Advertisement

ವರುಣಾ ಕ್ಷೇತ್ರ: ವಿಜಯೇಂದ್ರಗೆ ಟಿಕೆಟ್‌ ಇಲ್ಲ

06:00 AM Apr 24, 2018 | |

ಬೆಂಗಳೂರು: ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಕೊನೇ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಸೂಚಿಸಲಾಗಿದ್ದು, ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.

Advertisement

ಇದರ ಬೆನ್ನಲ್ಲೇ ವಿಜಯೇಂದ್ರ ಅವರೇ ಅಭ್ಯರ್ಥಿಯಾಗಬೇಕು ಎಂದು ವರುಣಾ ಕಾರ್ಯಕರ್ತರು ಪಟ್ಟು ಹಿಡಿದು ತೀವ್ರ ಪ್ರತಿಭಟನೆ, ಧರಣಿ ನಡೆಸಿದ್ದು ಯಡಿಯೂರಪ್ಪ ಕಾರಿಗೆ ಮುತ್ತಿಗೆ ಹಾಕಿದ ಪ್ರಸಂಗವೂ ನಡೆದಿದೆ. ಈ ಎಲ್ಲ ಬೆಳವಣಿಗೆಗಳಲ್ಲಿ ಅಂತಿಮವಾಗಿ ವಿಜಯೇಂದ್ರ ಅವರೇ ಕಣಕ್ಕಿಳಿಯುವ ಸಾಧ್ಯತೆಯೂ ಇಲ್ಲದಿಲ್ಲ. ವಿಜಯೇಂದ್ರ ಕಣಕ್ಕೆ ಇಳಿಯದಿದ್ದರೆ ನಿವೃತ್ತ ಡಿಜಿಪಿ ಎಲ್‌.ರೇವಣ ಸಿದ್ದಯ್ಯ, ಸ್ಥಳೀಯ ಮುಂಡರಾದ ತೋಟದ ಬಸವರಾಜು, ಸದಾನಂದ ಅವರ ಹೆಸರು ಪರಿಶೀಲನೆಯಲ್ಲಿದೆ.

ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸ್ಪರ್ಧೆ ಮಾಡುವ ವರುಣಾ ಕ್ಷೇತ್ರದ ಅಭ್ಯರ್ಥಿ ಎಂದು ಯಡಿಯೂರಪ್ಪ  ಪುತ್ರ ವಿಜಯೇಂದ್ರ ಅವರನ್ನು ಬಿಂಬಿಸಿ ಕೊನೇ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಕರೆಸಿಕೊಂಡಿರುವುದು ರಾಜಕೀಯ ಕಾರ್ಯತಂತ್ರದ ಒಂದು ಭಾಗ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಆರ್‌.ಎಸ್‌.ಎಸ್‌. ಯಡಿಯೂರಪ್ಪ ಪುತ್ರನ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿತ್ತು.  “ನಿಮ್ಮ ಕುಟುಂಬದಿಂದ ಈಗಾಗಲೇ ಒಬ್ಬರು ಸಂಸದರು, ಒಬ್ಬರು ಶಾಸಕರು ಆಗಿದ್ದೀರಿ. ಇದೀಗ ಮತ್ತೂಬ್ಬ ಪುತ್ರನನ್ನು ವಿಧಾನಸಭೆ ಚುನಾÊಣೆಗೆ ನಿಲ್ಲಿಸಿದರೆ ಕುಟುಂಬ ರಾಜಕಾರಣ ಆರೋಪ ಮಾಡಲು ನಮಗೇನು ನೈತಿಕತೆ ಇರುತ್ತದೆ’ ಎಂದು ಸಂಘ ಪರಿವಾರದವರು ಪ್ರಶ್ನಿಸಿದ್ದರು ಎನ್ನಲಾಗಿದೆ.  ಮತ್ತೂಂದು ಮೂಲಗಳ ಪ್ರಕಾರ ಆರ್‌ಎಸ್‌ಎಸ್‌ ಆಂತರಿಕವಾಗಿ ನಡೆಸಿದ ಸಮೀಕ್ಷೆಯಲ್ಲಿ ವಿಜಯೇಂದ್ರ ಸೋಲುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.

ಇದೇ ಕಾರಣಕ್ಕೆ ಭಾನುವಾರ ರಾತ್ರಿಯೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್‌ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಪುತ್ರನಿಗೆ ಟಿಕೆಟ್‌ ಇಲ್ಲ ಎಂದು ಹೇಳಿದ್ದರು. ಆ ನಂತರ ಸೋಮವಾರ ಬೆಳಗ್ಗೆಯೂ ಪ್ರಕಾಶ್‌ ಜಾವಡೇಕರ್‌, ಮುರಳೀಧರ್‌ರಾವ್‌ ಅವರಿಗೂ ಮಾಹಿತಿ ನೀಡಲಾಯಿತು.

Advertisement

ಹೀಗಾಗಿ ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಲಾಗಿದೆ ಎಂದು ಹೇಳಲಾಗಿದೆ. ನಾಮಪತ್ರ ಸಲ್ಲಿಕೆಗೆ ಸಿದ್ಧವಾಗಿದ್ದ ವಿಜಯೇಂದ್ರಗೆ ಯಡಿಯೂರಪ್ಪ ಅವರು ನಾಮಪತ್ರ ಸಲ್ಲಿಸದಂತೆ ಸೂಚಿಸಿ ವಾಪಸ್‌ ಕರೆಸಿಕೊಂಡರು.

ನಂಜನಗೂಡು ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೇ, ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ. ಅಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಹೇಳಿದ್ದಾರೆ.

ಕಾರ್ಯಕರ್ತರ ಭುಗಿಲೆದ್ದ ಆಕ್ರೋಶ, ಲಘು ಲಾಠಿ ಪ್ರಹಾರ ಯಡಿಯೂರಪ್ಪ  ಹೇಳಿಕೆ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಮಾವೇಶದಲ್ಲಿ ಕುರ್ಚಿಗಳನ್ನು ಧ್ವಂಸಗೊಳಿಸಿದರು. ವಿಜಯೇಂದ್ರ ಸ್ಪರ್ಧೆ ಮಾಡಲೇಬೇಕು ಎಂದು ಪಟ್ಟು ಹಿಡಿದು ಘೋಷಣೆ ಕೂಗಿದರು.

ಈ ಮಧ್ಯೆ, ವರುಣಾದಲ್ಲಿ ಬೇರೆ ಅಭ್ಯರ್ಥಿ ಕಣಕ್ಕಿಳಿಸುವ ಸಂಬಂಧ ಬಿ.ಎಸ್‌.ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಶ್ರೀರಾಮುಲು ಹಾಗೂ ರೇವಣಸಿದ್ದಯ್ಯ ಮೈಸೂರಿನಲ್ಲಿ ಪ್ರತ್ಯೇಕ ಸಭೆ ಸೇರಿ ಚರ್ಚಿಸಿದರು. ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ ಹೊರಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಬಿಎಸ್‌ವೈ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‌ವೈ, ವಿಜಯೇಂದ್ರ ಅವರನ್ನು ಕಣದಿಂದ ಹಿಂದೆ ಸರಿಯಲು ಹೇಳಿರುವುದು ವೈಯಕ್ತಿಕ ನಿರ್ಧಾರ. ಇದಕ್ಕಾಗಿ ನಾನು ವರುಣಾ ಕ್ಷೇತ್ರದ ಮತದಾರರ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.

ಲಘು ಲಾಠಿಪ್ರಹಾರ :ಖಾಸಗಿ ಹೋಟೆಲ್‌ ಎದುರು ಪ್ರತಿಭಟನೆ ನಡೆಸುತ್ತಿದ್ದ  ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರ ಗುಂಪನ್ನು ಚದುರಿಸಲು ಲಘು ಲಾಠಿಪ್ರಹಾರ ನಡೆಸಿದರು. ಮತ್ತೂಂದೆಡೆ ಇಟ್ಟಿಗೆಗೂಡಿನಲ್ಲಿರುವ ಬಿಜೆಪಿ ಕಚೇರಿಗೆ ನುಗ್ಗಿ ಕಾರ್ಯಕರ್ತರು ದಾಂಧಲೆ ಎಬ್ಬಿಸಿದರು. ಕಚೇರಿಯಲ್ಲಿದ್ದ ಕುರ್ಚಿಗಳನ್ನು ಧ್ವಂಸಗೊಳಿಸಿ ಅಸಮಾಧಾನ ಹೊರಹಾಕಿದರು.

ಪಕ್ಷಕ್ಕೆ ರಾಜೀನಾಮೆ: ವಿಜಯೇಂದ್ರಗೆ ಟಿಕೆಟ್‌ ಕೈತಪ್ಪಿದ ಬೆನ್ನಲ್ಲೆ ಸ್ಥಳೀಯ ಬಿಜೆಪಿ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ಪ್ರಮುಖವಾಗಿ ವರುಣಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶಿವಯ್ಯ, ಉಪಾಧ್ಯಕ್ಷ ಮಂಜುನಾಥ್‌ ಸೇರಿದಂತೆ ಇನ್ನೂ ಕೆಲವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ರಾಜ್ಯದ ಅಭಿವೃದ್ಧಿಗಾಗಿ ಬಿ.ಎಸ್‌.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಿದೆ. ಇದೊಂದೇ ನಮ್ಮೆಲ್ಲರ ಗುರಿಯಾಗಿದ್ದು, ಇದಕ್ಕಾಗಿ ಒಗ್ಗಟ್ಟಿನಿಂದ ಶ್ರಮಿಸೋಣ, ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ. ಕಾರ್ಯಕರ್ತರು ಶಾಂತ ರೀತಿಯಲ್ಲಿ ಸಹಕರಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.
– ವಿಜಯೇಂದ್ರ

ನಮ್ಮ ವರಿಷ್ಠರು ಕೈಗೊಂಡ ನಿರ್ಧಾರ ಸ‌ರ್ವ ಸಮ್ಮತ. ನಮ್ಮ ನಾಯಕರು ಹಾಗೂ ಕಾರ್ಯಕರ್ತರು  ಎಲ್ಲರೂ ಅದನ್ನು ಪಾಲಿಸಲೆಬೇಕು. ವರುಣಾ ಟಿಕೆಟ್‌ ಇನ್ನೂ ಘೋಷಣೆಯಾಗಿಲ್ಲ.
– ಅನಂತಕುಮಾರ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next