Advertisement

ಪ್ರೇಮ್‌ ಮುಖದಲ್ಲಿ ವಿಲನ್‌ ನಗು

06:00 AM Oct 05, 2018 | |

“ಪ್ರೇಮ್‌ ಇಷ್ಟ್ ಬೇಗ ಡೇಟ್‌ ಅನೌನ್ಸ್‌ ಮಾಡಿಬಿಟ್ರಾ ಎಂದು ಬೇಸರವಾಯಿತು’
– ನಿರ್ಮಾಪಕ ಸಿ.ಆರ್‌.ಮನೋಹರ್‌ ಹೀಗೆ ಹೇಳುತ್ತಿದ್ದಂತೆ ಎಲ್ಲರಿಗೂ ಅಚ್ಚರಿ. ಅವರು ಹೇಳಿದ್ದು ತಮ್ಮ ನಿರ್ಮಾಣದ “ದಿ ವಿಲನ್‌’ ಚಿತ್ರದ ಬಗ್ಗೆ. ಎಲ್ಲರೂ ಪ್ರೇಮ್‌ ಯಾವಾಗ ಸಿನಿಮಾ ಮುಗಿಸ್ತಾರೆ, ಯಾವಾಗ ಡೇಟ್‌ ಅನೌನ್ಸ್‌ ಮಾಡ್ತಾರೆಂದು ಕಾಯುತ್ತಿದ್ದರೆ, ನಿರ್ಮಾಪಕರಿಗೆ ಯಾಕೆ ಬೇಜಾರಾಗಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡಿತ್ತು. ಮನೋಹರ್‌ ಮುಂದೆ ಮಾತನಾಡಿದರು. “ಇದು ನನ್ನ ಬ್ಯಾನರ್‌ ಹಾಗೂ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಗುವ ಸಿನಿಮಾ. ಇಡೀ ತಂಡ ತುಂಬಾ ಚೆನ್ನಾಗಿ ಕೆಲಸ ಮಾಡಿದೆ. ತುಂಬಾ ಖುಷಿಯಿಂದ ಇದ್ದೆವು. ಶಿವರಾಜಕುಮಾರ್‌ ಜೊತೆ ಇದು ನನ್ನ ಎರಡನೇ ಸಿನಿಮಾ. ಶಿವಣ್ಣ ಕಥೆ ಕೇಳಿ ಇಷ್ಟಪಟ್ಟು, ನನಗೆ ಫೋನ್‌ ಮಾಡಿ, “ಈ ಸಿನಿಮಾವನ್ನು ಮಾಡಿ, ನಿಮಗೆ ಒಳ್ಳೆಯದಾಗುತ್ತದೆ’ ಎಂದರು. ಅದರಂತೆ ಮಾಡಿದ್ದೇನೆ. ಮೊನ್ನೆ ಪ್ರೇಮ್‌ ಡೇಟ್‌ ಅನೌನ್ಸ್‌ ಮಾಡಿದಾಗ ಇಷ್ಟು ಬೇಗ ಮುಗಿಯಿತಾ ಎಂದು ಬೇಸರವಾಯಿತು’ ಎನ್ನುತ್ತಾ ಸಿನಿಮಾಕ್ಕೆ ದುಡಿದವರಿಗೆ ಥ್ಯಾಂಕ್ಸ್‌ ಹೇಳಿದರು. 

Advertisement

ನಿರ್ದೇಶಕ ಪ್ರೇಮ್‌ ಎಂದಿನಂತೆ ಹೆಚ್ಚು ಮಾತನಾಡಲಿಲ್ಲ. “ಶಿವರಾಜಕುಮಾರ್‌ ಜೊತೆ ಮೂರನೇ ಸಿನಿಮಾ ಮಾಡುತ್ತಿದ್ದೇನೆ. ಅವರ ಜೊತೆ ಸಿನಿಮಾ ಮಾಡಲು ಪುಣ್ಯ ಮಾಡಿದ್ದೇನೆ. ಸುದೀಪ್‌ ಅವರು ಕೂಡಾ ಈ ಚಿತ್ರಕ್ಕೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ಸುದೀಪ್‌ ಲೇಟಾಗಿ ಬರ್ತಾರೆ, ಕ್ಯಾರ್‌ವಾನ್‌ನಿಂದ ಬೇಗ ಬರಲ್ಲ ಎಂದು ಕೆಲವರು ಹೇಳುತ್ತಿದ್ದರು. ಆದರೆ, ನಮ್ಮ ಸಿನಿಮಾಕ್ಕಾಗಿ ಬೆಳಗ್ಗೆ 6 ರಿಂದ ಸಂಜೆ 6ರವರೆಗೂ ಇದ್ದು ಸಹಕರಿಸಿದ್ದಾರೆ’ ಎನ್ನುತ್ತಾ ನಿರ್ಮಾಪಕರ ಹಾಗೂ ಸಂಗೀತ ನಿರ್ದೇಶಕರ ಗುಣಗಾನ ಮಾಡಿದರು. ಅಕ್ಟೋಬರ್‌ 11 ರಿಂದ ಚಿತ್ರದ ಮುಂಗಡ ಬುಕ್ಕಿಂಗ್‌ ಆರಂಭವಾಗುತ್ತಿದೆ.

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ, ಪ್ರೇಮ್‌ ಅವರ ಸಂಗೀತ ಪ್ರೀತಿಯ ಬಗ್ಗೆ ಮಾತನಾಡಿದರು. “ಒಂದು ಸಣ್ಣ ಕರೆಕ್ಷನ್‌ ಇದ್ದರೂ ಪ್ರೇಮ್‌ ವಿಜಯನಗರದಿಂದ ನನ್ನ ಸ್ಟುಡಿಯೋಗೆ ಬರುತ್ತಿದ್ದರು. ಅವರಿಗೆ ಯಾವುದಾದರೂ ಬಿಟ್ಸ್‌ ಇಷ್ಟವಾಗಲಿಲ್ಲ ಅಂದ್ರೆ, ತುಂಬಾ ಕೂಲ್‌ ಆಗಿ, “ಮಗ ಡಿಲೀಟ್‌’ ಅನ್ನುತ್ತಿದ್ದರು. ಮುಖದಲ್ಲಿ ನಗು ಇದ್ದರೂ ಕಣ್ಣಲ್ಲಿ ನೋವು ಎದ್ದು ಕಾಣುತ್ತಿತ್ತು’ ಎನ್ನುತ್ತಾ ಪ್ರೇಮ್‌ ಬಗ್ಗೆ ಹೇಳಿದರು. ಇನ್ನು, ನಟ ಶಿವರಾಜ ಕುಮಾರ್‌ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು. “ಈ ಚಿತ್ರದ ನಿಜವಾದ ಹೀರೋ ನಿರ್ಮಾಪಕ ಮನೋಹರ್‌. ಬೇರೆ ಯಾರೇ ಆಗಿದ್ರೂ ಅರ್ಧಕ್ಕೆ ಹೋಗುತ್ತಿದ್ದರು. ಆದರೆ, ಮನೋಹರ್‌ ಧೈರ್ಯದಿಂದ ಸಿನಿಮಾ ಮಾಡಿದ್ದಾರೆ’ ಎಂದರು. ಅನಾರೋಗ್ಯದ ಕಾರಣದಿಂದ ಪತ್ರಿಕಾಗೋಷ್ಠಿಗೆ ಸುದೀಪ್‌ ಬಂದಿರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next