Advertisement

Vijayapura; ಅಪಘಾತದಂತೆ ಬಿಂಬಿಸಿ ಸಂಚಿನಿಂದ ವಕೀಲನ ಹತ್ಯೆ; ಐವರ ಬಂಧನ

08:11 PM Aug 13, 2024 | keerthan |

ವಿಜಯಪುರ: ನಗರದಲ್ಲಿ ಆ.8 ರಂದು ನಡೆದಿದ್ದ ವಕೀಲನ ಸಾವು ಅಪಘಾತದಿಂದ ಆದ್ದದ್ದಲ್ಲ, ಹಳೆಯ ಧ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತ ಸಂಚಿನಿಂದ ನಡೆಸಿದ ಹತ್ಯೆ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಪ್ರಕರಣದಲ್ಲಿ ಐವರನ್ನು ಬಂಧಿಸಿರುವ ಪೊಲೀಸರು, ತಲೆ ಮರೆಸಿಕೊಂಡಿರುವ ಇತರರ ಪತ್ತೆಗೆ ಜಾಲ ಬೀಸಿದ್ದಾರೆ.

Advertisement

ಮಂಗಳವಾರ ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಎಸ್ಪಿ ಋಷಿಕೇಶ ಭಗವಾನ್, ನಗರದಲ್ಲಿ ಆ.8 ರಂದು ಸಂಜೆ 5-30 ರ ಸುಮಾರಿಗೆ ನಡೆದಿದ್ದ ಅಪಘಾತದಲ್ಲಿ ಇನ್ನೋವಾ ಕಾರಿನಲ್ಲಿ ಸಿಲುಕಿ ಸುಮಾರು ಎರಡೂವರೆ ಕಿ.ಮೀ. ದೂರಕ್ಕೆ ಎಳೆದೊಯ್ದ ಘಟನೆಯಲ್ಲಿ ನಗರದ ಯುವ ವಕೀಲ ರವಿ ಮೇಲಿನಕೇರಿ ಮೃತಪಟ್ಟಿದ್ದ.

ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಇದು ಅಪಘಾತದಿಂದ ಆಗಿರುವ ಸಾವಲ್ಲ, ಬೆಚ್ಚಿಬೀಳುವಂತ ಸಂಚು ರೂಪಿಸಿ ಹತ್ಯೆ ಎಂದು ಲಭ್ಯವಾದ ಸುಳಿವು ಆಧರಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ತುಳಸಿರಾಮ ಹರಿಜನ, ಅಲೆಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ ಎಂಧು ಗುರುತಿಸಲಾಗಿದೆ. ಬಂಧಿತರೆಲ್ಲರೂ ದಿನಗೂಲಿ ಕಾರ್ಮಿಕರಾಗಿದ್ದು, ಎಲ್ಲರೂ ಅಪರಾಧ ಪ್ರಕರಣಗಳ ಹಿನ್ನೆಲೆ ಹೊಂದಿದ್ದಾರೆ. ಎಲ್ಲರ ಮೇಲೂ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹತ್ಯೆ, ಹತ್ಯೆ ಯತ್ನ, ದರೋಡೆ, ಜೀವ ಬೆದರಿಕೆಯಂಥ ಪ್ರಕರಣ ದಾಖಲಾಗಿವೆ.

ಬಂಧಿತ ಆರೋಪಿಗಳು ಇತರರೊಂದಿಗೆ ಸೇರಿ ವಕೀಲ ರವಿ ಕೋರ್ಟ್‌ ನಿಂದ ಮನೆಗೆ ಹೊರಟಿದ್ದಾಗ ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ವಾಹನದಲ್ಲಿ ಬಂದು ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ಬಳಿಕ ಸುಮಾರು ಎರಡೂವರೆ ಕಿ.ಮೀ. ವರೆಗೆ ರವಿಯನ್ನು ರಸ್ತೆಯಲ್ಲೇ ಎಳೆದೊಯ್ದ ಕಾರಣ ರವಿ ಸ್ಥಳದಲ್ಲೇ ಮೃತಪಟ್ಟಿದ್ದ.

Advertisement

ವಕೀಲ ರವಿ ತನ್ನ ಸಹೋದರರ ಜೊತೆ ಸೇರಿ ಸುಮಾರು 4-5 ತಿಂಗಳ ಹಿಂದೆ ತುಳಸಿರಾಮ ಹರಿಜನ ಎಂಬವನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದಲ್ಲದೇ ಸುಮಾರು 20 ದಿನಗಳ ಹಿಂದೆ ಇದೇ ಅಲೆಕ್ಸ್ ಗೊಲ್ಲರ ಎಂಬವನನ್ನು ಅಪಹರಿಸಿ, ಹತ್ಯೆ ಮಾಡುವ ಬೆದರಿಕೆ ಹಾಕಿದ್ದ.

ಇದರಿಂದ ದ್ವೇಷ ಸಾಧಿಸುತ್ತಿದ್ದ ಈ ಹತ್ಯಾ ಸಂಚಿನ ಸೂತ್ರಧಾರ ತುಳಸಿರಾಮ, ತನ್ನ ಸ್ನೇಹಿತರಾದ ಪ್ರಕರಣದ ಬಂಧಿತ ಆರೋಪಿಗಳೊಂದಿಗೆ ಸೇರಿ ಅಪಘಾತ ಎಂಬಂತೆ ಬಿಂಬಿಸಲು ವ್ಯವಸ್ಥಿತವಾಗಿ ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ ಎಂದು ಎಸ್ಪಿ ವಿವರಿಸಿದರು.

ಹತ್ಯೆ ಬಳಸಿರುವ ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರು ಕೂಡ ಜೂಜಾಟದಲ್ಲಿ 1 ಲಕ್ಷ ರೂ.ಗೆ ಸಚಿನ್ ಎಂಬವನಿಂದ ಆರೋಪಿಗಳು ಕಿತ್ತುಕೊಂಡಿದ್ದ ಕಾರು ಎಂಬುದು ಪತ್ತೆಯಾಗಿದೆ. ಇದಲ್ಲದೇ ವಕೀಲ ರವಿ ಕೋರ್ಟ್‍ನಿಂದ ಮನೆಗೆ ಮರಳುವ ಕುರಿತು ನಿಗಾ ಇರಿಸಿ ಮಾಹಿತಿ ನೀಡಲು ಇಬ್ಬರು ಬೈಕ್‍ನಲ್ಲಿ ತಿರುಗುತ್ತಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಹೊರ ಬಿದ್ದಿದೆ.

ಪ್ರಾಥಮಿಕ ಹಂತದದ ತನಿಖೆಯಲ್ಲಿ ಇಡೀ ಪ್ರಕರಣದಲ್ಲಿ ಇನ್ನೂ ಕೆಲವರು ಈ ಸಂಚಿನಲ್ಲಿ ಪಾಲ್ಗೊಂಡಿರುವ ಮಾಹಿತಿ ಇದೆ, ಅವರೆಲ್ಲ ತಲೆ ಮರೆಸಿಕೊಂಡಿದ್ದಾರೆ. ಇಡೀ ಪ್ರಕರಣವನ್ನು ತ್ವರಿತವಾಗಿ ಪತ್ತೆ ಮಾಡಿ, ಆರೋಪಿಗಳನ್ನು ಬಂಧಿಸುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.

ಹೀಗಾಗಿ ಡಿಎಸ್ಪಿ ಬಸವರಾಜ ಎಲಿಗಾರ ನೇತೃತ್ವದಲ್ಲಿದ್ದ ಗೋಲಗುಂಬಜ ಸಿಪಿಐ ಮಹಾಂತೇಶ ಮಠಪತಿ, ಗಾಂಧಿಚೌಕ ಠಾಣೆ ಸಿಪಿಐ ಪ್ರದೀಪ ತಳಕೇರಿ ಹಾಗೂ ತಂಡದ ಪೊಲೀಸರ ಕಾರ್ಯಕ್ಕೆ ಬಹುಮಾನ ಘೋಷಿಸಲಾಗಿದೆ. ಸ್ವಾತಂತ್ರ್ಯೋತ್ಸವ ದಿನದಂದು ನಡೆಯುವ ಪರೇಡ್ ಸಮಾರಂಭದಲ್ಲಿ ಬಹುಮಾನ ವಿತರಿಸುವುದಾಗಿ ಹೇಳಿದರು.

ಎಎಸ್ಪಿ ಶಂಕರ ಮಾರಿಹಾಳ, ಡಿಎಸ್ಪಿ ಬಸವರಾಜ ಎಲಿಗಾರ ಸಿಪಿಐ ಪ್ರದೀಪ ತಳಕೇರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next