Advertisement

ಮಂಡ್ಯದಲ್ಲೂ ವೆಂಕಟ್‌ನ ಹುಚ್ಚಾಟ

11:04 PM Sep 01, 2019 | Lakshmi GovindaRaj |

ಮಂಡ್ಯ/ರಾಮನಗರ: ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿರುವ ನಟ ವೆಂಕಟ್‌, ಕೊಡಗಿನ ನಂತರ ಮಂಡ್ಯದಲ್ಲೂ ತಮ್ಮ ಹುಚ್ಚಾಟ ಮುಂದುವರಿಸಿದ್ದಾರೆ. ಭಾನುವಾರ ಬೆಳಗ್ಗೆ ಹೋಟೆಲ್‌ವೊಂದರ ಬಳಿ ನಿಂತಿದ್ದ ಕಾರಿನ ಗಾಜನ್ನು ಕಲ್ಲಿನಿಂದ ಒಡೆದು, ಯುವಕನಿಂದ ಥಳಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ಮೈಸೂರಿನಿಂದ ಮಂಡ್ಯಕ್ಕೆ ಬಂದು ಹೋಟೆಲ್‌ನಲ್ಲಿ ವಾಸ್ತವ್ಯವಿದ್ದರು. ಈ ವೇಳೆ, ಹೋಟೆಲ್‌ನಲ್ಲಿದ್ದ ಯುವಕರಿಬ್ಬರ ಪರಿಚಯವಾಯಿತು.

Advertisement

ಭಾನುವಾರ ಬೆಳಗ್ಗೆ ಒಂದೇ ಕಾರಿನಲ್ಲಿ ಹೊರಗಡೆ ತೆರಳಿ ಕಬ್ಬಿನ ಜ್ಯೂಸ್‌ ಕುಡಿದು, ಮತ್ತೆ ಹೋಟೆಲ್‌ಗೆ ವಾಪಸ್ಸಾಗಿದ್ದರು. ಈ ವೇಳೆ, ಇದ್ದಕ್ಕಿದ್ದಂತೆ ಯುವಕನ ಕಾರಿನ ಮೇಲೆ ಕಾಲು ಹಾಕಿ ನಿಂತುಕೊಂಡರು. ಕಲ್ಲನ್ನು ತಂದು ಕಾರಿನ ಗಾಜನ್ನು ಒಡೆದು ಹಾಕಿದರು. ಇದರಿಂದ ಆಕ್ರೋಶಗೊಂಡ ಯುವಕ, ವೆಂಕಟ್‌ಗೆ‌ ಥಳಿಸಿದ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಯುವಕನನ್ನು ಸಮಾಧಾನಪಡಿಸಿ, ನಟ ವೆಂಕಟ್‌ಗೆ ಬುದ್ಧಿವಾದ ಹೇಳಿದರು. ಬಳಿಕ, ವೆಂಕಟ್‌, ತಮ್ಮ ಕೆಂಪು ಬಣ್ಣದ ಕಾರಿನಲ್ಲಿ ರಾಮನಗರಕ್ಕೆ ಪ್ರಯಾಣ ಬೆಳೆಸಿದರು.

ಮಧ್ಯಾಹ್ನದ ಹೊತ್ತಿಗೆ ರಾಮನಗರಕ್ಕೆ ಬಂದ ವೆಂಕಟ್‌, ನಗರದ ರಾಮದೇವರ ಬೆಟ್ಟದ ರಸ್ತೆಯಲ್ಲಿ ಚಹ ಸೇವಿಸಿದರು. ಯುವಕನೊಬ್ಬ ಅನ್ಯ ಭಾಷೆಯಲ್ಲಿ ಮಾತನಾಡುತ್ತಿದ್ದುದ್ದನ್ನು ಕಂಡು, “ಇದ್ಯಾವ ಭಾಷೆಯಲ್ಲಿ ಮಾತಾಡ್ತಾ ಇದ್ದಿಯಾ’ ಎಂದು ಗದರಿದರು. ಬೆಟ್ಟದ ಮೇಲಿನ ದೇವಾಲಯಕ್ಕೆ ಹೋಗಿದ್ದಿರಾ ಎಂದು ಕೆಲವರು ಪ್ರಶ್ನಿಸಿದಾಗ, “ನಾನೇ ದೇವರು. ನಾನ್ಯಾಕೆ ದೇವಸ್ಥಾನಕ್ಕೆ ಹೋಗಲಿ’ ಎಂದರು. ಅಲ್ಲೇ ಕಾಣುತ್ತಿದ್ದ ಓವರ್‌ ಹೆಡ್‌ ವಾಟರ್‌ ಟ್ಯಾಂಕ್‌ ತೋರಿಸಿ, “ಇದನ್ನು ನನ್ನಪ್ಪ ಕಟ್ಟಿಸಿದ್ದು’ ಎಂದು ಹೇಳಿ ಕಾರಿನಲ್ಲಿ ಬೆಂಗಳೂರು ಕಡೆ ನಿರ್ಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next