Advertisement

ವೇಣೂರು, ಆರಂಬೋಡಿ ಗ್ರಾ. ಪಂ.: ಶಾಂತ ಮತದಾನ

01:42 AM Mar 30, 2021 | Team Udayavani |

ವೇಣೂರು: ವೇಣೂರು ಹಾಗೂ ಆರಂಬೋಡಿ ಗ್ರಾಮ ಪಂಚಾಯತ್‌ನ ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಮತದಾನ ಆರಂಭಗೊಂಡು ಸಂಜೆ 5ರ ತನಕ ಯಶಸ್ವಿಯಾಗಿ ನಡೆಯಿತು.

Advertisement

ಪ್ರತಿಯೊಂದು ಮತಗಟ್ಟೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಬಿರುಸಿನ ಮತದಾನ ನಡೆದಿದ್ದರೆ ಇತರ ಸಮಯಗಳಲ್ಲಿ ತುಸು ನಿಧಾನಗತಿಯಲ್ಲಿ ಮತದಾನ ಸಾಗಿತು.

ಬಜಿರೆ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಬೆಳಗ್ಗೆ ವೀಲ್‌ಚೇರ್‌ ವ್ಯವಸ್ಥೆ ಇಲ್ಲದೆ ಮತದಾನಕ್ಕೆ ಆಗಮಿಸಿದ್ದ ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರು ಸಮಸ್ಯೆ ಎದುರಿಸುವಂತಾಯಿತು. ಬಳಿಕ ರಿಕ್ಷಾ, ಇನ್ನಿತರ ವಾಹನಗಳನ್ನು ಮತಕೇಂದ್ರಗಳ ಆವರಣದೊಳಗೆ ಬಿಡಲಾಯಿತು. ಆರಂಬೋಡಿ ಮತಕೇಂದ್ರದಲ್ಲಿ ಪದೇ ಪದೇ ಮತಕೇಂದ್ರದೊಳಗೆ ನಿಯಮ ಉಲ್ಲಂಘಿಸಿ ಮತದಾರರನ್ನು ಕರೆದೊಯ್ಯುತ್ತಿದ್ದ ರಿಕ್ಷಾಗಳನ್ನು ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ ಘಟನೆ ನಡೆಯಿತು. ಕೆಲವು ಮತಗಟ್ಟೆಗಳಲ್ಲಿ ಚುನಾವಣ ಕಾರ್ಯನಿರತ ಅಂಗನವಾಡಿ ಕಾರ್ಯಕರ್ತೆಯರಿಗೆ ಉಪಹಾರದ ವ್ಯವಸ್ಥೆ ಇಲ್ಲದೆ ಅವರು ಸಮಸ್ಯೆ ಅನುಭವಿಸುವಂತಾಯಿತು.

ಮಧ್ಯಾಹ್ನದ ವೇಳೆಗೆ ಹೆಚ್ಚಿನ ಮತಗಟ್ಟೆಗಳಲ್ಲಿ ಶೇ. 50ಕ್ಕಿಂತ ಮಿಕ್ಕಿ ಮತದಾನವಾಗಿತ್ತು.

ಎರಡೂ ಗ್ರಾಮ ಪಂಚಾಯತ್‌ನ ಮತದಾನದ ಕೇಂದ್ರದ ಸುತ್ತಮುತ್ತ ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಮತದಾನಕ್ಕೆ ಬರುವ ಮತದಾರರನ್ನು ತಮ್ಮತ್ತ ಸೆಳೆದು ತಮ್ಮ ಪರ ಅಭ್ಯರ್ಥಿಗೆ ಮತ ಚಲಾಯಿಸುವಂತೆ ವಿನಂತಿಸುತ್ತಿರುವುದು ಕಂಡು ಬಂದಿತ್ತು. ಅಭ್ಯರ್ಥಿಗಳು ಈ ಬಾರಿಯ ಚುನಾವಣೆಗೆ ಭಾರೀ ಪ್ರಚಾರ ಹಾಗೂ ಚಟುವಟಿಕೆಗಳನ್ನು ನಡೆಸಿದ್ದರು. ಸ್ಥಳೀಯ ಪೊಲೀಸರು ಮತಕೇಂದ್ರಗಳಲ್ಲಿ ಸೂಕ್ತ ರಕ್ಷಣೆ ನೀಡಿ ಯಶಸ್ವಿ ಮತದಾನಕ್ಕೆ ಸಹಕರಿಸಿದರು.

Advertisement

ವಾಗ್ವಾದ
ಮೂಡುಕೋಡಿ ಗ್ರಾಮದ ಮತಕೇಂದ್ರದ ಬಳಿ ಬೇರೊಂದು ಪಂ.ನ ಕಾಂಗ್ರೆಸ್‌ ಬೆಂಬಲಿತ ಸದಸ್ಯೆಯೊಬ್ಬರು ಮತಪ್ರಚಾರದಲ್ಲಿ ತೊಡಗಿದ್ದಾರೆಂದು ಆಕ್ಷೇಪಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಸದಸ್ಯರು ಕಾಂಗ್ರೆಸ್‌ ಬೆಂಬಲಿತ ಕಾರ್ಯಕರ್ತರ ಮಧ್ಯೆ ವಾಗ್ವಾದದ ವಿದ್ಯಮಾನ ನಡೆಯಿತು. ಬಳಿಕ ಪಂ. ಸದಸ್ಯೆ ಮತಕೇಂದ್ರದ ಬಳಿಯಿಂದ ತೆರಳಿದ್ದು, ಪರಿಸ್ಥಿತಿ ಶಾಂತವಾಯಿತು.

ನಾಯಕರ ಭೇಟಿ
ವೇಣೂರು ಹಾಗೂ ಆರಂಬೋಡಿ ಗ್ರಾ.ಪಂ. ಚುನಾವಣೆಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮತಗಟ್ಟೆಗಳಿಗೆ ಶಾಸಕ ಹರೀಶ್‌ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌, ಮೋಹನ ಅಂಡಿಂಜೆ, ಉದಯ ಹೆಗ್ಡೆ ನಾರಾವಿ ಹಾಗೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳ ಮತಕಟ್ಟೆಗಳಿಗೆ ಮಾಜಿ ಶಾಸಕ ಕೆ. ವಸಂತ ಬಂಗೇರ, ವಿಧಾನ ಪರಿಷತ್‌ ಶಾಸಕ ಹರೀಶ್‌ ಕುಮಾರ್‌, ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಶೈಲೇಶ್‌ ಕುಮಾರ್‌, ಯುವಕಾಂಗ್ರೆಸ್‌ ಅಧ್ಯಕ್ಷ ಅನಿಲ್‌ ಪೈ ಆಗಮಿಸಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸಿದರು. ಅಗತ್ಯಬಿದ್ದರೆ ಮರುಮತದಾನಕ್ಕೆ ಮಾ.30 ದಿನ ನಿಗದಿಯಾಗಿತ್ತು. ಆದರೆ ಎಲ್ಲ ಮತಗಟ್ಟೆಗಳಲ್ಲಿ ಶಾಂತ ರೀತಿಯಲ್ಲಿ ಮತದಾನ ನಡೆದದ್ದರಿಂದ ಮರುಮತದಾನದ ಆವಶ್ಯಕತೆ ಬೀಳಲಿಲ್ಲ. ಬೆಳ್ತಂಗಡಿ ಎಪಿಎಂಸಿ ಸಭಾಂಗಣದಲ್ಲಿ ಮಾ. 31ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.

ಶೇಕಡಾವಾರು ಮತದಾನ
ವೇಣೂರು ಗ್ರಾ.ಪಂ.ನ ಕರಿಮಣೇಲು 1ನೇ ಕ್ಷೇತ್ರದಲ್ಲಿ 1,240 ಮತದಾರರಿದ್ದು, 802 ಮಂದಿ ಮತ ಚಲಾಯಿಸಿ ಶೇ. 65 ಮತದಾನ ದಾಖಲಾಗಿದೆ. ಕರಿಮಣೇಲು 2ನೇ ಕ್ಷೇತ್ರದಲ್ಲಿ ಒಟ್ಟು 921 ಮಂದಿ ಮತದಾರರಿದ್ದು, 668 ಮಂದಿ ಮತದಾನದ ಹಕ್ಕನ್ನು ಚಲಾಯಿಸಿ ಶೇ. 73 ಮತದಾನ ದಾಖಲಾಗಿದೆ. ಮೂಡುಕೋಡಿ 1ನೇ ಕ್ಷೇತ್ರದಲ್ಲಿ 1,281 ಮಂದಿ ಮತದಾರರಿದ್ದು, 995 ಮಂದಿ ಮತದಾನ ಚಲಾಯಿಸಿ ಶೇ.78 , ಮೂಡುಕೋಡಿ 2ನೇ ಕ್ಷೇತ್ರದಲ್ಲಿ 1,040 ಮಂದಿ ಮತದಾರರಿದ್ದು, 743 ಮಂದಿ ಮತ ಚಲಾಯಿಸಿ ಶೇ. 71 ಮತದಾನ, ವೇಣೂರು 1ನೇ ಕ್ಷೇತ್ರದಲ್ಲಿ 902 ಮಂದಿ ಮತದಾರರಿದ್ದು, 698 ಮಂದಿ ಮತ ಚಲಾಯಿಸಿ ಶೇ. 77 ಹಾಗೂ ವೇಣೂರು 2ನೇ ಕ್ಷೇತ್ರದಲ್ಲಿ 1,081 ಮಂದಿ ಮತದಾರರಿದ್ದು, 819 ಮಂದಿ ಮತಚಲಾಯಿಸಿ 76 ಶೇ. ಮತದಾನ ದಾಖಲಾಗಿದೆ. ಬಜಿರೆ 1ನೇ ಕ್ಷೇತ್ರದಲ್ಲಿ 781 ಮಂದಿ ಮತದಾರರಿದ್ದು, 647 ಮಂದಿ ಮತಚಲಾಯಿಸಿ ಶೇ. 83 ಹಾಗೂ ಬಜಿರೆ 2ನೇ ಕ್ಷೇತ್ರದಲ್ಲಿ 888 ಮಂದಿ ಮತದಾರರಿದ್ದು, 745 ಮಂದಿ ಮತ ಚಲಾಯಿಸಿದ್ದು, ಶೇ. 84. ಮತದಾನ ದಾಖಲಾಗಿದೆ. ಒಟ್ಟು ವೇಣೂರು ಗ್ರಾ.ಪಂ.ಗೆ ಶೇ. 75 ಮತದಾನ ದಾಖಲಾಗಿದೆ.

ಆರಂಬೋಡಿ ಗ್ರಾ.ಪಂ.
ಆರಂಬೋಡಿ ಗ್ರಾ.ಪಂ.ನ ಭಾಗ ಸಂಖ್ಯೆ 24ರಲ್ಲಿ 710 ಮತದಾರರಿದ್ದು, 522 ಮಂದಿ ಮತ ಚಲಾಯಿಸಿ ಶೇ.74, ಭಾ.ಸಂ. 24ಎ ಯಲ್ಲಿ 998 ಮತದಾರರಿದ್ದು, 782 ಮಂದಿ ಮತ ಚಲಾಯಿಸಿ ಶೇ. 78, ಭಾ.ಸಂ. 25ರಲ್ಲಿ 652 ಮಂದಿ ಮತದಾರರಿದ್ದು, 471 ಮಂದಿ ಮತಚಲಾಯಿಸಿ ಶೇ. 72, ಭಾ.ಸಂ. 25ಎ ಯಲ್ಲಿ 623 ಮತದಾರರಿದ್ದು, 453 ಮಂದಿ ಮತ ಚಲಾಯಿಸಿ ಶೇ. 73 ಹಾಗೂ ಭಾ.ಸಂ. 26ರಲ್ಲಿ 964 ಮಂದಿ ಮತದಾರರಿದ್ದು, 780 ಮಂದಿ ಮತ ಚಲಾಯಿಸಿ ಶೇ. 81 ಮತದಾನ ದಾಖಲಾಗಿದೆ. ಒಟ್ಟು 3,008 ಮಂದಿ ಮತದ ಹಕ್ಕನ್ನು ಚಲಾಯಿಸಿ ಒಟ್ಟು ಶೇ. 76 ಮತದಾನ ದಾಖಲಾಗಿದೆ.

ಮಾಣಿಲ ಗ್ರಾ.ಪಂ.
ಮಾಣಿಲ ಗ್ರಾ.ಪಂ.ನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ. 62 ಮತದಾನವಾಗಿದೆ. ತಣ್ಣೀರು ಪಂತ ಗ್ರಾ.ಪಂ.
ತಣ್ಣೀರು ಪಂತ ಗ್ರಾ.ಪಂ.ನ ಕರಾಯ ಗ್ರಾಮದ 3 ನೇ ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ ಶೇ. 67ಮತದಾನ ನಡೆದ ಬಗ್ಗೆ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next