Advertisement

Vijayapura: ದೇವರಹಿಪ್ಪರಗಿ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕಿಳಿದ ಮಠಾಧೀಶ

10:17 PM Apr 19, 2023 | Team Udayavani |

ವಿಜಯಪುರ : ರಾಜ್ಯ ವಿಧಾನಸಭೆ ಚುನಾವಣೆ ರಾಜಕೀಯ ಜನರಿಂದ ರಂಗೇರುತ್ತಿದೆ ಎನ್ನುವಾಗಲೇ ಮಠಾಧೀಶರೊಬ್ಬರು ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿರುವ ಮಠಾಧೀಶರು ಅಚ್ಚರಿ ಮೂಡಿಸಿದ್ದಾರೆ.

Advertisement

ಜಿಲ್ಲೆಯ ನಿಡಗುಂದಿ ತಾಲೂಕಿನ ಇಟಗಿ ಗ್ರಾಮದ ಭೂಕೈಲಾಸ ಮೇಲುಗದ್ದುಗೆ ಹಿರೇಮಠದ ಸಂಸ್ಥಾನ ಮಠದ ಮಠಾಧೀಶರಾದ ಗುರುಶಾಂತವೀರ ಸ್ವಾಮೀಜಿ ಹಿರೇಮಠ ಇಟಗಿ ಚುನಾವಣಾ ಅಖಾಡಕ್ಕೀಳಿದಿರುವ ಮಠಾಧೀಶರು. ಕರ್ನಾಟಕ ಜನಸೇವಾ ಪಕ್ಷ (ಕೆಜೆಪಿ) ದಿಂದ ಸ್ಪರ್ಧೆಗಿಳಿದಿದ್ದು, ಬುಧವಾರ ಅಧಿಕೃತಗವಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಪೂರ್ವಾಶ್ರಮದ ತಾಯಿಯ ತವರು ಕೊಪ್ಪಳ ಜಿಲ್ಲೆಯ ಚಿಕ್ಕಮ್ಯಾಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಶ್ರೀಗಳು, ಗಂಗಾವತಿ, ಕುರುಗೋಡು ನಲ್ಲಿ ಪ್ರೌಢ ಶಿಕ್ಷಣ ಮುಗಿಸಿದ್ದು, ಕೊಪ್ಪಳ ಗವಿಮಠದಲ್ಲಿ ಪಿಸಯು ವರೆಗೆ ಶಿಕ್ಷಣ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದಿದ್ದಾರೆ.

ತಮ್ಮ ಹೆಸರಿನಲ್ಲಿ ಸ್ವಗ್ರಾಮದ ಗ್ರಾಮೀಣ ಬ್ಯಾಂಕ್‍ನಲ್ಲಿ 2 ಲಕ್ಷ ಠೇವಣಿ ಇದ್ದು, ತಾಯಿ ಹೆಸರಿನಲ್ಲಿ 2 ಲಕ್ಷ ಠೇವಣಿ ಇದೆ. ಮಠಕ್ಕೆ ಸಂಬಂಧಿಸಿದಂತೆ ಭಕ್ತರು ನೀಡಿರುವ 5 ಕೆ.ಜಿ. ಬೆಳ್ಳಿಯ ವಸ್ತುಗಳು, 5 ತೊಲೆಯ ಐದು ಚಿನ್ನದುಂಗುರು ಹಾಗೂ ತಾಯಿಯ ಬಳಿ 5 ಚಿನ್ನದ ಉಂಗುರ ಇದೆ ಎಂದು ಘೋಷಿತ ಆಸ್ತಿಯಲ್ಲಿ ವಿವರಿಸಿದ್ದಾಗಿ ಹೇಳಿದ್ದಾರೆ.

ಚುನಾವಣಾ ವ್ಯವಸ್ಥೆಯ ಸುಧಾರೀಕರಣ ಹಾಗೂ ಆಡಳಿತದಲ್ಲಿ ಭ್ರಷ್ಟಾಚಾರ ರಹಿತ ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶದಿಂದ ಗುರುಶಾಂತವೀರ ಶ್ರೀಗಳು ಚುನಾವಣಾ ರಾಜಕೀಯ ಪ್ರವೇಶ ಮಾಡಿದ್ಧಾಗಿ ಹೇಳುತ್ತಾರೆ. ರಾಜಕೀಯ ಪರಿಶುದ್ಧತೆ ಹಾಗೂ ಆಡಳಿತದ ಪಾರದರ್ಶಕ ಆಡಳಿತವನ್ನು ಮುನ್ನಡೆಸಲು ಧರ್ಮ ಹಾಗೂ ಧರ್ಮ ಮಾರ್ಗದಲ್ಲಿನ ಜನರ ಅಗತ್ಯವಿದೆ. ಇದಕ್ಕಾಗಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ಧೇನೆ ಎಂಬುದು ಅವರ ಮಾತು.

Advertisement

ಸಾಮಾನ್ಯ ರಾಜಕೀಯ ವ್ಯಕ್ತಿಗಳಂತೆ ನಮಗೆ ಸ್ವಾರ್ಥದ ಲಾಲಸೆಗಳಿರುವುದಿಲ್ಲ. ಸಮಾಜದ ಉದ್ಧಾರವೇ ಪರ ಗುರಿಯಾಗಿರುತ್ತದೆ. ನೆರೆಯ ಜಿಲ್ಲೆ ಸೋಲಾಪುರ ಲೋಕಸಭೆಯಿಂದ ಗೆದ್ದಿರುವ ಸಂಸದರು ಮಠಾಧೀಶರೇ. ದೇಶದ ಹಲವು ಕಡೆಗಳಲ್ಲಿ ಮಠಾಧೀಶರು ಜನಪ್ರತಿನಿಧಿಗಳಾಗಿದ್ದ, ಕೆಲವು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳೇ ಆಗಿದ್ದಾರೆ. ಹೀಗಾಗಿ ಅಲ್ಲಿನ ಆಡಳಿತವೂ ಸುರಳಿತವಾಗಿದೆ ಎಂದು ವಿಶ್ಲೇಷಿಸುತ್ತಾರೆ.

ತಮ್ಮ ಇಟಗಿ ಗ್ರಾಮ ನಿಡಗುಂದಿ ತಾಲೂಕಿಗೆ ಸೇರಿದ್ದರೂ ದೇವರಹಿಪ್ಪರಗಿ ವಿಧಾನಸಭೆಯ ಕೊನೆಹಳ್ಳಿ. ಇಂದಿಗೂ ಜನರಿಗೆ ಶಿಕ್ಷಣ, ಉದ್ಯೋಗ, ನೀರಾವರಿ, ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಇಲ್ಲದಂಥ ಹೀಗೆ ಹಲವು ಸಮಸ್ಯೆಗಲು ಕಾಡುತ್ತಿವೆ. ದೇಶ ಕಾಯುವ ಸೈನಿಕನಿಗೆ ಸೂಕ್ತ ಗೌರವ ಸಿಗಬೇಕಿದೆ. ಇಂತ ಸಮಸ್ಯೆಗಳಿಗೆ ಸರ್ಕಾರದಿಂದ ಪರಿಹಾರ ಆಗದಿರುವುದೇ ನಾನು ಚುನಾವಣಾ ರಾಜಕೀಯ ಪ್ರವೇಶಕ್ಕೆ ಕಾರಣ ಎನ್ನುತ್ತಾರೆ.

ನಮ್ಮದು ಪಂಚಪೀಠಗಳ ಕಾಶಿ ಶಾಖಾ ಪೀಠದ ಅಧೀನದಲ್ಲಿರುವ ಮಠ. ಚುನಾವಣೆ ಪೂರ್ವದಲ್ಲಿ ವಿಜಯಪುರ ಜಿಲ್ಲೆಯಲ್ಲಿರುವ 80 ಮಠಾಧೀಶರ ಪರಿಷತ್‍ನ ಬಹುತೇಕ ಮಠಾಧೀಶರಿಗೆ ನನ್ನ ರಾಜಕೀಯ ಪ್ರವೇಶದ ವಿಷಯ ತಿಳಿಸಿದ್ದೇ.ಎ ಗುರುಪೀಠಗಳ ಶ್ರೀಗಳಿಗೂ ಇದನ್ನು ಪ್ರತ್ಯಕ್ಷ-ಪರೋಕ್ಷವಾಗಿ ತಿಳಿಸಿದ್ದೇನೆ ಎನ್ನುತ್ತಾರೆ.

ಹೀಗಾಗಿ ನಾನು ಯಾವುದೇ ರಾಜಕೀಯ ಗಣ್ಯರ ಹಾಗೂ ಮಠಾಧೀಶರ ಒತ್ತಡಕ್ಕೆ ಮಣಿದು ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ. ನನ್ನ ಸ್ಪರ್ಧೆ ಖಚಿತ, ಬಕ್ತರ ಒತ್ತಾಸೆಯಿಂದ ಗೆಲುವು ಕೂ ಖಚಿತ ಎನ್ನು ಶ್ರೀಗಳು ಜಿಲ್ಲೆಯ ಚುನಾವಣೆಯ ರಾಜಕೀಯ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ.

ಜಿ.ಎಸ್.ಕಮತರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next