ್ಪ ಹದಿಮೂರ, ಶಿವಪ್ಪ ಸಜ್ಜನ,
ಮಹಾದೇವಪ್ಪ ಡಿಗ್ಗಾವಿ, ಪ್ರಕಾಶ ಬಾಗೇವಾಡಿ ಮುಂತಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next